ಜ್ಞಾನೋಕ್ತಿಗಳು 16
16
1ಮನುಷ್ಯನಲ್ಲಿ ತನ್ನ ಹೃದಯದ ಯೋಜನೆಗಳು,
ಆದರೆ ಸರಿಯಾದ ಉತ್ತರಕೊಡುವ ಶಕ್ತಿ ಯೆಹೋವ ದೇವರಿಂದಲೇ ಬರುವವು.
2ಮನುಷ್ಯನ ಮಾರ್ಗಗಳೆಲ್ಲಾ ತನ್ನ ದೃಷ್ಟಿಯಲ್ಲಿ ಶುದ್ಧವಾಗಿವೆ,
ಆದರೆ ಯೆಹೋವ ದೇವರು ಅವನ ಉದ್ದೇಶಗಳನ್ನು ಪರೀಕ್ಷಿಸುತ್ತಾರೆ.
3ನಿನ್ನ ಕಾರ್ಯಗಳನ್ನು ಯೆಹೋವ ದೇವರಿಗೆ ಒಪ್ಪಿಸು,
ಆಗ ನಿನ್ನ ಯೋಜನೆಗಳು ಸ್ಥಿರವಾಗುವುವು.
4ಯೆಹೋವ ದೇವರು ಎಲ್ಲವುಗಳನ್ನು ಅದರದೇ ಆದ ಉದ್ದೇಶಗಳಿಗಾಗಿ ಮಾಡಿದ್ದಾರೆ.
ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿದ್ದಾರೆ.
5ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಯೆಹೋವ ದೇವರಿಗೆ ಅಸಹ್ಯ.
ದುಷ್ಟನಿಗೆ ಶಿಕ್ಷೆಯು ತಪ್ಪುವುದಿಲ್ಲ.
6ಪ್ರೀತಿ ಮತ್ತು ಸತ್ಯತೆಗಳಿಂದ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತದೆ.
ಯೆಹೋವ ದೇವರ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
7ಮನುಷ್ಯನ ಮಾರ್ಗಗಳು ಯೆಹೋವ ದೇವರನ್ನು ಮೆಚ್ಚಿಸಿದಾಗ,
ಅವರು ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನದಲ್ಲಿರುವಂತೆ ಮಾಡುತ್ತಾರೆ.
8ಅನ್ಯಾಯದ ದೊಡ್ಡ ಆದಾಯಕ್ಕಿಂತಲೂ
ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ.
9ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ,
ಆದರೆ ಯೆಹೋವ ದೇವರು ಅವನ ಹೆಜ್ಜೆಗಳನ್ನು ಸ್ಥಾಪಿಸುತ್ತಾರೆ.
10ಅರಸನ ತುಟಿಗಳಲ್ಲಿ ದೈವೋಕ್ತಿ.
ನ್ಯಾಯತೀರ್ಪಿನಲ್ಲಿ ಅವನ ಬಾಯಿಯು ದೋಷ ಮಾಡುವುದಿಲ್ಲ.
11ನ್ಯಾಯದ ತೂಕವೂ ತಕ್ಕಡಿಯೂ ಯೆಹೋವ ದೇವರದೇ.
ಚೀಲದ ತೂಕಗಳು ಅವರ ಕೈಕೆಲಸವೇ.
12ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು.
ಏಕೆಂದರೆ ನೀತಿಯಿಂದ ಸಿಂಹಾಸನವು ಸ್ಥಾಪಿಸಲಾಗುತ್ತದೆ.
13ನೀತಿಯ ತುಟಿಗಳಲ್ಲಿ ಅರಸರು ಆನಂದಿಸುತ್ತಾರೆ,
ಯಥಾರ್ಥವಾದಿಯನ್ನು ಅವರು ಪ್ರೀತಿಸುತ್ತಾರೆ.
14ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ,
ಆದರೆ ಜ್ಞಾನಿಯು ಅದನ್ನು ಶಮನಪಡಿಸುವನು.
15ಪ್ರಕಾಶಮಾನವಾದ ಅರಸನ ಮುಖದಲ್ಲಿ ಜೀವ,
ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
16ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು!
ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವುದು ಎಷ್ಟೋ ಉತ್ತಮ.
17ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ಬಹುದೂರ.
ತನ್ನ ಮಾರ್ಗವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.
18ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ.
ಬೀಳುವಿಕೆಯ ಮುಂಚೆ ಜಂಬದ ಆತ್ಮ.
19ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳುವದಕ್ಕಿಂತ,
ದೀನರೊಂದಿಗೆ ದೀನ ಆತ್ಮವುಳ್ಳವರಾಗಿ ಇರುವುದು ಉತ್ತಮ.
20ಕಾರ್ಯವನ್ನು ಜ್ಞಾನದಿಂದ ನಡೆಸುವವನು ಒಳ್ಳೆಯದನ್ನು ಪಡೆಯುವನು.
ಯೆಹೋವ ದೇವರಲ್ಲಿ ಭರವಸೆ ಇಡುವವನು ಧನ್ಯನು.
21ಹೃದಯದಲ್ಲಿ ಜ್ಞಾನವಂತರು ವಿವೇಚನೆಯುಳ್ಳವರು ಎಂದು ಕರೆಯಲಾಗುವರು.
ತುಟಿಗಳ ಮಾಧುರ್ಯ ಮನವೊಲಿಸುವವು.
22ವಿವೇಕವು ವಿವೇಕಿಗಳಿಗೆ ಜೀವನದ ಬುಗ್ಗೆ,
ಆದರೆ ಮೂರ್ಖತನವು ಮೂರ್ಖರಿಗೆ ಶಿಕ್ಷೆಯನ್ನು ತರುತ್ತದೆ.
23ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ,
ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
24ವಿನಯದ ಮಾತುಗಳು ಜೇನುಗೂಡು ಪ್ರಾಣಕ್ಕೆ ಮಧುರವೂ,
ಎಲುಬುಗಳಿಗೆ ಕ್ಷೇಮವೂ ಆಗಿವೆ.
25ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು,
ಆದರೆ ಅದರ ಅಂತ್ಯವು ಮರಣದ ಮಾರ್ಗವೇ.
26ದುಡಿಯುವವನಿಗೆ ಅವನ ಹಸಿವೇ ದುಡಿಯುವಂತೆ ಮಾಡುವುದು,
ಅವನ ಹಸಿವು ಅವನನ್ನು ಒತ್ತಾಯ ಮಾಡುವುದು.
27ಭಕ್ತಿಹೀನನು ಕೇಡಿನ ಕುಣಿ ಅಗೆಯುತ್ತಾನೆ.
ಅವನ ತುಟಿಗಳು ಉರಿಯುವ ಬೆಂಕಿಯಂತಿವೆ.
28ಮೂರ್ಖನು ಜಗಳವನ್ನು ಬಿತ್ತುತ್ತಾನೆ.
ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.
29ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ,
ದುರ್ಮಾರ್ಗಕ್ಕೆ ಎಳೆಯುತ್ತಾನೆ.
30ವಕ್ರಬುದ್ಧಿಯ ಒಳಸಂಚುಗಳಿಗೆ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ.
ತನ್ನ ತುಟಿಗಳನ್ನು ಕದಲಿಸುತ್ತಾ ಕೆಟ್ಟದ್ದು ಸಂಭವಿಸುವಂತೆ ಮಾಡುತ್ತಾನೆ.
31ನರೆಗೂದಲು ಉಜ್ವಲ ಕಿರೀಟ,
ಅದು ನೀತಿಯ ಜೀವಿತದಲ್ಲಿ ಒದಗುತ್ತದೆ.
32ದೀರ್ಘಶಾಂತನು ಶೂರರಿಗಿಂತಲೂ ಶ್ರೇಷ್ಠ,
ತನ್ನ ಮನಸ್ಸನ್ನು ಆಳುವವನು, ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.
33ಉಡಿಯಲ್ಲಿ ಚೀಟು ಹಾಕಬಹುದು,
ಆದರೆ ಪ್ರತಿ ತೀರ್ಪು ಯೆಹೋವ ದೇವರದ್ದೇ.
Currently Selected:
ಜ್ಞಾನೋಕ್ತಿಗಳು 16: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.