ಯೆರೆಮೀಯ 5
5
ಒಬ್ಬನೂ ನೀತಿವಂತನು ಇಲ್ಲ
1“ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ,
ನ್ಯಾಯವನ್ನು ಮಾಡುವವನೂ,
ಸತ್ಯವನ್ನು ಹುಡುಕುವವನೂ
ನಿಮಗೆ ಒಬ್ಬನಾದರೂ ಸಿಕ್ಕುವನೋ?
ಅವಳ ವಿಶಾಲ ಸ್ಥಳಗಳಲ್ಲಿ ನೋಡಿ,
ತಿಳಿದು ಹುಡುಕಿರಿ;
ಸಿಕ್ಕಿದರೆ ಅವಳಿಗೆ ಮನ್ನಿಸುವೆನು.
2ಅವರು, ‘ಯೆಹೋವ ದೇವರು ಜೀವದಾಣೆ,’ ಎಂದು ಪ್ರಮಾಣ ಮಾಡಿದರೂ
ಆ ಪ್ರಮಾಣ ಸುಳ್ಳಾಗಿಯೇ ಇರುತ್ತದೆ.”
3ಓ ಯೆಹೋವ ದೇವರೇ, ನಿಮ್ಮ ಕಣ್ಣುಗಳು ಸತ್ಯದ ಮೇಲೆ ಇವೆಯಲ್ಲವೋ?
ಅವರನ್ನು ಹೊಡೆದಿರಿ, ಆದರೆ ಅವರಿಗೆ ದುಃಖವಾಗಲಿಲ್ಲ;
ಅವರನ್ನು ತುಳಿದಿರಿ, ಆದರೆ ತಿದ್ದುಕೊಳ್ಳಲು ಒಪ್ಪಲಿಲ್ಲ.
ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ.
ಅವರು ಪಶ್ಚಾತ್ತಾಪಕ್ಕೆ ನಿರಾಕರಿಸಿದ್ದಾರೆ.
4ಆದ್ದರಿಂದ ನಾನು, “ನಿಶ್ಚಯವಾಗಿ ಇವರು ಬಡವರು ಮತ್ತು ಬುದ್ಧಿಹೀನರು.
ಏಕೆಂದರೆ, ಯೆಹೋವ ದೇವರ ಮಾರ್ಗವನ್ನೂ ತಮ್ಮ ದೇವರ ನ್ಯಾಯವಿಧಿಗಳನ್ನೂ ಅರಿಯರು.
5ನಾನು ನಾಯಕರ ಬಳಿಗೆ ಹೋಗಿ,
ಅವರ ಸಂಗಡ ಮಾತನಾಡುವೆನು.
ಏಕೆಂದರೆ, ಅವರು ಯೆಹೋವ ದೇವರ ಮಾರ್ಗವನ್ನೂ
ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿದಿದ್ದಾರೆ,”
ಆದರೆ ಇವರು ಕೂಡ ಒಮ್ಮತವಾಗಿ ನೊಗವನ್ನು ಮುರಿದು,
ಬಂಧನಗಳನ್ನು ಹರಿದುಬಿಟ್ಟಿದ್ದಾರೆ.
6ಹೀಗಿರುವುದರಿಂದ ಅಡವಿಯ ಸಿಂಹವು ಅವರನ್ನು ದಾಳಿಮಾಡುವುದು.
ಕಾಡಿನ ತೋಳವು ಅವರನ್ನು ಸೂರೆಮಾಡುವುದು.
ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವುದು.
ಅಲ್ಲಿಂದ ಹೊರಗೆ ಬರುವವರೆಲ್ಲರೂ ಸೀಳಲಾಗುವರು.
ಏಕೆಂದರೆ, ಅವರ ದ್ರೋಹಗಳು ಬಹಳವಾಗಿವೆ.
ಅವರ ಹಿಂಜಾರುವಿಕೆಯು ಹೆಚ್ಚಾಗಿವೆ.
7ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ?
ನಿನ್ನ ಮಕ್ಕಳು ನನ್ನನ್ನು ಬಿಟ್ಟು
ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ.
ನಾನು ಅವರನ್ನು ತೃಪ್ತಿಪಡಿಸಿದ ಮೇಲೆ,
ಅವರು ವ್ಯಭಿಚಾರ ಮಾಡಿದ್ದಾರೆ.
ವೇಶ್ಯೆಯರ ಮನೆಗಳಲ್ಲಿ ಗುಂಪಾಗಿ ಸೇರಿದ್ದಾರೆ.
8ಅವರು ಕುದುರೆಗಳಂತೆ, ಬಲಶಾಲಿ ಮತ್ತು ಕಾಮವನ್ನು ಹೊಂದಿದವರಾಗಿದ್ದಾರೆ.
ತಮ್ಮ ತಮ್ಮ ನೆರೆಯವರ ಹೆಂಡತಿಯರನ್ನು ಕಂಡು ಹೇಕರಿಸುತ್ತಾರೆ.
9ಇವುಗಳ ನಿಮಿತ್ತ ನಾನು ಶಿಕ್ಷಿಸಬಾರದೇ?
