ಯೋಬ 21
21
ಯೋಬನ ಉತ್ತರ
1ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
2“ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ,
ಇವು ನೀವು ನನಗೆ ನೀಡುವ ಆದರಣೆಗಳಾಗಿರಲಿ.
3ನಾನು ಮಾತನಾಡುವಾಗ, ನನ್ನನ್ನು ಸಹಿಸಿಕೊಳ್ಳಿರಿ;
ನಾನು ಮಾತನಾಡಿದ ಮೇಲೆ ನೀವು ಪರಿಹಾಸ್ಯ ಮಾಡಬಹುದು.
4“ನಾನೇನು ಮನುಷ್ಯನ ವಿಷಯವಾಗಿ ದೂರು ಹೇಳುತ್ತಿದ್ದೇನೋ?
ನಾನೇಕೆ ಬೇಸರಪಡಬಾರದು.
5ನನ್ನ ಕಡೆಗೆ ಗಮನಿಸಿರಿ;
ನೀವು ನಿಮ್ಮ ಬಾಯಿಯ ಮೇಲೆ ಕೈ ಇಟ್ಟು ಬೆರಗಾಗಿರಿ.
6ನಾನು ಈ ವಿಷಯವನ್ನು ನೆನಪು ಮಾಡಿಕೊಂಡಾಗ ಭಯಪಡುತ್ತೇನೆ;
ನನ್ನ ದೇಹಕ್ಕೆ ನಡುಕ ಹಿಡಿಯುತ್ತದೆ.
7ದುಷ್ಟರು ವೃದ್ಧರಾಗುವವರೆಗೆ ಏಕೆ ಬದುಕುತ್ತಾರೆ?
ಅಂಥವರು ಬಲಿಷ್ಠರಾಗಿ ಪ್ರಬಲಿಸುವುದಕ್ಕೂ ಕಾರಣವೇನು?
8ಅವರೊಂದಿಗೆ ಅವರ ಸಂತಾನದವರು ಅವರ ಮುಂದೆ ಸುಸ್ಥಿರವಾಗುವುದನ್ನೂ,
ಅವರ ಮಕ್ಕಳು ನೆಲೆಯಾಗಿರುವುದನ್ನೂ ನೋಡುವರು.
9ಅವರ ಮನೆ ಸುರಕ್ಷಿತವಾಗಿ ನಿರ್ಭಯದಿಂದಿರುವುದು;
ದೇವರ ದಂಡನೆಯ ಕೋಲು ಅವರ ಮೇಲೆ ಬೀಳದಿರುವುದು.
10ಅವರ ಹೋರಿಯು ಅಭಿವೃದ್ಧಿಯಾಗಿರುವುದು;
ಅವರ ಆಕಳು ತಪ್ಪದೆ ಈಯುವುದು.
11ಅವರ ಮಕ್ಕಳು ಮಂದೆಯಾಗಿ ಹೊರನಡೆಯುತ್ತಾರೆ;
ಅವರ ಚಿಕ್ಕವರು ಕುಣಿದಾಡುತ್ತಾ ಹೋಗುತ್ತಾರೆ.
12ಅವರು ದಮ್ಮಡಿಯಿಂದಲೂ, ಕಿನ್ನರಿಯಿಂದಲೂ ಹಾಡುತ್ತಾರೆ;
ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ.
13ಅವರು ಸಂಪತ್ತಿನಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾರೆ;
ಕೊನೆಗೆ ಸಮಾಧಾನದಿಂದ ಸಮಾಧಿಗೆ ಸೇರುತ್ತಾರೆ.#21:13 ಅಥವಾ ಕ್ಷಣಮಾತ್ರದಲ್ಲಿ
14ಆದರೂ ಇವರು ದೇವರಿಗೆ, ‘ನಮ್ಮನ್ನು ಬಿಟ್ಟುಬಿಡು,
ನಿಮ್ಮ ಮಾರ್ಗಗಳ ತಿಳುವಳಿಕೆ ನಮಗೆ ಬೇಡ.
