YouVersion Logo
Search Icon

ಯೋಹಾನ 16

16
1“ನೀವು ನಂಬಿಕೆಯಲ್ಲಿ ಎಡವಿಬಿದ್ದು ಹೋಗಬಾರದೆಂದು ನಾನು ಇವುಗಳನ್ನು ಹೇಳಿದ್ದೇನೆ. 2ಜನರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು. ಆದರೆ ನಿಮ್ಮನ್ನು ಕೊಲ್ಲುವವರು ದೇವರಿಗೆ ಸೇವೆ ಸಲ್ಲಿಸುತ್ತಾರೆಂದು ಭಾವಿಸುವ ಸಮಯ ಬರುತ್ತದೆ. 3ಅವರು ತಂದೆಯನ್ನಾಗಲಿ ನನ್ನನ್ನಾಗಲಿ ತಿಳಿಯದ ಕಾರಣ ಇವೆಲ್ಲವುಗಳನ್ನು ಮಾಡುವರು. 4ಆದರೆ ಅವರ ಸಮಯ ಬಂದಾಗ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆಂದು ನೀವು ಜ್ಞಾಪಕ ಮಾಡಿಕೊಳ್ಳುವಂತೆ ಮುಂಚಿತವಾಗಿಯೇ ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಇವುಗಳನ್ನು ಪ್ರಾರಂಭದಲ್ಲೇ ನಿಮಗೆ ಹೇಳಲಿಲ್ಲ. 5ಈಗ ನನ್ನನ್ನು ಕಳುಹಿಸಿದ ತಂದೆಯ ಬಳಿಗೆ ನಾನು ಹೋಗುತ್ತೇನೆ. ನಿಮ್ಮಲ್ಲಿ ಯಾರೂ, ‘ನೀವು ಎಲ್ಲಿಗೆ ಹೋಗುತ್ತೀರಿ?’ ಎಂದು ನನ್ನನ್ನು ಕೇಳಲಿಲ್ಲ. 6ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. 7ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ ಸಹಾಯಕರು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಅವರನ್ನು ನಿಮ್ಮ ಬಳಿಗೆ ಕಳುಹಿಸುವೆನು. 8ಆ ಸಹಾಯಕರು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ವಿಷಯಗಳಲ್ಲಿ ಲೋಕದವರಿಗೆ ಮನವರಿಕೆಯನ್ನು ಮಾಡುವರು. 9ಜನರು ನನ್ನನ್ನು ನಂಬದೆ ಇರುವ ಕಾರಣದಿಂದ, ಪಾಪದ ವಿಷಯವಾಗಿಯೂ 10ನಾನು ನನ್ನ ತಂದೆಯ ಬಳಿಗೆ ಹೋಗುವುದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣದಿಂದ, ನೀತಿಯ ವಿಷಯವಾಗಿಯೂ 11ಇಹಲೋಕಾಧಿಪತಿಗೆ ನ್ಯಾಯತೀರ್ಪಾದ ಕಾರಣದಿಂದ ನ್ಯಾಯತೀರ್ಪಿನ ವಿಷಯವಾಗಿಯೂ ಮನವರಿಕೆ ಮಾಡುವರು.
12“ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ. ಆದರೆ ನೀವು ಈಗ ಅವುಗಳನ್ನು ತಾಳಿಕೊಳ್ಳಲಾರಿರಿ. 13ಆದರೆ ಸತ್ಯದ ಆತ್ಮ ಬಂದಾಗ ಅವರು ನಿಮ್ಮನ್ನು ಎಲ್ಲಾ ಸತ್ಯದೊಳಗೆ ನಡೆಸುವರು. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡದೆ ತಾವು ಕೇಳಿದವುಗಳನ್ನೇ ಮಾತನಾಡುವರು. ಮುಂದೆ ನಡೆಯಲಿರುವ ವಿಷಯಗಳನ್ನು ಅವರು ನಿಮಗೆ ಪ್ರಕಟಿಸುವರು. 14ಅವರು ನನ್ನನ್ನು ಮಹಿಮೆಪಡಿಸುವರು. ಏಕೆಂದರೆ ಅವರು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ಪ್ರಕಟಿಸುವರು. 15ತಂದೆಗೆ ಇರುವುದೆಲ್ಲವೂ ನನ್ನದೆ. ಆದ್ದರಿಂದಲೇ, ‘ಪವಿತ್ರಾತ್ಮ ದೇವರು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ಪ್ರಕಟಿಸುವರು,’ ಎಂದು ನಾನು ಹೇಳಿದೆನು.”
ಶಿಷ್ಯರ ದುಃಖವು ಆನಂದವಾಗಿ ಮಾರ್ಪಡುವುದು
16“ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ,” ಎಂದರು.
17ಆಗ ಅವರ ಶಿಷ್ಯರಲ್ಲಿ ಕೆಲವರು, “ಇವರು ನಮಗೆ ಹೇಳುವುದೇನು? ‘ಸ್ವಲ್ಪಕಾಲ ನೀವು ನನ್ನನ್ನು ಕಾಣುವುದಿಲ್ಲ ಮತ್ತು ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ,’ ಎನ್ನುತ್ತಾರಲ್ಲಾ? 18ಇವರು ಹೇಳುವುದರ ಅರ್ಥವೇನು? ‘ಸ್ವಲ್ಪಕಾಲ’ ಎಂದು ಹೇಳುತ್ತಾರಲ್ಲ? ಇವರು ಏನು ಮಾತನಾಡುತ್ತಾರೋ ನಮಗೆ ತಿಳಿಯದು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
