ದಾನಿಯೇಲ 6
6
ದಾನಿಯೇಲನು ಸಿಂಹಗಳ ಗವಿಯಲ್ಲಿ
1ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವುದಕ್ಕೋಸ್ಕರ ನೂರಿಪ್ಪತ್ತು ಮಂದಿ ಉಪರಾಜರನ್ನು ಆಯಾ ರಾಜ್ಯದ ಆಯಾ ಭಾಗಗಳ ಮೇಲೆ ಆಳಲು ಇರಿಸಿದನು. 2ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವುದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ನಷ್ಟವಾಗದಂತೆ ಲೆಕ್ಕ ಒಪ್ಪಿಸಲಾಯಿತು. ಇವರಲ್ಲಿ ದಾನಿಯೇಲನು ಒಬ್ಬನಾಗಿದ್ದನು. 3ಈ ದಾನಿಯೇಲನಲ್ಲಿ ಉತ್ತಮ ಯೋಗ್ಯತೆಗಳು ಇದ್ದುದರಿಂದ ಅವನು ಉಪರಾಜರಿಗಿಂತಲೂ, ದೇಶಾಧಿಪತಿಗಿಂತಲೂ ಶ್ರೇಷ್ಠನಾಗಿದ್ದನು. ಈ ಕಾರಣದಿಂದ ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಉದ್ದೇಶಿಸಿದ್ದನು. 4ಹೀಗಿರಲು ಉಪರಾಜರೂ, ದೇಶಾಧಿಪತಿಗಳೂ ರಾಜ್ಯಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪು ಹೊರಿಸುವುದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ನಿರ್ಲಕ್ಷ್ಯತೆ ಇಲ್ಲದಿರುವುದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು. 5ಆಗ ಆ ಮನುಷ್ಯರು, “ಈ ದಾನಿಯೇಲನ ಮೇಲೆ ತಪ್ಪು ಹೊರಿಸಬೇಕಾದರೆ ಇವನ ದೇವರ ಹಾಗೂ ಧರ್ಮದ ಮೂಲಕವೇ ಹೊರತು ಇನ್ನಾವುದರಲ್ಲೂ ನಮಗೆ ಅವಕಾಶ ದೊರಕದು,” ಎಂದುಕೊಂಡರು.
6ಆಗ ಉಪರಾಜರೂ, ದೇಶಾಧಿಪತಿಯೂ ಅರಸನ ಬಳಿಯಲ್ಲಿ ಕೂಡಿಬಂದು, “ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು. 7ರಾಜ್ಯದ ಎಲ್ಲಾ ದೇಶಾಧಿಪತಿಗಳೂ, ರಾಜ್ಯಪಾಲರೂ, ನಾಯಕರೂ, ಉಪರಾಜರೂ, ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನೆಂದರೆ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ಪ್ರಾರ್ಥನೆ ಮಾಡಿದ್ದಾದರೆ ಅಂಥವರು ಸಿಂಹಗಳ ಗವಿಗೆ ಹಾಕಲಾಗುವುದು ಎಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆಯನ್ನು ಕೊಡತಕ್ಕದ್ದು. 8ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ, ಇದು ಬದಲಾಗದ ಮೇದ್ಯರ ಮತ್ತು ಪಾರಸಿಯರ ನಿಯಮಗಳ ಪ್ರಕಾರ ಇದು ರದ್ದಾಗದಂತೆ ನಿರ್ಣಯವನ್ನು ರೂಪಿಸಿ, ಶಾಸನಕ್ಕೆ ರುಜುಹಾಕು,” ಎಂದು ವಿನಂತಿಸಿದರು. 9ಆದಕಾರಣ ದಾರ್ಯಾವೆಷನು ಆ ಬರಹಕ್ಕೂ, ನಿರ್ಣಯಕ್ಕೂ ರುಜು ಹಾಕಿದನು.
10ಶಾಸನಕ್ಕೆ ರುಜು ಹಾಕಿದ್ದಾಯಿತೆಂದು ದಾನಿಯೇಲನಿಗೆ ತಿಳಿದಾಗ, ಅವನು ತನ್ನ ಮನೆಗೆ ಹೋದನು. ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆದಿರಲು, ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ, ಸ್ತೋತ್ರವನ್ನೂ ಸಲ್ಲಿಸಿದನು. 11ಆಮೇಲೆ ಆ ಮನುಷ್ಯರೆಲ್ಲಾ ಕೂಡಿಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಮಾಡುತ್ತಿರುವುದನ್ನು ಕಂಡರು. 12ಅನಂತರ ಅವರು ಅರಸನ ಮುಂದೆ ಬಂದು ರಾಜಾಜ್ಞೆಯ ವಿಷಯವಾಗಿ: “ಅರಸನೇ ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡುವರೋ, ಅವರನ್ನು ಸಿಂಹದ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀನು ರುಜು ಹಾಕಲಿಲ್ಲವೇ?” ಎಂದರು.
