Bible App logo
Search Icon

2 ಸಮುಯೇಲ 23

23
ದಾವೀದನ ಕಡೆಯ ಮಾತುಗಳು
1ದಾವೀದನ ಕಡೆಯ ಮಾತುಗಳು:
“ಇಷಯನ ಮಗ ದಾವೀದನ ನುಡಿಗಳಿವು:
ಉನ್ನತವಾಗಿ ಸಾಗಿದ ಪುರುಷನು
ಯಾಕೋಬನ ದೇವರಿಂದ ಅಭಿಷಿಕ್ತನಾದವನು,
ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನೆಂದರೆ:
2“ಯೆಹೋವ ದೇವರ ಆತ್ಮರು ನನ್ನ ಮೂಲಕ ಮಾತನಾಡಿದರು;
ಅವರ ನುಡಿ ನನ್ನ ಬಾಯಲ್ಲಿ ಇತ್ತು.
3ಇಸ್ರಾಯೇಲಿನ ದೇವರೂ,
ಇಸ್ರಾಯೇಲಿನ ಬಂಡೆಯಾದವರೂ ನನಗೆ ಮಾತನಾಡಿದ್ದು:
‘ಮನುಷ್ಯರ ಮೇಲೆ ನೀತಿಯಿಂದ ಆಳುವವನು,
ದೇವರ ಭಯದಿಂದ ಆಳುವವನು.
4ಮೋಡವಿಲ್ಲದ ಮುಂಜಾನೆ
ಸೂರ್ಯೋದಯದ ಸಮಯದಲ್ಲಿಯ ಉದಯದ ಬೆಳಕಿನಂತಿರುವನು.
ಭೂಮಿಯಿಂದ ಹುಲ್ಲು ಮೊಳೆಯಿಸುವ
ಮಳೆಯ ನಂತರದ ಪ್ರಕಾಶದಂತಿರುವನು.’
5“ನನ್ನ ಮನೆ ದೇವರೊಂದಿಗೆ ಸರಿಯಾಗಿರದಿದ್ದರೆ,
ನಿಶ್ಚಯವಾಗಿಯೂ ಅವರು ನನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿರಲಿಲ್ಲ,
ಪ್ರತಿಯೊಂದು ವಿಭಾಗದಲ್ಲಿಯೂ ವ್ಯವಸ್ಥೆಗೊಳಿಸಲಾಗಿದೆ ಮತ್ತು ಭದ್ರಪಡಿಸಲಾಗಿದೆ.
ದೇವರು ನಿಶ್ಚಯವಾಗಿಯೂ ನನ್ನ ರಕ್ಷಣೆಯನ್ನು ಪೂರ್ತಿಗೊಳಿಸುವುದಿಲ್ಲ.
ದೇವರು ನನ್ನ ಎಲ್ಲಾ ಅಪೇಕ್ಷೆಗಳನ್ನು ಪೂರೈಸುವುದಿಲ್ಲ.
6ಆದರೆ ದುಷ್ಟಜನರೆಲ್ಲರು ಕೈಗಳಿಂದ ಕೂಡಿಸದೆ,
ಎಸೆದುಬಿಡುವ ಮುಳ್ಳಿನಂತೆ ಇದ್ದಾರೆ.
7ಮುಳ್ಳುಗಳನ್ನು ಮುಟ್ಟುವವರು ಕಬ್ಬಿಣದ ಆಯುಧ ಉಪಯೋಗಿಸುವರು,
ಇಲ್ಲವೆ ಈಟಿಯ ಮೊನೆಯನ್ನು ಉಪಯೋಗಿಸುವರು.
ಅವು ಬೀಳುವ ಸ್ಥಳದಲ್ಲಿ ಸುಟ್ಟುಹೋಗುವುವು.”
ದಾವೀದನ ಪರಾಕ್ರಮಶಾಲಿಗಳು
8ದಾವೀದನ ಪರಾಕ್ರಮಶಾಲಿಗಳ ಹೆಸರುಗಳು ಇವೇ:
ಮೂರು ಜನ ಮುಖ್ಯಸ್ಥರಲ್ಲಿ ಒಬ್ಬನು ತಹ್ಕೆಮೋನ್ಯನಾದ ಯೋಷೆಬ್ ಬಷ್ಷೆಬೆತ ಎಂಬವನು; ಇವನು ತನ್ನ ಈಟಿಯಿಂದ ಎಂಟುನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.
9ಇವನ ತರುವಾಯ ಅಹೋಹ್ಯನಾಗಿರುವ ದೋದೋ ಎಂಬವನ ಮಗನಾಗಿರುವ ಎಲಿಯಾಜರನು; ಇವನು ಇಸ್ರಾಯೇಲ್ ಜನರು ಓಡಿ ಹೋದ ತರುವಾಯ ಯುದ್ಧಕ್ಕೆ ಕೂಡಿಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು. 10ಎಲಿಯಾಜರನು ಎದ್ದು ಖಡ್ಗ ಹಿಡಿದ ತನ್ನ ಕೈ ದಣಿದು ಮರಗಟ್ಟಿ ಹೋಗುವವರೆಗೂ ಫಿಲಿಷ್ಟಿಯರನ್ನು ಸಂಹರಿಸುತ್ತಿದ್ದನು. ಆ ದಿನ ಯೆಹೋವ ದೇವರು ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ಸೈನಿಕರು ಸುಲಿದುಕೊಳ್ಳುವುದಕ್ಕೆ ಮಾತ್ರ ಅವನ ಹಿಂದೆ ಹಿಂದಿರುಗಿದರು.
