ಧರ್ಮೋಪದೇಶಕಾಂಡ 19
19
ಆಶ್ರಯ ಪಟ್ಟಣಗಳು
1ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದ ಜನಾಂಗಗಳನ್ನು ದೇವರು ತೆಗೆದುಹಾಕಿದ ತರುವಾಯ, ನೀವು ದೇಶವನ್ನು ಸ್ವಾಧೀನಮಾಡಿಕೊಂಡು ಅದರ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಿರಿ. 2ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ನಿಮ್ಮ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿಮಗಾಗಿ ಪ್ರತ್ಯೇಕಿಸಬೇಕು. 3ಕೈತಪ್ಪಿ ಕೊಲೆ ಮಾಡುವವರೆಲ್ಲರೂ ಅಲ್ಲಿಗೆ ಓಡಿಹೋಗುವುದಕ್ಕೆ ಅನುಕೂಲವಾಗುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದ ಮೇರೆಯನ್ನು ಮೂರು ಭಾಗಮಾಡಿ, ಅವುಗಳ ಮಾರ್ಗವನ್ನು ಸಿದ್ಧಮಾಡಿಕೊಳ್ಳಬೇಕು.
4ಬದುಕಿ ಉಳಿಯಲು ಅಲ್ಲಿ ಓಡಿಹೋಗತಕ್ಕ ಕೊಲೆಪಾತಕನ ವಿವರವೇನೆಂದರೆ, ತಿಳಿಯದೆ ಇಲ್ಲವೆ ಪೂರ್ವ ಕಲ್ಪಿತ ಹಗೆ ಮಾಡದೆ, ತನ್ನ ನೆರೆಯವನನ್ನು ಹೊಡೆದವನೇ. 5ಉದಾಹರಣೆಗೆ: ಒಬ್ಬ ವ್ಯಕ್ತಿ ಕಟ್ಟಿಗೆಯನ್ನು ಕಡಿಯಲು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋದನೆಂದು ಇಟ್ಟುಕೊಳ್ಳೋಣ. ಅಲ್ಲಿ ಒಂದು ಮರವನ್ನು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿ ಕಾವಿನಿಂದ ಜಾರಿ, ಆ ಮತ್ತೊಬ್ಬನಿಗೆ ತಗಲಿ ಅವನು ಸತ್ತರೆ, ಹೊಡೆದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. 6ಸತ್ತವನಲ್ಲಿ ಅವನಿಗೆ ಮೊದಲಿನಿಂದಲೂ ದ್ವೇಷವಿರಲಿಲ್ಲ. ಆದ್ದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯೆ ಮಾಡಿದವನಿಗೆ ಮುಯ್ಯಿ ತೀರಿಸುವ ಹಂಗುಳ್ಳ ಸಮೀಪ ಬಂಧು ಕೋಪದಿಂದ ಉರಿಯುತ್ತಾ, ಅವನನ್ನು ಹಿಂದಟ್ಟಬಹುದು. ಮಾರ್ಗದ ಮಧ್ಯದಲ್ಲೇ ಅವನನ್ನು ಹಿಡಿದು ಕೊಂದು ಹಾಕಬಹುದು. 7ಈ ಕಾರಣದಿಂದಲೇ ನೀವು ಆ ಮೂರು ಆಶ್ರಯಪಟ್ಟಣಗಳನ್ನು ಗೊತ್ತು ಮಾಡಬೇಕೆಂದು ಆಜ್ಞಾಪಿಸಿದ್ದೇನೆ.
8ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮ ಮೇರೆಯನ್ನು ವಿಸ್ತಾರಮಾಡಿ, ನಿಮ್ಮ ಪಿತೃಗಳಿಗೆ ಕೊಡುವುದಾಗಿ ಹೇಳಿದ ದೇಶವನ್ನೆಲ್ಲಾ ನಿಮಗೆ ಕೊಡುವರು. 9ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಕಾಪಾಡಿ ಕೈಗೊಳ್ಳಬೇಕು. ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ಯಾವಾಗಲೂ ನಡೆದರೆ ನೀವು ಈ ಮೂರು ಪಟ್ಟಣಗಳ ಜೊತೆಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು. 10ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗಬಾರದು, ಅಂಥವನಿಗೆ ಮರಣಶಿಕ್ಷೆಯಾದರೆ ಆ ರಕ್ತಾಪರಾಧ ನಿಮ್ಮದಾಗಿಯೇ ಇರುವುದು.