19ಶಿಷ್ಯರು ತಮ್ಮ ಬಗ್ಗೆ ಪ್ರಶ್ನಿಸಬಯಸುತ್ತಿದ್ದಾರೆಂದು ತಿಳಿದು ಯೇಸು, “ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ಕಾಣುವುದಿಲ್ಲ, ‘ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ಕಾಣುವಿರಿ ಎಂದು ನಾನು ನಿಮಗೆ ಹೇಳಿದ್ದರ ಕುರಿತಾಗಿ ನೀವು ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುತ್ತೀರೋ?’ 20ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅತ್ತು ಗೋಳಾಡುವಿರಿ. ಆದರೆ ಲೋಕವು ಸಂತೋಷಿಸುವುದು; ನೀವು ದುಃಖಿಸುವಿರಿ ಆದರೆ ನಿಮ್ಮ ದುಃಖವು ಆನಂದವಾಗಿ ಮಾರ್ಪಡುವುದು. 21ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ. 22ಈಗ ನಿಮಗೆ ನಿಜವಾಗಿಯೂ ದುಃಖವಿದೆ. ಆದರೆ ನಾನು ನಿಮ್ಮನ್ನು ತಿರುಗಿ ಕಾಣುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವುದು. ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವುದಿಲ್ಲ. 23ಆ ದಿನದಲ್ಲಿ ನೀವು ನನ್ನನ್ನು ಏನೂ ಪ್ರಶ್ನಿಸುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು. 24ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ನೀವು ಪಡೆದುಕೊಳ್ಳುವಿರಿ. ಆಗ ನಿಮ್ಮ ಆನಂದವು ಪರಿಪೂರ್ಣವಾಗಿರುವುದು.
25“ಇವುಗಳನ್ನು ನಾನು ಸೂಚಕವಾಗಿ ನಿಮ್ಮೊಡನೆ ಮಾತನಾಡಿದ್ದೇನೆ. ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯವಾಗಿ ನಿಮಗೆ ಸ್ಪಷ್ಟವಾಗಿ ಪ್ರಕಟಿಸುವ ಗಳಿಗೆಯು ಬರುತ್ತದೆ. 26ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ. ನಿಮ್ಮ ವಿಷಯವಾಗಿ ತಂದೆಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ. 27ಏಕೆಂದರೆ ನೀವು ನನ್ನನ್ನು ಪ್ರೀತಿಸಿ ನಾನು ದೇವರಿಂದ ಹೊರಟು ಬಂದವನೆಂದು ನಂಬಿದ್ದರಿಂದ ತಂದೆಯು ತಾವೇ ನಿಮ್ಮನ್ನು ಪ್ರೀತಿಸುತ್ತಾರೆ. 28ನಾನು ತಂದೆಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ತಿರುಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತಿದ್ದೇನೆ,” ಎಂದರು.
29ಆಗ ಶಿಷ್ಯರು ಯೇಸುವಿಗೆ, “ಇಗೋ, ಈಗ ನೀವು ಸಾಮ್ಯಗಳಿಂದ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ. 30ನೀವು ಎಲ್ಲಾ ತಿಳಿದವರೆಂದೂ ಯಾರೂ ನಿಮ್ಮನ್ನು ಪ್ರಶ್ನಿಸುವುದು ಅಗತ್ಯವಿಲ್ಲವೆಂದು ಈಗ ನಮಗೆ ತಿಳಿಯಿತು. ಆದ್ದರಿಂದ ನೀವು ದೇವರಿಂದ ಹೊರಟು ಬಂದವರೆಂದು ನಾವು ನಂಬುತ್ತೇವೆ,” ಎಂದರು.
31ಅದಕ್ಕೆ ಯೇಸು ಅವರಿಗೆ, “ಈಗ ನೀವು ನಂಬುತ್ತೀರೋ?” 32ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ನಿಮ್ಮ ಮನೆಗೆ ಚದುರಿಹೋಗಿ ನನ್ನನ್ನು ಒಬ್ಬಂಟಿಗನನ್ನಾಗಿ ಬಿಡುವ ಗಳಿಗೆ ಬರುತ್ತದೆ. ಹೌದು, ಈಗಲೇ ಬಂದಿದೆ. ಆದರೂ ನಾನು ಒಬ್ಬಂಟಿಗನಲ್ಲ. ಏಕೆಂದರೆ ತಂದೆ ನನ್ನ ಸಂಗಡ ಇದ್ದಾರೆ.
33“ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.

Currently Selected:

ಯೋಹಾನ 16: KSB

Highlight

Copy

Compare

Share

None

Want to have your highlights saved across all your devices? Sign up or sign in