YouVersion Logo
Search Icon

ಯೆಶಾಯ 10

10
1ಅನೀತಿಯ ನೇಮಕಗಳನ್ನು ನೇಮಿಸಿ,
ಕ್ರೂರವಾದ ಕಾನೂನುಗಳನ್ನು ಬರೆಯುವವರಿಗೆ ಕಷ್ಟ!
2ಇವರು ವಿಧವೆಯರನ್ನು ಸೂರೆಮಾಡಿ,
ದಿಕ್ಕಿಲ್ಲದವರಿಂದ ಸುಲಿದುಕೊಂಡು
ದೀನರಿಗೆ ನ್ಯಾಯವನ್ನು ತಪ್ಪಿಸಿ,
ನನ್ನ ಜನರಲ್ಲಿ ಬಡವರ ನ್ಯಾಯವನ್ನು ತೆಗೆಯಬೇಕೆಂದಿದ್ದಾರೆ.
3ವಿಚಾರಣೆಯ ದಿನದಲ್ಲಿಯೂ,
ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ?
ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ?
ನಿಮ್ಮ ಐಶ್ವರ್ಯವನ್ನು ಎಲ್ಲಿ ಬಿಡುವಿರಿ?
4ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು,
ಹತರಾಗಿರುವವರ ಕೆಳಗೆ ಬಿದ್ದಿರುವುದೇ ಇವರ ಗತಿ.
ಏಕೆಂದರೆ, ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ,
ಅವರ ಕೈ ಇನ್ನೂ ಚಾಚಿಯೇ ಇದೆ.
ಅಸ್ಸೀರಿಯದ ಮೇಲೆ ದೇವರ ದಂಡನೆ
5“ಅಯ್ಯೋ, ನನ್ನ ಕೋಪದ ಕೋಲಾದ ಅಸ್ಸೀರಿಯವೇ,
ನನ್ನ ಕೈಯಲ್ಲಿರುವ ಬೆತ್ತವು ನನ್ನ ಕೋಪವೇ.
6ನಾನು ಅವನನ್ನು ಭಕ್ತಿಹೀನ ಜನರಿಗೆ ವಿರುದ್ಧವಾಗಿ ಕಳುಹಿಸಿ,
ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ,
ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ
ತುಳಿದುಹಾಕಬೇಕೆಂದು ಅಪ್ಪಣೆ ಕೊಡುವೆನು.
7ಅದರ ಅಭಿಪ್ರಾಯವೋ ಹಾಗಲ್ಲ.
ಅದರ ಹೃದಯವು ಈ ಪ್ರಕಾರ ಆಲೋಚಿಸುವುದಿಲ್ಲ.
ಜನಾಂಗಗಳನ್ನು ಕಡಿದುಬಿಡುವುದು ಕೊಂಚವಾಗಿ ಅಲ್ಲ.
ಆದರೆ ನಾಶಮಾಡುವುದು ಅದರ ಹೃದಯದ ಉದ್ದೇಶವು.
8ಏಕೆಂದರೆ ಅವನು, ‘ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ?
9ಕಲ್ನೋ, ಕರ್ಕೆಮೀಷಿನ ಹಾಗಲ್ಲವೋ?
ಹಮಾತ್ ಅರ್ಪಾದಿನ ಹಾಗಲ್ಲವೇ?
ಸಮಾರ್ಯವು ದಮಸ್ಕದ ಹಾಗಲ್ಲವೋ?
10ಯೆರೂಸಲೇಮಿನಲ್ಲಿಯೂ ಸಮಾರ್ಯದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು
ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ,
11ನಾನು ಸಮಾರ್ಯ ಮತ್ತು ಅದರ ವಿಗ್ರಹಗಳಿಗೆ ಮಾಡಿದಂತೆಯೇ
ಯೆರೂಸಲೇಮಿಗೆ ಮತ್ತು ಅದರ ವಿಗ್ರಹಗಳಿಗೆ ಮಾಡುತ್ತೇನೆಯೇ?’ ”
12ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.” 13ಏಕೆಂದರೆ ಅಸ್ಸೀರಿಯ ತನ್ನೊಳಗೆ ಹೀಗೆ ಅಂದುಕೊಂಡನು,
“ ‘ನನ್ನ ಕೈಯ ಬಲದಿಂದಲೂ ನನ್ನ ಜ್ಞಾನದಿಂದಲೂ ಅದನ್ನು ಮಾಡಿದೆ.
ಏಕೆಂದರೆ, ನಾನು ವಿವೇಕಿ. ಜನಾಂಗಗಳ ಮೇರೆಗಳನ್ನು ಕಿತ್ತು,
