YouVersion Logo
Search Icon

ಜ್ಞಾನೋಕ್ತಿಗಳು 29

29
1ಅನೇಕಬಾರಿ ಗದರಿಸಿದರೂ ತಗ್ಗದ ಹಟಮಾರಿ
ಪರಿಹಾರವಿಲ್ಲದೆ ಫಕ್ಕನೆ ಮುರಿದು ಬೀಳುವನು.
2ಶಿಷ್ಟರು ಅಧಿಕಾರಕ್ಕೆ ಬಂದರೆ ಜನರು ಹರ್ಷಿಸುತ್ತಾರೆ.
ಆದರೆ ದುಷ್ಟರು ಆಳಿದರೆ, ಜನರಿಗೆ ನರಳಾಟ.
3ಜ್ಞಾನಪ್ರಿಯನು ತಂದೆಗೆ ಆನಂದ
ಆದರೆ ವೇಶ್ಯೆಯರ ಸಹವಾಸದಿಂದ ಆಸ್ತಿಯ ವಿನಾಶ.
4ನ್ಯಾಯದಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ,
ಆದರೆ ಲಂಚಕೋರ ಅಧಿಕಾರಿ ದೇಶವನ್ನು ಕೆಡವಿ ಹಾಕುತ್ತಾನೆ.
5ತನ್ನ ನೆರೆಯವನನ್ನು ಸುಮ್ಮನೇ ಹೊಗಳುತ್ತಿರುವವನು,
ನೆರೆಯವನ ಕಾಲಿಗೆ ಬಲೆಯನ್ನು ಒಡ್ಡುತ್ತಾನೆ.
6ಕೆಟ್ಟವನು ತನ್ನ ಪಾಪದಿಂದಲೇ ಸಿಕ್ಕಿಹಾಕಿಕೊಳ್ಳುತ್ತಾನೆ,
ಆದರೆ ನೀತಿವಂತನು ಸಂತೋಷದಿಂದ ಹಾಡಿ ಹರ್ಷಿಸುತ್ತಾನೆ.
7ಬಡವರ ನ್ಯಾಯಕ್ಕಾಗಿ ನೀತಿವಂತನು ಚಿಂತಿಸುತ್ತಾನೆ.
ಆದರೆ ದುಷ್ಟನಿಗೆ ಅಂಥಾ ಚಿಂತೆಯೇ ಇಲ್ಲ.
8ಪರಿಹಾಸ್ಯಗಾರರು ಪಟ್ಟಣದಲ್ಲಿ ಗಲಾಟೆ ಎಬ್ಬಿಸುತ್ತಾರೆ.
ಆದರೆ ಜ್ಞಾನಿಗಳು ಕೋಪವನ್ನು ಆರಿಸುವರು.
9ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯಮಾಡುವಾಗ,
ಮೂರ್ಖನು ರೇಗಿದರೂ ಅಪಹಾಸ್ಯಮಾಡಿದರೂ ಸಮಾಧಾನವೇ ಇರುವುದಿಲ್ಲ.
10ಕೊಲೆಪಾತಕರು ಪ್ರಾಮಾಣಿಕರನ್ನು ದ್ವೇಷಿಸುತ್ತಾರೆ.
ಆದರೆ ಯಥಾರ್ಥವಂತರನ್ನು ನಾಶಮಾಡಲು ಯತ್ನಿಸುತ್ತಾರೆ.
11ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು.
ಆದರೆ ಜ್ಞಾನಿಯು ಕೋಪವನ್ನು ಶಾಂತಿಯಿಂದ ತಡೆಹಿಡಿಯುತ್ತಾನೆ.
12ಒಬ್ಬ ಅಧಿಕಾರಿಯು ಸುಳ್ಳಿಗೆ ಕಿವಿಗೊಟ್ಟರೆ,
ಅವನ ಸೇವಕರೆಲ್ಲರೂ ದುಷ್ಟರಾಗುತ್ತಾರೆ.
13ಬಡವರಿಗೂ ದಬ್ಬಾಳಿಕೆ ನಡೆಸುವವರಿಗೂ ಒಂದು ಸಂಗತಿ ಹುದುವಾಗಿರುವುದು:
ಯೆಹೋವ ದೇವರು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವರು ಎಂಬುದೇ.
14ಅರಸನು ಬಡವರಿಗೆ ಪಕ್ಷಪಾತವಿಲ್ಲದೆ ನ್ಯಾಯತೀರಿಸಿದರೆ,
ಅವನ ಸಿಂಹಾಸನವು ಎಂದೆಂದಿಗೂ ಸ್ಥಿರಗೊಳ್ಳುವುದು.
15ಬೆತ್ತ ಮತ್ತು ಬೆದರಿಕೆಗಳು ಜ್ಞಾನವನ್ನುಂಟುಮಾಡುತ್ತವೆ;
