1 ಸಮುವೇಲನು 21
21
ದಾವೀದನು ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು
1ನಂತರ ದಾವೀದನು ಹೊರಟುಹೋದನು. ಯೋನಾತಾನನು ಪಟ್ಟಣಕ್ಕೆ ಹಿಂದಿರುಗಿದನು. ದಾವೀದನು ನೋಬ್ ಎಂಬ ಪಟ್ಟಣದ ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು.
ಅಹೀಮೆಲೆಕನು ದಾವೀದನನ್ನು ಸಂಧಿಸಲು ಹೊರಗೆ ಬಂದನು. ಅಹೀಮೆಲೆಕನು ಭಯದಿಂದ ನಡುಗುತ್ತಿದ್ದನು. ಅಹೀಮೆಲೆಕನು ದಾವೀದನಿಗೆ, “ನೀನು ಒಬ್ಬಂಟಿಗನಾಗಿ ಬಂದಿರುವುದೇಕೆ? ಬೇರೆ ಯಾವ ವ್ಯಕ್ತಿಯೂ ನಿನ್ನ ಜೊತೆಯಲ್ಲಿಲ್ಲದಿರುವುದೇಕೆ?” ಎಂದು ಕೇಳಿದನು.
2ದಾವೀದನು ಅಹೀಮೆಲೆಕನಿಗೆ, “ರಾಜನು ನನಗೆ ಒಂದು ವಿಶೇಷ ಆಜ್ಞೆಯನ್ನು ಕೊಟ್ಟಿರುವನು. ಅವನು ನನಗೆ, ‘ಈ ಕೆಲಸದ ಬಗ್ಗೆ ಬೇರೆ ಯಾರಿಗೂ ತಿಳಿಸಬೇಡ. ನಾನು ನಿನಗೆ ಮಾಡಲು ಹೇಳಿದ ಕೆಲಸವು ಯಾರಿಗೂ ತಿಳಿಯಕೂಡದು’ ಎಂದು ಹೇಳಿದ್ದಾನೆ. ನಾನು ನನ್ನ ಜನರಿಗೆ ನನ್ನನ್ನು ಎಲ್ಲಿ ಭೇಟಿಯಾಗಬೇಕೆಂದು ತಿಳಿಸಿದ್ದೇನೆ. 3ಈಗ, ನಿನ್ನ ಬಳಿ ತಿನ್ನಲು ಏನಾದರೂ ಆಹಾರವಿದೆಯೋ? ನನಗೆ ಐದು ರೊಟ್ಟಿಗಳನ್ನಾಗಲಿ ಅಥವಾ ಬೇರೆ ಯಾವ ಆಹಾರಪದಾರ್ಥವನ್ನಾಗಲಿ ಕೊಡು” ಎಂದು ಹೇಳಿದನು.
4ಯಾಜಕನು ದಾವೀದನಿಗೆ, “ನನ್ನ ಬಳಿ ಸಾಧಾರಣವಾದ ರೊಟ್ಟಿಗಳಿಲ್ಲ. ಆದರೆ ಕೆಲವು ಪವಿತ್ರ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅವುಗಳನ್ನು ತಿನ್ನಬಹುದು” ಎಂದನು.
5ದಾವೀದನು ಯಾಜಕನಿಗೆ, “ನಾವು ಯಾವ ಹೆಂಗಸಿನೊಂದಿಗೂ ಲೈಂಗಿಕ ಸಂಬಂಧ ಹೊಂದಿಲ್ಲ. ನನ್ನ ಜನರು ಯುದ್ಧಕ್ಕೆ ಹೋಗುವಾಗಲೂ ಸಾಧಾರಣಕಾರ್ಯಕ್ಕೆ ಹೋಗುವಾಗಲೂ ತಮ್ಮ ದೇಹಗಳನ್ನು ಶುಚಿಯಾಗಿಟ್ಟುಕೊಳ್ಳುತ್ತಾರೆ. ನಮ್ಮ ಇಂದಿನ ಕಾರ್ಯವು ವಿಶೇಷವಾದ್ದರಿಂದ ನಾವು ಖಂಡಿತವಾಗಿ ಪವಿತ್ರರಾಗಿದ್ದೇವೆ” ಎಂದು ಹೇಳಿದನು.
