ವಿಮೋಚನಕಾಂಡ 21
21
1“ಈಗ ಅವರ ಮುಂದೆ ನೀನು ಇಡತಕ್ಕ ನ್ಯಾಯವಿಧಿಗಳು ಇವೇ.
ಹಿಬ್ರಿಯ ದಾಸರು
2“ನೀನು ಹಿಬ್ರಿಯ ದಾಸನನ್ನು ಕೊಂಡುಕೊಂಡರೆ, ಅವನು ಆರು ವರ್ಷ ನಿನಗೆ ಸೇವೆಮಾಡಬೇಕು. ಏಳನೆಯ ವರ್ಷದಲ್ಲಿ ಅವನು ಏನೂ ಕೊಡದೆ ಬಿಡುಗಡೆಯಾಗಿ ಹೋಗಲಿ. 3ಅವನು ಒಬ್ಬನಾಗಿ ಬಂದಿದ್ದರೆ, ಒಬ್ಬನಾಗಿಯೇ ಹೋಗಬೇಕು. ಅವನು ಮದುವೆಯಾದವನಾಗಿದ್ದರೆ, ಅವನ ಹೆಂಡತಿಯು ಅವನ ಸಂಗಡ ಹೋಗಬೇಕು. 4ಅವನ ಯಜಮಾನನು ಅವನಿಗೆ ಮದುವೆಮಾಡಿಸಿ ಆ ಹೆಂಡತಿಗೆ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ಅವನು ಒಬ್ಬನಾಗಿಯೇ ಹೋಗಬೇಕು.
5“ಆದರೆ ದಾಸನು, ‘ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿಮಾಡುತ್ತೇನೆ. ಆದ್ದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,’ ಎಂದು ಸ್ವಷ್ಟವಾಗಿ ಹೇಳಿದರೆ, 6ಅವನ ಯಜಮಾನನು ಅವನನ್ನು ನ್ಯಾಯಾಧೀಶರ#21:6 ಅಥವಾ ದೇವರು ಬಳಿಗೆ ಕರಕೊಂಡು ಬಂದು, ಬಾಗಿಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ, ಅವನ ಯಜಮಾನನು ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ದಾಸನಾಗಿರಬೇಕು.
7“ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಹೋಗುವಂತೆ ಆಕೆಯು ಹೋಗಿಬಿಡಬಾರದು. 8ಅವಳನ್ನು ನಿಶ್ಚಯಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ, ಆಗ ಅವಳು ಬಿಡುಗಡೆಯಾಗುವಂತೆ ಮಾಡಲಿ. ಅವನು ಅವಳನ್ನು ವಂಚಿಸಿದ್ದರಿಂದ ಯೆಹೂದ್ಯರಲ್ಲದವರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ. 9ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿದರೆ, ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು. 10ಒಂದು ವೇಳೆ ಅವನು ಇನ್ನೊಬ್ಬಳನ್ನು ಮದುವೆಯಾದರೆ, ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕನ್ನು ಕಡಿಮೆ ಮಾಡಬಾರದು. 11ಈ ಮೂರನ್ನು ಅವಳಿಗೆ ಮಾಡದೆ ಹೋದರೆ, ಅವಳು ಏನೂ ಕ್ರಯ ಕೊಡದೆ, ಸ್ವತಂತ್ರಳಾಗಿ ಹೋಗಿಬಿಡಬಹುದು.
ಹಿಂಸಾಚಾರಗಳ ಬಗ್ಗೆ
12“ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು. 13ಆದರೆ ಕೊಲ್ಲಬೇಕೆಂಬ ಯೋಚನೆ ಇಲ್ಲದೆ ದೇವರು ಅನುಮತಿಸಿದ್ದರಿಂದ ಕೊಲೆಯಾದರೆ, ಕೊಂದವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಾನು ನೇಮಿಸುವೆನು. 14ಆದರೆ ಒಬ್ಬನು ಮತ್ತೊಬ್ಬನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಬಲಿಪೀಠದಿಂದ ದೂರ ತೆಗೆದುಕೊಂಡುಹೋಗಿ ಕೊಂದುಹಾಕಬೇಕು.
15“ತಂದೆತಾಯಿಗಳನ್ನು ಹೊಡೆಯುವವನು#21:15 ಅಥವಾ ಕೊಲೆಮಾಡುವವನು ಖಂಡಿತವಾಗಿ ಮರಣದಂಡನೆ ಹೊಂದಬೇಕು.
16“ಒಬ್ಬನು ಮತ್ತೊಬ್ಬನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ, ಇಲ್ಲವೆ ಅವನು ಬಂಧನಕ್ಕೊಳಗಾದಾಗ ಅಪಹರಿಸಲಾದವನು ಅವನೊಂದಿಗಿದ್ದರೆ, ಅವನನ್ನು ಮರಣದಂಡನೆಗೆ ಗುರಿಮಾಡಬೇಕು.
17“ತಂದೆಗಾದರೂ ತಾಯಿಗಾದರೂ ಶಾಪಕೊಟ್ಟವನು ಖಂಡಿತವಾಗಿ ಸಾಯಬೇಕು.
