ಅಪೊಸ್ತಲರ ಕೃತ್ಯಗಳು 9
9
ಸೌಲನ ಪರಿವರ್ತನೆ
1ಇಷ್ಟರಲ್ಲಿ, ಸೌಲನು ಕರ್ತ ಯೇಸುವಿನ ಶಿಷ್ಯರನ್ನು ಕೊಲೆಮಾಡುವ ಬೆದರಿಕೆಯನ್ನು ಹಾಕುತ್ತಲೇ ಇನ್ನೂ ಮುಂದುವರೆದನು. ಮಹಾಯಾಜಕನ ಬಳಿಗೆ ಹೋಗಿ, 2ಈ ಮಾರ್ಗಕ್ಕೆ ಸಂಬಂಧಪಟ್ಟ ಪುರುಷರಾಗಲಿ ಸ್ತ್ರೀಯರಾಗಲಿ ದಮಸ್ಕದಲ್ಲಿದ್ದರೆ ಅವರನ್ನು ತಾನು ಬಂಧಿಸಿ ಯೆರೂಸಲೇಮಿಗೆ ತರಲಿಕ್ಕಾಗುವಂತೆ ದಮಸ್ಕದಲ್ಲಿಯ ಸಭಾಮಂದಿರಗಳಿಗೆ ಕೊಡಲು ಮಹಾಯಾಜಕನಿಂದ ಪತ್ರ ಪಡೆದುಕೊಂಡನು. 3ಸೌಲನು ಪ್ರಯಾಣ ಮಾಡುತ್ತಾ ದಮಸ್ಕಕ್ಕೆ ಸಮೀಪ ಬಂದಾಗ, ಫಕ್ಕನೆ ಪರಲೋಕದಿಂದ ಒಂದು ಬೆಳಕು ಅವನ ಸುತ್ತಲೂ ಹೊಳೆಯಿತು. 4ಅವನು ನೆಲದ ಮೇಲೆ ಬೀಳಲು, “ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?” ಎಂದು ಹೇಳುವ ವಾಣಿಯನ್ನು ಕೇಳಿಸಿಕೊಂಡನು.
5“ಸ್ವಾಮಿ, ತಾವು ಯಾರು?” ಎಂದು ಸೌಲನು ಪ್ರಶ್ನಿಸಲು,
“ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು. 6ಎದ್ದೇಳು ಪಟ್ಟಣದೊಳಗೆ ಹೋಗು, ನೀನು ಏನು ಮಾಡಬೇಕು ಎಂಬುದನ್ನು ಅಲ್ಲಿ ನಿನಗೆ ತಿಳಿಸಲಾಗುವುದು,” ಎಂದು ಕರ್ತ ಯೇಸು ಹೇಳಿದರು.
7ಸೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು ಮೂಕರಂತೆ ನಿಂತುಕೊಂಡರು. ಅವರಿಗೆ ಧ್ವನಿ ಕೇಳಿಸಿತೇ ಹೊರತು ಯಾರೂ ಕಾಣಲಿಲ್ಲ. 8ಸೌಲನು ನೆಲದಿಂದ ಎದ್ದ ಮೇಲೆ ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಅವರು ಅವನ ಕೈಹಿಡಿದು ದಮಸ್ಕದೊಳಗೆ ಕರೆದುಕೊಂಡು ಹೋದರು. 9ಮೂರು ದಿನ ಅವನು ಕುರುಡನಾಗಿದ್ದನು. ಅವನು ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ.
10ದಮಸ್ಕದಲ್ಲಿ ಅನನೀಯ ಎಂಬ ಹೆಸರಿನ ಶಿಷ್ಯನಿದ್ದನು. ದರ್ಶನದಲ್ಲಿ ಕರ್ತ ಯೇಸುವು ಅವನನ್ನು, “ಅನನೀಯಾ!” ಎಂದು ಕರೆದರು.
“ಇಗೋ, ಇದ್ದೇನೆ ಸ್ವಾಮಿ,” ಎಂದು ಅವನು ಉತ್ತರಕೊಟ್ಟನು.
