YouVersion Logo
Search Icon

ಪ್ರಕಟನೆ 9

9
1ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು; ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿದ್ದದ್ದನ್ನು ಕಂಡೆನು. ಅದಕ್ಕೆ ಪಾತಾಳ ಸುರಂಗದ ಬೀಗದ ಕೈ ಕೊಡಲಾಗಿತ್ತು. 2ಆತನು ಆ ಪಾತಾಳವನ್ನು ತೆರೆಯಲು, ಅದರೊಳಗಿಂದ ಹೊಗೆಯು ಮಹಾ ಕುಲುಮೆಯಿಂದ ಬರುವ ಹೊಗೆಯಂತೆ ಏರಿತು. ಪಾತಾಳದ ಆ ಹೊಗೆಯಿಂದ ಸೂರ್ಯ ಮತ್ತು ಆಕಾಶಕ್ಕೆ ಕತ್ತಲು ಕವಿಯಿತು. 3ಆ ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಬಂದವು. ಅವುಗಳಿಗೆ ಭೂಮಿಯ ಮೇಲಿನ ಚೇಳುಗಳಿಗೆ ಇರುವಂತೆ ಶಕ್ತಿಯನ್ನು ಕೊಡಲಾಗಿತ್ತು. 4ಅವುಗಳಿಗೆ ಹಣೆಯ ಮೇಲೆ ದೇವರ ಮುದ್ರೆಯನ್ನು ಹಾಕಿಸಿಕೊಳ್ಳದ ಮನುಷ್ಯರನ್ನು ಬಿಟ್ಟು, ಭೂಮಿಯ ಮೇಲಿನ ಹುಲ್ಲು ಅಥವಾ ಯಾವುದೇ ಪಲ್ಯ ಅಥವಾ ಮರ, ಈ ಯಾವುದಕ್ಕೂ ತೊಂದರೆ ಕೊಡಬಾರದೆಂಬುದಾಗಿ ಹೇಳಲಾಯಿತು. 5ಅವುಗಳು ಅವರನ್ನು ಕೊಲ್ಲದೆ, ಐದು ತಿಂಗಳುಗಳವರೆಗೆ ಯಾತನೆಪಡಿಸುವುದಕ್ಕೆ ಅಧಿಕಾರ ಕೊಡಲಾಯಿತು. ಅವರ ಯಾತನೆಯು, ಚೇಳು ತನ್ನ ಕೊಂಡಿಯಿಂದ ಮನುಷ್ಯರನ್ನು ಕುಟುಕಿಹಾಕಿದಾಗ ಆಗುವ ನೋವಿನಂತಿತ್ತು. 6ಆ ದಿನಗಳಲ್ಲಿ ಜನರು ಮರಣವನ್ನು ಹುಡುಕುವರು, ಆದರೆ ಅದನ್ನು ಯಾವ ರೀತಿಯಿಂದಲೂ ಕಾಣರು; ಅವರು ಸಾಯಲು ಹಾರೈಸುವರು, ಆದರೆ ಮರಣವು ಅವರಿಂದ ಓಡಿ ಹೋಗುವುದು.
7ಆ ಮಿಡತೆಗಳು ಯುದ್ಧಕ್ಕೆ ಸನ್ನದ್ಧವಾದ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದಂತಿರುವ ಕಿರೀಟಗಳಿದ್ದವು. ಅವುಗಳ ಮುಖವು ಮಾನವರ ಮುಖಗಳಂತೆ ಇದ್ದವು. 8ಅವುಗಳ ಕೂದಲು ಸ್ತ್ರೀಯರ ಕೂದಲಿನಂತಿದ್ದು, ಅವುಗಳಿಗೆ ಸಿಂಹಗಳಿಗಿದ್ದಂತೆ ಹಲ್ಲುಗಳಿದ್ದವು. 9ಅವುಗಳಿಗೆ ಕಬ್ಬಿಣದ ಕವಚದಂಥ ಕವಚಗಳಿದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳಂತಿತ್ತು. 10ಅವುಗಳಿಗೆ ಚೇಳಿನಂತೆ ಬಾಲವೂ ಕೊಂಡಿಯೂ ಇದ್ದವು. ಅವುಗಳಿಗೆ ಮನುಷ್ಯರನ್ನು ಐದು ತಿಂಗಳುಗಳ ಕಾಲ ತಮ್ಮ ಬಾಲಗಳಿಂದ ಬಾಧಿಸುವ ಸಾಮರ್ಥ್ಯವಿತ್ತು. 11ಹೀಬ್ರೂ ಭಾಷೆಯಲ್ಲಿ, ಅಬದ್ದೋನ್ ಎಂದೂ ಗ್ರೀಕ್ ಭಾಷೆಯಲ್ಲಿ, ಅಪೊಲ್ಲುವೋನ್#9:11 ಅಥವಾ ನಾಶಕ ಎಂಬ ಹೆಸರಿನ ಪಾತಾಳ ಲೋಕದ ದೂತನು ಅವರ ಅರಸನು.
