ನ್ಯಾಯಸ್ಥಾಪಕರು 8
8
ಜೆಬಹ ಮತ್ತು ಚಲ್ಮುನ್ನ
1ಆಗ ಎಫ್ರಾಯೀಮ್ಯರು, “ನೀನು ಮಿದ್ಯಾನ್ಯರ ಮೇಲೆ ಯುದ್ಧಮಾಡುವುದಕ್ಕೆ ಹೋಗುವಾಗ, ನಮ್ಮನ್ನು ಕರೆಯದೆ ಹೋದದ್ದೇನು?” ಎಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
2ಅವನು ಅವರಿಗೆ, “ನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿದೆನು? ಅಬೀಯೆಜೆರನ ದ್ರಾಕ್ಷಿ ಫಲ ಕೂಡಿಸುವುದಕ್ಕಿಂತ ಎಫ್ರಾಯೀಮನ ಉಳಿದ ದ್ರಾಕ್ಷಿಗಳನ್ನು ಸಂಗ್ರಹಿಸುವುದು ಉತ್ತಮವಲ್ಲವೇ? 3ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನನ್ನೂ, ಜೇಬನನ್ನೂ ಒಪ್ಪಿಸಿಕೊಡಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು?” ಎಂದನು. ಅವನು ಈ ಮಾತು ಹೇಳಿದಾಗ, ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
4ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ; ಅವನೂ, ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ, ಹಿಂದಟ್ಟುವವರಾಗಿಯೂ ಇದ್ದರು. 5ಅವನು ಸುಕ್ಕೋತನವರಿಗೆ, “ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಏಕೆಂದರೆ ಅವರು ದಣಿದಿದ್ದಾರೆ. ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ, ಚಲ್ಮುನ್ನನನ್ನೂ ಹಿಂದಟ್ಟುತ್ತೇನೆ,” ಎಂದನು.
6ಆದರೆ ಸುಕ್ಕೋತಿನ ಪ್ರಧಾನರು ಅವನಿಗೆ, “ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈವಶವಾಗಿದೆಯೋ?” ಎಂದರು.
7ಆಗ ಗಿದ್ಯೋನನು, “ಆಗ ಯೆಹೋವ ದೇವರು ಜೆಬಹನನ್ನೂ, ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟ ತರುವಾಯ, ನಿಮ್ಮ ಮಾಂಸವನ್ನು ಮರುಭೂಮಿಯ ಮುಳ್ಳುಗಳಿಂದಲೂ, ಕಾರೆಗಿಡದ ಮುಳ್ಳುಗಳಿಂದಲೂ ಹೊಡಿಸುವೆನು,” ಎಂದನು.
8ಅಲ್ಲಿಂದ ಪೆನೀಯೇಲಿಗೆ ಹೋಗಿ, ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಕ್ಕೋತಿನ ಮನುಷ್ಯರು ಉತ್ತರ ಕೊಟ್ಟ ಹಾಗೆಯೇ ಉತ್ತರಕೊಟ್ಟರು. 9ಆಗ ಅವನು ಪೆನೀಯೇಲಿನ ಮನುಷ್ಯರಿಗೆ ಸಹ, “ನಾನು ಸಮಾಧಾನವಾಗಿ ತಿರುಗಿ ಬರುವಾಗ, ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
10ಜೆಬಹನೂ, ಚಲ್ಮುನ್ನನೂ ತಮ್ಮ ಸೈನ್ಯದ ಹೆಚ್ಚು ಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರಷ್ಟೂ, ಖಡ್ಗ ಹಿಡಿಯತಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ, ಪೂರ್ವದೇಶದ ಸಮಸ್ತ ಜನರು ಅಲ್ಲಿ ಉಳಿದರು. 11ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಪೂರ್ವದಲ್ಲಿದ್ದ ಡೇರೆಗಳಲ್ಲಿ ಸುರಕ್ಷಿತವಾಗಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಅವರು ನಿರೀಕ್ಷಿಸದ ಸಮಯದಲ್ಲಿ ಅವರ ಮೇಲೆ ದಾಳಿಮಾಡಿದರು. 12ಜೆಬಹನೂ, ಚಲ್ಮುನ್ನನೂ ಓಡಿ ಹೋದದ್ದರಿಂದ, ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹನನ್ನೂ, ಚೆಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ಪಾಳೆಯನ್ನೆಲ್ಲಾ ಚದರಿಸಿಬಿಟ್ಟರು.
