ಪ್ರಕಟನೆ 22
22
ಜೀವನದಿ
1ಆಮೇಲೆ ದೂತನು ಸ್ಪಟಿಕದಂತೆ ಹೊಳೆಯುವ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಕುರಿಮರಿಯಾದವರ ಸಿಂಹಾಸನದಿಂದ ಹೊರಟು, 2ಪಟ್ಟಣದ ಪ್ರಧಾನ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳಿಗೂ ಫಲವನ್ನು ಫಲಿಸುತ್ತಾ ಹನ್ನೆರಡು ಸಾರಿ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವಂಥದ್ದಾಗಿದ್ದವು. 3ಇನ್ನು ಯಾವ ಶಾಪವೂ ಇರುವುದಿಲ್ಲ. ಅದರಲ್ಲಿ ದೇವರ ಮತ್ತು ಕುರಿಮರಿಯಾದವರ ಸಿಂಹಾಸನವಿರುವುದು. ದೇವರ ದಾಸರು ಅವರಿಗೆ ಸೇವೆಮಾಡುವರು. 4ದೇವರ ಮುಖವನ್ನು ಅವರು ಕಾಣುವರು. ಅವರ ಹಣೆಗಳ ಮೇಲೆ ದೇವರ ಹೆಸರು ಇರುವುದು. 5ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.
ಯೇಸು ಬರುತ್ತಿದ್ದಾರೆ
6ಆಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ!” ಎಂದನು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನು ನೀಡುವ ಕರ್ತದೇವರು ಬೇಗನೆ ಸಂಭವಿಸತಕ್ಕ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿಯೇ ತಮ್ಮ ದೇವದೂತನನ್ನು ಕಳುಹಿಸಿದರು.
7ಆಗ, “ಇಗೋ, ಬೇಗನೆ ಬರುತ್ತೇನೆ! ಈ ಗ್ರಂಥದ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವರು ಧನ್ಯರು,” ಎಂದು ಕರ್ತ ಆಗಿರುವ ಯೇಸು ಹೇಳಿದರು.
8ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು. 9ಅವನು ನನಗೆ, “ನೋಡು, ನೀನು ಹಾಗೆ ಮಾಡಬೇಡ. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಳ್ಳುವವರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು!” ಎಂದು ಹೇಳಿದನು.
10ಇದಲ್ಲದೆ ಅವನು, “ನನಗೆ ಈ ಪುಸ್ತಕದಲ್ಲಿರುವ ಪ್ರವಾದನಾ ವಾಕ್ಯಗಳಿಗೆ ಮುದ್ರೆ ಹಾಕಬೇಡ. ಏಕೆಂದರೆ ಸಮಯವು ಸಮೀಪವಾಗಿದೆ. 11ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ, ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ. ನೀತಿವಂತನು ಇನ್ನೂ ನೀತಿಯನ್ನು ಮಾಡಲಿ. ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ!” ಎಂದನು.
ಆಮಂತ್ರಣ ಮತ್ತು ಎಚ್ಚರಿಕೆ
12ಆಗ ಕರ್ತ ಯೇಸು, “ಇಗೋ, ನಾನು ಬೇಗ ಬರುತ್ತೇನೆ. ಪ್ರತಿಯೊಬ್ಬರಿಗೂ ಅವರವರ ಕೆಲಸಕ್ಕೆ ತಕ್ಕಂತೆ ಕೊಡುವ ಪ್ರತಿಫಲವು ನನ್ನಲ್ಲಿದೆ. 13ನಾನೇ ಆಲ್ಫಾ ಮತ್ತು ಒಮೆಗಾ, ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಆರಂಭವೂ ಸಮಾಪ್ತಿಯೂ ಆಗಿದ್ದೇನೆ.
14“ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರು ಧನ್ಯರು. ಹೀಗೆ ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ದ್ವಾರಗಳ ಮೂಲಕ ಆ ಪಟ್ಟಣದೊಳಕ್ಕೆ ಸೇರುವರು. 15ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಪ್ರೀತಿಸಿ ಅನುಸರಿಸುವರೆಲ್ಲರೂ ಹೊರಗಿರುವರು.
16“ಯೇಸುವೆಂಬ ನಾನು ನಮ್ಮ ಸಭೆಗಳಲ್ಲಿ ಈ ಸಂಗತಿಗಳ ವಿಷಯವಾಗಿ ನಿಮಗೆ ಸಾಕ್ಷಿ ನೀಡುವಂತೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶದ ಕುಡಿ, ಅವನ ಸಂತತಿಯೂ ಉದಯದ ಪ್ರಕಾಶಮಾನ ತಾರೆಯೂ ಆಗಿದ್ದೇನೆ!” ಎಂದರು.
17ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.
18ಈ ಗ್ರಂಥದ ಪ್ರವಾದನೆಯನ್ನು ಕೇಳುವ ಪ್ರತಿಯೊಬ್ಬರಿಗೂ ನಾನು ಸಾಕ್ಷಿ ಕೊಡುವುದೇನೆಂದರೆ: ಯಾರಾದರೂ ಹೆಚ್ಚು ಮಾತುಗಳನ್ನು ಇವುಗಳಿಗೆ ಕೂಡಿಸಿದರೆ, ದೇವರು ಅವರ ಮೇಲೆ ಈ ಗ್ರಂಥದಲ್ಲಿ ಬರೆದಿರುವ ಉಪದ್ರವಗಳನ್ನು ಕೂಡಿಸುವರು. 19ಯಾರಾದರೂ ಈ ಪ್ರವಾದನಾ ಗ್ರಂಥದಲ್ಲಿರುವ ಮಾತುಗಳನ್ನು ತೆಗೆದುಬಿಟ್ಟರೆ, ಈ ಗ್ರಂಥದಲ್ಲಿ ಬರೆದಿರುವ ಜೀವವೃಕ್ಷದಲ್ಲಿಯೂ ಪವಿತ್ರ ನಗರದಲ್ಲಿಯೂ ಅವರಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.
20ಈ ವಿಷಯಗಳಲ್ಲಿ ಸಾಕ್ಷಿ ನೀಡುವವರು, “ಹೌದು, ನಾನು ಬೇಗ ಬರುತ್ತೇನೆ!” ಎಂದು ಹೇಳುತ್ತಾರೆ.
ಆಮೆನ್. ಕರ್ತ ಯೇಸುವೇ ಬಾ.
21ನಮ್ಮ ಕರ್ತ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್!
Currently Selected:
ಪ್ರಕಟನೆ 22: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.