6ಅಲ್ಲಿ ಪವಿತ್ರ ರೊಟ್ಟಿಯ ಹೊರತು ಬೇರೆ ರೊಟ್ಟಿಯು ಇರಲಿಲ್ಲ. ಆದ್ದರಿಂದ ಯಾಜಕನು ಆ ರೊಟ್ಟಿಯನ್ನು ದಾವೀದನಿಗೆ ಕೊಟ್ಟನು. ಯಾಜಕರು ಯೆಹೋವನ ಸನ್ನಿಧಿಯಲ್ಲಿ ಪವಿತ್ರ ಮೇಜಿನ ಮೇಲಿಟ್ಟಿದ್ದ ರೊಟ್ಟಿಯೇ ಅದಾಗಿತ್ತು. ಈ ರೊಟ್ಟಿಯನ್ನು ಪ್ರತಿದಿನವೂ ಹೊರ ತೆಗೆಯುತ್ತಿದ್ದರು ಮತ್ತು ಹೊಸ ರೊಟ್ಟಿಯನ್ನು ಆ ಸ್ಥಳದಲ್ಲಿ ಇಡುತ್ತಿದ್ದರು.
7ಸೌಲನ ಅಧಿಕಾರಿಗಳಲ್ಲಿ ಒಬ್ಬನು ಆ ದಿನ ಅಲ್ಲಿದ್ದನು. ಅವನು ದೋಯೇಗನೆಂಬ ಎದೋಮ್ಯನು. ದೋಯೇಗನನ್ನು ಯೆಹೋವನ ಸನ್ನಿಧಿಯಲ್ಲಿ ಇಟ್ಟಿದ್ದರು. ಸೌಲನ ಕುರಿಗಳನ್ನು ಕಾಯುವವರಿಗೆ ದೋಯೇಗನು ನಾಯಕನಾಗಿದ್ದನು.
8ದಾವೀದನು ಅಹೀಮೆಲೆಕನಿಗೆ, “ನಿನ್ನ ಹತ್ತಿರ ಖಡ್ಗವಾಗಲಿ ಭರ್ಜಿಯಾಗಲಿ ಇದೆಯೇ? ರಾಜನ ಕಾರ್ಯಭಾರವು ಬಹುಮುಖ್ಯವಾದುದು. ನಾನು ಬೇಗ ಹೋಗಬೇಕಾಗಿದೆ. ನಾನು ಕತ್ತಿಯನ್ನಾಗಲೀ ಇತರ ಆಯುಧವನ್ನಾಗಲೀ ತರಲಿಲ್ಲ” ಎಂದು ಕೇಳಿದನು.
9ಯಾಜಕನು, “ಇಲ್ಲಿರುವುದು ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವೊಂದೇ. ಏಲಾ ಕಣಿವೆಯಲ್ಲಿ ನೀನು ಅವನನ್ನು ಕೊಂದು ಅವನಿಂದ ನೀನು ಕಿತ್ತುಕೊಂಡ ಖಡ್ಗವೇ ಅದು. ಆ ಖಡ್ಗವನ್ನು ಬಟ್ಟೆಯಲ್ಲಿ ಸುತ್ತಿ ಎಫೋದಿನ ಹಿಂಭಾಗದಲ್ಲಿ ಇಟ್ಟಿದೆ. ನಿನಗೆ ಬೇಕಿದ್ದರೆ ಅದನ್ನು ತೆಗೆದುಕೋ” ಎಂದು ಉತ್ತರಿಸಿದನು.
