ಪ್ರಸಂಗಿ 5
5
ದೇವರನ್ನು ಗೌರವಿಸಿ, ಅವರಿಗೆ ಭಯಪಡು
1ದೇವರ ಆಲಯಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು. ಮೂರ್ಖರು ಅರ್ಪಿಸುವ ಯಜ್ಞಕ್ಕಿಂತ, ದೇವರ ಸಮೀಪವಾಗಿದ್ದು ಅವರಿಗೆ ಕಿವಿಗೊಟ್ಟು ಆಲಿಸುವುದು ಲೇಸು. ತಾವು ತಪ್ಪು ಮಾಡುತ್ತಿದ್ದಾರೆಂದು ಮೂಢರಿಗೆ ತಿಳಿಯುವುದಿಲ್ಲ.
2ನೀನು ದುಡುಕಿ ಮಾತನಾಡಬೇಡ,
ದೇವರ ಮುಂದೆ ಮಾತನಾಡಲು
ನಿನ್ನ ಹೃದಯವು ಆತುರಪಡದೇ ಇರಲಿ.
ದೇವರು ಪರಲೋಕದಲ್ಲಿದ್ದಾರೆ.
ನೀನಾದರೋ ಭೂಮಿಯ ಮೇಲೆ ಇರುವೆ,
ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.
3ಬಹಳ ಚಿಂತೆ ಇದ್ದಾಗಲೂ ಕನಸು ಬರುತ್ತದೆ.
ಮೂಢನು ಮಾತಾಡಿದರೆ ಸಾಕು, ಬಹು ಮಾತುಗಳು ಬರುತ್ತವೆ.
4ದೇವರಿಗೆ ನೀನು ಹರಕೆಯನ್ನು ಮಾಡಿದರೆ, ಅದನ್ನು ತೀರಿಸಲು ತಡಮಾಡಬೇಡ. ದೇವರು ಮೂಢರನ್ನು ಮೆಚ್ಚುವುದಿಲ್ಲ. ನೀನು ಹರಕೆ ಮಾಡಿದ್ದನ್ನು ತೀರಿಸು. 5ಹರಕೆಮಾಡಿ ತೀರಿಸದೆ ಇರುವುದಕ್ಕಿಂತ, ಹರಕೆ ಮಾಡದೆ ಇರುವುದು ಒಳ್ಳೆಯದು. 6ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ನಡೆಸದಂತೆ ನೋಡಿಕೋ. “ನಾನು ಹರಕೆ ಮಾಡಿದ್ದು ತಪ್ಪು,” ಎಂದು ದೂತನ ಮುಂದೆ ಹೇಳಬೇಡ. ಇದರಿಂದ ದೇವರು ನಿನ್ನ ಮಾತಿಗೆ ಮೆಚ್ಚದೆ, ನಿನ್ನನ್ನು ಏಕೆ ದಂಡಿಸಬೇಕು? 7ಬಹು ಕನಸುಗಳೂ ಬಹು ಮಾತುಗಳೂ ವ್ಯರ್ಥವಾದವುಗಳು. ಆದ್ದರಿಂದ ನೀನು ದೇವರಿಗೆ ಭಯಪಡು.
ಐಶ್ವರ್ಯವು ವ್ಯರ್ಥ
8ದೇಶದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯ ನಿರಾಕರಿಸಿದ್ದನ್ನೂ ನೀನು ನೋಡಿದರೆ, ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಮತ್ತೊಬ್ಬ ಉನ್ನತ ಅಧಿಕಾರಿಗಳು ಇದ್ದಾರೆ. 9ಭೂಮಿಯಿಂದ ಲಾಭವು ಎಲ್ಲರಿಗೂ ಇದೆ. ಹೊಲಗದ್ದೆಗಳಿಂದ ಅರಸನಿಗೂ ಲಾಭವಿದೆ.
10ಹಣವನ್ನು ಪ್ರೀತಿಸುವವರಿಗೆ ಎಷ್ಟು ಹಣ ಇದ್ದರೂ ಸಾಕಾಗದು.
ಆಸ್ತಿಯನ್ನು ಪ್ರೀತಿಸುವವನು ತನ್ನ ಆದಾಯದಿಂದ ತೃಪ್ತಿಗೊಳ್ಳುವುದಿಲ್ಲ.
ಇದೂ ಸಹ ವ್ಯರ್ಥವೇ.
11ಸೊತ್ತು ಹೆಚ್ಚಿದರೆ,
ಅದನ್ನು ಅನುಭವಿಸುವವರು ಹೆಚ್ಚಾಗುವರು.
