ಪ್ರಕಟನೆ 19
19
ಹಲ್ಲೆಲೂಯ
1ಇವುಗಳಾದ ಮೇಲೆ ಪರಲೋಕದಲ್ಲಿ ದೊಡ್ಡ ಸಮೂಹದ ಮಹಾಸ್ವರವನ್ನು ಕೇಳಿದೆನು. ಅವರು:
“ಹಲ್ಲೆಲೂಯಾ!
ರಕ್ಷಣೆಯೂ ಮಹಿಮೆಯೂ ಶಕ್ತಿಯೂ ನಮ್ಮ ದೇವರದಾಗಿವೆ!
2ಏಕೆಂದರೆ ದೇವರ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ಏಕೆಂದರೆ ತನ್ನ ಅನೈತಿಕತೆಯಿಂದ ಭೂಲೋಕವನ್ನು ಕೆಡಿಸುತ್ತಿದ್ದ
ಆ ಮಹಾ ಜಾರಸ್ತ್ರೀಗೆ ದೇವರು ನ್ಯಾಯತೀರಿಸಿ,
ಆಕೆಯು ದೇವರ ದಾಸರನ್ನು ಹಿಂಸಿಸಿ,
ಚೆಲ್ಲಿಸಿದ ರಕ್ತಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾರೆ.”
3ಎಂದೂ ದ್ವಿತೀಯ ಬಾರಿ:
“ಹಲ್ಲೆಲೂಯಾ!
ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತದೆ!”
ಎಂದು ಘೋಷಿಸಿದರು.
4ಆಗ ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು, ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿ:
“ಆಮೆನ್, ಹಲ್ಲೆಲೂಯಾ!”
ಎಂದರು.
5ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು:
“ದೇವರ ಎಲ್ಲಾ ದಾಸರೇ,
ದೇವರಿಗೆ ಭಯಪಡುವ ಹಿರಿಕಿರಿಯರೇ,
ನಮ್ಮ ದೇವರನ್ನು ಸ್ತುತಿಸಿರಿ!”
ಎಂದು ಹೇಳಿತು.
6ತರುವಾಯ ಜನರ ದೊಡ್ಡ ಗುಂಪಿನ ಶಬ್ದವನ್ನು ಕೇಳಿದೆನು. ಅದು ಹೀಗೆ ಹೇಳಿತು:
“ಹಲ್ಲೆಲೂಯಾ!
ಸರ್ವಶಕ್ತ ಆಗಿರುವ ನಮ್ಮ ಕರ್ತದೇವರು ಆಳುತ್ತಾರೆ.
7ಕುರಿಮರಿ ಆಗಿರುವವರ ವಿವಾಹ ಕಾಲವು ಬಂತು.
ಅವರಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ.
ಸಂತೋಷಪಡೋಣ, ಹರ್ಷಗೊಳ್ಳೋಣ,
ಅವರನ್ನು ಮಹಿಮೆಪಡಿಸೋಣ!”
8ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು
ತೊಟ್ಟುಕೊಳ್ಳುವುದಕ್ಕೆ ಆಕೆಗೆ ಅನುಗ್ರಹಿಸಲಾಗಿತ್ತು.
ಏಕೆಂದರೆ ಆ ನಾರುಮಡಿಯು ಪರಿಶುದ್ಧರ ನೀತಿಕೃತ್ಯಗಳೇ.
9ಇದಲ್ಲದೆ ಅವನು ನನಗೆ, “ಕುರಿಮರಿ ಆಗಿರುವವರ ವಿವಾಹದ ಔತಣಕ್ಕೆ ಕರೆಯಲಾದವರು ಧನ್ಯರು ಮತ್ತು ಅವರು ಹೀಗೆ ಹೇಳಿದರು, ದೇವರ ಈ ಮಾತುಗಳು ಸತ್ಯವಾಗಿವೆ!” ಎಂದನು.