11ಆದರೆ ಒಬ್ಬನು ತನ್ನ ನೆರೆಯವನನ್ನು ದ್ವೇಷಿಸಿ ಹೊಂಚು ಹಾಕಿ, ಅವನಿಗೆ ವಿರೋಧವಾಗಿ ಎದ್ದು, ಅವನನ್ನು ಸಾಯುವವರೆಗೂ ಹೊಡೆದು ಕೊಂದುಹಾಕಿ ಈ ಪಟ್ಟಣಗಳಿಗೆ ಓಡಿಹೋದರೆ, 12ಆ ಪಟ್ಟಣದ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ, ಅವನಿಗೆ ಮರಣದಂಡನೆಯಾಗುವಂತೆ ಸೇಡು ತೀರಿಸಿಕೊಳ್ಳುವವನ ಕೈಗೆ ಅವನನ್ನು ಒಪ್ಪಿಸಬೇಕು. 13ನೀವು ಅವನ ಮೇಲೆ ದಯೆ ತೋರಬಾರದು. ನಿಮಗೆ ಒಳ್ಳೆಯದಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲರಲ್ಲಿ ಉಳಿಯದಂತೆ ತೆಗೆದುಹಾಕಬೇಕು.
14ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ದೇಶದೊಳಗೆ ನೀವು ಹೊಂದುವ ಸೊತ್ತಿನಲ್ಲಿ ಹಿರಿಯರು ಇಟ್ಟಂಥ ನಿಮ್ಮ ನೆರೆಯವನ ಮೇರೆಯನ್ನು ಸರಿಸಬಾರದು.
ಸಾಕ್ಷಿಗಳು
15ಯಾವ ಅಕ್ರಮದ ನಿಮಿತ್ತವೂ, ಅಥವಾ ಪಾಪದ ನಿಮಿತ್ತವೂ ಒಬ್ಬ ಮನುಷ್ಯನಿಗೆ ವಿರೋಧವಾಗಿ ಒಬ್ಬ ಸಾಕ್ಷಿ ನಿಂತುಕೊಳ್ಳಬಾರದು. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ವಿಷಯವು ಸ್ಥಿರವಾಗುವುದು.
16ಸುಳ್ಳುಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವುದಕ್ಕೆ ಎದ್ದರೆ, 17ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಯೆಹೋವ ದೇವರ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ಹಾಗು ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು. 18ನ್ಯಾಯಾಧಿಪತಿಗಳು ಕೂಲಂಕಷವಾಗಿ ವಿಚಾರಣೆ ಮಾಡಬೇಕು. ಆಗ ಇಗೋ, ಆ ಸಾಕ್ಷಿಯು ಸುಳ್ಳುಸಾಕ್ಷಿಯಾಗಿದ್ದರೆ, ಅಂದರೆ ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ, 19ಅವನು ತನ್ನ ಸಹೋದರನಿಗೆ ಮಾಡುವುದಕ್ಕೆ ಯೋಚಿಸಿದ ಪ್ರಕಾರವೇ ಅವನಿಗೆ ಶಿಕ್ಷೆ ಕೊಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. 20ಆಗ ಉಳಿದವರು ಕೇಳಿ ಭಯಪಟ್ಟು, ಆ ದುಷ್ಟಕೃತ್ಯವನ್ನು ಇನ್ನು ಮುಂದೆ ನಿಮ್ಮ ಮಧ್ಯದಲ್ಲಿ ಮಾಡದಿರುವರು. 21ನೀವು ಅಂಥವರಿಗೆ ಕರುಣೆ ತೋರಿಸಬಾರದು, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಂದ ತೆಗೆದುಬಿಡಬೇಕು.
Currently Selected:
ಧರ್ಮೋಪದೇಶಕಾಂಡ 19: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.