18“ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಟಿಯಿಂದಾಗಲಿ#21:18 ಅಥವಾ ಯಾವುದಾದರೂ ಸಾಧನ ಹೊಡೆದದ್ದರಿಂದ ಅವನು ಸಾಯದೆ ಗಾಯಗೊಂಡು, ಹಾಸಿಗೆ ಹಿಡಿದು, ಕ್ರಮೇಣ 19ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ, ಅವನನ್ನು ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಪೆಟ್ಟು ತಿಂದವನು ಗುಣಹೊಂದುವವರೆಗೆ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನನ್ನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು.
20“ಒಬ್ಬನು ದಾಸನನ್ನಾಗಲಿ, ದಾಸಿಯನ್ನಾಗಲಿ ಸಾಯುವಂತೆ ಕೋಲಿನಿಂದ ಹೊಡೆದಾಗ, ಹೊಡೆದವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು. 21ದಾಸದಾಸಿಯರು ಒಂದೆರಡು ದಿನಗಳ ನಂತರ ಉಳಿದರೆ ಶಿಕ್ಷೆಯಾಗಬಾರದು. ಏಕೆಂದರೆ ಅವರು ಅವನ ಸೊತ್ತು.
22“ಜನರು ಜಗಳವಾಡುವಾಗ ಗರ್ಭಿಣಿಯಾದ ಸ್ತ್ರೀಗೆ ಏಟು ತಗಲಿ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು. 23ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನು, ಕಣ್ಣಿಗೆ ಕಣ್ಣನ್ನು, 24ಹಲ್ಲಿಗೆ ಹಲ್ಲು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು, 25ಸುಟ್ಟ ಗಾಯಕ್ಕೆ ಸುಟ್ಟಗಾಯವನ್ನು, ಕಡಿದ ಗಾಯಕ್ಕೆ ಕಡಿದ ಗಾಯವನ್ನು, ಹೊಡೆದ ಗಾಯಕ್ಕೆ ಹೊಡೆದು ಗಾಯವನ್ನು ನೀನು ಮಾಡಬೇಕು.
26“ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ, ಆ ಕಣ್ಣಿಗೋಸ್ಕರ ಅವರನ್ನು ಅವನು ಬಿಡುಗಡೆ ಮಾಡಿ ಕಳುಹಿಸಲಿ. 27ಒಬ್ಬನು ದಾಸನ ಹಲ್ಲನ್ನು, ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ, ಹಲ್ಲಿಗೋಸ್ಕರ ಅವರನ್ನು ಬಿಡುಗಡೆ ಮಾಡಿ ಕಳುಹಿಸಲಿ.
28“ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಹಾಯ್ದು ಕೊಂದರೆ, ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆ ಎತ್ತಿನ ಯಜಮಾನನು ನಿರಪರಾಧಿ. 29ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೆ ಇದ್ದುದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದುಹಾಕಿದರೆ, ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಆದರೆ ಯಜಮಾನನೂ ಮರಣದಂಡನೆಗೆ ಗುರಿಯಾಗುವನು. 30ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿಸಿದರೆ, ಅವನು ತನಗೆ ನೇಮಿಸಿದ್ದನ್ನೆಲ್ಲಾ ತನ್ನ ಪ್ರಾಣವಿಮೋಚನೆಗಾಗಿ ಕೊಡಲಿ. 31ಅದು ಮಗನನ್ನು ಹಾಯ್ದಿದ್ದರೂ, ಮಗಳನ್ನು ಹಾಯ್ದಿದ್ದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು. 32ದಾಸನನ್ನಾದರೂ, ದಾಸಿಯನ್ನಾದರೂ ಎತ್ತು ಹಾಯ್ದರೆ, ದಾಸನ, ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
33“ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದುದರಿಂದ ಎತ್ತಾದರೂ ಕತ್ತೆಯಾದರೂ ಆ ಗುಂಡಿಯಲ್ಲಿ ಬಿದ್ದು ಸತ್ತರೆ, 34ಗುಂಡಿಯನ್ನು ಅಗೆದವನು ಈಡು ಕೊಡಬೇಕು. ಅವುಗಳ ಯಜಮಾನನಿಗೆ ಕ್ರಯ ನೀಡಬೇಕು. ಆದರೆ ಸತ್ತ ಪಶು ಅವನದಾಗಬೇಕು.
35“ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ, ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನೂ, ಸತ್ತ ಎತ್ತನ್ನೂ ಸರಿಯಾಗಿ ಇಬ್ಬರೂ ಪಾಲುಮಾಡಿಕೊಳ್ಳಬೇಕು. 36ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿದ್ದರೂ, ಅದರ ಯಜಮಾನನು ಅದನ್ನು ಕಟ್ಟಿಹಾಕದೆ ಹೋಗಿದ್ದರೆ, ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲುಕೊಡಬೇಕು. ಆದರೆ ಸತ್ತ ಪಶುವನ್ನು ಅವನು ತೆಗೆದುಕೊಳ್ಳಬಹುದು.
Currently Selected:
ವಿಮೋಚನಕಾಂಡ 21: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.