ಧರ್ಮೋಪದೇಶಕಾಂಡ 13
13
ಇತರ ದೇವರುಗಳನ್ನು ಆರಾಧಿಸುವುದು
1ನಿಮ್ಮ ಮಧ್ಯೆ ಯಾವ ಪ್ರವಾದಿಯೇ ಆಗಲಿ, ಕನಸುಗಾರನೇ ಆಗಲಿ, ಎದ್ದು ಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆ ಮಾಡಿ, 2“ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ,” ಎಂದು ಬೋಧಿಸಬಹುದು. ಆ ಬೋಧನೆಯನ್ನು ರುಜುವಾತುಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಸಹ ಹೇಳಬಹುದು. 3ಅವನು ಹೇಳಿದಂತೆಯೇ ಅದು ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸುತ್ತೀರೋ ಇಲ್ಲವೋ ಎಂಬುದನ್ನು ಕಂಡುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ. 4ನಿಮ್ಮ ದೇವರಾದ ಯೆಹೋವ ದೇವರನ್ನೇ ಅನುಸರಿಸಿ, ಅವರಿಗೆ ಭಯಪಟ್ಟು, ಅವರ ಆಜ್ಞೆಗಳನ್ನು ಕಾಪಾಡಿ, ಅವರ ಮಾತನ್ನು ಕೇಳಿ, ಅವರ ಸೇವೆಮಾಡುತ್ತಾ ಅವರನ್ನೇ ಅಂಟಿಕೊಳ್ಳಬೇಕು. 5ಆ ಪ್ರವಾದಿಯನ್ನು, ಕನಸು ಕಾಣುವವನಿಗೆ ಮರಣದಂಡನೆ ವಿಧಿಸಬೇಕು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ದಾಸತ್ವದಿಂದ ನಿಮ್ಮನ್ನು ವಿಮೋಚಿಸಿದ ನಿಮ್ಮ ದೇವರಾದ ಯೆಹೋವ ದೇವರಿಂದ ತಿರುಗುವಂತೆ ಮತ್ತು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಡೆಯಲು ಆಜ್ಞಾಪಿಸಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸುವಂತೆ ಅವನು ಮಾತನಾಡಿದ್ದಾನೆ. ಹೀಗೆ ನೀವು ಕೆಟ್ಟದ್ದನ್ನು ನಿಮ್ಮಿಂದ ತೆಗೆದುಹಾಕಬೇಕು.
6ನಿನ್ನ ಸಹೋದರನಾಗಲಿ, ಮಗನಾಗಲಿ, ಮಗಳಾಗಲಿ, ಪ್ರೀತಿಯ ಹೆಂಡತಿಯಾಗಲಿ, ಪ್ರಾಣ ಸ್ನೇಹಿತನಾಗಲಿ, “ನೀವೂ, ನಿಮ್ಮ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು 7ನಿಮಗೆ ಸಮೀಪವಾಗಲಿ, ನಿಮಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯವರೆಗೆ ನಿಮ್ಮ ಸುತ್ತಲಿರುವ ಜನರ ದೇವರುಗಳನ್ನು ಸೇವಿಸೋಣ,” ಎಂದು ನಿಮ್ಮನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ, 8ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು. 9ಆ ಶಿಕ್ಷೆಯನ್ನು ನಡೆಸುವಾಗ ತಪ್ಪು ಕಂಡವನೇ ಮೊದಲು ಕಲ್ಲು ಎಸೆಯಬೇಕು, ತರುವಾಯ ಜನರೆಲ್ಲರೂ ಎಸೆಯಲಿ. 10ಗುಲಾಮಗಿರಿಯಲ್ಲಿದ್ದ ನಿಮ್ಮನ್ನು ಬಿಡುಗಡೆ ಮಾಡಿ, ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಯೆಹೋವ ದೇವರ ಆಶ್ರಯದಿಂದ ಅಂಥವರು ನಿಮ್ಮನ್ನು ತಪ್ಪಿಸಬೇಕೆಂದು ಇದ್ದುದರಿಂದ, ಅಂಥವರನ್ನು ಕಲ್ಲು ಎಸೆದು ಕೊಲ್ಲಬೇಕು. 11ಇಸ್ರಾಯೇಲರೆಲ್ಲಾ ಇದನ್ನು ಕೇಳಿ ಭಯಪಟ್ಟು, ಇನ್ನು ಮೇಲೆ ಕೆಟ್ಟದ್ದನ್ನು ಮಾಡದೆ ಇರುವರು.
12ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಸಮಾಡುವುದಕ್ಕೆ ಕೊಡುವ ಯಾವುದಾದರೂ ಪಟ್ಟಣದಲ್ಲಿ 13ದುಷ್ಟಜನರು ಎದ್ದು ತಮ್ಮ ಪಟ್ಟಣದಲ್ಲಿರುವ ಜನರನ್ನು, “ನೀವು ತಿಳಿಯದಿರುವ ಇತರ ದೇವರುಗಳನ್ನು ಪೂಜಿಸೋಣ ಬನ್ನಿರಿ,” ಎಂದು ಹೇಳಿ ದುರ್ಮಾಗಕ್ಕೆ ಎಳೆದಿದ್ದಾರೆ ಎಂಬ ಸುದ್ದಿ ನಿಮಗೆ ತಿಳಿಸಿದರೆ, 14ನೀವು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು. ಆ ಕಾರ್ಯವು ನಿಶ್ಚಯವಾಗಿ ಸತ್ಯವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ, 15ಆ ಊರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅದನ್ನೂ, ಅದರಲ್ಲಿರುವ ಎಲ್ಲದನ್ನೂ, ಅದರ ಪಶುಗಳನ್ನೂ ಸಹ ಶಪಿಸಿ ಖಡ್ಗದಿಂದ ನಿರ್ಮೂಲ ಮಾಡಬೇಕು. 16ಇದಲ್ಲದೆ ಆ ಊರಿನ ಎಲ್ಲಾ ಸಾಮಗ್ರಿಗಳನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ, ಆ ಪಟ್ಟಣವನ್ನೂ, ಅದರ ಎಲ್ಲಾ ವಸ್ತುವನ್ನೂ ಸಂಪೂರ್ಣವಾಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಯಾಗಿ ಸುಟ್ಟುಬಿಡಬೇಕು. ಅದು ಎಂದಿಗೂ ಹಾಳುದಿಬ್ಬವಾಗಿರಬೇಕು; ಇನ್ನು ಮೇಲೆ ಅದನ್ನು ಕಟ್ಟಬಾರದು; ಆ ಶಾಪಗ್ರಸ್ತ ವಸ್ತುಗಳಲ್ಲಿ ಏನನ್ನೂ ತೆಗೆದುಕೊಳ್ಳಬಾರದು. 17ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕಾಪಾಡಿ, 18ನಿಮ್ಮ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಾಗ ಯೆಹೋವ ದೇವರು ತಮ್ಮ ಕೋಪವನ್ನು ಬಿಟ್ಟು, ತಿರುಗಿ ನಿಮಗೆ ದಯೆಯನ್ನು ತೋರಿಸಿ, ನಿಮ್ಮ ಮೇಲೆ ಕನಿಕರಪಟ್ಟು, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು.
Currently Selected:
ಧರ್ಮೋಪದೇಶಕಾಂಡ 13: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.