ಇಂಥಾ ಜನಾಂಗಕ್ಕೆ ನನ್ನ ಪ್ರಾಣವು
ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ?
ಎಂದು ಯೆಹೋವ ದೇವರು ಹೇಳುತ್ತಾರೆ.
10ಅವಳ ದ್ರಾಕ್ಷಿತೋಟಗಳ ಮೂಲಕ ಹೋಗಿ ಅವುಗಳನ್ನು ಹಾಳುಮಾಡಿರಿ.
ಆದರೆ ಸಂಪೂರ್ಣವಾಗಿ ನಾಶಮಾಡಬೇಡಿರಿ.
ಅದರ ರೆಂಬೆಗಳನ್ನು ತೆಗೆದುಹಾಕಿರಿ
ಏಕೆಂದರೆ ಅವು ಯೆಹೋವ ದೇವರಿಗೆ ಸೇರಿದವುಗಳಲ್ಲ.
11ಇಸ್ರಾಯೇಲನ ಮನೆತನದವರೂ,
ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾರೆ,
ಎಂದು ಯೆಹೋವ ದೇವರು ಹೇಳುತ್ತಾರೆ.
12ಆ ಜನರು ಯೆಹೋವ ದೇವರನ್ನು ಅಲ್ಲಗಳೆದಿದ್ದಾರೆ.
“ಆತ ಏನು ಮಾಡಿಯಾನು?
ನಮಗೆ ಕೇಡು ಬರುವುದೂ ಇಲ್ಲ,
ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ,
13ಪ್ರವಾದಿಗಳು ಆಡುವುದೆಲ್ಲಾ ಬರೀ ಗಾಳಿ ಮಾತುಗಳು,
ದೈವೋಕ್ತಿ ಎಂಬುದು ಅವುಗಳಲ್ಲಿ ಇಲ್ಲ,
ಅವರು ಹೇಳುವುದೆಲ್ಲಾ ಅವರಿಗೇ ತಗಲಲಿ,” ಎಂದುಕೊಂಡಿದ್ದಾರೆ.
14ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಯೆರೆಮೀಯನಿಗೆ ಹೀಗೆನ್ನುತ್ತಾರೆ:
“ಇಗೋ, ಅವರು ಹೀಗೆ ಮಾತಾಡಿದ್ದರಿಂದ
ನಿನ್ನ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಸುವೆನು,
ಆ ಜನರನ್ನು ಅದಕ್ಕೆ ಸೌದೆಯನ್ನಾಗಿಸುವೆನು. ಆ ಬೆಂಕಿ ಅವರನ್ನು ಸುಟ್ಟುಹಾಕುವುದು.”
15ಯೆಹೋವ ದೇವರು ಹೀಗೆ ಹೇಳುತ್ತಾರೆ, “ಓ ಇಸ್ರಾಯೇಲ ಮನೆತನವೇ,
ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆ.
ಅದು ಬಲವಾದ ಜನಾಂಗವು. ಪೂರ್ವಕಾಲದ ಜನಾಂಗವು,
ಆ ಜನಾಂಗದ ಭಾಷೆಯನ್ನು ನೀನರಿಯೆ;
ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು.
16ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ.
ಅವರೆಲ್ಲರೂ ಪರಾಕ್ರಮಶಾಲಿಗಳೇ.
17ನಿನ್ನ ಪುತ್ರರು, ನಿನ್ನ ಪುತ್ರಿಯರು ನಿನ್ನ ಪೈರನ್ನೂ,
ನಿನ್ನ ರೊಟ್ಟಿಯನ್ನೂ ನುಂಗಿಬಿಡುವರು.
ನಿನ್ನ ಕುರಿಗಳನ್ನೂ, ನಿನ್ನ ದನಗಳನ್ನೂ ನುಂಗಿಬಿಡುವರು.
ನಿನ್ನ ದ್ರಾಕ್ಷಿ ಲತೆಗಳನ್ನೂ,
ಅಂಜೂರದ ಗಿಡಗಳನ್ನೂ ನುಂಗಿಬಿಡುವರು.
ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು.
18“ಆದರೂ ಆ ದಿವಸಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ಅಳಿಸಿಬಿಡುವುದಿಲ್ಲ,” ಎಂದು ಯೆಹೋವ ದೇವರು ಅನ್ನುತ್ತಾರೆ. 19“ ‘ನಮ್ಮ ದೇವರಾದ ಯೆಹೋವ ದೇವರು ನಮಗೆ ಯಾತಕ್ಕೆ ಇವುಗಳನ್ನೆಲ್ಲಾ ಮಾಡುತ್ತಾರೆ,’ ಎಂದು ನೀವು ಕೇಳುವಾಗ, ನೀನು ಅವರಿಗೆ ಹೀಗೆ ಹೇಳಬೇಕು: ‘ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ, ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ.’
20“ಯಾಕೋಬ ವಂಶಜರಲ್ಲಿ ಇದನ್ನು ತಿಳಿಸಿರಿ.
ಯೆಹೂದದಲ್ಲಿ ಪ್ರಕಟಿಸಿರಿ.