ಯಜಮಾನರು ಅದನ್ನು ತಮ್ಮ ಕಣ್ಣಿಂದ ನೋಡುವುದೇ ಅವರಿಗಾಗುವ ಲಾಭ,
ಬೇರೆ ಯಾವ ಪ್ರಯೋಜನವಿದೆ?
12ಪ್ರಯಾಸ ಪಡುವವನು ಸ್ವಲ್ಪ ತಿಂದರೂ
ಹೆಚ್ಚು ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ.
ಆದರೆ ಐಶ್ವರ್ಯವಂತನ ಸಮೃದ್ಧಿಯು
ಅವನನ್ನು ನಿದ್ರೆ ಮಾಡಗೊಡಿಸದು.
13ಸೂರ್ಯನ ಕೆಳಗೆ ವ್ಯಸನಕರವಾದ ಕೇಡನ್ನು ನಾನು ನೋಡಿದೆ. ಅದು ಯಾವುದೆಂದರೆ:
ಸಂಗ್ರಹಿಸಿದ ಆಸ್ತಿ ಯಜಮಾನನಿಗೆ ಹಾನಿ.
14ಅದು ಹೇಗೆಂದರೆ, ಅನಾಹುತದಿಂದ ಆಸ್ತಿ ಕಳೆದುಹೋಗುತ್ತದೆ.
ಅವನಿಗೆ ಮಗನಿದ್ದರೆ,
ಅವನಿಗೆ ಏನೂ ಇರುವುದಿಲ್ಲ.
15ತಾಯಿಯ ಗರ್ಭದಿಂದ ಅವನು ಹೇಗೆ ಬರಿಗೈಯಲ್ಲಿ ಬಂದನೋ,
ಹಾಗೆ ಬರಿಗೈಯಲ್ಲಿ ಗತಿಸಿ ಹೋಗುವನು.
ಅವನು ಪ್ರಯಾಸ ಪಟ್ಟದ್ದಕ್ಕಾಗಿ ಯಾವುದನ್ನು
ತೆಗೆದುಕೊಂಡು ಹೋಗುವುದಿಲ್ಲ.
16ಇದು ಕೂಡ ವ್ಯಸನಕರವಾದ ಕೇಡು:
ಮನುಷ್ಯನು ಹೇಗೆ ಬಂದನೋ,
ಹಾಗೆಯೇ ಹೋಗುವನು.
ಗಾಳಿಗಾಗಿ ಪ್ರಯಾಸಪಟ್ಟವನಿಗೆ ಲಾಭವೇನಿದೆ?
17ತನ್ನ ಜೀವಮಾನವೆಲ್ಲಾ ಅವನು ಕತ್ತಲೆಯಲ್ಲಿ ಕಳೆಯುತ್ತಾನೆ.
ಅವನಿಗೆ ವ್ಯಾಧಿಯೊಂದಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
18ದೇವರು ಮನುಷ್ಯನಿಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ಅವನು ಕೈಗೊಂಡ ಪ್ರಯಾಸದ ಸುಖವನ್ನು ಅನುಭವಿಸಿ, ತಿಂದು, ಕುಡಿಯುವುದು ತೃಪ್ತಿಕರವಾದದ್ದೂ ಆಗಿದೆ, ಎಂದು ಒಂದು ಒಳ್ಳೆಯದನ್ನು ಕಂಡುಕೊಂಡೆನು. ಏಕೆಂದರೆ ಇದು ಮನುಷ್ಯನ ಪಾಲು. 19ಮನುಷ್ಯನಿಗೆ ದೇವರು ಆಸ್ತಿಪಾಸ್ತಿಗಳನ್ನು ದಯಪಾಲಿಸಿ, ಅವುಗಳನ್ನು ಅನುಭವಿಸುವುದಕ್ಕೆ ಸಾಮರ್ಥ್ಯ ಕೊಟ್ಟಿದ್ದರೆ, ಅವನು ತನ್ನ ಪಾಲನ್ನು ತೆಗೆದುಕೊಂಡು, ತನ್ನ ಪ್ರಯಾಸದಲ್ಲಿ ಆನಂದಿಸುವುದೂ ದೇವರ ದಾನದಿಂದಲೇ. 20ಇಂಥವನು ತನ್ನ ಜೀವಮಾನದ ದಿನಗಳನ್ನು ಗಣನೆಗೆ ತಂದುಕೊಳ್ಳನು. ಏಕೆಂದರೆ ಇವನು ತನ್ನ ಹೃದಯಾನಂದದಲ್ಲಿ ಮಗ್ನನಾಗಿರುವಂತೆ ದೇವರು ಮಾಡಿದ್ದಾರೆ.
Currently Selected:
ಪ್ರಸಂಗಿ 5: KSB
Highlight
Share
Compare
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.