ಯೆರೆಮೀಯ 21
21
ಯೆಹೋವ ದೇವರು ಚಿದ್ಕೀಯನ ಬೇಡಿಕೆಯನ್ನು ತಿರಸ್ಕರಿಸಿದ್ದು
1ಅರಸನಾದ ಚಿದ್ಕೀಯನು ಮಲ್ಕೀಯನ ಮಗ ಪಷ್ಹೂರನನ್ನೂ, ಮಾಸೇಯನ ಮಗನಾದ ಯಾಜಕನಾದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ, 2“ನಮಗೋಸ್ಕರ ಯೆಹೋವ ದೇವರನ್ನು ವಿಚಾರಿಸು. ಏಕೆಂದರೆ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ. ಒಂದು ವೇಳೆ ಅವನು ನಮ್ಮನ್ನು ಬಿಟ್ಟು ಹೊರಟು ಹೋಗುವಹಾಗೆ ಯೆಹೋವ ದೇವರು ಹಿಂದಿನ ಕಾಲದಂತೆಯೇ ತಮ್ಮ ಎಲ್ಲಾ ಅದ್ಭುತಗಳ ಪ್ರಕಾರ ನಮಗೆ ಮಾಡುವರು,” ಎಂದು ಅವರ ಮೂಲಕ ವಿಜ್ಞಾಪಿಸಿದಾಗ, ಯೆರೆಮೀಯನಿಗೆ ಯೆಹೋವ ದೇವರ ವಾಕ್ಯವು ಬಂತು.
3ಆಗ ಯೆರೆಮೀಯನು ಅವರಿಗೆ ಹೇಳಿದ್ದೇನೆಂದರೆ, “ಚಿದ್ಕೀಯನಿಗೆ ಹೀಗೆ ಹೇಳಿರಿ: 4‘ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬಿಲೋನಿನ ಅರಸನಿಗೂ, ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವುದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನೂ, ನಾನು ಹಿಂದಕ್ಕೆ ತಳ್ಳಿ, ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿಬರುವಂತೆ ಮಾಡುವೆನು. 5ನಾನೇ ಚಾಚಿದ ಕೈಯಿಂದಲೂ, ಬಲವಾದ ತೋಳಿನಿಂದಲೂ, ಕೋಪದಿಂದಲೂ, ಉಗ್ರದಿಂದಲೂ, ಮಹಾರೌದ್ರದಿಂದಲೂ ನಿಮಗೆ ವಿರೋಧವಾಗಿ ಯುದ್ಧಮಾಡುವೆನು. 6ಈ ಪಟ್ಟಣದ ನಿವಾಸಿಗಳನ್ನೂ, ಮನುಷ್ಯರನ್ನೂ, ಮೃಗಗಳನ್ನೂ ಸಹಿತವಾಗಿ ಹೊಡೆಯುವೆನು. ಅವರು ದೊಡ್ಡ ವ್ಯಾಧಿಯಿಂದ ಸಾಯುವರು. 7ಯೆಹೋವ ದೇವರು ಹೇಳುವುದೇನೆಂದರೆ, ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಸೇವಕರನ್ನೂ, ಜನರನ್ನೂ ಈ ಪಟ್ಟಣದಲ್ಲಿ ವ್ಯಾಧಿಯಿಂದಲೂ, ಖಡ್ಗದಿಂದಲೂ, ಕ್ಷಾಮದಿಂದಲೂ ಉಳಿದವರನ್ನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ, ಅವರ ಶತ್ರುಗಳ ಕೈಗೂ ಒಪ್ಪಿಸುವೆನು. ಅವನು ಅವರನ್ನು ಖಡ್ಗದ ಬಾಯಿಂದ ಹೊಡೆಯುವನು. ಅವರ ಮೇಲೆ ಕರುಣೆ ಇಡುವುದಿಲ್ಲ, ಕನಿಕರಿಸುವುದಿಲ್ಲ, ಅಂತಃಕರಣ ಪಡುವುದಿಲ್ಲ.’