11ಇವನ ತರುವಾಯ ಹರಾರ್ಯನಾದ ಆಗೇಯನ ಮಗನಾದ ಶಮ್ಮನು; ಅಲಸಂದಿಯಿಂದ ತುಂಬಿರುವ ಹೊಲದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿಬಂದಾಗ, ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು. 12ಆದರೆ ಅವನು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದುಹಾಕಿ ಹೊಲವನ್ನು ಕಾಪಾಡಿದನು, ಹೀಗೆ ಯೆಹೋವ ದೇವರು ಮಹಾಜಯವನ್ನು ಉಂಟುಮಾಡಿದರು.
13ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು. 14ದಾವೀದನು ಕೋಟೆ ಸ್ಥಳದಲ್ಲಿ ಇದ್ದನು, ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು. 15ಆಗ ದಾವೀದನು, “ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವವನ್ಯಾರು,” ಎಂದು ಬಹು ಆಶೆಯಿಂದ ಹೇಳಿದನು. 16ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ಅದನ್ನು ಅವನು ಕುಡಿಯದೇ ಯೆಹೋವ ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು. 17ಅವನು, “ಯೆಹೋವ ದೇವರೇ, ನಾನು ಇಂಥಾ ಕಾರ್ಯವನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ಇದು ತಮ್ಮ ಪ್ರಾಣದಾಶೆ ತೊರೆದ ಮನುಷ್ಯರ ರಕ್ತವಲ್ಲವೇ?” ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು.
ಇಂಥಾ ಮಹಾಕಾರ್ಯಗಳನ್ನು ಈ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
18ಯೋವಾಬನ ಸಹೋದರ ಚೆರೂಯಳ ಮಗ ಅಬೀಷೈಯನು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ, ಮೂವರಂತೆ ಹೆಸರುಗೊಂಡನು. 19ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು. ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.
20ಕಬ್ಜಯೇಲನ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದಾವನ ಮಗನೂ ಆದ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದನು. ಅವನು ಬಲಶಾಲಿಯಾದ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು. 