ಆದರೆ ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
16ದುಷ್ಟರು ವೃದ್ಧಿಯಾದಾಗ, ಪಾಪವು ವೃದ್ಧಿಯಾಗುತ್ತದೆ.
ಆದರೆ ನೀತಿವಂತರು ದುಷ್ಟರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
17ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು;
ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.
18ದೈವ ಪ್ರಕಟನೆ ಇಲ್ಲದಿರುವಾಗ, ಜನರು ನಾಶವಾಗುತ್ತಾರೆ;
ಆದರೆ ಜ್ಞಾನೋಪದೇಶವನ್ನು ಕೈಗೊಳ್ಳುವವನು ಧನ್ಯನು.
19ಮಾತಿನಿಂದ ಮಾತ್ರ ಕೆಲಸಗಾರರನ್ನು ತಿದ್ದಲು ಸಾಧ್ಯವಿಲ್ಲ;
ಏಕೆಂದರೆ ಅವರು ಅರ್ಥಮಾಡಿಕೊಂಡರೂ, ಅದರಂತೆ ನಡೆಯುವುದಿಲ್ಲ.
20ದುಡುಕಿ ಮಾತನಾಡುವ ವ್ಯಕ್ತಿಯನ್ನು ನೀನು ನೋಡಿದ್ದೀಯೋ?
ಅಂಥವನಿಗಿಂತಲೂ ಬುದ್ಧಿಹೀನನ ವಿಷಯದಲ್ಲಿ ಹೆಚ್ಚು ನಿರೀಕ್ಷೆ ಇದೆ.
21ಬಾಲ್ಯದಿಂದ ಕೆಲಸಗಾರನನ್ನು ಅನುಕೂಲವಾಗಿ ಸಾಕಿ ಬಿಟ್ಟರೆ,
ತರುವಾಯ ಅವನು ಎದುರು ಬೀಳಲು ಸಾಧ್ಯ.
22ಕೋಪಿಷ್ಟನು ಜಗಳವನ್ನೆಬ್ಬಿಸುವನು,
ಮುಂಗೋಪಿಯು ಅನೇಕ ಪಾಪಗಳನ್ನು ಮಾಡುತ್ತಾನೆ.
23ಗರ್ವವು ಮನುಷ್ಯನನ್ನು ಹೀನಸ್ಥಿತಿಗೆ ತರುವುದು;
ಆದರೆ ಆತ್ಮದಲ್ಲಿ ದೀನರು ಮೆಚ್ಚಿಕೆಯನ್ನು ಪಡೆಯುವರು.
24ಕಳ್ಳರ ಸಹವಾಸ ಮಾಡುವವರು ತಮಗೆ ತಾವೇ ಶತ್ರುಗಳು.
ಅವರು ಆಣೆ ಇಟ್ಟರೂ ಅವರಲ್ಲಿ ಬದಲಾವಣೆ ಇರುವುದಿಲ್ಲ.
25ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು;
ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು.
26ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ.
ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.
27ನೀತಿವಂತರು ಅಪ್ರಾಮಾಣಿಕರನ್ನು ದ್ವೇಷಿಸುತ್ತಾರೆ.
ದುಷ್ಟರು ಪ್ರಾಮಾಣಿಕರನ್ನು ತಿರಸ್ಕರಿಸುತ್ತಾರೆ.

Highlight

Share

Copy

None

Want to have your highlights saved across all your devices? Sign up or sign in

Videos for ಜ್ಞಾನೋಕ್ತಿಗಳು 29