ಅವರ ನಿಧಿಗಳನ್ನು ಕೊಳ್ಳೆಹೊಡೆದು,
ಅದರ ಅರಸರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
14ಜನರ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ;
ಹಕ್ಕಿ ಬಿಟ್ಟುಹೋದ ಮೊಟ್ಟೆಗಳನ್ನು ಕೂಡಿಸುವಂತೆ,
ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ.
ರೆಕ್ಕೆಯಾಡಿಸಿ ಬಾಯಿತೆರೆದು
ಕೀಚುಗುಟ್ಟಲು ಯಾರೂ ಇರಲಿಲ್ಲ.’ ”
15ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ?
ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿಕೊಂಡೀತೆ?
ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಕೋಲು ಹಿಡಿದವನನ್ನೇ ಹೊಡೆದಂತಾಯಿತು!
ನಿರ್ಜೀವ ಬೆತ್ತ ಸಜೀವ ಮನುಷ್ಯನನ್ನೇ ಬಡಿದಂತಾಯಿತು!
16ಆದಕಾರಣ ಸೇನಾಧೀಶ್ವರ ಯೆಹೋವ ದೇವರು ಅವನ ಕೊಬ್ಬಿದ ಯೋಧರಿಗೆ ಕ್ಷಯವನ್ನು ಉಂಟುಮಾಡುವರು,
ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಕೆಳಗೆ ಹತ್ತಿಕೊಳ್ಳುವುದು.
17ಇಸ್ರಾಯೇಲಿನ ಬೆಳಕು ಬೆಂಕಿಯಾಗುವುದು,
ಅದರ ಪರಿಶುದ್ಧರು ಜ್ವಾಲೆಯಂತಿರುವರು,
ಅದು ಒಂದೇ ದಿನದಲ್ಲಿ ಅವನ ಮುಳ್ಳು,
ದತ್ತೂರಿಗಳನ್ನು ದಹಿಸಿ ನುಂಗಿಬಿಡುವುದು.
18ದೇಹಾತ್ಮದಂಥ ಅದರ ಉದ್ಯಾನವನವನ್ನೂ,
ಫಲಭರಿತ ತೋಟದ ವೈಭವವನ್ನು ನಿರ್ಮೂಲ ಮಾಡುವುದು.
ದೇಶವೋ ರೋಗಿಯಂತೆ ನಾಶವಾಗುವುದು.
19ಅವನ ಉಳಿದ ವನವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆಯಾಗಿರುವುದು.
ಇಸ್ರಾಯೇಲರಲ್ಲಿ ಉಳಿದವರು
20ಆ ದಿನದಲ್ಲಿ ಇಸ್ರಾಯೇಲರಲ್ಲಿ ಉಳಿದವರೂ,
ಯಾಕೋಬಿನ ಮನೆತನದಿಂದ
ತಪ್ಪಿಸಿಕೊಂಡವರೂ ಇನ್ನು ಮೇಲೆ
ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು,
ಇಸ್ರಾಯೇಲಿನ ಪರಿಶುದ್ಧರಾದ ಯೆಹೋವ ದೇವರ
ಸತ್ಯವಾಗಿ ಆಧಾರಮಾಡಿಕೊಳ್ಳುವರು.
21ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ
ಪರಾಕ್ರಮಿಯಾದ ದೇವರ ಕಡೆಗೆ ಹಿಂದಿರುಗುವರು.
22ತಮ್ಮ ಜನರಾದ ಇಸ್ರಾಯೇಲರು ಸಮುದ್ರದ ಉಸುಬಿನಂತಿದ್ದರೂ,
ಅವರಲ್ಲಿ ಉಳಿದವರು ಮಾತ್ರ ಹಿಂದಿರುಗುವರು.
ಅವರ ಅಳಿವು ಶಾಸನಬದ್ಧವಾದುದು;
ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು.
23ಏಕೆಂದರೆ ಸೇನಾಧೀಶ್ವರ ಯೆಹೋವ ದೇವರೆಂಬ ಕರ್ತ ಆಗಿರುವವರು, ಎಲ್ಲಾ ದೇಶದ
ಮಧ್ಯದಲ್ಲಿ ತಿಳಿಸಿದ ವಿನಾಶವನ್ನು ಉಂಟುಮಾಡುವರು.
24ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ:
ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ,
ಈಜಿಪ್ಟಿನವರಂತೆ ನಿಮ್ಮನ್ನು ಕೋಲಿನಿಂದ ಹೊಡೆದು,
ನಿಮಗೆ ವಿರುದ್ಧವಾಗಿ ದೊಣ್ಣೆಯನ್ನು
ಎತ್ತುವ ಅಸ್ಸೀರಿಯದವರಿಗೆ ಭಯಪಡಬೇಡಿರಿ.
25ನನ್ನ ಕೋಪವು ಅವರ ದಂಡನೆಗಾಗುವುದು;
ಆದ್ದರಿಂದ ಇನ್ನು ಸ್ವಲ್ಪಕಾಲದಲ್ಲಿ ಕೋಪವು ತೀರಿಹೋಗುವುದು.
26ಸೇನಾಧೀಶ್ವರ ಯೆಹೋವ ದೇವರು
ಓರೇಬ್ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ,
ಅವರು ಕೋಲನ್ನು ಸಮುದ್ರದ ಮೇಲೆ ಚಾಚಿ,
ಈಜಿಪ್ಟಿನವರ ಮೇಲೆ ಎತ್ತಿದಂತೆ ಎತ್ತುವರು.
27ಆ ದಿನದಲ್ಲಿ ಅವರು ಹೊರಿಸಿದ ಹೊರೆಯು
ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು
ನಿಮ್ಮ ಕುತ್ತಿಗೆಯಿಂದಲೂ ತೊಲಗುವುದು
ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
28ಅವರು ಅಯ್ಯಾಥಿಗೆ ಬಂದರು.
ಮಿಗ್ರೋನನ್ನು ಹಾದು ಹೋಗಿ,
ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟಿದ್ದಾರೆ.
29ಅವರು ಕಣಿವೆಯನ್ನು ದಾಟಿದ್ದಾರೆ;
ಗಿಬೆಯದಲ್ಲಿ ಇಳುಕೊಂಡಿದ್ದಾರೆ.
ರಾಮಾ ಜನತೆ ಹೆದರುತ್ತಿದೆ;
ಸೌಲನ ಗಿಬೆಯದ ಜನತೆ ಓಡಿಹೋಗಿದೆ.
30ಗಲ್ಲೀಮ್ ಮಗಳೇ, ನಿನ್ನ ಸ್ವರವೆತ್ತಿ ಕೂಗು;
ಬಡ ಅನಾತೋತೇ,
ಲಯೆಷಿನವರೆಗೂ ಕೇಳಿಸುವಂತೆ ಕೂಗು.
31ಮದ್ಮೇನ ದಿಕ್ಕುಪಾಲಾಯಿತು.
ಗೆಬೀಮಿನ ನಿವಾಸಿಗಳು ಓಡಿಹೋಗಲು ಕೂಡಿಕೊಂಡರು.
32ಆ ದಿನದಲ್ಲಿ ಅವರು ನೋಬಿನಲ್ಲಿ ಇಳಿದುಕೊಳ್ಳುವರು.
ಚೀಯೋನ್ ನಗರಿಯ ಪರ್ವತದ ಕಡೆಗೆ,
ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.
33ಇಗೋ, ಕರ್ತದೇವರು ಆಗಿರುವ ಸೇನಾಧೀಶ್ವರ ಯೆಹೋವ ದೇವರು
ಭಯಂಕರವಾಗಿ ಕೊಂಬೆಯನ್ನು ಕತ್ತರಿಸುವರು.
ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವುವು,
ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.
34ಅವರು ಅಡವಿಯ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು.
ಲೆಬನೋನು ಪರಾಕ್ರಮಿಯಾಗಿರುವವರ ಮುಂದೆ ಬಿದ್ದುಹೋಗುವುದು.

Currently Selected:

ಯೆಶಾಯ 10: KSB

Highlight

Share

Compare

Copy

None

Want to have your highlights saved across all your devices? Sign up or sign in