ಅದಕ್ಕೆ ಅರಸನು ಉತ್ತರವಾಗಿ, “ಮೇದ್ಯ, ಪಾರಸಿಯರ ಬದಲಾಗದಂಥ ಧರ್ಮವಿಧಿಗಳ ಪ್ರಕಾರ ಅದು ಸ್ಥಿರವಾದ ನಿಬಂಧನೆ” ಎಂದನು.
13ಆಗ ಅವರು ಉತ್ತರವಾಗಿ ಅರಸನ ಮುಂದೆ, “ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ, ನೀನು ರುಜು ಹಾಕಿದ ನಿರ್ಣಯವನ್ನೂ ಲಕ್ಷಿಸದೆ, ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ,” ಎಂದರು. 14ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ, ಆಗ ತನ್ನಲ್ಲಿಯೇ ಬಹಳವಾಗಿ ಬೇಸರಗೊಂಡು ದಾನಿಯೇಲನನ್ನು ಅದರಿಂದ ತಪ್ಪಿಸಬೇಕೆಂದು ತನ್ನ ಹೃದಯದಲ್ಲಿ ತಿಳಿದು, ಸೂರ್ಯಾಸ್ತಮಾನದವರೆಗೂ ಪ್ರಯತ್ನಪಟ್ಟನು.
15ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿಬಂದು ಅರಸನಿಗೆ, “ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ, ಆಜ್ಞೆಯಾದರೂ ರದ್ದಾಗಬಾರದು ಎಂಬ ಮೇದ್ಯ ಮತ್ತು ಪಾರಸಿಯರ ನಿಯಮದಲ್ಲಿದೆ ಎಂದು ನಿನಗೆ ತಿಳಿದಿರಬೇಕು,” ಎಂದರು.
16ಆಗ ರಾಜನು ಆಜ್ಞಾಪಿಸಲು, ಅವರು ದಾನಿಯೇಲನನ್ನು ತಂದು ಸಿಂಹದ ಗುಹೆಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ, “ನೀನು ಯಾವಾಗಲೂ ಸೇವಿಸುವ ನಿನ್ನ ದೇವರು ನಿನ್ನನ್ನು ಕಾಪಾಡಲಿ!” ಎಂದು ಹೇಳಿದನು.
17ಗುಹೆಯ ಬಾಯಿಯನ್ನು ಬಂಡೆಯಿಂದ ಮುಚ್ಚಲಾಯಿತು. ಇದಲ್ಲದೆ ದಾನಿಯೇಲನ ಪರಿಸ್ಥಿತಿಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನೂ, ತನ್ನ ಪ್ರಧಾನರ ಮುದ್ರೆಯನ್ನೂ ಅದಕ್ಕೆ ಹಾಕಿದನು. 18ಆಮೇಲೆ ಅರಸನು ತನ್ನ ಅರಮನೆಗೆ ಹಿಂದಿರುಗಿ, ಉಪವಾಸದಿಂದಲೇ ರಾತ್ರಿಯನ್ನು ಕಳೆದನು. ಗಾನ, ವಾದ್ಯಗಳನ್ನು ಅವನ ಮುಂದೆ ತರಲಿಲ್ಲ. ಅರಸನಿಗೆ ನಿದ್ರೆ ಬರಲಿಲ್ಲ.
19ಮುಂಜಾನೆಗೆ ಮೊದಲೇ ಅರಸನು ಎದ್ದು, ತ್ವರೆಯಾಗಿ ಸಿಂಹಗಳ ಗವಿಯ ಬಳಿಗೆ ಹೋದನು. 20ಅವನು ಗವಿಯ ಹತ್ತಿರ ಬಂದಾಗ, ದುಃಖದ ಧ್ವನಿಯಲ್ಲಿ ದಾನಿಯೇಲನನ್ನು ಕೂಗಿದನು. ಅರಸನು ಮಾತನಾಡಿ ದಾನಿಯೇಲನಿಗೆ, “ಜೀವಸ್ವರೂಪರಾದ ದೇವರ ಸೇವಕನಾದ ದಾನಿಯೇಲನೇ, ನೀನು ಯಾವಾಗಲೂ ಸೇವಿಸುವ ಆ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಬಿಡಿಸಿ ಕಾಪಾಡಲು ಸಮರ್ಥರಾಗಿದ್ದಾರೆಯೇ?” ಎಂದು ಕೇಳಿದನು.
