1 ಸಮುವೇಲನು 22
22
ದಾವೀದನು ಬೇರೆಬೇರೆ ಸ್ಥಳಗಳಿಗೆ ಹೋದನು
1ದಾವೀದನು ಗತ್ ಊರನ್ನು ಬಿಟ್ಟು ಅದುಲ್ಲಾಮ್ ಗವಿಗೆ ಓಡಿಹೋದನು. ದಾವೀದನು ಅದುಲ್ಲಾಮಿನಲ್ಲಿರುವುದು ಅವನ ಅಣ್ಣಂದಿರಿಗೂ ಬಂಧುಗಳಿಗೂ ತಿಳಿಯಿತು. ಅವರು ದಾವೀದನನ್ನು ನೋಡಲು ಅಲ್ಲಿಗೆ ಹೋದರು. 2ದಾವೀದನ ಜೊತೆ ಅನೇಕ ಜನರು ಸೇರಿಕೊಂಡರು. ತೊಂದರೆಯಲ್ಲಿರುವವರು, ಸಾಲಗಾರರು ಮತ್ತು ಅತೃಪ್ತರಾದವರು ದಾವೀದನನ್ನು ಆಶ್ರಯಿಸಿಕೊಂಡರು. ದಾವೀದನು ಅವರಿಗೆಲ್ಲಾ ನಾಯಕನಾದನು. ದಾವೀದನೊಂದಿಗೆ ನಾನೂರು ಜನರಿದ್ದರು.
3ದಾವೀದನು ಅದುಲ್ಲಾಮನ್ನು ಬಿಟ್ಟು ಮೋವಾಬಿನ ಮಿಚ್ಪೆಗೆ ಹೋದನು. ದಾವೀದನು ಮೋವಾಬ್ ರಾಜನಿಗೆ, “ದೇವರು ನನಗೇನು ಮಾಡುತ್ತಾನೆಂಬುದನ್ನು ನಾನು ತಿಳಿದುಕೊಳ್ಳುವ ತನಕ, ನನ್ನ ತಂದೆತಾಯಿಗಳು ನಿನ್ನಲ್ಲಿಗೆ ಬಂದು ಇರಲು ದಯವಿಟ್ಟು ನನಗೆ ಅವಕಾಶ ಕೊಡು” ಎಂದು ಕೇಳಿಕೊಂಡನು. 4ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ರಾಜನ ಹತ್ತಿರ ಬಿಟ್ಟನು. ದಾವೀದನ ತಂದೆತಾಯಿಗಳು ಅವನು ಕೋಟೆಯಲ್ಲಿರುವ ತನಕ ಮೋವಾಬಿನ ರಾಜನೊಂದಿಗೆ ನೆಲೆಸಿದರು.
5ಆದರೆ ಗಾದ್ ಪ್ರವಾದಿಯು ದಾವೀದನಿಗೆ, “ನೀನು ಕೋಟೆಯಲ್ಲಿರಬೇಡ. ಯೆಹೂದ್ಯರ ದೇಶಕ್ಕೆ ಹೋಗು” ಎಂದು ಹೇಳಿದನು. ಆದ್ದರಿಂದ ದಾವೀದನು ಹೆರೆತ್ ಅರಣ್ಯಕ್ಕೆ ಹೊರಟುಹೋದನು.
