ಪ್ರಸಂಗಿ 3
3
ಪ್ರತಿಯೊಂದು ಕಾರ್ಯಕ್ಕೆ ಸಮಯ
1ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ.
ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ.
2ಹುಟ್ಟುವುದಕ್ಕೆ ಒಂದು ಸಮಯ, ಸಾಯುವುದಕ್ಕೆ ಒಂದು ಸಮಯ.
ನೆಡುವುದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕುವುದಕ್ಕೆ ಒಂದು ಸಮಯ.
3ಕೊಲ್ಲುವುದಕ್ಕೆ ಒಂದು ಸಮಯ, ಸ್ವಸ್ಥ ಮಾಡುವುದಕ್ಕೆ ಒಂದು ಸಮಯ,
ಕೆಡವಿಬಿಡುವುದಕ್ಕೆ ಒಂದು ಸಮಯ, ಕಟ್ಟುವುದಕ್ಕೆ ಒಂದು ಸಮಯ.
4ಅಳುವುದಕ್ಕೆ ಒಂದು ಸಮಯ, ನಗುವುದಕ್ಕೆ ಒಂದು ಸಮಯ.
ಗೋಳಾಡುವುದಕ್ಕೆ ಒಂದು ಸಮಯ, ಕುಣಿದಾಡುವುದಕ್ಕೆ ಒಂದು ಸಮಯ.
5ಕಲ್ಲುಗಳನ್ನು ಎಸೆಯುವುದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸುವುದಕ್ಕೆ ಒಂದು ಸಮಯ.
ಅಪ್ಪಿಕೊಳ್ಳುವುದಕ್ಕೆ ಒಂದು ಸಮಯ, ತಡೆದಿರುವುದಕ್ಕೂ ಒಂದು ಸಮಯ.
6ಗಳಿಸುವುದಕ್ಕೆ ಒಂದು ಸಮಯ, ಕಳೆದುಕೊಳ್ಳುವುದಕ್ಕೆ ಒಂದು ಸಮಯ.
ಕಾಪಾಡುವುದಕ್ಕೆ ಒಂದು ಸಮಯ, ಬಿಸಾಡುವುದಕ್ಕೆ ಒಂದು ಸಮಯ.
7ಹರಿಯುವುದಕ್ಕೆ ಒಂದು ಸಮಯ, ಹೊಲಿಯುವುದಕ್ಕೆ ಒಂದು ಸಮಯ.
ಸುಮ್ಮನೆ ಇರುವುದಕ್ಕೆ ಒಂದು ಸಮಯ, ಮಾತಾಡುವುದಕ್ಕೆ ಒಂದು ಸಮಯ.
8ಪ್ರೀತಿಸುವುದಕ್ಕೆ ಒಂದು ಸಮಯ, ದ್ವೇಷಿಸುವುದಕ್ಕೆ ಒಂದು ಸಮಯ.
ಯುದ್ಧದ ಸಮಯ, ಸಮಾಧಾನದ ಸಮಯ, ಹೀಗೆ ಒಂದೊಂದಕ್ಕೂ ತಕ್ಕ ಸಮಯವಿದೆ.
9ಹಾಗಾದರೆ, ಪ್ರಯಾಸ ಪಡುವುದರಲ್ಲಿ ದುಡಿಯುವವನಿಗೆ ಲಾಭವೇನಿದೆ? 10ದೇವರು ಮಾನವ ಜನಾಂಗದ ಮೇಲೆ ಹೊರಿಸಿರುವ ಭಾರವನ್ನು ನಾನು ನೋಡಿದ್ದೇನೆ. 11ದೇವರು ಪ್ರತಿಯೊಂದನ್ನು ತಮ್ಮ ಸೂಕ್ತ ಸಮಯದಲ್ಲಿ ಸುಂದರವಾಗಿ ನಿರ್ಮಿಸಿದ್ದಾರೆ. ಜನರ ಹೃದಯದಲ್ಲಿ ನಿತ್ಯತೆಯನ್ನು ದೇವರೇ ಇಟ್ಟಿದ್ದಾರೆ. ಆದರೂ ಆದಿಯಿಂದ ಅಂತ್ಯದವರೆಗೂ ದೇವರು ಏನು ಮಾಡಿದ್ದಾರೆಂದು ಯಾರಿಗೂ ಗ್ರಹಿಸಲು ಸಾಧ್ಯವಿಲ್ಲ. 12ಜನರು ತಮ್ಮ ಜೀವಮಾನದಲ್ಲಿ ಸಂತೋಷವಾಗಿದ್ದು ಒಳ್ಳೆಯದನ್ನು ಮಾಡುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲವೆಂದು ನಾನು ಬಲ್ಲೆನು. 13ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ಸೇವಿಸಿ, ತನ್ನ ಎಲ್ಲಾ ಪ್ರಯಾಸಗಳಲ್ಲಿ ಸುಖವನ್ನು ಅನುಭವಿಸುವುದು ದೇವರ ದಾನದಿಂದಲೇ. 14ದೇವರು ಮಾಡುವ ಕಾರ್ಯವೆಲ್ಲವೂ ಶಾಶ್ವತವಾಗಿರುವುದೆಂದು ನಾನು ಬಲ್ಲೆನು; ಅದಕ್ಕೆ ಯಾವುದನ್ನೂ ಕೂಡಿಸಲಾಗದು ಮತ್ತು ಯಾವುದನ್ನೂ ತೆಗೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮನುಷ್ಯರು ಭಯಭಕ್ತಿಯಿಂದ ಜೀವಿಸಬೇಕೆಂದು ದೇವರು ಇದನ್ನು ಮಾಡಿದ್ದಾರೆ.
