ನ್ಯಾಯಸ್ಥಾಪಕರು 2
2
ಬೋಕಿಮ್ನಲ್ಲಿ ಯೆಹೋವ ದೇವರ ದೂತ
1ಯೆಹೋವ ದೇವರ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮ ತಂದೆಗಳಿಗೆ ಆಣೆ ಇಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು. 2‘ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ, ಅವರ ಬಲಿಪೀಠಗಳನ್ನು ಕೆಡಿವಿಬಿಡಿರಿ,’ ಎಂದು ಹೇಳಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಏಕೆ ಮಾಡಿದಿರಿ? 3ಆದ್ದರಿಂದ, ‘ನಾನು ಸಹ ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮ ಪಕ್ಕದಲ್ಲಿ ಮುಳ್ಳುಗಳಂತಿರುವರು. ಅವರ ದೇವರುಗಳು ನಿಮಗೆ ಉರುಲಾಗುವುವು,’ ಎಂದು ನಾನು ಹೇಳಿದ್ದೆನು.”
4ಯೆಹೋವ ದೇವರ ದೂತನು ಈ ಮಾತುಗಳನ್ನು ಇಸ್ರಾಯೇಲರೆಲ್ಲರಿಗೆ ಹೇಳುವಾಗ, ಜನರು ಗಟ್ಟಿಯಾಗಿ ಅತ್ತರು. 5ಆ ಸ್ಥಳಕ್ಕೆ ಬೋಕೀಮ್#2:5 ಬೋಕೀಮ್ ಎಂದರೆ ಅಳುವವರು ಎಂಬ ಹೆಸರಿಟ್ಟು, ಅಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಿದರು.
ಅವಿಧೇಯತೆ ಮತ್ತು ಸೋಲು
6ಯೆಹೋಶುವನು ಜನರನ್ನು ಕಳುಹಿಸಿಬಿಟ್ಟಾಗ, ಇಸ್ರಾಯೇಲರು ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮ ಬಾಧ್ಯತೆಗಳಿಗೆ ಹೋದರು. 7ಆದರೆ ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವ ದೇವರು ಇಸ್ರಾಯೇಲರಿಗೋಸ್ಕರ ಮಾಡಿದ ಎಲ್ಲ ಮಹತ್ಕಾರ್ಯಗಳನ್ನು ಅರಿತಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವ ದೇವರನ್ನು ಸೇವಿಸಿದರು.
8ಆದರೆ ನೂನನ ಮಗನೆಂಬ ಯೆಹೋವ ದೇವರ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಪ್ರಾಯದವನಾಗಿ ಮರಣಹೊಂದಿದನು. 9ಅವನನ್ನು ಎಫ್ರಾಯೀಮನ ಬೆಟ್ಟದಲ್ಲಿ ಗಾಷ್ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್ ಹೆರೆಸ್ನಲ್ಲಿ#2:9 ತಿಮ್ನತ್ ಹೆರೆಸ್ ಇನ್ನೊಂದು ಹೆಸರು ಸೆರಾ ಹೂಳಿಟ್ಟರು.
10ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ, ಯೆಹೋವ ದೇವರನ್ನೂ ಅವರು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು. 11ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟತನ ಮಾಡಿ, ಬಾಳನನ್ನು ಸೇವಿಸಿ, 12ತಮ್ಮ ತಂದೆಗಳನ್ನು ಈಜಿಪ್ಟಿನಿಂದ ಹೊರಡಿಸಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ತಮ್ಮ ಸುತ್ತಲಿರುವ ಜನಾಂಗಗಳ ದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದರು. 13ಅವರು ಯೆಹೋವ ದೇವರನ್ನು ಬಿಟ್ಟು, ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು. 14ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿಗೆ ವಿರೋಧವಾಗಿ ಉರಿಗೊಂಡು, ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಇನ್ನು ಮೇಲೆ ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ, ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟರು. 15ಯೆಹೋವ ದೇವರು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಯಿಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವುದಕ್ಕೆ ಯೆಹೋವ ದೇವರ ಕೈ ಅವರಿಗೆ ವಿರೋಧವಾಗಿತ್ತು.
