Bible App logo
Search Icon

2 ಸಮುಯೇಲ 18

18
1ದಾವೀದನು ತನ್ನ ಸಂಗಡದಲ್ಲಿದ್ದ ಜನರನ್ನು ಲೆಕ್ಕ ಮಾಡಿ, ಅವರ ಮೇಲೆ ಸಾವಿರ ಜನರಿಗೂ, ನೂರು ಜನರಿಗೂ ಅಧಿಪತಿಗಳನ್ನು ನೇಮಿಸಿದನು. 2ದಾವೀದನು ಜನರಲ್ಲಿ ಮೂರನೆಯ ಪಾಲನ್ನು ಯೋವಾಬನಿಗೂ, ಎರಡನೆಯ ಪಾಲನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆಗಿರುವ ಅಬೀಷೈಗೂ, ಮೂರನೆಯ ಪಾಲನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿದನು. ತರುವಾಯ ಅರಸನು ಸೈನಿಕರಿಗೆ, “ನಾನೂ ನಿಮ್ಮ ಸಂಗಡ ಹೊರಟು ಬರುತ್ತೇನೆ,” ಎಂದನು.
3ಆದರೆ ಸೈನಿಕರು ಅವನಿಗೆ, “ನೀನು ನಮ್ಮ ಸಂಗಡ ಬರಬೇಡ. ಏಕೆಂದರೆ ನಾವು ಓಡಿ ಹೋದರೂ ಅವರು ನಮ್ಮನ್ನು ಲಕ್ಷಿಸುವುದಿಲ್ಲ. ನೀನಾದರೆ ನಮ್ಮಲ್ಲಿ ಹತ್ತು ಸಾವಿರ ಜನಕ್ಕೆ ಸಮನಾಗಿದ್ದೀ. ಈಗ ನೀನು ಊರಿನಲ್ಲಿದ್ದು, ನಮಗೆ ಸಹಾಯವಾಗಿರುವುದೇ ಉತ್ತಮ,” ಎಂದರು.
4ಆಗ ಅರಸನು ಅವರಿಗೆ, “ನಿಮಗೆ ಸರಿಕಾಣಿಸುವುದನ್ನು ಮಾಡುತ್ತೇನೆ,” ಎಂದನು.
ಅರಸನು ಬಾಗಿಲ ಬಳಿಯಲ್ಲಿ ನಿಂತನು. ಸೈನಿಕರೆಲ್ಲಾ ನೂರು ನೂರಾಗಿಯೂ, ಸಾವಿರ ಸಾವಿರಗಳಾಗಿಯೂ ಹೊರಟರು. 5ಅರಸನು ಯೋವಾಬನಿಗೂ, ಅಬೀಷೈಯಿಗೂ, ಇತ್ತೈಗೂ ಆಜ್ಞಾಪಿಸಿ, “ನನಗೋಸ್ಕರ ಯುವಕನಾದ ಅಬ್ಷಾಲೋಮನೊಂದಿಗೆ ಮೃದುವಾಗಿ ವರ್ತಿಸಿರಿ,” ಎಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಟ ಆಜ್ಞೆಯನ್ನು ಸೈನಿಕರೆಲ್ಲರೂ ಕೇಳಿದರು.
6ಅನಂತರ ಸೈನಿಕರು ಇಸ್ರಾಯೇಲಿಗೆ ವಿರೋಧವಾಗಿ ಹೊರಟರು. ಯುದ್ಧವು ಎಫ್ರಾಯೀಮ್ ಅಡವಿಯಲ್ಲಿತ್ತು. 7ಅಲ್ಲಿ ಇಸ್ರಾಯೇಲರು ದಾವೀದನ ಸೇವಕರ ಮುಂದೆ ಸಂಹಾರವಾದರು. 8ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು. ಇಪ್ಪತ್ತು ಸಾವಿರ ಸೈನಿಕರು ಸತ್ತರು. ಅಲ್ಲಿನ ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿನ ಸೈನಿಕರಲ್ಲಿ ಖಡ್ಗದಿಂದ ಹತರಾದವರಿಗಿಂತ ಕಾಡಿನಲ್ಲಿ ಹತರಾದವರೇ ಹೆಚ್ಚಾಗಿದ್ದರು.
9ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಅಬ್ಷಾಲೋಮನು ಹೇಸರಗತ್ತೆಯ ಮೇಲೆ ಏರಿದ್ದನು. ಆ ಹೇಸರಗತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ, ಅವನ ತಲೆಯು ಆ ಮರದ ಕೊಂಬೆಯಲ್ಲಿ ಸಿಕ್ಕಿಕೊಂಡಿತು. ಆದ್ದರಿಂದ ಅವನು ಹತ್ತಿದ್ದ ಹೇಸರಗತ್ತೆಯು ಹೊರಟುಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನೇತಾಡುವವನಾದನು.
10ಅದನ್ನು ಒಬ್ಬನು ಕಂಡು ಯೋವಾಬನಿಗೆ, “ಅಬ್ಷಾಲೋಮನು ಒಂದು ಏಲಾ ಮರದಲ್ಲಿ ತೂಗಾಡುವುದನ್ನು ಕಂಡೆನು,” ಎಂದನು.
11ಅದಕ್ಕೆ ಯೋವಾಬನು ತನಗೆ ಅದನ್ನು ತಿಳಿಸಿದವನಿಗೆ, “ನೀನು ಕಂಡು ಅವನನ್ನು ಏಕೆ ಕಡಿದು ನೆಲಕ್ಕೆ ಉರುಳಿಸಲಿಲ್ಲ? ನಾನು ನಿನಗೆ ಹತ್ತು ಬೆಳ್ಳಿ ನಾಣ್ಯಗಳನ್ನು, ಒಂದು ಬೆಳ್ಳಿ ನಡುಕಟ್ಟನ್ನು ಕೊಡುತ್ತಿದ್ದೆನು,” ಎಂದನು.
12ಆದರೆ ಆ ಮನುಷ್ಯನು ಯೋವಾಬನಿಗೆ, “ನೀನು ನನ್ನ ಕೈಯಲ್ಲಿ ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟರೂ, ನಾನು ಅರಸನ ಮಗನ ಮೇಲೆ ನನ್ನ ಕೈಚಾಚುವುದಿಲ್ಲ. ಏಕೆಂದರೆ, ‘ಅಬ್ಷಾಲೋಮನೆಂಬ ಯುವಕನೊಡನೆ ಸೌಮ್ಯದಿಂದ ನಡೆದು ಕಾಪಾಡಿರಿ,’ ಎಂದು ಅರಸನು ನಮ್ಮೆಲ್ಲರಿಗೆ ಕೇಳಿಸುವಂತೆ ನಿನಗೂ, ಅಬೀಷೈಯನಿಗೂ, ಇತ್ತೈಗೂ ಸ್ಪಷ್ಟವಾಗಿ ಆಜ್ಞಾಪಿಸಿದ್ದನು. 13ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಏಕೆ ಮೋಸಮಾಡಿಕೊಳ್ಳಬೇಕು. ಏಕೆಂದರೆ ಅರಸನಿಗೆ ಯಾವ ಕಾರ್ಯವೂ ಮರೆಯಾಗಿರುವುದಿಲ್ಲ. ನೀನೇ ನನಗೆ ವಿರೋಧವಾಗಿ ನಿಲ್ಲುವಿ,” ಎಂದನು.