13ಯೋವಾಷನ ಮಗನಾದ ಗಿದ್ಯೋನನು ಯುದ್ಧ ತೀರಿಸಿಕೊಂಡು ಹೆರೆಸ್ ಎಂಬ ಬೆಟ್ಟದ ಮಾರ್ಗವಾಗಿ ತಿರುಗಿಬಂದು, 14ಸುಕ್ಕೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು, ಸುಕ್ಕೋತಿನ ಪ್ರಧಾನರೂ, ಹಿರಿಯರೂ ಆದ ಎಪ್ಪತ್ತೇಳು ಜನರ ಹೆಸರನ್ನು ಅವನು ಬರೆದನು. 15ಗಿದ್ಯೋನನು ಸುಕ್ಕೋತಿನ ಮನುಷ್ಯರ ಬಳಿಗೆ ಬಂದು, “ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ, ಜೆಬಹ, ಚೆಲ್ಮುನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ, ಚಲ್ಮುನ್ನನನ್ನೂ ನೋಡಿರಿ,” ಎಂದು ಹೇಳಿ 16ಪಟ್ಟಣದ ಹಿರಿಯರನ್ನು ಮತ್ತು ಸುಕ್ಕೋತಿನವರನ್ನು ಹಿಡಿದು, ಮರುಭೂಮಿಯ ಮುಳ್ಳು ಹಾಗು ಕಾರೆಗಿಡದ ಮುಳ್ಳುಗಳಿಂದ ದಂಡಿಸಿ ಅವರಿಗೆ ಪಾಠ ಕಲಿಸಿದನು. 17ಪೆನೀಯೇಲಿನ ಗೋಪುರವನ್ನು ಕೆಡವಿ, ಆ ಪಟ್ಟಣದ ಮನುಷ್ಯರನ್ನು ಕೊಂದುಹಾಕಿದನು.
18ಅವನು ಜೆಬಹನಿಗೂ, ಚಲ್ಮುನ್ನನಿಗೂ, “ನೀವು ತಾಬೋರಿನಲ್ಲಿ ಕೊಂದುಹಾಕಿದ ಆ ಮನುಷ್ಯರು ಯಾವ ತರಹದವರಾಗಿದ್ದರು?” ಎಂದನು.
ಅದಕ್ಕವರು, “ನಿನ್ನ ಹಾಗೆಯೇ ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಂತಿದ್ದರು,” ಎಂದರು.
19ಅದಕ್ಕವನು, “ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು. ಯೆಹೋವ ದೇವರ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದನು. 20ತನ್ನ ಚೊಚ್ಚಲಮಗನಾದ ಎತೆರನಿಗೆ, “ನೀನೆದ್ದು ಅವರನ್ನು ಕೊಂದುಹಾಕು,” ಎಂದನು. ಆದರೆ ಆ ಯುವಕನು ತನ್ನ ಖಡ್ಗವನ್ನು ಬಿಚ್ಚದೆ ಹೋದನು. ಏಕೆಂದರೆ ಅವನು ಇನ್ನೂ ಹುಡುಗನಾದ್ದರಿಂದ ಭಯಪಟ್ಟನು.
21ಆಗ ಜೆಬಹನೂ, ಚಲ್ಮುನ್ನನೂ, “ನೀನು ಎದ್ದು ನಮ್ಮ ಮೇಲೆ ಬೀಳು. ಏಕೆಂದರೆ ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವುದು,” ಎಂದರು. ಗಿದ್ಯೋನನು ಎದ್ದು ಜೆಬಹನನ್ನೂ, ಚೆಲ್ಮುನ್ನನನ್ನೂ ಕೊಂದುಹಾಕಿ, ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದುಕೊಂಡನು.