11ಕರ್ತ ಯೇಸುವು ಅವನಿಗೆ, “ನೀನೆದ್ದು ‘ನೇರ ಬೀದಿ’ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬುವನನ್ನು ವಿಚಾರಿಸು. ಅವನು ಪ್ರಾರ್ಥನೆ ಮಾಡುತ್ತಿದ್ದಾನೆ. 12ತನ್ನ ದೃಷ್ಟಿ ಪುನಃ ಬರುವಂತೆ ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ಬಂದು ತನ್ನ ಮೇಲೆ ಕೈಗಳನ್ನಿಡುವುದನ್ನು ಅವನು ದರ್ಶನದಲ್ಲಿ ಕಂಡಿದ್ದಾನೆ,” ಎಂದು ಹೇಳಿದರು.
13ಆಗ ಅನನೀಯನು, “ಸ್ವಾಮಿ, ಈ ಮನುಷ್ಯನ ಬಗ್ಗೆ ಬಹಳ ಕೇಳಿದ್ದೇನೆ. ಯೆರೂಸಲೇಮಿನಲ್ಲಿ ನಿಮ್ಮ ಭಕ್ತರಿಗೆ ಬಹಳ ಕೇಡು ಮಾಡಿದ್ದಾನೆ. 14ಇಲ್ಲಿ ನಿಮ್ಮ ಹೆಸರನ್ನು ಹೇಳಿಕೊಳ್ಳುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕನಿಂದ ಅಧಿಕಾರದ ಪತ್ರ ಪಡೆದು ಬಂದಿದ್ದಾನೆ,” ಎಂದು ಉತ್ತರಕೊಟ್ಟನು.
15ಆದರೆ ಕರ್ತ ಯೇಸುವು ಅವನಿಗೆ, “ಹೋಗು! ಯೆಹೂದ್ಯರಲ್ಲದವರಿಗೂ ಅವರ ಅರಸುಗಳಿಗೂ ಇಸ್ರಾಯೇಲ್ ದೇಶಕ್ಕೂ ನನ್ನ ಹೆಸರನ್ನು ಪ್ರಸಿದ್ಧಿಪಡಿಸಲು ಅವನು ನಾನು ಆಯ್ದುಕೊಂಡ ಸಾಧನವಾಗಿದ್ದಾನೆ. 16ನನ್ನ ಹೆಸರಿನ ನಿಮಿತ್ತವಾಗಿ ಅವನು ಎಷ್ಟು ಕಷ್ಟಪಡಬೇಕೆಂಬುದನ್ನು ನಾನು ಅವನಿಗೆ ತೋರಿಸುವೆನು,” ಎಂದು ಹೇಳಿದರು.
17ಆಮೇಲೆ ಅನನೀಯನು ಆ ಮನೆಗೆ ಹೋಗಿ ಒಳಗೆ ಪ್ರವೇಶಿಸಿದನು. ತನ್ನ ಕೈಗಳನ್ನು ಸೌಲನ ಮೇಲಿಟ್ಟು, “ಸಹೋದರ ಸೌಲನೇ, ನೀನು ಇಲ್ಲಿಗೆ ಬರುತ್ತಿದ್ದಾಗ ದಾರಿಯಲ್ಲಿ ನಿನಗೆ ದರ್ಶನಕೊಟ್ಟ ಕರ್ತ ಯೇಸು, ನಿನಗೆ ಪುನಃ ದೃಷ್ಟಿ ಬರುವಂತೆಯೂ ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದು ಹೇಳಲು, 18ತಕ್ಷಣವೇ, ಸೌಲನ ಕಣ್ಣುಗಳಿಂದ ಪರೆ ಕಳಚಿದಂತಾಗಿ ಅವನಿಗೆ ಪುನಃ ದೃಷ್ಟಿ ಬಂದಿತು. ಅವನು ಎದ್ದು ದೀಕ್ಷಾಸ್ನಾನವನ್ನು ಪಡೆದುಕೊಂಡನು. 19ತರುವಾಯ ಊಟಮಾಡಿ ಚೇತರಿಸಿಕೊಂಡನು. ಆಗ ಅವನು ಎದ್ದು ನಿಲ್ಲಲು ಶಕ್ತನಾದನು.