14ಆಗ ಯೋವಾಬನು, “ನಾನು ಹೀಗೆ ನಿನ್ನ ಮುಂದೆ ಆಲಸ್ಯ ಮಾಡೆನು,” ಎಂದು ಹೇಳಿ, ಮೂರು ಈಟಿಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಅಬ್ಷಾಲೋಮನು ಇನ್ನೂ ಏಲಾ ಮರದ ಮಧ್ಯದಲ್ಲಿ ಜೀವದಿಂದಿರುವಾಗ, ಅವುಗಳನ್ನು ಅವನ ಹೃದಯದಲ್ಲಿ ತಿವಿದನು. 15ಆಗ ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯುವಕರು ಸುತ್ತಿಕೊಂಡು, ಅಬ್ಷಾಲೋಮನನ್ನು ಕೊಂದುಹಾಕಿದರು.
16ಆಗ ಯೋವಾಬನು ತುತೂರಿಯನ್ನು ಊದಿದ್ದರಿಂದ, ಸೈನಿಕರು ಇಸ್ರಾಯೇಲರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಿರುಗಿದರು. ಏಕೆಂದರೆ ಯೋವಾಬನು ಜನರನ್ನು ತಡೆದನು. 17ಅವರು ಅಬ್ಷಾಲೋಮನನ್ನು ತೆಗೆದುಕೊಂಡು, ಅಡವಿಯಲ್ಲಿರುವ ಒಂದು ದೊಡ್ಡ ಗುಂಡಿಯಲ್ಲಿ ಹಾಕಿ, ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆದರೆ ಇಸ್ರಾಯೇಲರೆಲ್ಲರೂ ತಮ್ಮ ಗುಡಾರಗಳಿಗೆ ಓಡಿಹೋದರು.
18ಅಬ್ಷಾಲೋಮನು ಜೀವದಿಂದಿರುವಾಗ, “ನನ್ನ ಹೆಸರನ್ನು ಜ್ಞಾಪಕಾರ್ಥವಾಗಿ ಉಳಿಸಲು ನನಗೆ ಮಗನಿಲ್ಲ,” ಎಂದು ಹೇಳಿ, ಅವನು ತಗ್ಗಿನಲ್ಲಿರುವ ಒಂದು ಕಲ್ಲಿನ ಸ್ತಂಭವನ್ನು ತರಿಸಿ, ಅದನ್ನು ಅರಸನ ಕಣಿವೆಯಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ, ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟಿದ್ದನು. ಅದು ಈ ದಿನದವರೆಗೂ ಅಬ್ಷಾಲೋಮನ ಸ್ಮಾರಕಸ್ತಂಭ ಎಂದು ಕರೆಯಲಾಗುತ್ತದೆ.
ದಾವೀದನು ಗೋಳಾಡಿದ್ದು
19ಆಗ ಚಾದೋಕನ ಮಗ ಅಹೀಮಾಚನು, “ಯೆಹೋವ ದೇವರು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾರೆಂಬ ವರ್ತಮಾನವನ್ನು ಅರಸನಿಗೆ ತಿಳಿಸುವ ಹಾಗೆ, ನಾನು ಓಡಿ ಹೋಗುವೆನು,” ಎಂದನು.
20ಆದರೆ ಯೋವಾಬನು ಅವನಿಗೆ, “ನೀನು ಈ ಹೊತ್ತು ವರ್ತಮಾನ ತೆಗೆದುಕೊಂಡು ಹೋಗಬೇಡ. ಮತ್ತೊಂದು ದಿವಸ ವರ್ತಮಾನ ತೆಗೆದುಕೊಂಡು ಹೋಗಬಹುದು. ಏಕೆಂದರೆ ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತೆಗೆದುಕೊಂಡು ಹೋಗಬೇಡ,” ಎಂದನು.