21ಏನೆಂದರೆ, ಓ ಮೂಢ ಬುದ್ಧಿಹೀನ ಜನರೇ,
ಕಣ್ಣುಗಳಿದ್ದು ಕಾಣದವರೇ,
ಕಿವಿಗಳಿದ್ದು ಕೇಳದವರೇ, ಇದನ್ನು ಕೇಳಿರಿ.
22ನೀವು ನನಗೆ ಭಯಪಡುವುದಿಲ್ಲವೋ?”
ಎಂದು ಯೆಹೋವ ದೇವರು ಹೇಳುತ್ತಾರೆ.
“ನನ್ನ ಸಮ್ಮುಖದಲ್ಲಿ ನಡುಗುವುದಿಲ್ಲವೋ?
ನಾನು ಮರಳನ್ನು ನಿತ್ಯ ನೇಮವಾಗಿ ಸಮುದ್ರಕ್ಕೆ,
ಅದು ದಾಟಕೂಡದ ಹಾಗೆ ಮೇರೆಯಾಗಿಟ್ಟಿದ್ದೇನೆ.
ಅದರ ತೆರೆಗಳು ಎದ್ದರೂ ದಡ ಮೀರಲಾರವು; ಘೋಷಿಸಿದರೂ ಅದನ್ನು ದಾಟಲಾರವು.
23ಆದರೆ ಈ ಜನರಿಗೆ ತಿರುಗಿ ಬೀಳುವಂಥ, ಪ್ರತಿಭಟಿಸುವಂಥ ಹೃದಯ ಉಂಟು.
ಅವರು ತಿರುಗಿಬಿದ್ದು ಹೋಗಿಬಿಟ್ಟಿದ್ದಾರೆ.
24ತಮ್ಮ ಹೃದಯದಲ್ಲಿ,
‘ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡುವಂಥ
ಸುಗ್ಗಿಗೆ ನೇಮಕವಾದ ವಾರಗಳನ್ನು ನಮಗೆ ಪ್ರತ್ಯೇಕಿಸುವಂಥ
ನಮ್ಮ ದೇವರಾದ ಯೆಹೋವ ದೇವರಿಗೆ ಭಯಪಡೋಣ,’ ಎಂದುಕೊಳ್ಳುವುದಿಲ್ಲ.
25ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಇವೆ;
ನಿಮ್ಮ ಪಾಪಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಗೆದಿವೆ.
26“ಏಕೆಂದರೆ ನನ್ನ ಜನರಲ್ಲಿ ದುಷ್ಟರು ಸಿಕ್ಕಿದ್ದಾರೆ.
ಬೇಟೆಗಾರನ ಹಾಗೆ ಹೊಂಚುಹಾಕುತ್ತಾರೆ;
ಪಕ್ಷಿಗಳನ್ನು ಬಲೆಗೆ ಬೀಳಿಸುವ ಮನುಷ್ಯರಂತೆ ಕಾಯುತ್ತಿದ್ದಾರೆ
ಮತ್ತು ಜನರನ್ನು ಹಿಡಿಯಲು ಬಲೆ ಹಾಕುತ್ತಾರೆ.
27ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ,
ಅವರ ಮನೆಗಳು ಮೋಸದಿಂದ ತುಂಬಿವೆ.
ಆದ್ದರಿಂದ ಅವರು ಶಕ್ತಿವಂತರೂ, ಐಶ್ವರ್ಯವಂತರೂ ಆಗಿದ್ದಾರೆ.
28ಅವರು ಕೊಬ್ಬಿದ್ದಾರೆ ಮತ್ತು ನಯವಾಗಿ ಬೆಳೆದಿದ್ದಾರೆ.
ಅವರ ಕೆಟ್ಟ ಕೆಲಸಗಳಿಗೆ ಮಿತಿಯಿಲ್ಲ;
ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವುದಿಲ್ಲ;
ಆದರೂ ಅವರು ಸಫಲವಾಗುತ್ತಾರೆ,
ಬಡವರ ನ್ಯಾಯವನ್ನು ತೀರಿಸರು.
29ಇವುಗಳ ನಿಮಿತ್ತ ನಾನು ದಂಡಿಸಬಾರದೋ?”
ಎಂದು ಯೆಹೋವ ದೇವರು ಹೇಳುತ್ತಾರೆ.
“ಇಂಥಾ ಜನಾಂಗಕ್ಕೆ
ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ?
30“ಭಯಂಕರವಾದ ಮತ್ತು ಆಶ್ಚರ್ಯವಾದ
ಕಾರ್ಯವು ದೇಶದಲ್ಲಿ ನಡೆಯುತ್ತದೆ.
31ಏನೆಂದರೆ, ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ.
ಯಾಜಕರು ತಮ್ಮ ಅಧಿಕಾರದಿಂದ ದೊರೆತನ ಮಾಡುತ್ತಾರೆ.
ನನ್ನ ಜನರು ಅದನ್ನು ಪ್ರೀತಿ ಮಾಡುತ್ತಾರೆ.
ಆದರೆ ಅಂತ್ಯದಲ್ಲಿ ನೀವು ಏನು ಮಾಡುವಿರಿ?
Currently Selected:
ಯೆರೆಮೀಯ 5: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.