ಸೌಲನು ದಮಸ್ಕದಲ್ಲಿ ಹಾಗೂ ಯೆರೂಸಲೇಮಿನಲ್ಲಿ
ದಮಸ್ಕದಲ್ಲಿ ಶಿಷ್ಯರೊಂದಿಗೆ ಸೌಲನು ಹಲವಾರು ದಿನಗಳನ್ನು ಕಳೆದನು. 20ತಡಮಾಡದೆ, ಯೇಸುವೇ “ದೇವಪುತ್ರ” ಎಂದು ಸಭಾಮಂದಿರಗಳಲ್ಲಿ ಸಾರಲು ಪ್ರಾರಂಭಿಸಿದನು. 21ಅವನ ಮಾತುಗಳನ್ನು ಕೇಳಿದವರಿಗೆ ಅತ್ಯಾಶ್ಚರ್ಯವಾಯಿತು. ಅವರು, “ಈ ಹೆಸರನ್ನು ಹೇಳುವವರೆಲ್ಲರಿಗೆ ಯೆರೂಸಲೇಮಿನಲ್ಲಿ ತೊಂದರೆಕೊಟ್ಟು ಗೊಂದಲವೆಬ್ಬಿಸಿದವನು ಇವನೇ ಅಲ್ಲವೇ? ಅಂಥವರನ್ನು ಸೆರೆಹಿಡಿದು ಮುಖ್ಯಯಾಜಕರ ಬಳಿಗೆ ಎಳೆದೊಯ್ಯಲು ಇಲ್ಲಿಗೆ ಬಂದವನಲ್ಲವೇ?” ಎಂದು ಪ್ರಶ್ನಿಸಿಕೊಂಡರು. 22ಆದರೂ ಸೌಲನು ಹೆಚ್ಚೆಚ್ಚು ಸಾಮರ್ಥ್ಯವುಳ್ಳವನಾಗಿ ಯೇಸುವೇ ಕ್ರಿಸ್ತ ಆಗಿದ್ದಾರೆಂದು ರುಜುವಾತುಪಡಿಸುತ್ತಾ ದಮಸ್ಕದ ನಿವಾಸಿಗಳಾದ ಯೆಹೂದ್ಯರನ್ನು ಗಲಿಬಿಲಿಗೆ ಒಳಪಡಿಸಿದನು.
23ಅನೇಕ ದಿನಗಳ ತರುವಾಯ, ಸೌಲನನ್ನು ಕೊಲ್ಲಲು ಯೆಹೂದ್ಯರು ರಹಸ್ಯವಾಗಿ ಯೋಚಿಸಿದರು. 24ಆದರೆ ಅವರ ಯೋಚನೆ ಸೌಲನಿಗೆ ತಿಳಿಯಿತು. ಅವರು ಅವನನ್ನು ಕೊಲ್ಲುವುದಕ್ಕಾಗಿ ಹಗಲಿರುಳು ಪಟ್ಟಣದ ದ್ವಾರಗಳ ಬಳಿಯಲ್ಲಿ ಹೊಂಚುಹಾಕುತ್ತಿದ್ದರು. 25ಆದರೆ ಸೌಲನ ಅನುಯಾಯಿಗಳು ರಾತ್ರಿಯಲ್ಲಿ ಅವನನ್ನು ಕರೆದುಕೊಂಡು ಹೋಗಿ, ಬುಟ್ಟಿಯಲ್ಲಿ ಕುಳ್ಳಿರಿಸಿ, ಗೋಡೆಯ ಕಿಟಿಕಿಯ ಮುಖಾಂತರ ಹೊರಗೆ ಕೆಳಗಿಳಿಸಿದರು.