15ಸರ್ವಶಕ್ತರು ಯಾರು, ನಾವು ಅವರ ಸೇವೆ ಏಕೆ ಮಾಡಬೇಕು?
ನಾವು ದೇವರಿಗೆ ಪ್ರಾರ್ಥನೆಮಾಡಿ ನಮಗೆ ಪ್ರಯೋಜನವೇನು?’ ಎಂದಿದ್ದಾರೆ.
16ಆದರೆ ಅವರ ಸುಖವು ಅವರ ಕೈಯಲ್ಲಿ ಇಲ್ಲ;
ಆದ್ದರಿಂದ ಆ ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ.
17“ಆದರೂ ಎಷ್ಟು ಸಾರಿ ದುಷ್ಟರ ದೀಪವು ಆರಿಹೋಗುತ್ತದೆ?
ಎಷ್ಟು ಸಾರಿ ವಿಪತ್ತು ಅವರ ಮೇಲೆ ಬರುತ್ತದೆ?
ದೇವರು ವೇದನೆಗಳನ್ನು ತಮ್ಮ ಬೇಸರದಿಂದ ಹಂಚುವುದು ಎಷ್ಟು ಸಾರಿ?
18ಅವರು ಗಾಳಿಯ ಮುಂದೆ ಹುಲ್ಲಿನ ಹಾಗೆ ಆದದ್ದು ಎಷ್ಟು ಸಾರಿ?
ಬಿರುಗಾಳಿಯು ಹೊಡಕೊಂಡು ಹೋಗುವ ಹೊಟ್ಟಿನ ಹಾಗೆ ಕೊಚ್ಚಿಕೊಂಡು ಹೋದದ್ದು ಎಷ್ಟು ಸಾರಿ?
19‘ದೇವರು ದುಷ್ಟರ ಮಕ್ಕಳಿಗೆ ಅವರ ಅಪರಾಧ ಫಲವನ್ನು ಕಾದಿಡುತ್ತಾರೆ,’
ಎಂದು ಹೇಳುತ್ತಾರಲ್ಲಾ?
ಆ ದುಷ್ಟರು ಅನುಭವಿಸುವ ಹಾಗೆ ದೇವರು ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸಲಿ.
20ದುಷ್ಟರು ತಮ್ಮ ವಿನಾಶವನ್ನು ತಾವಾಗಿಯೇ ನೋಡಲಿ;
ಸರ್ವಶಕ್ತರ ದಂಡನೆಯನ್ನು ಅವನು ಅನುಭವಿಸಲಿ.
21ದುಷ್ಟರಿಗೆ ನೇಮಕವಾದ ತಿಂಗಳುಗಳು ಮುಗಿದು ಹೋದ ಮೇಲೆ
ತಾವು ಬಿಟ್ಟುಹೋಗುವ ಕುಟುಂಬದವರ ಚಿಂತೆ ಅವರಿಗೆ ಎಲ್ಲಿ?
22“ದೇವರಿಗೆ ಅರಿವನ್ನು ಬೋಧಿಸಬಹುದೇ?
ಉನ್ನತರಿಗೂ ನ್ಯಾಯತೀರಿಸುವುದು ದೇವರೇ ಅಲ್ಲವೇ?
23ಒಬ್ಬ ವ್ಯಕ್ತಿಯು ಸುಖವಾಗಿಯೂ, ಸಮೃದ್ಧನಾಗಿಯೂ,
ನೆಮ್ಮದಿಯಿಂದ ಇರುವಾಗಲೂ ಸಾಯುತ್ತಾನೆ.
24ಅವನ ದೇಹ ಚೆನ್ನಾಗಿ ಬೆಳೆದು ಪೋಷಣೆಯಾಗಿರುತ್ತದೆ;
ಅವನ ಎಲುಬುಗಳು ಮಜ್ಜೆಯಿಂದ ತುಂಬಿರುತ್ತದೆ.