21ಅವನು ಬಲಿಷ್ಠನಾದ ಒಬ್ಬ ಈಜಿಪ್ಟಿನವನನ್ನು ಹೊಡೆದುಬಿಟ್ಟನು. ಆ ಈಜಿಪ್ಟಿನವನ ಕೈಯಲ್ಲಿ ದಪ್ಪವಾದ ಒಂದು ಈಟಿ ಇದ್ದರೂ, ತಾನು ಒಂದು ಕೋಲು ಹಿಡಿದುಕೊಂಡು ಅವನ ಬಳಿಗೆ ಹೋಗಿ ಈಜಿಪ್ಟಿನವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು, ಅವನ ಈಟಿಯಿಂದಲೇ ಅವನನ್ನು ಕೊಂದುಹಾಕಿದನು. 22ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು. 23ಇವನು ಮೂವತ್ತು ಜನರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು. ಆದರೆ ಆ ಮೊದಲಿನ ಮೂರು ಮಂದಿಯಲ್ಲಿ ಅವನನ್ನು ಸೇರಿಸಲಾಗಲಿಲ್ಲ. ದಾವೀದನು ಅವನನ್ನು ತನ್ನ ಮೈಗಾವಲಿನವರ ಮೇಲೆ ಯಜಮಾನನನ್ನಾಗಿ ಇಟ್ಟನು.
24ಈ ಮೂವತ್ತು ಮಂದಿ ಯಾರೆಂದರೆ:
ಯೋವಾಬನ ಸಹೋದರನಾದ ಅಸಾಯೇಲನು,
ಬೇತ್ಲೆಹೇಮ್ ಊರಿನ ದೋದೋವಿನ ಮಗ ಎಲ್ಹನಾನನು;
25ಹರೋದಿನವನಾದ ಶಮ್ಮನು;
ಹರೋದಿನವನಾದ ಎಲೀಕನು;
26ಪೆಲೆಟಿನವನಾದ ಹೆಲೆಚನು;
ತೆಕೋವದ ಇಕ್ಕೇಷನ ಮಗನಾದ ಈರನು;
27ಅನಾತೋತಿನವನಾದ ಅಬೀಯೆಜೆರನು;
ಹುಷಾ ಊರಿನವನಾದ ಮೆಬುನೈ,
28ಅಹೋಹ್ಯನಾದ ಚಲ್ಮೋನನು;
ನೆಟೋಫದವನಾದ ಮಹರೈ;
29ನೆಟೋಫದವನಾದ ಬಾಣನ ಮಗ ಹೆಲೇಬ್,
ಬೆನ್ಯಾಮೀನ್ಯರಿಗೆ ಸೇರಿದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಇತ್ತೈ;
30ಪಿರಾತೋನ್ಯನಾದ ಬೆನಾಯನು;
ಹೊಳೆಗಳುಳ್ಳ ಗಾಷ್ ಊರಿನವನಾದ ಹಿದ್ದೈ;
31ಅರಾಬಾ ತಗ್ಗಿನವನಾದ ಅಬೀ ಅಲ್ಬೋನನು;
ಬಹರೂಮ್ಯನಾದ ಅಜ್ಮಾವೆತನು;
32ಶಾಲ್ಬೋನ್ಯನಾದ ಎಲೆಯಖ್ಬಾನು;
ಯಾಷೇನನ ಪುತ್ರರಲ್ಲಿ ಒಬ್ಬನು
ಯೋನಾತಾನನು; 33ಹರಾರ್ಯನಾದ ಶಮ್ಮನು;
ಹರಾರ್ಯನಾದ ಶಾರಾರನ ಮಗ ಅಹೀಯಾಮ್;
34ಮಾಕಾ ಊರಿನ ಅಹಸ್ಬೈ ಎಂಬುವನ ಮಗನಾದ ಎಲೀಫೆಲೆಟನು;
ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್;
35ಕರ್ಮೇಲ್ಯನಾದ ಹೆಚ್ರೋ;
ಅರ್ಬಿಯನಾದ ಪಾರೈ;
36ಹಗ್ರೀಯನ ಮಗನಾದ
ಚೋಬ ಊರಿನವನಾದ ನಾತಾನನ ಮಗ ಇಗಾಲನು, ಗಾದ್ಯನಾದ ಬಾನೀ.
37ಅಮ್ಮೋನಿಯನಾದ ಚೆಲೆಕನು;
ಚೆರೂಯಳ ಮಗನಾದ ಯೋವಾಬನ ಆಯುಧವಾಹಕನು ಆಗಿದ್ದ ಬೇರೋತ್ಯನಾದ ನಹರೈ;
38ಯೆತೆರಿಯನಾದ ಈರನು;
ಯೆತೆರಿಯನಾದ ಗಾರೇಬನು;
39ಹಿತ್ತಿಯನಾದ ಊರೀಯನು.
ಹೀಗೆ ಇವರು ಸೇರಿ ಒಟ್ಟು ಮೂವತ್ತೇಳು ಮಂದಿ ರಣಧೀರರಿದ್ದರು.

Currently Selected:

2 ಸಮುಯೇಲ 23: KSB

Highlight

Copy

Compare

Share

None

Want to have your highlights saved across all your devices? Sign up or sign in