ಸೌಲನಿಂದ ಅಹೀಮೆಲೆಕನ ಕುಟುಂಬದ ನಾಶನ
6ದಾವೀದನ ಮತ್ತು ಅವನ ಜನರ ಬಗ್ಗೆ ಜನರು ತಿಳಿದಿದ್ದಾರೆಂಬುದು ಸೌಲನಿಗೆ ಗೊತ್ತಾಯಿತು. ಗಿಬೆಯ ಬೆಟ್ಟದ ಮೇಲಿನ ಮರದ ಕೆಳಗೆ ಸೌಲನು ಕುಳಿತಿದ್ದನು. ಸೌಲನ ಕೈಯಲ್ಲಿ ಭರ್ಜಿಯಿತ್ತು. ಸೌಲನ ಅಧಿಕಾರಿಗಳೆಲ್ಲ ಅವನ ಸುತ್ತಲೂ ನಿಂತಿದ್ದರು. 7ಸೌಲನು ತನ್ನ ಸುತ್ತಲೂ ನಿಂತಿದ್ದ ಅಧಿಕಾರಿಗಳಿಗೆ, “ಬೆನ್ಯಾಮೀನನ ಜನರೇ, ಕೇಳಿ! ಇಷಯನ ಮಗನಾದ ದಾವೀದನು ನಿಮಗೆ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಕೊಡುತ್ತಾನೆಂದು ತಿಳಿದಿರುವಿರಾ? ದಾವೀದನು ನಿಮಗೆ ಸಹಸ್ರಾಧಿಪತಿಗಳಾಗಿ ಮತ್ತು ಶತಾಧಿಪತಿಗಳಾಗಿ ಬಡ್ತಿ ನೀಡುತ್ತಾನೆಂದು ನೀವು ತಿಳಿದಿರುವಿರಾ? 8ನೀವು ನನ್ನ ವಿರುದ್ಧವಾಗಿ ಸಂಚುನಡೆಸುತ್ತಿರುವಿರಿ! ನೀವು ರಹಸ್ಯಯೋಜನೆಗಳನ್ನು ಮಾಡಿದ್ದೀರಿ. ನನ್ನ ಮಗ ಯೋನಾತಾನನ ಬಗ್ಗೆ ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ಅವನು ಇಷಯನ ಮಗನ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ನಿಮ್ಮಲ್ಲಿ ಒಬ್ಬರೂ ನನ್ನ ಬಗ್ಗೆ ಚಿಂತಿಸುವುದಿಲ್ಲ! ನನ್ನ ಮಗ ಯೋನಾತಾನನು ದಾವೀದನನ್ನು ಪ್ರೋತ್ಸಾಹಿಸಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ. ಅಡಗಿಕೊಂಡು ನನ್ನ ಮೇಲೆ ಆಕ್ರಮಣ ಮಾಡುವಂತೆ ನನ್ನ ಸೇವಕನಾದ ದಾವೀದನಿಗೆ ಯೋನಾತಾನನು ಹೇಳಿಕೊಟ್ಟಿದ್ದಾನೆ! ಈಗ ದಾವೀದನು ಮಾಡುತ್ತಿರುವುದು ಅದನ್ನೇ!” ಎಂದು ಹೇಳಿದನು.
9ಸೌಲನ ಅಧಿಕಾರಿಗಳೊಂದಿಗೆ ಎದೋಮ್ಯನಾದ ದೋಯೇಗನು ನಿಂತಿದ್ದನು. ದೋಯೇಗನು, “ನಾನು ನೋಬಿನಲ್ಲಿ ಇಷಯನ ಮಗನನ್ನು ನೋಡಿದೆನು. ದಾವೀದನು ಅಹೀಟೂಬನ ಮಗನಾದ ಅಹೀಮೆಲೆಕನನ್ನು ನೋಡಲು ಬಂದಿದ್ದನು. 10ಅಹೀಮೆಲೆಕನು ದಾವೀದನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಅಹೀಮೆಲೆಕನು ದಾವೀದನಿಗೆ ಆಹಾರವನ್ನೂ ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನೂ ಕೊಟ್ಟನು” ಎಂದು ಹೇಳಿದನು.