25ಮತ್ತೊಬ್ಬನು ಎಂದಿಗೂ ಒಳ್ಳೆಯದನ್ನು ಅನುಭವಿಸದೆ,
ಕಹಿಯಾದ ಮನೋವ್ಯಥೆಪಡುತ್ತಾ ಸಾಯುತ್ತಾನೆ.
26ಇವರಿಬ್ಬರೂ ಮಣ್ಣಿಗೆ ಸೇರುತ್ತಾರೆ;
ಹುಳುಗಳು ಅವರನ್ನು ಮುತ್ತಿಕೊಳ್ಳುತ್ತವೆ.
27“ನೋಡಿರಿ, ನಿಮ್ಮ ಆಲೋಚನೆಗಳನ್ನು ನಾನು ಬಲ್ಲೆನು.
ನೀವು ನನಗೆ ವಿರೋಧವಾಗಿ ಮಾಡುವ ಕುಯುಕ್ತಿಗಳನ್ನೂ ತಿಳಿದಿದ್ದೇನೆ.
28ನೀವು, ‘ಪ್ರಧಾನನ ಮನೆ ಈಗ ಎಲ್ಲಿದೆ?
ದುಷ್ಟರು ವಾಸಿಸಿದ ಗುಡಾರ ಎಲ್ಲಿ?’ ಎನ್ನುತ್ತೀರಿ.
29ಮಾರ್ಗದಲ್ಲಿ ಹಾದು ಹೋಗುವವರನ್ನು ನೀವು ವಿಚಾರಿಸಲಿಲ್ಲವೋ?
ಅವರ ಅನುಭವಗಳು ನಿಮಗೆ ಹಿಡಿಸಲಿಲ್ಲವೋ?
30ಹೀಗೆ ಆಪತ್ತಿನ ದಿನ ದುಷ್ಟರು ತಪ್ಪಿಸಿಕೊಳ್ಳುತ್ತಾರೆ;
ದೇವರ ದಂಡನೆಯ ದಿನದಲ್ಲಿ ಅವರು ಬಿಡುಗಡೆಯಾಗುತ್ತಾರೆ.
31ದುಷ್ಟರ ಮಾರ್ಗವನ್ನು ಮುಖಾಮುಖಿಯಾಗಿ ಅವರಿಗೆ ತೋರಿಸುವವರು ಯಾರು?
ಅವರು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿ ತೀರಿಸುವವರು ಯಾರು?
32ದುಷ್ಟರನ್ನು ಸಮಾಧಿಗೆ ಒಯ್ಯುತ್ತಾರೆ.
ಅವರ ಗೋರಿಗೆ ಕಾವಲು ಇಡುತ್ತಾರೆ.
33ಕಣಿವೆಯಲ್ಲಿನ ಮಣ್ಣು ಅವರಿಗೆ ಸಿಹಿಯಾಗಿರುತ್ತದೆ;
ಪ್ರತಿಯೊಬ್ಬರೂ ಅವರನ್ನು ಹಿಂಬಾಲಿಸುತ್ತಾರೆ.
ಹೀಗೆ ಅವರನ್ನು ಲೆಕ್ಕವಿಲ್ಲದಷ್ಟು ಜನರು ಹಿಂಬಾಲಿಸುತ್ತಾರೆ.
34“ವ್ಯರ್ಥವಾದ ನಿಮ್ಮ ಮಾತುಗಳಿಂದ ನೀವು ನನ್ನನ್ನು ಸಂತೈಸುವುದು ಹೇಗೆ?
ನಿಮ್ಮ ಉತ್ತರಗಳಲ್ಲಿ ವಿಶ್ವಾಸದ್ರೋಹ ಬಿಟ್ಟು ಮತ್ತೇನೂ ಉಳಿದಿರುವುದಿಲ್ಲ.”
Currently Selected:
ಯೋಬ 21: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.