21ಯೋವಾಬನು ಕೂಷ್ಯ ದೇಶವಾಸಿಯಾದ ಒಬ್ಬನಿಗೆ, “ನೀನು ಹೋಗಿ ಕಂಡದ್ದನ್ನು ಅರಸನಿಗೆ ತಿಳಿಸು,” ಎಂದನು. ಕೂಷ್ಯ ದೇಶವಾಸಿ ಯೋವಾಬನಿಗೆ ಅಡ್ಡಬಿದ್ದು ಓಡಿಹೋದನು.
22ಆಗ ಚಾದೋಕನ ಮಗ ಅಹೀಮಾಚನು ಯೋವಾಬನಿಗೆ, ಏನೇ ಆಗಲಿ, “ನಾನು ಕೂಷ್ಯ ದೇಶವಾಸಿ ಹಿಂದೆ ಓಡಿಹೋಗುವ ಹಾಗೆ ಅಪ್ಪಣೆಕೊಡಬೇಕು,” ಎಂದನು.
ಅದಕ್ಕೆ ಯೋವಾಬನು, “ನನ್ನ ಮಗನೇ, ನೀನು ಏಕೆ ಹೋಗಲು ಬಯಸುತ್ತಿರುವೆ? ನಿನಗೆ ಪ್ರಶಸ್ತಿಯನ್ನು ತರುವ ಯಾವುದೇ ಸುದ್ದಿ ನಿನ್ನ ಬಳಿ ಇಲ್ಲ,” ಎಂದನು.
23ಅವನು, “ಏನೇ ಆಗಲಿ, ನಾನು ಓಡಿ ಹೋಗುತ್ತೇನೆ,” ಎಂದನು.
ಯೋವಾಬನು, “ಓಡು,” ಎಂದನು. ಆಗ ಅಹೀಮಾಚನು ಬಯಲು ಮಾರ್ಗವಾಗಿ ಓಡಿ ಕೂಷ್ಯನನ್ನು ದಾಟಿಹೋದನು.
24ದಾವೀದನು ಒಳಗಣ ಮತ್ತು ಹೊರಗಣ ಬಾಗಿಲುಗಳ ಮಧ್ಯದಲ್ಲಿ ಕುಳಿತಿದ್ದನು. ಕಾವಲುಗಾರನು ಗೋಪುರದ ಮಾಳಿಗೆಯ ಮೇಲೆ ಏರಿ, ಕಣ್ಣುಗಳನ್ನೆತ್ತಿ ನೋಡಲಾಗಿ, ಒಬ್ಬ ಮನುಷ್ಯನು ಒಂಟಿಯಾಗಿ ಓಡಿಬರುವುದನ್ನು ಕಂಡನು. 25ಆಗ ಕಾವಲುಗಾರನು ಕೂಗಿ ಅರಸನಿಗೆ ತಿಳಿಸಿದನು.
ಅರಸನು, “ಅವನು ಒಬ್ಬನಾಗಿ ಬಂದರೆ, ಅವನ ಬಳಿ ಒಳ್ಳೆಯ ಸಮಾಚಾರ ಇರುವುದು,” ಎಂದನು. ಅವನು ಬಂದು ಸಮೀಪಿಸಿದನು.
26ಕಾವಲುಗಾರನು ಬೇರೊಬ್ಬನು ಓಡಿಬರುವುದನ್ನು ಕಂಡು, ಬಾಗಿಲು ಕಾಯುವವನನ್ನು ಕರೆದು, “ಇಗೋ, ಮತ್ತೊಬ್ಬನು ಒಂಟಿಯಾಗಿ ಓಡಿ ಬರುತ್ತಿದ್ದಾನೆ,” ಎಂದನು.
ಅದಕ್ಕೆ ಅರಸನು, “ಅವನೂ ಸಹ ಒಳ್ಳೆಯ ಸಮಾಚಾರ ತೆಗೆದುಕೊಂಡು ಬರುತ್ತಾನೆ,” ಎಂದನು.
27ಕಾವಲುಗಾರನು, “ಮೊದಲನೆಯವನ ಓಟವು ಚಾದೋಕನ ಮಗ ಅಹೀಮಾಚನ ಓಟದ ಹಾಗೆ ಇರುವುದೆಂದು ನನಗೆ ಕಾಣುತ್ತದೆ,” ಎಂದನು.
ಅದಕ್ಕೆ ಅರಸನು, “ಅವನು ಒಳ್ಳೆಯವನು, ಒಳ್ಳೆಯ ಸಮಾಚಾರ ತರುತ್ತಾನೆ,” ಎಂದನು.