26ಸೌಲನು ಯೆರೂಸಲೇಮಿಗೆ ಬಂದು, ಶಿಷ್ಯರ ಜೊತೆಯಲ್ಲಿರಲು ಪ್ರಯತ್ನಿಸಿದನು. ಆದರೆ ಅವನು ನಿಜವಾಗಿಯೂ ಶಿಷ್ಯನೆಂದು ನಂಬದೆ ಅವರು ಅವನಿಗೆ ಭಯಪಟ್ಟಿದ್ದರು. 27ಬಾರ್ನಬನು ಅವನನ್ನು ಕರೆದುಕೊಂಡು ಅಪೊಸ್ತಲರ ಬಳಿಗೆ ಬಂದನು. ಸೌಲನು ಪ್ರಯಾಣ ಮಾಡುತ್ತಿದ್ದಾಗ ಅವನಿಗೆ ಕರ್ತ ಯೇಸು ದರ್ಶನವಾದದ್ದನ್ನೂ ಕರ್ತ ಯೇಸು ಅವನೊಂದಿಗೆ ಮಾತನಾಡಿದ್ದನ್ನೂ ಯಾವ ಭಯವಿಲ್ಲದೆ ದಮಸ್ಕದಲ್ಲಿ ಯೇಸುವಿನ ಹೆಸರಿನಲ್ಲಿ ಅವನು ಬೋಧಿಸಿದ್ದನ್ನೂ ಬಾರ್ನಬನು ತಿಳಿಸಿದನು. 28ಹೀಗೆ ಸೌಲನು ಅಪೊಸ್ತಲರೊಂದಿಗೆ ಇದ್ದು ಯೆರೂಸಲೇಮಿನಲ್ಲಿ ಆತಂಕವಿಲ್ಲದೆ ತಿರುಗಾಡಿ ಕರ್ತ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿದನು. 29ಗ್ರೀಕ್ ಮಾತನಾಡುವ ಯೆಹೂದ್ಯರೊಂದಿಗೆ ಅವನು ಮಾತನಾಡಿ ಚರ್ಚೆಮಾಡಿದಾಗ, ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. 30ಸಹೋದರರಿಗೆ ಈ ಸುದ್ದಿ ತಿಳಿದಾಗ, ಅವರು ಸೌಲನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
31ಆ ಸಮಯದಲ್ಲಿ ಯೂದಾಯ, ಗಲಿಲಾಯ, ಸಮಾರ್ಯದಲ್ಲೆಲ್ಲಾ ಇದ್ದ ಸಭೆಯು ಸಮಾಧಾನ ಹೊಂದಿತು. ಸಭೆ ಬಲಗೊಂಡು ಪವಿತ್ರಾತ್ಮರಿಂದ ಧೈರ್ಯಹೊಂದಿ ಸಂಖ್ಯೆಯಲ್ಲಿ ವೃದ್ಧಿಸುತ್ತಾ, ಕರ್ತ ಯೇಸುವಿನ ಭಯದಲ್ಲಿ ಮುನ್ನಡೆಯಿತು.
ಐನೇಯನು ಮತ್ತು ದೊರ್ಕಳು
32ಪೇತ್ರನು ಬೇರೆ ಬೇರೆ ಕಡೆಗಳಲ್ಲಿ ಪ್ರಯಾಣಮಾಡಿದ ತರುವಾಯ ಲುದ್ದದಲ್ಲಿಯ ದೇವಭಕ್ತರನ್ನು ಸಂದರ್ಶಿಸಲು ಹೋದನು. 33ಅಲ್ಲಿ ಐನೇಯ ಎಂಬ ಹೆಸರಿನ ಒಬ್ಬಾತನನ್ನು ಸಂದರ್ಶಿಸಿದನು. ಅವನು ಪಾರ್ಶ್ವವಾಯು ರೋಗ ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದನು. 34ಪೇತ್ರನು ಅವನಿಗೆ, “ಐನೇಯ, ಕ್ರಿಸ್ತ ಯೇಸುವು ನಿನ್ನನ್ನು ಗುಣಪಡಿಸುತ್ತಾರೆ. ಏಳು, ನಿನ್ನ ಹಾಸಿಗೆಯನ್ನು ಸುತ್ತಿಡು,” ಎಂದು ಹೇಳಲು, ತಕ್ಷಣವೇ ಐನೇಯ ಮೇಲಕ್ಕೆದ್ದನು. 35ಲುದ್ದ ಹಾಗೂ ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಕರ್ತ ಯೇಸುವಿನ ಕಡೆಗೆ ತಿರುಗಿಕೊಂಡರು.
