YouVersion Logo
Search Icon

ಜ್ಞಾನೋಕ್ತಿಗಳು 21

21
1ಅರಸನ ಹೃದಯವು ಯೆಹೋವ ದೇವರ ಕೈಯಲ್ಲಿ ನೀರಿನ ಕಾಲುವೆಗಳಂತೆ;
ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.
2ಮನುಷ್ಯನ ಪ್ರತಿಯೊಂದು ಮಾರ್ಗವು ಅವನ ದೃಷ್ಟಿಯಲ್ಲಿ ಸರಿಯಾಗಿದೆ;
ಆದರೆ ಯೆಹೋವ ದೇವರು ಹೃದಯಗಳನ್ನು ಪರೀಕ್ಷಿಸುತ್ತಾರೆ.
3ಯಜ್ಞಕ್ಕಿಂತ ನೀತಿ ನ್ಯಾಯಗಳನ್ನು ನಡೆಸುವುದು
ಯೆಹೋವ ದೇವರಿಗೆ ಎಷ್ಟೋ ಮೆಚ್ಚಿಗೆಯಾಗಿದೆ.
4ಹೆಮ್ಮೆಯ ದೃಷ್ಟಿ, ಗರ್ವದ ಹೃದಯ,
ದುಷ್ಟರ ಉಳುವಿಕೆ ಇವೆಲ್ಲಾ ಪಾಪವೇ.
5ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ;
ಆತುರತೆಯು ಬಡತನಕ್ಕೆ ನಡೆಸುತ್ತದೆ.
6ಸುಳ್ಳಿನ ನಾಲಿಗೆಯಿಂದ ಸಂಪಾದಿಸಿದ ಸಂಪತ್ತು
ಕ್ಷಣಿಕ ಆವಿಯಂತೆಯೂ ಮೃತ್ಯುಪಾಶದಂತೆಯೂ ಆಗಿದೆ.
7ದುಷ್ಟರ ಹಿಂಸೆಯು ಅವರನ್ನು ನಾಶಪಡಿಸುವುದು;
ಏಕೆಂದರೆ ನ್ಯಾಯವಾದದ್ದನ್ನು ಮಾಡುವುದನ್ನು ಅವರು ನಿರಾಕರಿಸುತ್ತಾರೆ.
8ದೋಷಿಯ ಮಾರ್ಗವು ಡೊಂಕು,
ಮುಗ್ಧನ ನಡತೆ ಯಥಾರ್ಥ.
9ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವುದಕ್ಕಿಂತ,
ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದು ಲೇಸು.
10ದುಷ್ಟರು ಕೇಡನ್ನು ಅಪೇಕ್ಷಿಸುತ್ತಾರೆ;
ಅವನು ತನ್ನ ನೆರೆಯವನಿಗೂ ಯಾವ ದಯೆಯನ್ನೂ ತೋರಿಸನು.
11ಪರಿಹಾಸ್ಯಕಾರರನ್ನು ಶಿಕ್ಷಿಸಿದರೆ, ಮುಗ್ಧರು ಜ್ಞಾನವಂತರಾಗುವರು;
ಜ್ಞಾನಿಯು ಶಿಕ್ಷಣ ಹೊಂದಿದರೆ, ಅವನು ಪರಿಜ್ಞಾನವನ್ನು ಹೊಂದುತ್ತಾನೆ.
12ನೀತಿವಂತನು ದುಷ್ಟರ ಮನೆಯನ್ನು ಗಮನಿಸುತ್ತಾನೆ;
ದುಷ್ಟರನ್ನು ಕೇಡಿಗೆ ತಳ್ಳುವನು.
13ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು
ತಾನೇ ಕೂಗಿದಾಗ ಯಾರೂ ಅವನಿಗೆ ಉತ್ತರ ಕೊಡುವುದಿಲ್ಲ.
14ಗುಟ್ಟಾಗಿ ಕೊಡುವ ಬಹುಮಾನವು ಕೋಪವನ್ನು ಅಡಗಿಸುವುದು;
ಮಡಿಲಲ್ಲಿ ಇಟ್ಟ ಲಂಚವು ಮಹಾ ಕೋಪವನ್ನು ಆರಿಸುವುದು.
15ನ್ಯಾಯತೀರಿಸುವುದು ನೀತಿವಂತರಿಗೆ ಸಂತೋಷ;
ಆದರೆ ಕೆಟ್ಟದ್ದನ್ನು ಮಾಡುವವರಿಗೆ ಭೀತಿ.
16ವಿವೇಕದ ಹಾದಿಯಿಂದ ತಪ್ಪಿಸಿಕೊಳ್ಳುವವನು
ಸತ್ತವರ ಸಹವಾಸದಲ್ಲಿ ವಿಶ್ರಾಂತಿ ಪಡೆಯುವನು.
17ಭೋಗಾಸಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ,
ತೈಲವನ್ನೂ ಅಪೇಕ್ಷಿಸುವವನು ಎಂದಿಗೂ ಧನವಂತನಾಗನು.
18ದುಷ್ಟರು ನೀತಿವಂತರಿಗೂ,
ದ್ರೋಹಿಗಳು ಸನ್ಮಾರ್ಗಿಗಳಿಗೂ ಈಡಾಗಿದ್ದಾರೆ.
19ಕಾಡುವ ಜಗಳಗಂಟಿ ಹೆಂಡತಿಯೊಂದಿಗೆ ವಾಸಮಾಡುವುದಕ್ಕಿಂತ,
ಮರಭೂಮಿಯಲ್ಲಿ ವಾಸಿಸುವುದು ಲೇಸು.
20ಜ್ಞಾನವಂತರ ನಿವಾಸದಲ್ಲಿ ಆಯ್ದ ಐಶ್ವರ್ಯವೂ, ಎಣ್ಣೆಯೂ ಇರುತ್ತವೆ;
ಆದರೆ ಬುದ್ಧಿಹೀನನು ಇದ್ದದ್ದೆಲ್ಲವನ್ನು ನುಂಗಿಬಿಡುತ್ತಾನೆ.
21ನೀತಿಯನ್ನೂ, ಕರುಣೆಯನ್ನೂ ಹಿಂಬಾಲಿಸುವವನು
ಜೀವವನ್ನೂ, ನೀತಿಯನ್ನೂ, ಕೀರ್ತಿಯನ್ನೂ ಕಂಡುಕೊಳ್ಳುತ್ತಾನೆ.
22ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ,
ಅವರು ಭರವಸವಿಟ್ಟ ಬಲವಾದ ಕೋಟೆಯನ್ನು ಕೆಡವಿ ಹಾಕುತ್ತಾನೆ.
23ತನ್ನ ಬಾಯಿಯನ್ನೂ, ನಾಲಿಗೆಯನ್ನೂ ಕಾಯುವವನು,
ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.
24ಸೊಕ್ಕೇರಿ ಗರ್ವದಲ್ಲಿ ವರ್ತಿಸುವವನ
ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕ.
25ಸೋಮಾರಿಯ ಆಸೆಯು ಅವನನ್ನು ಕೊಲ್ಲುತ್ತದೆ;
ಅವನ ಕೈಗಳು ದುಡಿಯುವುದಕ್ಕೆ ನಿರಾಕರಿಸುತ್ತವೆ.
26ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ;
ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.
27ದುಷ್ಟರ ಯಜ್ಞವು ಅಸಹ್ಯ;
ಅದನ್ನು ದುರ್ಬುದ್ಧಿಯಿಂದ ಅರ್ಪಿಸಿದರೆ, ಇನ್ನೂ ಎಷ್ಟೋ ಅಸಹ್ಯಕರ.
28ಸುಳ್ಳುಸಾಕ್ಷಿಯವನು ನಾಶವಾಗುವನು;
ಆದರೆ ಕೇಳಿದ್ದನ್ನೇ ನುಡಿಯುವವನ ಸಾಕ್ಷಿ ಸದಾ ನಿಲ್ಲುವುದು.
29ದುಷ್ಟನು ತನ್ನ ಮುಖವನ್ನು ಕಠಿಣ ಮಾಡಿಕೊಳ್ಳುತ್ತಾನೆ;
ಯಥಾರ್ಥವಂತನಾದರೋ ತನ್ನ ಮಾರ್ಗಗಳನ್ನು ಯೋಚಿಸುತ್ತಾರೆ.
30ಯೆಹೋವ ದೇವರಿಗೆ ವಿರೋಧವಾಗಿ
ಯಾವ ಜ್ಞಾನವೂ, ವಿವೇಕವೂ, ಯೋಜನೆಯೂ ಇಲ್ಲ.
31ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ;
ಆದರೆ ಜಯ ದೊರೆಯುವುದು ಯೆಹೋವ ದೇವರಿಂದಲೇ.

Highlight

Share

Compare

Copy

None

Want to have your highlights saved across all your devices? Sign up or sign in

Videos for ಜ್ಞಾನೋಕ್ತಿಗಳು 21