12ಮೊದಲನೆಯ ವಿಪತ್ತು ಕಳೆದುಹೋಯಿತು; ಇಗೋ, ಇವುಗಳ ನಂತರ ಇನ್ನೂ ಎರಡು ವಿಪತ್ತುಗಳು ಬರಲಿವೆ.
13ಆರನೆಯ ದೇವದೂತನು ತನ್ನ ತುತೂರಿಯನ್ನು ಊದಲು, ದೇವರ ಮುಂದೆ ಇರುವ ಚಿನ್ನದ ಬಲಿಪೀಠದ ನಾಲ್ಕು ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು. 14ಅದು ತುತೂರಿಯನ್ನು ಹೊಂದಿರುವ ಆರನೆಯ ದೇವದೂತನಿಗೆ, “ಯೂಫ್ರೇಟೀಸ್ ಮಹಾನದಿಯ ಬಳಿ ಕಟ್ಟಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಹೇಳಿತು. 15ಮಾನವಕುಲದ ಮೂರರಲ್ಲೊಂದು ಭಾಗವನ್ನು ಕೊಲ್ಲುವುದಕ್ಕಾಗಿ ಆ ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿಯೇ ಸಿದ್ಧವಾಗಿದ್ದ ನಾಲ್ಕು ದೇವದೂತರನ್ನು ಬಿಡುಗಡೆ ಮಾಡಲಾಯಿತು. 16ಕುದುರೆ ಸೈನಿಕರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.
17ನಾನು ನನ್ನ ದರ್ಶನದಲ್ಲಿ ಕುದುರೆಗಳನ್ನೂ ಸವಾರರನ್ನೂ ಕಂಡೆನು. ಅವರ ಕವಚಗಳು ಬೆಂಕಿಯ ಕೆಂಪು, ನೀಲಮಣಿ ಹಾಗೂ ಹಳದಿ ಬಣ್ಣದಂತೆಯೂ ಇದ್ದವು. ಕುದುರೆಗಳ ತಲೆಗಳು ಸಿಂಹದ ತಲೆಗಳಂತಿದ್ದವು. ಅವುಗಳ ಬಾಯೊಳಗಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬಂದವು. 18ಅವುಗಳ ಬಾಯೊಳಗಿಂದ ಬಂದ ಬೆಂಕಿ ಹೊಗೆ ಮತ್ತು ಗಂಧಕಗಳೆಂಬ ಮೂರು ಉಪದ್ರವಗಳಿಂದ ಮಾನವಕುಲದ ಮೂರರಲ್ಲೊಂದು ಭಾಗದ ಜನರು ಹತರಾದರು. 19ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲದಲ್ಲಿಯೂ ಇತ್ತು. ಏಕೆಂದರೆ ಅವುಗಳ ಬಾಲಗಳು ತಲೆಗಳನ್ನು ಹೊಂದಿದ್ದ ಸರ್ಪಗಳಂತಿದ್ದವು. ಅವುಗಳಿಂದ ಅವು ಕೇಡನ್ನುಂಟು ಮಾಡುತ್ತವೆ.
20ಈ ಉಪದ್ರವಗಳಿಂದ ಸಾಯದೆ ಉಳಿದ ಮನುಷ್ಯರು ಇನ್ನೂ ತಮ್ಮ ದುಷ್ಟಕೃತ್ಯಗಳನ್ನು ಬಿಟ್ಟು ಪಶ್ಚಾತ್ತಾಪ ಪಡಲಿಲ್ಲ. ಅವರು ದೆವ್ವಗಳನ್ನೂ, ನೋಡಲು, ಕೇಳಲು, ನಡೆಯಲು ಆಗದ ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳ ವಿಗ್ರಹಗಳನ್ನು ಆರಾಧಿಸುವುದನ್ನೂ ನಿಲ್ಲಿಸಲಿಲ್ಲ. 21ಇದಲ್ಲದೆ ಅವರು ಕೊಲೆ, ಮಾಟ, ಜಾರತ್ವ ಮತ್ತು ಕಳ್ಳತನಗಳಿಗಾಗಿಯೂ ಪಶ್ಚಾತ್ತಾಪ ಪಡಲಿಲ್ಲ.

Currently Selected:

ಪ್ರಕಟನೆ 9: KSB

Highlight

Copy

Compare

Share

None

Want to have your highlights saved across all your devices? Sign up or sign in