ಯೆಶಾಯ 9
9
1ಆದರೂ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬುಲೂನ್ ನಾಡು ಮತ್ತು ನಫ್ತಾಲಿ ನಾಡುಗಳನ್ನು ಅವರು ಅವಮಾನಕ್ಕೆ ಗುರಿಮಾಡಿ, ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಇತರ ಜನರಿರುವ ಗಲಿಲಾಯ ನಾಡು, ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾರೆ.
2ಕತ್ತಲೆಯಲ್ಲಿ ನಡೆಯುವ ಈ ಜನರಿಗೆ
ಮಹಾ ಬೆಳಕು ಕಾಣಿಸಿತು,
ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ
ಬೆಳಕು ಉದಯಿಸಿತು.
3ನೀವು ಜನಾಂಗವನ್ನು ವೃದ್ಧಿಗೊಳಿಸಿದ್ದೀರಿ
ಮತ್ತು ಸಂತೋಷವನ್ನು ಹೆಚ್ಚಿಸಿದ್ದೀರಿ.
ಸುಗ್ಗಿ ಕಾಲದ ಸಂತೋಷದಂತೆಯೂ,
ಕೊಳ್ಳೆಯನ್ನು ಹಂಚಿಕೊಳ್ಳುವಾಗ
ಉಲ್ಲಾಸಿಸುವ ಹಾಗೆಯೂ ನಿಮ್ಮ
ಮುಂದೆ ಸಂತೋಷಿಸುವರು.
4ಏಕೆಂದರೆ ಅವನ ನೊಗವನ್ನೂ,
ಬೆನ್ನನ್ನು ಹೊಡೆದ ಕೋಲನ್ನೂ,
ಬಿಟ್ಟೀ ಹಿಡಿದವನ ದೊಣ್ಣೆಯನ್ನೂ,
ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ.
5ಯುದ್ಧವೀರರ ಪ್ರತಿ ಯುದ್ಧವು ಗಲಿಬಿಲಿಯ ಗದ್ದಲದಿಂದ
ರಕ್ತದಲ್ಲಿ ಹೊರಳಾಡಿಸಿದ ವಸ್ತ್ರಗಳು ಆಗಿರುತ್ತವೆ.
ಆದರೆ ಇವು ಬೆಂಕಿಗೆ ಆಹುತಿಯಾಗುತ್ತವೆ.
ಅದು ಬೆಂಕಿಗೆ ಇಂಧನವಾಗಿರುತ್ತದೆ.
6ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ,
ಆ ಮಗನನ್ನು ನಮಗಾಗಿ ಕೊಡಲಾಗಿದೆ.
ಆಡಳಿತವು ಅವರ ಬಾಹುವಿನ ಮೇಲಿರುವುದು,
ಅದ್ಭುತವಾದವರು ಸಮಾಲೋಚಕರು,
ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ,
ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು.
7ಅವರ ಆಡಳಿತದ ಶ್ರೇಷ್ಠತೆ ಮತ್ತು ಶಾಂತಿಗೆ ಅಂತ್ಯವಿಲ್ಲ. ಅವರ ಮುಖಾಂತರ ದಾವೀದನ
ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವುದು,
ದಾವೀದನ ರಾಜ್ಯವು ಇಂದಿನಿಂದ ಯಾವಾಗಲೂ
ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು,
ಸೇನಾಧೀಶ್ವರ ಯೆಹೋವ ದೇವರ ಅನುಗ್ರಹವು
ಇದನ್ನು ನೆರವೇರಿಸುವುದು.
ಇಸ್ರಾಯೇಲರ ವಿರುದ್ಧ ದೇವರ ರೌದ್ರ
8ಯೆಹೋವ ದೇವರು ಯಾಕೋಬನಿಗೆ ವಿರೋಧವಾಗಿ ಒಂದು ಮಾತನ್ನು ಹೇಳಿ ಕಳುಹಿಸಿದರು,
ಅದು ಇಸ್ರಾಯೇಲರಿಗೆ ತಗುಲಿತು.
9ಗರ್ವದಿಂದಲೂ, ಹೆಮ್ಮೆಯಿಂದಲೂ
ಹೇಳಿಕೊಳ್ಳುವ ಎಲ್ಲಾ ಜನರಿಗೂ
ಎಫ್ರಾಯೀಮ್ಯರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ
ಈ ಮಾತು ಗೊತ್ತಾಗುವುದು. ಅದೇನೆಂದರೆ,
10“ಇಟ್ಟಿಗೆಗಳು ಬಿದ್ದು ಹೋದರೂ
ಕೆತ್ತಿದ ಕಲ್ಲುಗಳಿಂದ ಕಟ್ಟುವೆವು.