ದಾವೀದನು, “ಅದನ್ನು ನನಗೆ ಕೊಡು. ಗೊಲ್ಯಾತನ ಖಡ್ಗಕ್ಕೆ ಸಮನಾದ ಬೇರೊಂದು ಖಡ್ಗವಿಲ್ಲ!” ಎಂದನು.
ದಾವೀದನು ಗತ್ಗೆ ಹೋದನು
10ಆ ದಿನ ದಾವೀದನು ಸೌಲನಿಗೆ ಭಯಪಟ್ಟು ಗತ್ಗೆ ರಾಜನಾದ ಆಕೀಷನ ಬಳಿಗೆ ಹೋದನು. 11ಆಕೀಷನ ಅಧಿಕಾರಿಗಳಿಗೆ ದಾವೀದನ ಆಗಮನ ಇಷ್ಟವಾಗಲಿಲ್ಲ. ಅವರು, “ಇವನು ದಾವೀದನು, ಇಸ್ರೇಲ್ ದೇಶದ ರಾಜನು. ಇವನನ್ನು ಕುರಿತೇ ಇಸ್ರೇಲರು ಹಾಡುತ್ತಾರೆ. ಅವರು ಇವನಿಗಾಗಿ ಹಾಡಿ ಕುಣಿಯುತ್ತಾರೆ.
“ಸೌಲನು ಸಾವಿರಾರು ಶತ್ರುಗಳನ್ನು ಕೊಂದನು.
ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು!
ಎಂಬ ಈ ಹಾಡನ್ನು ಇಸ್ರೇಲರು ಹಾಡುತ್ತಾರೆ” ಎಂದು ಮಾತಾಡಿಕೊಂಡರು.
12ಈ ಸಂಗತಿಗಳನ್ನು ಕೇಳಿದ ದಾವೀದನು ಗತ್ನ ರಾಜನಾದ ಆಕೀಷನಿಗೆ ಬಹಳವಾಗಿ ಭಯಪಟ್ಟನು. 13ಆದ್ದರಿಂದ ದಾವೀದನು ಆಕೀಷನ ಮತ್ತು ಅವನ ಅಧಿಕಾರಿಗಳ ಎದುರಿನಲ್ಲಿ ಹುಚ್ಚನಂತೆ ನಟಿಸಿದನು. ದಾವೀದನು ಅವರೊಂದಿಗೆ ಇರುವಾಗಲೆಲ್ಲ ಹುಚ್ಚನಂತೆ ವರ್ತಿಸಿದನು. ಅವನು ದ್ವಾರದ ಬಾಗಿಲುಗಳ ಮೇಲೆ ಉಗುಳಿದನು; ಅವನ ಜೊಲ್ಲು ಗಡ್ಡದವರೆಗೂ ಸುರಿಯುವಂತೆ ಮಾಡಿಕೊಂಡನು.
14ಆಕೀಷನು ತನ್ನ ಅಧಿಕಾರಿಗಳಿಗೆ, “ಅವನೊಬ್ಬ ಹುಚ್ಚ! ಅವನನ್ನು ನನ್ನ ಬಳಿಗೆ ಏಕೆ ಕರೆತಂದಿರಿ? 15ನನ್ನ ಹತ್ತಿರ ಬೇಕಾದಷ್ಟು ಹುಚ್ಚರಿದ್ದಾರೆ. ನನ್ನ ಎದುರಿನಲ್ಲಿ ಇವನು ಮಾಡುವ ಹುಚ್ಚಾಟವನ್ನು ನಾನು ನೋಡಲೆಂದು ಕರೆ ತಂದಿರುವಿರೋ? ಇವನು ಮತ್ತೆ ನನ್ನ ಮನೆಯೊಳಕ್ಕೆ ಬರಲು ಅವಕಾಶ ಕೊಡಬೇಡಿ” ಅಂದನು.
Currently Selected:
1 ಸಮುವೇಲನು 21: KERV
Highlight
Copy
Compare
Share
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International