ಪ್ರಕಟನೆ 20
20
ಸಾವಿರ ವರ್ಷ
1ಆಗ ಒಬ್ಬ ದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. 2ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು. 3ಆ ಸಾವಿರ ವರ್ಷ ತೀರುವ ತನಕ ಅವನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೂತನು ಅವನನ್ನು ಅಧೋಲೋಕದಲ್ಲಿ ತಳ್ಳಿ, ಬಾಗಿಲು ಮುಚ್ಚಿ ಅದಕ್ಕೆ ಮುದ್ರೆ ಹಾಕಿದನು. ಇವುಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗತಕ್ಕದ್ದು.
4ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯತೀರಿಸುವ ಅಧಿಕಾರವು ಕೊಡಲಾಯಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನ ಗೊಂಡವರ ಆತ್ಮಗಳನ್ನೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸದೆ ತಮ್ಮ ಹಣೆಯ ಮೇಲೆ ಇಲ್ಲವೆ ಕೈಯ ಮೇಲೆ ಅದರ ಗುರುತುಹಾಕಿಸಿಕೊಳ್ಳದವರನ್ನೂ ನೋಡಿದೆನು. ಅವರು ಪುನಃ ಜೀವಿತರಾಗಿ ಎದ್ದು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷ ಆಳಿದರು. 5ಉಳಿದ ಸತ್ತವರು ಆ ಸಾವಿರ ವರ್ಷ ಗತಿಸುವ ತನಕ ಜೀವಿತರಾಗಲಿಲ್ಲ. ಇದೇ ಪ್ರಥಮ ಪುನರುತ್ಥಾನವು. 6ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಧನ್ಯರೂ ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಯೇಸುಕ್ರಿಸ್ತರೊಂದಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷಗಳ ಕಾಲ ಆಳುವರು.
ಸೈತಾನನ ನ್ಯಾಯತೀರ್ಪಾಗಿದ್ದು
7ಆ ಸಾವಿರ ವರ್ಷಗಳು ಗತಿಸಿದ ಮೇಲೆ ಸೈತಾನನಿಗೆ ಅವನ ಸೆರೆಯಿಂದ ಬಿಡುಗಡೆಯಾಗುವುದು. 8ಅವನು ಹೊರಗೆ ಬಂದು ಭೂಮಿಯ ನಾಲ್ಕುದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ರಾಷ್ಟ್ರಗಳನ್ನು ಮೋಸಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು. ಅವರ ಸಂಖ್ಯೆಯು ಸಮುದ್ರತೀರದ ಮರಳಿನಷ್ಟಿರುವುದು. 9ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು. 10ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲಾಯಿತು. ಅಲ್ಲಿ ಮೃಗವೂ ಸುಳ್ಳು ಪ್ರವಾದಿ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.
ಸತ್ತವರ ಪುನರುತ್ಥಾನ ಮತ್ತು ನ್ಯಾಯತೀರ್ಪು
11ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು. 12ಇದಲ್ಲದೆ ಸತ್ತವರಾದ ಹಿರಿಯರೂ ಕಿರಿಯರೂ ಸಿಂಹಾಸನದ ಎದುರಿಗೆ ನಿಂತಿರುವುದನ್ನೂ ಕಂಡೆನು. ಆಗ ಪುಸ್ತಕಗಳನ್ನು ತೆರೆಯಲಾಯಿತು. ನಿತ್ಯಜೀವ ಪುಸ್ತಕವೆಂಬ ಇನ್ನೊಂದು ಪುಸ್ತಕವನ್ನು ತೆರೆಯಲಾಯಿತು. ಆ ಪುಸ್ತಕಗಳಲ್ಲಿ ಬರೆದಿದ್ದರ ಪ್ರಕಾರ, ಅವರವರ ಕ್ರಿಯೆಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು. 13ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು. 14ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲಾದವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. 15ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು.
Currently Selected:
ಪ್ರಕಟನೆ 20: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.