ಪ್ರಕಟನೆ 7
7
ಮುದ್ರಿತರಾದ 1,44,000 ಜನರು
1ಇದಾದನಂತರ ನಾಲ್ಕು ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿರುವುದನ್ನು ಕಂಡೆನು. ಅವರು ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ತಡೆಹಿಡಿದಿದ್ದರು. 2ಆಗ ಮತ್ತೊಬ್ಬ ದೂತನು, ಜೀವಸ್ವರೂಪರಾದ ದೇವರ ಮುದ್ರೆಯನ್ನು ಹಿಡಿದು ಪೂರ್ವದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಭೂಮಿ ಮತ್ತು ಸಮುದ್ರವನ್ನು ಬಾಧಿಸುವ ಶಕ್ತಿ ಹೊಂದಿದ ನಾಲ್ಕು ದೂತರಿಗೆ ಅವನು ಮಹಾಶಬ್ದದಿಂದ, 3“ನಾವು ನಮ್ಮ ದೇವರ ದಾಸರ ಹಣೆಗಳ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ಹಾನಿಪಡಿಸಬೇಡ!” ಎಂದು ಹೇಳಿದನು. 4ಆಗ ಮುದ್ರೆ ಹೊಂದಿರುವವರ ಸಂಖ್ಯೆಯು ನನಗೆ ಕೇಳಿಸಿತು. ಇಸ್ರಾಯೇಲಿನ ಎಲ್ಲಾ ಕುಲಗಳಿಂದ ಮುದ್ರೆಹಾಕಿಸಿಕೊಂಡವರು 1,44,000 ಜನರು.
5ಯೂದ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000,
ರೂಬೇನ್ ಕುಲದಿಂದ 12,000,
ಗಾದ್ ಕುಲದಿಂದ 12,000,
6ಆಶೇರ್ ಕುಲದಿಂದ 12,000,
ನಫ್ತಲೀಮ ಕುಲದಿಂದ 12,000,
ಮನಸ್ಸೆ ಕುಲದಿಂದ 12,000,
7ಸಿಮೆಯೋನ್ ಕುಲದಿಂದ 12,000,
ಲೇವಿ ಕುಲದಿಂದ 12,000,
ಇಸ್ಸಾಕರ್ ಕುಲದಿಂದ 12,000,
8ಜೆಬುಲೋನ್ ಕುಲದಿಂದ 12,000,
ಯೋಸೇಫನ ಕುಲದಿಂದ 12,000,
ಬೆನ್ಯಾಮೀನ್ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000 ಜನರು.
ಬಿಳಿ ನಿಲುವಂಗಿಯ ಮಹಾ ಜನಸಮೂಹ
9ಇದಾದನಂತರ ಯಾರೂ ಎಣಿಸಲಾಗದಂಥ ಮಹಾ ಜನಸಮೂಹವನ್ನು ಕಂಡೆನು. ಅವರು ಪ್ರತಿ ರಾಷ್ಟ್ರ, ಕುಲ, ಜನ ಮತ್ತು ಭಾಷೆಯವರಾಗಿದ್ದು, ಯಜ್ಞದ ಕುರಿಮರಿ ಆಗಿರುವವರ ಮುಂದೆಯೂ ಸಿಂಹಾಸನದ ಮುಂದೆಯೂ ನಿಂತಿದ್ದರು. ಅವರು ಬಿಳಿ ನಿಲುವಂಗಿಗಳನ್ನು ಧರಿಸಿದ್ದವರಾಗಿ, ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು. 10ಅವರು ಮಹಾಧ್ವನಿಯಿಂದ ಹೀಗೆ ಕೂಗಿದರು:
“ಸಿಂಹಾಸನದಲ್ಲಿ ಕೂತಿರುವ ನಮ್ಮ ದೇವರಿಗೂ,
ಕುರಿಮರಿ ಆಗಿರುವವರಿಗೂ,
ರಕ್ಷಣೆಯು ಸೇರತಕ್ಕದ್ದಾಗಿದೆ.”