8“ಈ ಜನಕ್ಕೆ ನೀನು ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಜೀವದ ಮಾರ್ಗವನ್ನೂ, ಮರಣದ ಮಾರ್ಗವನ್ನೂ ನಿಮ್ಮ ಮುಂದೆ ಇಡುತ್ತೇನೆ. 9ಈ ಪಟ್ಟಣದಲ್ಲಿ ನಿಲ್ಲುವವನು ಖಡ್ಗದಿಂದಲೂ, ಕ್ಷಾಮದಿಂದಲೂ, ವ್ಯಾಧಿಯಿಂದಲೂ ಸಾಯುವನು. ಆದರೆ ಹೊರಗೆ ಹೋಗಿ, ನಿಮಗೆ ಮುತ್ತಿಗೆ ಹಾಕುವ ಕಸ್ದೀಯರ#21:9 ಕಸ್ದೀಯರ ಅಂದರೆ ಬಾಬಿಲೋನಿನ ಜನರು ಕಡೆಗೆ ಸೇರುವವನು ಬದುಕುವನು. ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು. 10ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವುದು. ಏಕೆಂದರೆ ನಾನು ಒಳ್ಳೆಯದಕ್ಕಲ್ಲ, ಕೆಟ್ಟದ್ದಕ್ಕೆ ಈ ಪಟ್ಟಣಕ್ಕೆ ವಿರೋಧವಾಗಿ ನನ್ನ ಮುಖವನ್ನಿಟ್ಟಿದ್ದೇನೆಂದು ಯೆಹೋವ ದೇವರು ಅನ್ನುತ್ತಾರೆ. ಅದು ಬಾಬಿಲೋನಿನ ಅರಸನ ಕೈಯಲ್ಲಿ ಒಪ್ಪಿಸಲಾಗುವುದು. ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು.’
11“ಯೆಹೂದದ ಅರಸನ ಮನೆಯವರಿಗೆ ಹೀಗೆ ಹೇಳು: ‘ಯೆಹೋವ ದೇವರ ವಾಕ್ಯವನ್ನು ಕೇಳಿರಿ, 12ದಾವೀದನ ಮನೆಯವರೇ, ಯೆಹೋವ ದೇವರು ಹೇಳುವುದೇನೆಂದರೆ,
“ ‘ಬೆಳಿಗ್ಗೆ ನ್ಯಾಯತೀರಿಸಿರಿ,
ಸುಲಿಗೆಯಾದವನನ್ನು ಬಲಾತ್ಕಾರಿಯ
ಕೈಯೊಳಗಿಂದ ತಪ್ಪಿಸಿರಿ.
ಇಲ್ಲದಿದ್ದರೆ ನನ್ನ ಕೋಪವು ಬೆಂಕಿಯ ಹಾಗೆ ಹೊರಟು,
ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ
ಯಾರೂ ಆರಿಸಲಾಗದ ಹಾಗೆ ಉರಿಯುವುದು.
13ಇಗೋ, ತಗ್ಗಿನ ನಗರಿಯೇ,
ಬಯಲಿನ ಬಂಡೆಯಲ್ಲಿ ವಾಸಮಾಡುವವರೇ,
“ನಮ್ಮ ಮೇಲೆ ಯಾರು ಇಳಿದು ಬರುವರೆಂದು
ನಮ್ಮ ನಿವಾಸಗಳಲ್ಲಿ ಯಾರು ಸೇರುವರೆಂದು, ಅನ್ನುವವರೇ,
ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ,”
ಎಂದು ಯೆಹೋವ ದೇವರು ಹೇಳುತ್ತಾರೆ.
14ನಿಮ್ಮ ಕ್ರಿಯೆಗಳ ಫಲದ ಪ್ರಕಾರ
ನಿಮ್ಮನ್ನು ಶಿಕ್ಷಿಸುತ್ತೇನೆ,
ಎಂದು ಯೆಹೋವ ದೇವರು ಹೇಳುತ್ತಾರೆ.
ಅದರ ಅಡವಿಗೆ ಬೆಂಕಿ ಹಚ್ಚುತ್ತೇನೆ.
ಅದರ ಸುತ್ತಲಿಗಿರುವುದನ್ನೆಲ್ಲಾ ಅದು ನುಂಗಿಬಿಡುವುದು.’ ”
Currently Selected:
ಯೆರೆಮೀಯ 21: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.