16ಆದರೂ ಯೆಹೋವ ದೇವರು ಅವರನ್ನು ಕೊಳ್ಳೆಹೊಡೆಯುವವರ ಕೈಯಿಂದ ಬಿಡಿಸುವದಕ್ಕೋಸ್ಕರ ನ್ಯಾಯಾಧಿಪತಿಗಳನ್ನು ಎಬ್ಬಿಸಿದರು. 17ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ, ಅನ್ಯದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಪಿತೃಗಳು ಯೆಹೋವ ದೇವರ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದುಬಿಟ್ಟರು. ಅವರು ಮಾಡಿದ ಪ್ರಕಾರ ಮಾಡಲಿಲ್ಲ. 18ಯೆಹೋವ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿದಾಗ, ಯೆಹೋವ ದೇವರು ನ್ಯಾಯಾಧಿಪತಿಯ ಸಂಗಡ ಇದ್ದು, ಆ ನ್ಯಾಯಾಧಿಪತಿಯ ದಿವಸಗಳಲ್ಲೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ತಪ್ಪಿಸಿ ರಕ್ಷಿಸುತ್ತಿದ್ದರು. ಏಕೆಂದರೆ ಅವರು ತಮ್ಮನ್ನು ಬಾಧಿಸಿ, ಶ್ರಮೆಪಡಿಸುವವರ ನಿಮಿತ್ತ ಗೋಳಾಡಿದ್ದರಿಂದ ಯೆಹೋವ ದೇವರು ಕನಿಕರಪಟ್ಟರು. 19ಆ ನ್ಯಾಯಾಧಿಪತಿಯ ಮರಣದ ನಂತರ, ಅವರು ತಿರುಗಿ ಮಾರ್ಗತಪ್ಪಿ, ಅನ್ಯದೇವರುಗಳನ್ನು ಹಿಂಬಾಲಿಸಿ ಹೋಗಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಹಿರಿಯರಿಗಿಂತ ಅಧಿಕ ಭ್ರಷ್ಟರಾದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಟಮಾರಿತನವನ್ನೂ ಬಿಡಲೇ ಇಲ್ಲ.
20ಆದ್ದರಿಂದ ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪದಿಂದ ಉರಿಗೊಂಡು, “ಈ ಜನಾಂಗವು ನಾನು ಅವರ ಪಿತೃಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ, 21ನಾನು ಸಹ ಇನ್ನು ಮೇಲೆ ಯೆಹೋಶುವನು ಮರಣಹೊಂದುವಾಗ ಉಳಿಸಿದ ಜನಾಂಗಗಳಲ್ಲಿ ಒಬ್ಬರನ್ನಾದರೂ ಇವರ ಮುಂದೆ ಹೊರಡಿಸಿಬಿಡುವುದಿಲ್ಲ,” ಎಂದರು. 22ಇಸ್ರಾಯೇಲರು ತಮ್ಮ ತಂದೆಗಳು ಕೈಗೊಂಡು ನಡೆದ ಯೆಹೋವ ದೇವರ ಮಾರ್ಗದಲ್ಲಿ ತಾವು ಕೈಗೊಂಡು ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ, 23ಯೆಹೋವ ದೇವರು ಆ ಜನಾಂಗಗಳನ್ನು ಯೆಹೋಶುವನ ಕೈಯಲ್ಲಿ ಒಪ್ಪಿಸಿಕೊಡದೆ, ಅವುಗಳನ್ನು ಶೀಘ್ರವಾಗಿ ಓಡಿಸಿಬಿಡದೆ ಉಳಿಸಿದರು.
Currently Selected:
ನ್ಯಾಯಸ್ಥಾಪಕರು 2: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.