ಗಿದ್ಯೋನನ ಏಫೋದು
22ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ, ನೀನೂ, ನಿನ್ನ ಪುತ್ರನೂ, ನಿನ್ನ ಪುತ್ರನ ಪುತ್ರನೂ ನಮ್ಮನ್ನು ಆಳಬೇಕು,” ಎಂದರು.
23ಗಿದ್ಯೋನನು ಅವರಿಗೆ, “ನಾನು ನಿಮ್ಮನ್ನು ಆಳುವುದಿಲ್ಲ. ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ. ಯೆಹೋವ ದೇವರೇ ನಿಮ್ಮನ್ನು ಆಳುವರು.” 24ಮತ್ತು ಗಿದ್ಯೋನನು ಅವರಿಗೆ, “ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿಯೊಬ್ಬನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಿರಿ,” ಎಂದನು. ಏಕೆಂದರೆ ಮಿದ್ಯಾನರು ಇಷ್ಮಾಯೇಲರಾಗಿದ್ದದರಿಂದ ಅವರು ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
25ಅವರು, “ನಾವು ಇಷ್ಟಪೂರ್ವಕವಾಗಿ ಕೊಡುತ್ತೇವೆ,” ಎಂದು ಹೇಳಿ, ಒಂದು ವಸ್ತ್ರವನ್ನು ಹಾಸಿ, ಅಲ್ಲಿ ಅವರವರು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ಹಾಕಿದರು. 26ಆಭರಣಗಳೂ, ಕಂಠಮಾಲೆಗಳೂ, ಮಿದ್ಯಾನರ ಅರಸರು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ, ಅವರ ಒಂಟೆಗಳ ಕೊರಳೊಳಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದುಕೊಂಡ ಬಂಗಾರದ ಓಲೆಗಳ ತೂಕವು ಇಪ್ಪತ್ತು ಕಿಲೋಗ್ರಾಂ ತೂಕವಾಗಿತ್ತು. 27ಆ ಬಂಗಾರದಿಂದ ಗಿದ್ಯೋನನು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲರೆಲ್ಲರೂ ಅದರ ಹಿಂದೆ ಹೋಗಿ ಪೂಜಿಸಿ ದೇವದ್ರೋಹಿಗಳಾದರು, ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
ಗಿದ್ಯೋನನ ಮರಣ
28ಮಿದ್ಯಾನ್ಯರು ತಮ್ಮ ತಲೆಯನ್ನು ತಿರುಗಿ ಎತ್ತಕೂಡದ ಹಾಗೆ ಇಸ್ರಾಯೇಲರ ಮುಂದೆ ತಗ್ಗಿಹೋದರು. ದೇಶವು ಗಿದ್ಯೋನನ ದಿವಸಗಳಲ್ಲಿ ನಲವತ್ತು ವರುಷ ವಿಶ್ರಾಂತಿಯಲ್ಲಿತ್ತು.
29ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು. 30ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಂದ ಜನಿಸಿದ ಎಪ್ಪತ್ತು ಮಂದಿ ಮಕ್ಕಳು ಇದ್ದರು. 31ಶೆಖೆಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು. 32ಯೋವಾಷನ ಮಗನಾದ ಗಿದ್ಯೋನನು ಒಳ್ಳೆಯ ವೃದ್ಧಾಪ್ಯದಲ್ಲಿ ಮರಣಹೊಂದಿದಾಗ, ಅವನನ್ನು ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಳಿಡಲಾಯಿತು.
33ಗಿದ್ಯೋನನ ಮರಣದ ತರುವಾಯ, ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜೆ ಮಾಡುತ್ತಾ ಬಾಳ್ ಬೆರೀತನ್ನು ತಮಗೆ ದೇವರಾಗಿ ಮಾಡಿಕೊಂಡರು. 34ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟರು. 35ಗಿದ್ಯೋನನೆಂಬ ಯೆರುಬ್ಬಾಳನು ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ದಯೆಯನ್ನು ಅವನ ಮನೆಗೆ ಮಾಡದೆ ಹೋದರು.
Currently Selected:
ನ್ಯಾಯಸ್ಥಾಪಕರು 8: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.