ಜ್ಞಾನೋಕ್ತಿಗಳು 20
20
1ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ;
ಇವುಗಳಿಂದ ಮೋಸ ಹೋದವನು ಜ್ಞಾನಿಯಲ್ಲ.
2ಅರಸನ ಭಯವು ಸಿಂಹದ ಘರ್ಜನೆಯಂತಿದೆ;
ಅವನ ಕೋಪವನ್ನೆಬ್ಬಿಸುವವರು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವರು.
3ಕಲಹವನ್ನು ತಡೆಯುವವನು, ಮಾನಕ್ಕೆ ಯೋಗ್ಯನು;
ಆದರೆ ಬುದ್ಧಿಹೀನನು ಮಾತ್ರ ಜಗಳವಾಡಲು ಒತ್ತಾಯಿಸುತ್ತಾನೆ.
4ಮೈಗಳ್ಳನು ಮಳೆಗಾಲದಲ್ಲಿ ಉಳುಮೆ ಮಾಡುವುದಿಲ್ಲ;
ಆದಕಾರಣ ಸುಗ್ಗಿಯಲ್ಲಿ ಅವನು ಅಪೇಕ್ಷಿಸಿದರೂ ಏನೂ ಸಿಕ್ಕುವುದಿಲ್ಲ.
5ಮನುಷ್ಯನ ಹೃದಯದ ಆಲೋಚನೆಯು ಆಳವಾದ ಬಾವಿಯ ನೀರಿನಂತಿದೆ;
ವಿವೇಕಿಯು ಅದನ್ನು ಸೇದುವನು.
6ಅನೇಕರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಪ್ರಾಮಾಣಿಕತೆಯನ್ನು ಸಾರುವನು;
ಆದರೆ ನಂಬಿಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
7ನೀತಿವಂತನು ನಿರ್ದೋಷವಾಗಿ ಜೀವಿಸುತ್ತಾನೆ;
ಅವನನ್ನು ಅನುಸರಿಸುವ ಅವನ ಮಕ್ಕಳು ಆಶೀರ್ವಾದ ಹೊಂದುವರು.
8ಅರಸನು ತನ್ನ ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವಾಗ,
ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
9“ನನ್ನ ಹೃದಯವನ್ನು ಶುದ್ಧವಾಗಿ ಇಟ್ಟುಕೊಂಡಿದ್ದೇನೆ.
ನಾನು ಶುದ್ಧನೂ ಪಾಪರಹಿತನೂ,” ಎಂದು ಯಾರು ಹೇಳಬಲ್ಲರು?
10ಮೋಸದ ತೂಕಗಳೂ, ಮೋಸದ ಅಳತೆಗಳೂ
ಇವೆರಡೂ ಯೆಹೋವ ದೇವರಿಗೆ ಅಸಹ್ಯ.
11ಚಿಕ್ಕ ಮಕ್ಕಳಾದರೋ ತಮ್ಮ ಕ್ರಿಯೆಗಳಿಂದಲೇ,
ತಾವು ಶುದ್ಧರೋ ಯಥಾರ್ಥರೋ ಎಂಬುದನ್ನು ತೋರ್ಪಡಿಸಿಕೊಳ್ಳುತ್ತಾರೆ.
12ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು
ಯೆಹೋವ ದೇವರು ಉಂಟುಮಾಡಿದ್ದಾನೆ.
13ನೀವು ನಿದ್ರೆಯನ್ನು ಪ್ರೀತಿಸಿದರೆ, ನೀವು ಬಡತನದಲ್ಲಿ ಕೊನೆಗೊಳ್ಳುತ್ತೀರಿ;
ನಿಮ್ಮ ಕಣ್ಣುಗಳನ್ನು ತೆರೆದರೆ, ಸಾಕಷ್ಟು ಆಹಾರ ಇರುತ್ತದೆ!
14“ಇದು ಒಳ್ಳೆಯದಲ್ಲ ಇದು ಒಳ್ಳೆಯದಲ್ಲ!” ಎಂದು ಕೊಳ್ಳುವವನು ಹೇಳುತ್ತಾನೆ;
ಆದರೆ ಅವನು ಕೊಂಡು ಹೋದ ಮೇಲೆ ಅದನ್ನೇ ಹೊಗಳುತ್ತಾನೆ.
15ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ;
ಆದರೆ ಪರಿಜ್ಞಾನದ ತುಟಿಗಳು ಅಪರೂಪದ ರತ್ನವಾಗಿವೆ.
16ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ;
ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
17ವಂಚನೆಯಿಂದ ಸಿಕ್ಕಿದ ಆಹಾರವು ರುಚಿ;
ಆದರೆ ಆಮೇಲೆ ಅವನ ಬಾಯಿಯು ಮರಳಿನಿಂದ ತುಂಬುವುದು.
18ಸಲಹೆಯಿಂದ ಯೋಜನೆಗಳು ನೆರವೆರುವವು;
ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.
19ಚಾಡಿಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ;
ಆದಕಾರಣ ಹರಟೆ ಹೊಡೆಯುವವನ ಸಹವಾಸ ಮಾಡಬೇಡ.
20ತನ್ನ ತಂದೆಯನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವನ
ದೀಪವು ಮಧ್ಯರಾತ್ರಿಯ ಕತ್ತಲೆಯಲ್ಲಿ ಆರಿಹೋಗುವುದು.
21ಪ್ರಾರಂಭದಲ್ಲಿ ತ್ವರೆಯಾಗಿ ಪಡೆದುಕೊಂಡ ಆಸ್ತಿಯೂ
ಅಂತ್ಯದಲ್ಲಿ ಆಶೀರ್ವಾದವಾಗಿರುವುದಿಲ್ಲ.
22ನೀನು, “ಕೇಡಿಗೆ ಮುಯ್ಯಿತೀರಿಸುವೆನು,” ಎಂದು ಹೇಳಬೇಡ;
ಯೆಹೋವ ದೇವರನ್ನು ನಿರೀಕ್ಷಿಸು; ಆಗ ಅವರೇ ನಿಮ್ಮನ್ನು ರಕ್ಷಿಸಿ ಉದ್ಧರಿಸುವನು.
23ವ್ಯತ್ಯಾಸದ ತೂಕಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ;
ಅಪ್ರಾಮಾಣಿಕ ತಕ್ಕಡಿಗಳು ಅವರನ್ನು ಮೆಚ್ಚಿಸುವುದಿಲ್ಲ.
24ಮನುಷ್ಯನ ಹೆಜ್ಜೆಗಳನ್ನು ಯೆಹೋವ ದೇವರು ನಿರ್ದೇಶಿಸುತ್ತಾರೆ.
ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಳ್ಳಬಲ್ಲನು?
25ದುಡುಕಿ ಪ್ರತಿಷ್ಠೆಗಾಗಿ ದೇವರಿಗೆ ಹರಕೆ ಮಾಡಿಕೊಂಡು
ಆಮೇಲೆ ವಿಚಾರಿಸುವುದು ಉರುಲಾಗಿದೆ.
26ಜ್ಞಾನಿಯಾದ ಅರಸನು ದುಷ್ಟರನ್ನು ತೂರುವನು;
ಅವರ ಮೇಲೆ ಕಣದ ಚಕ್ರವನ್ನು ಎಳೆಯುವನು.
27ಮನುಷ್ಯನ ಆತ್ಮವು ಯೆಹೋವ ದೇವರ ದೀಪವಾಗಿದೆ.
ಅದು ಅವನ ಅಂತರಂಗವನ್ನು ಶೋಧಿಸುತ್ತದೆ.
28ಪ್ರೀತಿಯೂ ನಂಬಿಗಸ್ತಿಕೆಯೂ ಅರಸನನ್ನು ಕಾಯುತ್ತವೆ;
ಪ್ರೀತಿಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.
29ಯೌವನಸ್ಥರ ಮಹಿಮೆ ಅವರ ಬಲವೇ;
ಮುದುಕರ ವೈಭವ ನರೆತ ತಲೆಯೇ.
30ಗಾಯಗೊಳಿಸುವ ಏಟುಗಳು ದುಷ್ಟತ್ವವನ್ನು ತೊಳೆಯುತ್ತವೆ;
ಪೆಟ್ಟುಗಳು ಅಂತರಂಗವನ್ನೂ ಶುದ್ಧಿಗೊಳಿಸುತ್ತವೆ.
Currently Selected:
ಜ್ಞಾನೋಕ್ತಿಗಳು 20: KSB
Highlight
Share
Compare
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.