21ಆಗ ದಾನಿಯೇಲನು ಅರಸನಿಗೆ, “ಅರಸನೇ, ನೀನು ನಿರಂತರವಾಗಿ ಬಾಳು. 22ನನ್ನ ದೇವರು ತಮ್ಮ ದೂತನನ್ನು ಕಳುಹಿಸಿ, ನನಗೆ ಯಾವ ಹಾನಿಯೂ ಆಗದಂತೆ ಸಿಂಹಗಳ ಬಾಯಿಗಳನ್ನು ಮುಚ್ಚಿಹಾಕಿದ್ದಾರೆ. ಏಕೆಂದರೆ ಅವರ ಮುಂದೆ ನಾನು ಯಥಾರ್ಥನೆಂದು ಗೋಚರವಾಗಿದ್ದೇನೆ. ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ತಪ್ಪನ್ನು ಮಾಡಲಿಲ್ಲ,” ಎಂದು ಹೇಳಿದನು.
23ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗುಹೆಯೊಳಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆಮಾಡಿದನು. ದಾನಿಯೇಲನನ್ನು ಗುಹೆಯೊಳಗಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಅವನು ದೃಢವಾದ ಭರವಸೆ ಇಟ್ಟಿದ್ದರಿಂದ ಯಾವ ಹಾನಿಯೂ ಆಗಿರಲಿಲ್ಲ.
24ಆಗ ಅರಸನು ಆಜ್ಞಾಪಿಸಲಾಗಿ, ದಾನಿಯೇಲನ ಮೇಲೆ ತಪ್ಪು ಹೊರಿಸಿದ್ದ ಮನುಷ್ಯರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗುಹೆಯಲ್ಲಿ ಹಾಕಿದರು. ಅವರು ಗುಹೆಯ ತಳವನ್ನು ಮುಟ್ಟುವುದಕ್ಕೆ ಮೊದಲೇ ಸಿಂಹಗಳು ಅವರ ಮೇಲೆ ಹಾರಿ ಬಂದು, ಅವರ ಎಲುಬುಗಳನ್ನೆಲ್ಲಾ ತುಂಡುತುಂಡಾಗಿ ಮುರಿದುಹಾಕಿದವು.
25ಆಗ ಅರಸನಾದ ದಾರ್ಯಾವೆಷನು ಭೂಲೋಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ, ಭಾಷೆಗಳವರೆಗೆ ಬರೆದದ್ದೇನೆಂದರೆ,
“ನೀವು ಅಪಾರವಾಗಿ ಸಮೃದ್ಧಿಗೊಳ್ಳಿರಿ.
26“ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯನು ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂಬ ನಿರ್ಣಯ ಹೊರಡಿಸಿದ್ದೇನೆ.
“ಅವರೇ ಜೀವವುಳ್ಳ ದೇವರಾಗಿದ್ದು,
ಎಂದೆಂದಿಗೂ ಸ್ಥಿರವಾಗಿರುವವರಾಗಿದ್ದಾರೆ.
ಅವರ ರಾಜ್ಯವು ನಾಶವಾಗದೆ,
ಅವರ ಆಳ್ವಿಕೆ ಶಾಶ್ವತವಾಗಿ ನಿಲ್ಲುವುದು.
27ಅವರೇ ಉದ್ಧರಿಸುವವರೂ ರಕ್ಷಿಸುವವರೂ ಆಗಿದ್ದು,
ಪರಲೋಕದಲ್ಲಿಯೂ ಭೂಲೋಕದಲ್ಲಿಯೂ
ಅದ್ಭುತ ಮಹತ್ತುಗಳನ್ನು ನಡೆಸುತ್ತಾರೆ.
ದಾನಿಯೇಲನನ್ನು ಸಿಂಹಗಳ ಸಾಮರ್ಥ್ಯದಿಂದ
ಬಿಡಿಸಿದವರೂ ಅವರೇ!”
28ಹೀಗೆ ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ, ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಸಮೃದ್ಧವಾಗಿ ಬಾಳಿದನು.
Currently Selected:
ದಾನಿಯೇಲ 6: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.