10ಆಗ ನಾನು ಅವನನ್ನು ಆರಾಧಿಸಬೇಕೆಂದು ಅವನ ಪಾದಗಳಿಗೆ ಬೀಳಲು ಅವನು, “ಹಾಗೆ ಮಾಡಬೇಡ, ನಾನು ನಿನಗೂ ಯೇಸುವಿನ ಸಾಕ್ಷಿಯುಳ್ಳ ನಿನ್ನ ಸಹೋದರರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು. ಏಕೆಂದರೆ ಯೇಸುವಿನ ಸಾಕ್ಷಿಯೇ ಪ್ರವಾದನೆಯ ಆತ್ಮವಾಗಿದೆ!” ಎಂದನು.
ಬಿಳಿಕುದುರೆಯ ಸವಾರ
11ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಇಗೋ, ಬಿಳಿಯ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವರ ಹೆಸರು, ನಂಬಿಗಸ್ತರು ಮತ್ತು ಸತ್ಯವಂತರು ಎಂಬುದು. ಅವರ ನೀತಿಯಿಂದ ನ್ಯಾಯವಿಚಾರಿಸುತ್ತಾ ಯುದ್ಧಮಾಡುತ್ತಾರೆ. 12ಆತನ ನೇತ್ರಗಳು ಬೆಂಕಿಯ ಜ್ವಾಲೆಯಂತಿದ್ದವು. ಆತನ ತಲೆಯ ಮೇಲೆ ಅನೇಕ ಮುಕುಟಗಳಿದ್ದವು. ಆತನಿಗೆ ಒಂದು ಹೆಸರು ಬರೆದು ಕೊಟ್ಟಿದೆ. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು. 13ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದಾನೆ. ಆತನ ಹೆಸರು ದೇವರ ವಾಕ್ಯವೆಂಬುದೇ. 14ಪರಲೋಕದ ಸೈನ್ಯದವರು ಶುಭ್ರ ಹಾಗೂ ಬಿಳಿಯ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳಿಯ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದರು. 15ರಾಷ್ಟ್ರಗಳನ್ನು ಹೊಡೆಯಲು ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. “ಆತನು ಕಬ್ಬಿಣದ ದಂಡದಿಂದ ಅವರನ್ನು ಪಾಲಿಸುವನು.”#19:15 ಕೀರ್ತನೆ 2:9 ಆತನು ಸರ್ವಶಕ್ತ ಆಗಿರುವ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ತುಳಿಯುತ್ತಾನೆ. 16ಆತನ ತೊಡೆಯ ಮೇಲಣ ವಸ್ತ್ರದಲ್ಲಿ:
ರಾಜಾಧಿರಾಜನೂ ಕರ್ತರ ಕರ್ತನೂ.
ಎಂಬ ಹೆಸರು ಬರೆದಿದೆ.
17ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾಧ್ವನಿಯಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, ದೇವರು ಏರ್ಪಡಿಸುವ ಮಹಾಭೋಜನಕ್ಕೆ ಕೂಡಿಬನ್ನಿರಿ. 18ರಾಜರು, ಸಹಸ್ರಾಧಿಪತಿಗಳು, ಪರಾಕ್ರಮಶಾಲಿಗಳು, ಅಶ್ವಗಳು, ಅಶ್ವಾರೂಢರು, ಸ್ವತಂತ್ರರು, ದಾಸರು, ದೊಡ್ಡವರು, ಚಿಕ್ಕವರು, ಇವರೆಲ್ಲರ ಮಾಂಸವನ್ನು ತಿನ್ನುವುದಕ್ಕೆ ಬನ್ನಿರಿ!” ಎಂದು ಹೇಳಿದನು.
19ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವರ ಮೇಲೆಯೂ ಅವರ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿ ಬಂದಿರುವುದನ್ನು ನಾನು ಕಂಡೆನು. 20ಆಗ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಸುಳ್ಳು ಪ್ರವಾದಿ ಸಹ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲಾಯಿತು. 21ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಬಂದ ಕತ್ತಿಯಿಂದ ಹತರಾದರು ಮತ್ತು ಪಕ್ಷಿಗಳೆಲ್ಲಾ ಅವರ ಮಾಂಸದಿಂದ ಹೊಟ್ಟೆ ತುಂಬಿಸಿಕೊಂಡವು.
Currently Selected:
ಪ್ರಕಟನೆ 19: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.