2 ಪೂರ್ವಕಾಲ ವೃತ್ತಾಂತ 29
29
ಹಿಜ್ಕೀಯನು ದೇವಾಲಯವನ್ನು ಪವಿತ್ರಪಡಿಸಿದ್ದು
1ಹಿಜ್ಕೀಯನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಅಬೀಯಾ. ಅವಳು ಜೆಕರ್ಯನ ಮಗಳಾಗಿದ್ದಳು. 2ಅವನು ತನ್ನ ತಂದೆ ದಾವೀದನು ಮಾಡಿದ ಪ್ರಕಾರ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
3ಹಿಜ್ಕೀಯನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಯೆಹೋವ ದೇವರ ಆಲಯದ ಬಾಗಿಲುಗಳನ್ನು ತೆರೆದು, ಅವುಗಳನ್ನು ಭದ್ರಪಡಿಸಿದನು. 4ಇದಲ್ಲದೆ ಹಿಜ್ಕೀಯನು ಯಾಜಕರನ್ನೂ, ಲೇವಿಯರನ್ನೂ ಕರೆಕಳುಹಿಸಿ, ಅವರನ್ನು ಪೂರ್ವದಿಕ್ಕಿನ ಅಂಗಣದಲ್ಲಿ ಕೂಡಿಸಿಕೊಂಡು, ಅವರಿಗೆ ಹೇಳಿದ್ದೇನೆಂದರೆ, 5“ಲೇವಿಯರೇ, ನನ್ನ ಮಾತನ್ನು ಕೇಳಿರಿ. ನೀವು ನಿಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆಮಾಡಿ, ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ. 6ಏಕೆಂದರೆ ನಮ್ಮ ಪಿತೃಗಳು ಅಪನಂಬಿಗಸ್ತರಾಗಿ, ನಮ್ಮ ದೇವರಾದ ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ, ಅವರನ್ನು ಬಿಟ್ಟುಬಿಟ್ಟರು. ಇದಲ್ಲದೆ ಅವರು ಯೆಹೋವ ದೇವರ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ, ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ. 7ಇದಲ್ಲದೆ ಅವರು ದ್ವಾರಾಂಗಳದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ಆರಿಸಿ, ಇಸ್ರಾಯೇಲಿನ ದೇವರಿಗೆ ಪರಿಶುದ್ಧ ಸ್ಥಾನದಲ್ಲಿ ಧೂಪವನ್ನು ಸುಡದೆ, ದಹನಬಲಿಗಳನ್ನು ಅರ್ಪಿಸದೆ ಹೋದರು. 8ಆದ್ದರಿಂದ ಯೆಹೂದ ಮತ್ತು ಯೆರೂಸಲೇಮಿನವರ ಮೇಲೆ ಯೆಹೋವ ದೇವರು ಕೋಪಗೊಂಡು, ಅವುಗಳನ್ನು ಭಯಭೀತಿಗೂ, ಅಪಹಾಸ್ಯಗಳಿಗೂ ಆಸ್ಪದ ಮಾಡಿದ್ದಾರೆ. ಇದಕ್ಕೆ ನೀವೇ ಸಾಕ್ಷಿಗಳು. 9ಇದಕ್ಕೋಸ್ಕರ ನಮ್ಮ ಪಿತೃಗಳು ಖಡ್ಗದಿಂದ ಬಿದ್ದಿದ್ದಾರೆ. ನಮ್ಮ ಪುತ್ರ ಪುತ್ರಿಯರೂ, ನಮ್ಮ ಹೆಂಡತಿಯರೂ ಸೆರೆಯಲ್ಲಿದ್ದಾರೆ. 10ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಉಗ್ರಕೋಪವು ನಮ್ಮನ್ನು ಬಿಟ್ಟುಹೋಗುವ ಹಾಗೆ, ನಾನು ಅವರ ಸಂಗಡ ಒಡಂಬಡಿಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ. 11ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ. ಏಕೆಂದರೆ ತಮ್ಮ ಸಮ್ಮುಖದಲ್ಲಿ ನಿಲ್ಲುವುದಕ್ಕೂ, ತಮ್ಮನ್ನು ಸೇವಿಸುವುದಕ್ಕೂ, ತಮಗೆ ಸೇವಕರಾಗಿರುವುದಕ್ಕೂ, ತಮಗೆ ಧೂಪವನ್ನು ಸುಡುವುದಕ್ಕೂ ಯೆಹೋವ ದೇವರು ನಿಮ್ಮನ್ನು ಆಯ್ದುಕೊಂಡಿದ್ದಾರೆ,” ಎಂದನು.