ಅತ್ತಿಮರಗಳನ್ನು ಕಡಿದಿದ್ದರೂ
ಅಲ್ಲಿಯೇ ನಾವು ದೇವದಾರು ವೃಕ್ಷಗಳನ್ನು ನೆಡುವೆವು,”
11ಹೀಗಿರುವುದರಿಂದ ಯೆಹೋವ ದೇವರು ರೆಚೀನನ ವೈರಿಗಳನ್ನು
ಅವನಿಗೆ ವಿರೋಧವಾಗಿ ಎಬ್ಬಿಸಿ,
12ಅವನ ಶತ್ರುಗಳಾದ ಪೂರ್ವದಿಂದ ಅರಾಮ್ಯರನ್ನು ಮುಂದೆಯೂ,
ಪಶ್ಚಿಮದಿಂದ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವರು.
ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿಬಿಡುವರು.
ಏಕೆಂದರೆ, ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
13ಆದರೂ ಜನರು ತಮ್ಮನ್ನು ಶಿಕ್ಷಿಸಿದ ದೇವರ ಕಡೆಗೆ ತಿರುಗದೆಯೂ,
ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕದೆಯೂ ಇದ್ದರು.
14ಆದಕಾರಣ ಯೆಹೋವ ದೇವರು ಇಸ್ರಾಯೇಲಿನಿಂದ ತಲೆ
ಬಾಲಗಳನ್ನೂ ಖರ್ಜೂರದ ಕೊಂಬೆಗಳನ್ನೂ ಒಂದೇ ದಿನದಲ್ಲಿ ಕಡಿದುಹಾಕುವರು.
15ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು,
ಸುಳ್ಳು ಬೋಧಿಸುವ ಪ್ರವಾದಿಯು ಬಾಲವಾಗಿರುವನು.
16ಈ ಜನರನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ,
ಅವರನ್ನು ಹಿಂಬಾಲಿಸುವವರು ನಾಶವಾಗುವರು.
17ಹೀಗಿರಲು ಕರ್ತದೇವರು ಅವರ ಯೌವನಸ್ಥರಲ್ಲಿ ಆನಂದಿಸುವುದಿಲ್ಲ.
ಅವರ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ.
ಏಕೆಂದರೆ, ಪ್ರತಿಯೊಬ್ಬನು ಕಪಟಿಯೂ,
ಕೇಡು ಮಾಡುವವನೂ ಆಗಿದ್ದಾನೆ.
ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ.
ಆದ್ದರಿಂದ ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
18ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ,
ಮುಳ್ಳುಗಳನ್ನು ನುಂಗಿಬಿಟ್ಟು,
ಅಡವಿಯ ಪೊದೆಗಳನ್ನು ಹತ್ತಿಕೊಳ್ಳಲು,
ಅದು ಹೊಗೆ ಹೊಗೆಯಾಗಿ ಸುತ್ತಿಕೊಂಡು ಮೇಲಕ್ಕೆ ಏರುತ್ತದೆ.
19ಸೇನಾಧೀಶ್ವರ ಯೆಹೋವ ದೇವರ ಕೋಪದಿಂದ
ದೇಶವು ಒಣಗಿಹೋಗಿದೆ,
ಜನರು ಉರಿಯುವ ಸೌದೆಯಂತಿದ್ದಾರೆ.
ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವುದಿಲ್ಲ.
20ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು
ತಿಂದರೂ ಹಸಿದೇ ಇರುವನು,
ಅವನು ಎಡಗಡೆಯಲ್ಲಿರುವುದನ್ನು ತಿಂದರೂ
ಅವು ಅವನನ್ನು ತೃಪ್ತಿಪಡಿಸಲಾರವು.
ಒಬ್ಬೊಬ್ಬನೂ ತನ್ನ ನೆರೆಯವನನ್ನು
ಹಾನಿ ಮಾಡುತ್ತಿದ್ದಾನೆ.
21ಹೀಗೆ ಮನಸ್ಸೆಯು ಎಫ್ರಾಯೀಮನ್ನು ಮತ್ತು ಎಫ್ರಾಯೀಮು ಮನಸ್ಸೆಯನ್ನು ಹಾನಿ ಮಾಡುತ್ತಿವೆ.
ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು.
ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ,
ಅವರ ಕೈ ಇನ್ನೂ ಚಾಚಿಯೇ ಇದೆ.
Currently Selected:
ಯೆಶಾಯ 9: KSB
Highlight
Share
Compare
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.