11ಆಗ ರಾಜನಾದ ಸೌಲನು ಯಾಜಕನನ್ನು ತನ್ನ ಹತ್ತಿರಕ್ಕೆ ಕರೆತರಲು ಕೆಲವು ಜನರಿಗೆ ಅಪ್ಪಣೆಕೊಟ್ಟನು. ಸೌಲನು, ಅಹೀಟೂಬನ ಮಗನಾದ ಅಹೀಮೆಲೆಕನನ್ನೂ ಅವನ ಎಲ್ಲ ಬಂಧುಗಳನ್ನೂ ಕರೆತರಲು ಅವರಿಗೆ ಹೇಳಿದನು. ಅಹೀಮೆಲೆಕನ ಬಂಧುಗಳು ನೋಬಿನಲ್ಲಿ ಯಾಜಕರಾಗಿದ್ದರು. ಅವರೆಲ್ಲ ರಾಜನ ಹತ್ತಿರಕ್ಕೆ ಬಂದರು. 12ಸೌಲನು ಅಹೀಮೆಲೆಕನಿಗೆ, “ಅಹೀಟೂಬನ ಮಗನೇ, ಈಗ ನನ್ನ ಮಾತನ್ನು ಕೇಳು” ಎಂದು ಹೇಳಿದನು.
ಅಹೀಮೆಲೆಕನು, “ಆಗಲೀ, ಸ್ವಾಮಿ” ಎಂದು ಉತ್ತರಿಸಿದನು.
13ಸೌಲನು ಅಹೀಮೆಲೆಕನಿಗೆ, “ನೀನು ಮತ್ತು ಇಷಯನ ಮಗ ನನ್ನ ವಿರುದ್ಧ ರಹಸ್ಯಯೋಜನಗೆಳನ್ನು ಏಕೆ ಮಾಡಿದಿರಿ? ನೀನು ದಾವೀದನಿಗೆ ರೊಟ್ಟಿಯನ್ನೂ ಖಡ್ಗವನ್ನೂ ಕೊಟ್ಟೆ! ನೀನು ಅವನಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ಈಗ ದಾವೀದನು ನನ್ನ ಮೇಲೆ ಆಕ್ರಮಣಮಾಡಲು ಕಾಯುತ್ತಿದ್ದಾನೆ!” ಎಂದು ಹೇಳಿದನು.
14ಅಹೀಮೆಲೆಕನು, “ದಾವೀದನು ನಿನಗೆ ಬಹಳ ನಂಬಿಗಸ್ತನಾಗಿದ್ದಾನೆ. ದಾವೀದನಷ್ಟು ನಂಬಿಗಸ್ತನು ನಿನ್ನ ಇತರ ಅಧಿಕಾರಿಗಳಲ್ಲಿ ಇಲ್ಲವೇ ಇಲ್ಲ. ದಾವೀದನು ನಿನ್ನ ಸ್ವಂತ ಅಳಿಯ. ದಾವೀದನು ನಿನ್ನ ಅಂಗರಕ್ಷಕ ದಳಪತಿ. ದಾವೀದನನ್ನು ನಿನ್ನ ಸ್ವಂತ ಕುಟುಂಬವೆಲ್ಲ ಗೌರವಿಸುತ್ತದೆ. 15ದಾವೀದನಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದು ಅದು ಮೊದಲನೆಯ ಸಲವಂತೂ ಅಲ್ಲವೇ ಅಲ್ಲ. ನನ್ನ ಮೇಲಾಗಲಿ ನನ್ನ ಬಂಧುಗಳ ಮೇಲಾಗಲಿ ತಪ್ಪು ಹೊರಿಸಬೇಡ. ನಾವೆಲ್ಲ ನಿನ್ನ ಸೇವಕರು. ಈಗ ಏನು ನಡೆಯುತ್ತಿದೆಯೋ ಅದು ನನಗೆ ಸ್ವಲ್ಪವೂ ತಿಳಿದಿಲ್ಲ” ಎಂದು ಉತ್ತರಿಸಿದನು.
16ಆದರೆ ರಾಜನು, “ಅಹೀಮೆಲೆಕನೇ, ನೀನು ಮತ್ತು ನಿನ್ನ ಬಂಧುಗಳೆಲ್ಲರೂ ಸಾಯಲೇಬೇಕು!” ಎಂದು ಹೇಳಿದನು. 17ನಂತರ ರಾಜನು ತನ್ನ ಸಿಪಾಯಿಗಳಿಗೆ, “ನೀವು ಹೋಗಿ ಯೆಹೋವನ ಯಾಜಕರನ್ನು ಕೊಂದುಹಾಕಿ. ಅವರು ದಾವೀದನ ಪಕ್ಷ ವಹಿಸಿದ್ದಾರೆ. ದಾವೀದನು ಓಡಿಹೋಗುತ್ತಿರುವುದು ತಿಳಿದಿದ್ದರೂ ಅವರು ನನಗೆ ತಿಳಿಸಲಿಲ್ಲ!” ಎಂದನು.