12ಆಗ ಲೇವಿಯರು ಸೇವೆಗಾಗಿ ಮುಂದೆ ಬಂದರು:
ಕೊಹಾತ್ಯರಲ್ಲಿ
ಅಮಾಸೈಯನ ಮಗ ಮಹತ್, ಅಜರ್ಯನ ಮಗ ಯೋಯೇಲ್,
ಮೆರಾರೀಯರಲ್ಲಿ
ಅಬ್ದೀಯನ ಮಗ ಕೀಷ್, ಯೆಹಲ್ಲೆಲೇಲನ ಮಗ ಅಜರ್ಯ,
ಗೇರ್ಷೋನ್ಯರಲ್ಲಿ
ಜಿಮ್ಮನ ಮಗ ಯೋವಾಹ, ಯೋವಾಹನ ಮಗ ಏದೆನ್,
13ಎಲೀಚಾಫಾನ್ಯರಲ್ಲಿ
ಶಿಮ್ರೀ, ಯೆಹೀಯೇಲ್,
ಆಸಾಫ್ಯರಲ್ಲಿ
ಜೆಕರ್ಯ, ಮತ್ತನ್ಯ,
14ಹೇಮಾನ್ಯರಲ್ಲಿ
ಯೆಹೀಯೇಲ್, ಶಿಮ್ಮಿ;
ಯೆದುತೂನ್ಯರಲ್ಲಿ
ಶೆಮಾಯ ಹಾಗೂ ಉಜ್ಜೀಯೇಲ್.
15ಇವರು ಅರಸನ ಆಜ್ಞಾಧಾರಕರಾಗಿ ಯೆಹೋವ ದೇವರ ವಾಕ್ಯವನ್ನು ಅನುಸರಿಸಿ, ತಮ್ಮ ಸಹೋದರರನ್ನು ಕೂಡಿಸಿ, ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯವನ್ನು ಶುಚಿಮಾಡಲು ಬಂದರು. 16ಯಾಜಕರು ಯೆಹೋವ ದೇವರ ಆಲಯವನ್ನು ಶುದ್ಧಿಮಾಡಲು ಅದರ ಒಳಭಾಗವನ್ನು ಪ್ರವೇಶಿಸಿ, ಯೆಹೋವ ದೇವರ ಮಂದಿರದಲ್ಲಿ ಕಂಡ ಮೈಲಿಗೆಯನ್ನು ಯೆಹೋವ ದೇವರ ಆಲಯದ ಅಂಗಳದೊಳಗೆ ತಂದರು. ಆಗ ಲೇವಿಯರು ಅದನ್ನು ತೆಗೆದುಕೊಂಡು, ಕಿದ್ರೋನ್ ಹಳ್ಳದಲ್ಲಿ ಹಾಕಲು ಹೊರಗೆ ಒಯ್ದರು. 17ಅವರು ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಪ್ರತಿಷ್ಠೆ ಮಾಡಲು ಆರಂಭಿಸಿ, ಆ ತಿಂಗಳ ಎಂಟನೆಯ ದಿವಸದಲ್ಲಿ ಯೆಹೋವ ದೇವರ ದ್ವಾರಾಂಗಳದವರೆಗೂ ಬಂದರು. ಹೀಗೆಯೇ ಎಂಟು ದಿವಸಗಳಲ್ಲಿ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆಮಾಡಿ, ಅದನ್ನು ಮೊದಲನೆಯ ತಿಂಗಳಿನ ಹದಿನಾರನೆಯ ದಿವಸದಲ್ಲಿ ಮುಗಿಸಿದರು.
18ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರ ಆಲಯವನ್ನೆಲ್ಲಾ, ದಹನಬಲಿಪೀಠವನ್ನೂ, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನು, ಅದರ ಎಲ್ಲಾ ಪಾತ್ರೆಗಳನ್ನೂ ಶುದ್ಧಿಮಾಡಿದೆವು. 19ಇದಲ್ಲದೆ ಅರಸನಾದ ಆಹಾಜನು ಆಳಿದಾಗ, ದೇವದ್ರೋಹಿಯಾಗಿ ಬಿಸಾಡಿದ ಎಲ್ಲಾ ಸಲಕರಣೆಗಳನ್ನು ಪುನಃ ತಂದು ಪ್ರತಿಷ್ಠೆ ಮಾಡಿದೆವು. ಅವು ಯೆಹೋವ ದೇವರ ಬಲಿಪೀಠದ ಮುಂದೆ ಇವೆ,” ಎಂದು ಹೇಳಿದರು.
20ಆಗ ಅರಸನಾದ ಹಿಜ್ಕೀಯನು ಉದಯದಲ್ಲಿ ಎದ್ದು, ಪಟ್ಟಣದ ಪ್ರಧಾನರನ್ನು ಕೂಡಿಸಿ, ಯೆಹೋವ ದೇವರ ಆಲಯಕ್ಕೆ ಹೋದನು. 21ಅವರು ರಾಜ್ಯಕ್ಕೋಸ್ಕರವೂ, ಪರಿಶುದ್ಧ ಸ್ಥಾನಕ್ಕೋಸ್ಕರವೂ, ಯೆಹೂದಕ್ಕೋಸ್ಕರವೂ ದೋಷಪರಿಹಾರದ ಬಲಿಯಾಗಿ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ, ಏಳು ಕುರಿಮರಿಗಳನ್ನೂ, ಏಳು ಮೇಕೆಗಳನ್ನೂ ತಂದರು. ಆಗ ಅರಸನು ಯಾಜಕರಾದ ಆರೋನನ ಸಂತಾನದವರಿಗೆ ಯೆಹೋವ ದೇವರ ಬಲಿಪೀಠದ ಮೇಲೆ ಅವುಗಳನ್ನು ಅರ್ಪಿಸಲು ಹೇಳಿದನು. 22ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು, ಪೀಠದ ಮೇಲೆ ಚಿಮುಕಿಸಿದರು. ಟಗರುಗಳನ್ನು ವಧಿಸಿ ರಕ್ತವನ್ನು ಚಿಮುಕಿಸಿದರು. ಕುರಿಮರಿಗಳನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಅವುಗಳನ್ನು ವಧಿಸಿ, ರಕ್ತವನ್ನು ತೆಗೆದುಕೊಂಡು, ಬಲಿಪೀಠದ ಮೇಲೆ ಚಿಮುಕಿಸಿದರು. 23ಅರಸನ ಮುಂದೆಯೂ, ಸಭೆಯ ಮುಂದೆಯೂ ದೋಷಪರಿಹಾರದ ಬಲಿಗಾಗಿ ತಂದ ಹೋತಗಳನ್ನು ಹತ್ತಿರ ತೆಗೆದುಕೊಂಡು ಬಂದು, ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು. 24ಆಗ ಸಮಸ್ತ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತವಾಗಿ ಯಾಜಕರು ಅವುಗಳನ್ನು ವಧಿಸಿ, ಬಲಿಪೀಠದ ಮೇಲೆ ಅವುಗಳ ರಕ್ತದಿಂದ ಪಾಪ ನಿವಾರಣೆ ಮಾಡಿದರು. ದಹನಬಲಿಯೂ, ದೋಷಪರಿಹಾರದ ಬಲಿಯೂ ಸಮಸ್ತ ಇಸ್ರಾಯೇಲಿಗೋಸ್ಕರ ಆಗಬೇಕೆಂದು ಅರಸನು ಆಜ್ಞಾಪಿಸಿದನು.
25ಇದಲ್ಲದೆ ಅವನು ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನೂ ಹಿಡಿದ ಲೇವಿಯರನ್ನು ದಾವೀದನೂ, ಅರಸನ ದರ್ಶಿಯಾದ ಗಾದನೂ, ಪ್ರವಾದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ, ಯೆಹೋವ ದೇವರ ಆಲಯದಲ್ಲಿ ನಿಲ್ಲಿಸಿದನು. ಏಕೆಂದರೆ ಯೆಹೋವ ದೇವರ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹೀಗೆ ಇತ್ತು. 26ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿದ್ದರು.
27ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ, ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗಳಿಂದಲೂ ಯೆಹೋವ ದೇವರ ಹಾಡು ಆರಂಭವಾಯಿತು. 28ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ತನಕ ಹಾಡುಗಾರರು ಹಾಡಿದರು. ತುತೂರಿ ಊದುವವರು ಊದಿದರು.
29ಅವರು ಅರ್ಪಿಸುವುದು ತೀರಿಸಿದಾಗ ಅರಸನೂ, ಅವನ ಸಂಗಡ ಇದ್ದವರೆಲ್ಲರೂ ಮೊಣಕಾಲೂರಿ ಆರಾಧಿಸಿದರು. 30ಇದಲ್ಲದೆ ಅರಸನಾದ ಹಿಜ್ಕೀಯನೂ, ಪ್ರಧಾನರೂ ದಾವೀದನ ಮಾತುಗಳಿಂದಲೂ, ಆಸಾಫನ ಕೀರ್ತನೆಗಳಿಂದಲೂ ಯೆಹೋವ ದೇವರನ್ನು ಸ್ತುತಿಸಬೇಕೆಂದು ಲೇವಿಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಮೊಣಕಾಲೂರಿಕೊಂಡು ಆರಾಧಿಸಿದರು.
31ಹಿಜ್ಕೀಯನು ಅವರಿಗೆ ಉತ್ತರಕೊಟ್ಟು, “ಈಗ ನೀವು ನಿಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದರಿಂದ, ಸಮೀಪಕ್ಕೆ ಬಂದು ಬಲಿಗಳನ್ನೂ, ಸ್ತೋತ್ರ ಅರ್ಪಣೆಗಳನ್ನೂ ಯೆಹೋವ ದೇವರ ಆಲಯಕ್ಕೆ ತೆಗೆದುಕೊಂಡು ಬನ್ನಿರಿ,” ಎಂದನು. ಆಗ ಸಭೆಯವರು ಬಲಿಗಳನ್ನೂ, ಸ್ತೋತ್ರದ ಅರ್ಪಣೆಗಳನ್ನೂ ಮತ್ತು ಇಷ್ಟಪೂರ್ವಕ ಮನಸ್ಸುಳ್ಳವರು ದಹನಬಲಿಗಳನ್ನೂ ತಂದರು.
32ಸಭೆಯು ತಂದ ದಹನಬಲಿಗಳ ಲೆಕ್ಕವೇನೆಂದರೆ: ಎಪ್ಪತ್ತು ಹೋರಿಗಳು, ನೂರು ಟಗರುಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಯೆಹೋವ ದೇವರಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು. 33ಪ್ರತಿಷ್ಠೆ ಮಾಡಲಾದವುಗಳು ಆರುನೂರು ಹೋರಿಗಳೂ ಮೂರು ಸಾವಿರ ಕುರಿಗಳೂ ಮೇಕೆಗಳೂ ಇದ್ದವು. 34ಆದರೆ ಯಾಜಕರು ಸ್ವಲ್ಪ ಜನರಾಗಿದ್ದು, ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದುದರಿಂದ, ಕೆಲಸವು ತೀರುವವರೆಗೂ, ಮಿಕ್ಕ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವವರೆಗೂ ಲೇವಿಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಏಕೆಂದರೆ ಯಾಜಕರಿಗಿಂತ ತಮ್ಮನ್ನು ಪರಿಶುದ್ಧ ಮಾಡಿಕೊಳ್ಳುವುದರಲ್ಲಿ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು. 35ಇದಲ್ಲದೆ ದಹನಬಲಿಗಳೂ, ಸಮಾಧಾನದ ಬಲಿಗಳ ಕೊಬ್ಬೂ, ದಹನಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳವಾಗಿದ್ದವು.
ಹೀಗೆ ಯೆಹೋವ ದೇವರ ಆಲಯದ ಸೇವೆಯು ಸಿದ್ಧವಾಯಿತು. 36ಆಗ ದೇವರು ತಮ್ಮ ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ, ಜನರೆಲ್ಲರೂ ಸಂತೋಷಪಟ್ಟರು. ಏಕೆಂದರೆ ಈ ಕಾರ್ಯವು ತ್ವರೆಯಾಗಿ ನಡೆಯಿತು.
Currently Selected:
2 ಪೂರ್ವಕಾಲ ವೃತ್ತಾಂತ 29: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.