11ಸಿಂಹಾಸನ, ಹಿರಿಯರು ಮತ್ತು ನಾಲ್ಕು ಜೀವಿಗಳ ಸುತ್ತಲೂ ದೇವದೂತರು ನಿಂತಿದ್ದರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು ದೇವರನ್ನು ಆರಾಧಿಸಿ,
12“ಆಮೆನ್!
ಸ್ತೋತ್ರ, ಮಹಿಮೆ,
ಜ್ಞಾನ, ಕೃತಜ್ಞತೆ, ಗೌರವ,
ಶಕ್ತಿ, ಬಲ
ನಮ್ಮ ದೇವರಿಗೆ ಯುಗಯುಗಾಂತರಕ್ಕೂ ಉಂಟಾಗಲಿ.
ಆಮೆನ್!”
ಎಂದು ಹೇಳುತ್ತಿದ್ದರು.
13ಆಗ ಹಿರಿಯರಲ್ಲೊಬ್ಬನು ನನ್ನನ್ನು, “ಈ ಬಿಳಿ ನಿಲುವಂಗಿಯನ್ನು ತೊಟ್ಟ ಇವರು ಯಾರು? ಎಲ್ಲಿಂದ ಬಂದವರು?” ಎಂದು ಕೇಳಿದನು.
14ಅದಕ್ಕೆ ನಾನು, “ನನ್ನ ಒಡೆಯನೆ ನೀನೇ ಬಲ್ಲೆ!” ಎಂದು ಉತ್ತರಿಸಿದೆನು.
ಅವನು ನನಗೆ, “ಇವರು ಆ ಮಹಾಸಂಕಟದಿಂದ ಹೊರಬಂದವರು. ಇವರು ತಮ್ಮ ನಿಲುವಂಗಿಗಳನ್ನು ಕುರಿಮರಿ ಆಗಿರುವವರ ರಕ್ತದಲ್ಲಿ ಅವುಗಳನ್ನು ಬೆಳ್ಳಗೆ ಮಾಡಿಕೊಂಡಿದ್ದಾರೆ!” 15ಆದ್ದರಿಂದ,
“ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು,
ದೇವರ ಆಲಯದಲ್ಲಿ ಹಗಲಿರುಳೂ ದೇವರನ್ನು ಸೇವೆಮಾಡುವರು.
ಸಿಂಹಾಸನದ ಮೇಲೆ ಕೂತಿದ್ದವರು ಅವರನ್ನು
ಆವರಿಸಿ ಸಂರಕ್ಷಿಸಿದರು.
16‘ಇವರಿಗೆ ಇನ್ನೆಂದಿಗೂ ಹಸಿವೆಯಾಗಲಿ;
ಬಾಯಾರಿಕೆಯಾಗಲಿ ಆಗುವುದಿಲ್ಲ.
ಇದಲ್ಲದೆ ಸೂರ್ಯನ ಬಿಸಿಲಾದರೂ,’#7:16 ಯೆಶಾಯ 49:10
ಯಾವ ಝಳವಾದರೂ ಇವರಿಗೆ ತಟ್ಟುವುದಿಲ್ಲ.
17ಏಕೆಂದರೆ, ಸಿಂಹಾಸನದ ಮಧ್ಯದಲ್ಲಿರುವ
ಕುರಿಮರಿ ಆಗಿರುವವರು ಇವರನ್ನು ಮೇಯಿಸಿ;
‘ಜೀವಜಲದ ಒರತೆಗಳ ಬಳಿ ನಡೆಸುವರು.’#7:17 ಯೆಶಾಯ 49:10
‘ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವರು,’#7:17 ಯೆಶಾಯ 25:8”
ಎಂದು ಹೇಳಿದನು.
Currently Selected:
ಪ್ರಕಟನೆ 7: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.