YouVersion Logo
Search Icon

ಯೆರೆಮೀಯ 17

17
1“ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ,
ವಜ್ರದ ಮೊನೆಯಿಂದಲೂ ಬರೆಯಲಾಗಿದೆ.
ಅದು ಅವರ ಹೃದಯದ ಹಲಗೆಯ ಮೇಲೆಯೂ
ಅವರ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲಾಗಿದೆ.
2ಅವರ ಮಕ್ಕಳು ಅವರ ಬಲಿಪೀಠಗಳನ್ನೂ
ಹಸಿರಾದ ಗಿಡಗಳಲ್ಲಿಯೂ
ಎತ್ತರವಾದ ಗುಡ್ಡಗಳ ಮೇಲೆಯೂ
ಇರುವ ಅವರ ಅಶೇರ ಸ್ತಂಭಗಳನ್ನೂ ಜ್ಞಾಪಕ ಮಾಡಿಕೊಳ್ಳುತ್ತಾರಲ್ಲಾ.
3ನಾಡಿನಲ್ಲಿರುವ ನನ್ನ ಪರ್ವತವೇ,
ನಿನ್ನ ಎಲ್ಲಾ ಪ್ರಾಂತಗಳಲ್ಲಿ
ಪಾಪಕ್ಕಾಗಿರುವ ನಿನ್ನ ಉನ್ನತ ಪೂಜಾಸ್ಥಳಗಳನ್ನೂ
ನಾನು ಕೊಳ್ಳೆಗೆ ಒಪ್ಪಿಸುವೆನು.
4ಆಗ ನಿನ್ನ ದೋಷದಿಂದಲೇ ನೀನು
ನಾನು ನಿನಗೆ ಕೊಟ್ಟ ಸೊತ್ತನ್ನು ಬಿಟ್ಟು ಬಿಡುವೆ.
ನಿನಗೆ ತಿಳಿಯದ ದೇಶದಲ್ಲಿ
ನಿನ್ನನ್ನು ನಿನ್ನ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು.
ಏಕೆಂದರೆ ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ.
ಅದು ನಿತ್ಯವೂ ಪ್ರಜ್ವಲಿಸುತ್ತಿರುವುದು.”
5ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಮಾನವನ ಸಾಮರ್ಥ್ಯಗಳನ್ನು ತನ್ನ ಆಧಾರವಾಗಿ ಮಾಡಿಕೊಂಡ ವ್ಯಕ್ತಿ ಶಾಪಗ್ರಸ್ತ,
ಅವನು ಮನುಷ್ಯನ ಶಕ್ತಿಯ ಮೇಲೆ ಭರವಸೆ ಇಡುವನು.
ಯೆಹೋವ ದೇವರ ಕಡೆಯಿಂದ ಯಾವನ ಹೃದಯವು ತೊಲಗುವುದೋ, ಅವನು ಶಾಪಗ್ರಸ್ತನು.
6ಅವನು ಅಡವಿಯಲ್ಲಿರುವ ಜಾಲಿ ಗಿಡದ ಹಾಗಿರುವನು.
ಒಳ್ಳೆಯದು ಬರುವಾಗ ನೋಡದೆ ಇರುವನು.
ನಿವಾಸಿಗಳಿಲ್ಲದ ಚೌಳು ನೆಲವಾಗಿರುವ
ಮರುಭೂಮಿಯ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.
7“ಯಾವನು ಯೆಹೋವ ದೇವರಲ್ಲಿ ನಂಬಿಕೆ ಇಟ್ಟಿರುವನೋ,
ಯಾವನಿಗೆ ಯೆಹೋವ ದೇವರು ಭರವಸೆಯಾಗಿದ್ದಾನೋ, ಆ ಮನುಷ್ಯನು ಧನ್ಯನು.
8ಏಕೆಂದರೆ ಅವನು ನೀರಿನ ಬಳಿಯಲ್ಲಿ ನೆಡಲಾದ,
ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು.
ಬಿಸಿಲಿನ ಧಗೆಗೆ ಭಯಪಡದೆ,
ಹಸುರೆಲೆಯನ್ನು ಚಿಗುರಿಸುತ್ತಾ.
ಬರಗಾಲದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ
ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು.”
9ಹೃದಯವು ಎಲ್ಲಾದಕ್ಕಿಂತ ವಂಚನೆಯುಳ್ಳದ್ದಾಗಿಯೂ
ಗುಣಪಡಿಸಲು ಅಸಾಧ್ಯವಾದದ್ದೂ ಆಗಿದೆ.
ಅದನ್ನು ತಿಳಿಯುವವನ್ಯಾರು?
10“ಯೆಹೋವ ದೇವರಾದ ನಾನೇ ಹೃದಯವನ್ನು ಪರೀಕ್ಷಿಸುತ್ತೇನೆ.
ಅಂತರಿಂದ್ರಿಯಗಳನ್ನು ಶೋಧಿಸುತ್ತೇನೆ.
ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ,
ಅವನ ಕ್ರಿಯೆಗಳ ಫಲದ ಪ್ರಕಾರವೂ ಪ್ರತಿಫಲ ಕೊಡುತ್ತೇನೆ.”
11ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಹಾಗೆ,
ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಹಾಗೆಯೇ ಇದ್ದಾನೆ.
ಅವನು ತನ್ನ ಮಧ್ಯಪ್ರಾಯದಲ್ಲಿ ಅದನ್ನು ಬಿಡುವನು.
ತನ್ನ ಅಂತ್ಯದಲ್ಲಿ ಅವನು ಮೂರ್ಖನೆಂದು ಸಾಬೀತಾಗುತ್ತದೆ.
12ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾಸನವು
ನಮ್ಮ ಪರಿಶುದ್ಧ ಸ್ಥಳವಾಗಿದೆ.
13ಇಸ್ರಾಯೇಲಿನ ನಿರೀಕ್ಷೆಯಾದ ಓ ಯೆಹೋವ ದೇವರೇ,
ನಿಮ್ಮನ್ನು ತೊರೆದುಬಿಟ್ಟವರೆಲ್ಲರೂ ನಾಚಿಕೆಗೆ ಒಳಗಾಗುವರು,
ಜೀವವುಳ್ಳ ನೀರಿನ ಬುಗ್ಗೆಯಾದ ಯೆಹೋವ ದೇವರಿಂದ
ತೊಲಗಿ ಹೋದವರನ್ನು ಧೂಳಿನಲ್ಲಿ ಬರೆಯಲಾಗುತ್ತದೆ.
14ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿ, ಆಗ ಸ್ವಸ್ಥವಾಗುವೆನು.
ನನ್ನನ್ನು ರಕ್ಷಿಸು, ಆಗ ರಕ್ಷಿತನಾಗುವೆನು.
ಏಕೆಂದರೆ, ನೀವೇ ನನಗೆ ಸ್ತುತ್ಯರು.
15ಇಗೋ, ಅವರು ನನಗೆ, “ಯೆಹೋವ ದೇವರ ವಾಕ್ಯವು ಎಲ್ಲಿ?
ಅದು ಈಗ ನೆರವೇರಲಿ,” ಅನ್ನುತ್ತಾರೆ.
16ನಾನಾದರೋ ಸಭಾಪಾಲನೆಯಲ್ಲಿ ನಿಮ್ಮನ್ನು ಹಿಂಬಾಲಿಸುವುದನ್ನು ಬಿಡುವುದಕ್ಕೆ ಆತುರಪಡಲಿಲ್ಲ;
ವಿಪತ್ತಿನ ಅನಿವಾರ್ಯ ದಿನವನ್ನು ಅಪೇಕ್ಷಿಸಲಿಲ್ಲ;
ನೀವೇ ಬಲ್ಲೆ; ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು.
17ನೀವು ನನ್ನನ್ನು ಭಯಪಡಿಸಬೇಡಿ.
ಕೇಡಿನ ದಿನದಲ್ಲಿ ನೀವೇ ನನ್ನ ಆಶ್ರಯವಾಗಿದ್ದೀರಿ.
18ನನ್ನನ್ನು ಹಿಂಸಿಸುವವರು ನಾಚಿಕೆಗೆ ಗುರಿಯಾಗಲಿ;
ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲು ಪಡಲಿ;
ಆದರೆ ನಾನು ದಿಗಿಲು ಪಡದಿರಲಿ.
ಆದರೆ ನಾನು ದಿಗಿಲು ಪಡದಂತೆ ಮಾಡುವ
ಕೆಟ್ಟದಿನವನ್ನು ಅವರ ಮೇಲೆ ಬರಮಾಡಿ.
ಎರಡರಷ್ಟಾದ ನಾಶದಿಂದ ಅವರನ್ನು ನಾಶಪಡಿಸಿ.
ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು
19ಯೆಹೋವ ದೇವರು ನನಗೆ, “ಹೋಗಿ, ಯೆಹೂದದ ಅರಸರು ಪ್ರವೇಶಿಸುವ, ಹೊರಡುವ ಜನರ ಬಾಗಿಲಲ್ಲಿಯೂ, ಯೆರೂಸಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು, 20ಅವರಿಗೆ ಹೀಗೆ ಹೇಳು: ‘ಯೆಹೂದದ ಅರಸರೇ, ಸಮಸ್ತ ಯೆಹೂದವೇ, ಈ ಬಾಗಿಲುಗಳಲ್ಲಿ ಪ್ರವೇಶಿಸುವ ಯೆರೂಸಲೇಮಿನ ಎಲ್ಲಾ ನಿವಾಸಿಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. 21ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮಗೆ ನೀವೇ ಎಚ್ಚರಿಕೆಯಾಗಿರಿ. ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತೆಗೆದುಕೊಂಡು ಬರಬೇಡಿರಿ. 22ಸಬ್ಬತ್ ದಿನದಲ್ಲಿ ಹೊರೆಯನ್ನು ನಿಮ್ಮ ಮನೆಗಳಿಂದ ತೆಗೆದುಕೊಂಡು ಹೋಗಬೇಡಿರಿ. ಯಾವ ಕೆಲಸವನ್ನೂ ಮಾಡಬೇಡಿರಿ. ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರಕಾರವೇ, ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು. 23ಆದರೆ ಅವರು ವಿಧೇಯರಾಗಲಿಲ್ಲ, ಕಿವಿಗೊಟ್ಟು ಕೇಳಲಿಲ್ಲ. ಆದರೆ ವಿಧೇಯರಾಗದ ಹಾಗೆಯೂ, ಉಪದೇಶ ಹೊಂದದ ಹಾಗೆಯೂ ಹಟಮಾರಿಯಾಗಿದ್ದರು. 24ಯೆಹೋವ ದೇವರಾದ ನನ್ನ ನುಡಿ ಇದೇ: ನೀವು ನನ್ನನ್ನು ಜಾಗ್ರತೆಯಿಂದ ಕೇಳಿ, ಸಬ್ಬತ್ ದಿನದಲ್ಲಿ, ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತೆಗೆದುಕೊಂಡು ಬಾರದೆ, ಸಬ್ಬತ್ ದಿನದಲ್ಲಿ ಯಾವುದೊಂದು ಕೆಲಸಮಾಡದೆ ಪರಿಶುದ್ಧಮಾಡಿದರೆ, 25ದಾವೀದನ ಸಿಂಹಾಸನದ ಮೇಲೆ ಕೂರುವ ಅರಸರು ಮತ್ತು ಪ್ರಧಾನರು ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡಿಕೊಂಡು, ಯೆಹೂದದ ಮನುಷ್ಯರಾಗಿಯೂ, ಯೆರೂಸಲೇಮಿನ ನಿವಾಸಿಗಳಾಗಿಯೂ ಇದ್ದು, ಅವರೂ, ಅವರ ಪ್ರಧಾನರೂ ಈ ಪಟ್ಟಣದ ಬಾಗಿಲುಗಳಲ್ಲಿ ಪ್ರವೇಶಿಸುವರು. ಈ ಪಟ್ಟಣದಲ್ಲಿ ಎಂದೆಂದಿಗೂ ವಾಸಮಾಡಿದರು. 26ಇದಲ್ಲದೆ ಯೆಹೂದದ ಪಟ್ಟಣಗಳಿಂದಲೂ, ಯೆರೂಸಲೇಮಿನ ಸುತ್ತಲಿನ ಸ್ಥಳಗಳಿಂದಲೂ, ಬೆನ್ಯಾಮೀನನ ದೇಶದಿಂದಲೂ, ಬಯಲಿನಿಂದಲೂ, ಬೆಟ್ಟಗಳಿಂದಲೂ, ದಕ್ಷಿಣದಿಂದಲೂ ದಹನಬಲಿಗಳನ್ನೂ, ಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತರುವರು. ಸ್ತೋತ್ರದ ಅರ್ಪಣೆಗಳನ್ನು ಯೆಹೋವ ದೇವರ ಆಲಯಕ್ಕೆ ತರುವರು. 27ಆದರೆ ನೀವು ಸಬ್ಬತ್#17:27 ಸಬ್ಬತ್ ಅಂದರೆ ವಿಶ್ರಾಂತಿ ದಿನ ದಿನವನ್ನು ಪರಿಶುದ್ಧಮಾಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು, ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದರೆ ಯೆರೂಸಲೇಮಿನ ದ್ವಾರಗಳಲ್ಲಿ ಬೆಂಕಿಯನ್ನು ಹಚ್ಚುವೆನು. ಅದು ಆರಿಹೋಗದೆ, ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.’ ”

Highlight

Copy

Compare

Share

None

Want to have your highlights saved across all your devices? Sign up or sign in