15ಇರುವಂಥದ್ದು ಈಗಾಗಲೇ ಇತ್ತು,
ಬರುವಂಥದ್ದು ಆಗಲೇ ಇದೆ.
ಗತಿಸಿಹೋದದ್ದನ್ನು ದೇವರು ಪುನಃಸ್ಥಾಪಿಸುವರು.
16ಇದಕ್ಕಿಂತಲೂ ಬೇರೆಯಾದದ್ದನ್ನು ಸೂರ್ಯನ ಕೆಳಗೆ ನೋಡಿದೆನು:
ನ್ಯಾಯತೀರ್ಪಿನ ಸ್ಥಳದಲ್ಲಿ ದುಷ್ಕೃತ್ಯ ಇತ್ತು.
ನೀತಿಯ ಸ್ಥಾನದಲ್ಲಿಯೂ ದುಷ್ಟತ್ವ ಇತ್ತು.
17ನಾನು ನನ್ನ ಹೃದಯದಲ್ಲಿ ಹೀಗೆ ಅಂದುಕೊಂಡೆನು,
“ನೀತಿವಂತರನ್ನೂ ದುಷ್ಟರನ್ನೂ
ದೇವರು ನ್ಯಾಯತೀರಿಸುವನು.
ಏಕೆಂದರೆ ಪ್ರತಿಯೊಂದು ಉದ್ದೇಶಕ್ಕೂ,
ಪ್ರತಿಯೊಂದು ಕೆಲಸಕ್ಕೂ ಪರೀಕ್ಷೆಯ ಸಮಯವಿದೆ.”
18ಮತ್ತೆ ನನ್ನ ಮನಸ್ಸಿನಲ್ಲಿ ಯೋಚಿಸಿದೆ, “ಮನುಷ್ಯರು ಮೃಗಗಳಂತೆ ಇದ್ದಾರೆಂದು ತಿಳಿದುಕೊಳ್ಳಲು ದೇವರು ಅವರನ್ನು ಪರೀಕ್ಷಿಸುತ್ತಾರೆ. 19ಏಕೆಂದರೆ ಮೃಗಗಳಿಗೆ ಸಂಭವಿಸುವುದು ಮನುಷ್ಯರಿಗೂ ಸಂಭವಿಸುತ್ತದೆ. ಇಬ್ಬರಿಗೂ ಒಂದೇ ಸಂಗತಿ ಸಂಭವಿಸುತ್ತದೆ. ಒಂದು ಹೇಗೆ ಸಾಯುತ್ತದೋ ಹಾಗೆ ಇನ್ನೊಂದೂ ಸಾಯುತ್ತದೆ. ಎಲ್ಲಕ್ಕೂ ಒಂದೇ ಪ್ರಾಣ ಇದೆ. ಆ ರೀತಿಯಲ್ಲಿ ಮೃಗಕ್ಕಿಂತ ಮನುಷ್ಯನಿಗೆ ಹೆಚ್ಚು ಶ್ರೇಷ್ಠತೆ ಇಲ್ಲ. ಎಲ್ಲವೂ ವ್ಯರ್ಥ. 20ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ. ಎಲ್ಲವೂ ಮಣ್ಣಿನಿಂದ ಆದವು. ಎಲ್ಲವೂ ಮಣ್ಣಿಗೆ ಸೇರುತ್ತವೆ. 21ಮನುಷ್ಯನ ಆತ್ಮವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಗೆ ಹೋಗುತ್ತದೆಂದೂ ಯಾರು ತಿಳಿದಾರು?”
22ಆದಕಾರಣ ಮನುಷ್ಯನು ತನ್ನ ಕೆಲಸ ಕಾರ್ಯಗಳಲ್ಲಿ ಆನಂದಿಸುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲವೆಂದು ನಾನು ನೋಡಿದೆನು. ಏಕೆಂದರೆ ಇದೇ ಅವನ ಪಾಲು. ಆದ್ದರಿಂದ ತನ್ನ ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?
Currently Selected:
ಪ್ರಸಂಗಿ 3: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.