ಆದರೆ ಯೆಹೋವನ ಯಾಜಕರನ್ನು ಕೊಲ್ಲಲು ಸೈನಿಕರು ನಿರಾಕರಿಸಿದರು. 18ಆದ್ದರಿಂದ ರಾಜನು ದೋಯೇಗನಿಗೆ, “ನೀನು ಹೋಗಿ ಯಾಜಕರನ್ನು ಕೊಂದುಹಾಕು” ಎಂದು ಹೇಳಿದನು. ಆದ್ದರಿಂದ ಎದೋಮ್ಯನಾದ ದೋಯೇಗನು ಹೋಗಿ ಆ ದಿನ ಎಂಭತ್ತೈದು ಮಂದಿ ಯಾಜಕರನ್ನು ಕೊಂದನು. 19ನೋಬ್ ಪಟ್ಟಣವು ಯಾಜಕರ ನಗರವಾಗಿತ್ತು. ದೋಯೇಗನು ನೋಬ್ ಪಟ್ಟಣದ ಎಲ್ಲ ಜನರನ್ನೂ ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಹಸುಗೂಸುಗಳನ್ನೂ ತನ್ನ ಖಡ್ಗದಿಂದ ಕೊಂದುಹಾಕಿದನು. ದೋಯೇಗನು ಅವರ ಹಸುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಕೊಂದುಬಿಟ್ಟನು.
20ಆದರೆ ಎಬ್ಯಾತಾರನು ತಪ್ಪಿಸಿಕೊಂಡನು. ಎಬ್ಯಾತಾರನು ಅಹೀಮೆಲೆಕನ ಮಗ. ಅಹೀಮೆಲೆಕನು ಅಹೀಟೂಬನ ಮಗ. ಎಬ್ಯಾತಾರನು ಓಡಿಹೋಗಿ ದಾವೀದನ ಜೊತೆ ಸೇರಿಕೊಂಡನು. 21ಯೆಹೋವನ ಯಾಜಕರನ್ನು ಸೌಲನು ಕೊಲ್ಲಿಸಿದನೆಂದು ಎಬ್ಯಾತಾರನು ದಾವೀದನಿಗೆ ತಿಳಿಸಿದನು. 22ಆಗ ದಾವೀದನು ಎಬ್ಯಾತಾರನಿಗೆ, “ನಾನು ಎದೋಮ್ಯನಾದ ದೋಯೇಗನನ್ನು ಆ ದಿನ ನೋಬ್ ಪಟ್ಟಣದಲ್ಲಿ ನೋಡಿದೆ. ಅವನು ಸೌಲನಿಗೆ ತಿಳಿಸುತ್ತಾನೆಂದು ನನಗೆ ಗೊತ್ತಿತ್ತು! ನಿನ್ನ ತಂದೆಯ ಕುಟುಂಬದ ಮರಣಕ್ಕೆ ನಾನೇ ಕಾರಣ. 23ನಿನ್ನನ್ನು ಕೊಲ್ಲಲು ಯಾವ ಮನುಷ್ಯ ಬಯಸಿರುವನೋ ಅವನು ನನ್ನನ್ನು ಸಹ ಕೊಲ್ಲಲು ಬಯಸಿದ್ದಾನೆ. ನನ್ನ ಜೊತೆಯಲ್ಲಿರು. ಆಗ ನೀನು ಸುರಕ್ಷಿತವಾಗಿರುವೆ” ಎಂದು ಹೇಳಿದನು.
Currently Selected:
1 ಸಮುವೇಲನು 22: KERV
Highlight
Copy
Compare
Share
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International