28ಆಗ ಅಹೀಮಾಚನು ಕೂಗಿ ಅರಸನಿಗೆ, “ಎಲ್ಲವೂ ಕ್ಷೇಮ,” ಎಂದು ಹೇಳಿ ಅರಸನ ಮುಂದೆ ಮೋರೆ ಕೆಳಗಾಗಿ, ನೆಲಕ್ಕೆ ಅಡ್ಡಬಿದ್ದು, “ಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಮನುಷ್ಯರನ್ನು ಒಪ್ಪಿಸಿಕೊಟ್ಟ ನಿಮ್ಮ ದೇವರಾದ ಯೆಹೋವ ದೇವರು ಸ್ತುತಿಹೊಂದಲಿ,” ಎಂದನು.
29ಅರಸನು, “ಯುವಕನಾದ ಅಬ್ಷಾಲೋಮನಿಗೆ ಕ್ಷೇಮವೋ?” ಎಂದು ಕೇಳಿದನು.
ಅದಕ್ಕೆ ಅಹೀಮಾಚನು ಉತ್ತರವಾಗಿ, “ಯೋವಾಬನು ಅರಸನ ಸೇವಕನನ್ನೂ, ನಿನ್ನ ಸೇವಕನಾದ ನನ್ನನ್ನೂ ಕಳುಹಿಸಿದಾಗ ದೊಡ್ಡ ಗೊಂದಲವನ್ನು ಕಂಡೆನು. ಆದರೆ ಅದು ಏನೋ ನಾನರಿಯೆ,” ಎಂದನು.
30ಅರಸನು, “ನೀನು ಇತ್ತಲಾಗಿ ಬಂದು ನಿಲ್ಲು,” ಎಂದನು. ಅವನು ಅತ್ತಲಾಗಿ ಹೋಗಿ ನಿಂತನು. ಆಗ ಕೂಷ್ಯನು ಬಂದನು.
31ಕೂಷ್ಯನು, “ಅರಸನಾದ ನನ್ನ ಒಡೆಯನಿಗೆ ಶುಭವರ್ತಮಾನ ಉಂಟು, ಏನೆಂದರೆ ಯೆಹೋವ ದೇವರು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು, ಸಮಸ್ತರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾರೆ,” ಎಂದನು.
32ಅರಸನು ಕೂಷ್ಯನಿಗೆ, “ಯುವಕನಾದ ಅಬ್ಷಾಲೋಮನಿಗೆ ಕ್ಷೇಮವೋ?” ಎಂದನು.
ಕೂಷ್ಯನು ಉತ್ತರವಾಗಿ, “ಅರಸನಾದ ನನ್ನ ಒಡೆಯನ ಶತ್ರುಗಳು ಕೇಡು ಮಾಡುವಂತೆ ನಿನಗೆ ವಿರೋಧವಾಗಿ ಏಳುವ ಸಮಸ್ತರಿಗೂ, ಆ ಯುವಕನಿಗಾದ ಹಾಗೆಯೇ ಆಗಲಿ,” ಎಂದನು.
33ಆಗ ಅರಸನು ನಡುಗುತ್ತಾ ಊರು ಬಾಗಿಲ ಮೇಲಿರುವ ಕೊಠಡಿಗೆ ಏರಿಹೋದನು. ಹೋಗುವಾಗ, “ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ,” ಎಂದು ಹೇಳಿ ಅತ್ತನು.

Currently Selected:

2 ಸಮುಯೇಲ 18: KSB

Highlight

Copy

Compare

Share

None

Want to have your highlights saved across all your devices? Sign up or sign in