36ಯೊಪ್ಪ ಎಂಬಲ್ಲಿ ತಬಿಥಾ ಎಂಬ ಹೆಸರಿನ ದೇವಭಕ್ತೆ ಇದ್ದಳು. ಈ ಹೆಸರಿನ ಗ್ರೀಕ್ ಭಾಷಾಂತರ “ದೊರ್ಕ” ಎಂದಾಗುತ್ತದೆ. ಆಕೆ ಬಡವರಿಗೆ ಸಹಾಯ ಮಾಡುತ್ತಾ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಿದ್ದಳು. 37ಆ ಸಮಯದಲ್ಲಿ ಆಕೆ ಅಸ್ವಸ್ಥಳಾಗಿ ಸತ್ತುಹೋದಳು. ಆಕೆಯ ಶವಕ್ಕೆ ಸ್ನಾನಮಾಡಿಸಿ, ಅದನ್ನು ಮೇಲೆ ಮಾಳಿಗೆಯ ಕೋಣೆಯಲ್ಲಿ ಇಟ್ಟರು. 38ಲುದ್ದ ಊರು ಯೊಪ್ಪ ಊರಿಗೆ ಸಮೀಪದಲ್ಲಿತ್ತು. ಪೇತ್ರನು ಲುದ್ದದಲ್ಲಿರುವುದು ದೇವ ಭಕ್ತರಿಗೆ ತಿಳಿಯಲು ಅವರು, “ಕೂಡಲೇ ಬರಬೇಕು,” ಎಂದು ಹೇಳಿ ಅವನನ್ನು ಕರೆದುಕೊಂಡು ಬರಲು ಇಬ್ಬರನ್ನು ಕಳುಹಿಸಿದರು.
39ಅವರೊಂದಿಗೆ ಪೇತ್ರನು ಹೊರಟನು. ಅವನು ಬಂದಾಗ ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ವಿಧವೆಯರು ಅವನ ಸುತ್ತಲೂ ನಿಂತುಕೊಂಡು ದೊರ್ಕಳು ಜೀವದಿಂದ ಇದ್ದಾಗ ಆಕೆ ಸಿದ್ಧಪಡಿಸಿದ ನಿಲುವಂಗಿಗಳನ್ನು ಇತರ ಬಟ್ಟೆಗಳನ್ನು ಅವನಿಗೆ ತೋರಿಸುತ್ತಾ ಕಣ್ಣೀರಿಟ್ಟರು.
40ಪೇತ್ರನು ಅವರೆಲ್ಲರನ್ನು ಕೋಣೆಯಿಂದ ಹೊರಗೆ ಕಳುಹಿಸಿ, ಮೊಣಕಾಲೂರಿ ಪ್ರಾರ್ಥನೆಮಾಡಿ ಮೃತ ಸ್ತ್ರೀಯ ಕಡೆಗೆ ತಿರುಗಿಕೊಂಡು, “ತಬಿಥಾ, ಏಳು,” ಎಂದು ಹೇಳಿದನು. ಆಕೆ ತನ್ನ ಕಣ್ಣು ತೆರೆದು ಪೇತ್ರನನ್ನು ಕಂಡು ಎದ್ದು ಕುಳಿತುಕೊಂಡಳು. 41ಪೇತ್ರನು ಆಕೆಯ ಕೈಯನ್ನು ಹಿಡಿದು ಆಕೆ ಎದ್ದು ನಿಂತುಕೊಳ್ಳುವಂತೆ ಮಾಡಿದನು. ಅನಂತರ ದೇವಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ಆಕೆಯನ್ನು ಅವರಿಗೆ ಒಪ್ಪಿಸಿಕೊಟ್ಟನು. 42ಈ ವಿಷಯ ಯೊಪ್ಪದಲ್ಲಿದ್ದವರೆಲ್ಲರಿಗೂ ತಿಳಿಯಿತು. ಕರ್ತ ಯೇಸುವಿನಲ್ಲಿ ಅನೇಕರು ವಿಶ್ವಾಸವನ್ನಿಟ್ಟರು. 43ಪೇತ್ರನು ಯೊಪ್ಪದಲ್ಲಿ ಸೀಮೋನ ಎಂಬ ಹೆಸರಿನ ಚರ್ಮಕಾರನೊಂದಿಗೆ ಕೆಲವು ದಿನ ಇದ್ದನು.
Currently Selected:
ಅಪೊಸ್ತಲರ ಕೃತ್ಯಗಳು 9: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.