2 ಪೂರ್ವಕಾಲ ವೃತ್ತಾಂತ 14
14
1ಅಬೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು, ಅವನ ದಿವಸಗಳಲ್ಲಿ ಹತ್ತು ವರ್ಷ ದೇಶವು ಶಾಂತವಾಗಿತ್ತು.
ಯೆಹೂದ್ಯರ ಅರಸನಾದ ಆಸನು
2ಆಸನು ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನೂ, ಸರಿಯಾದದ್ದನ್ನೂ ಮಾಡಿದನು. 3ಅವನು ಅನ್ಯದೇವರುಗಳ ಬಲಿಪೀಠಗಳನ್ನೂ, ಉನ್ನತ ಪೂಜಾಸ್ಥಳಗಳನ್ನೂ ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅವುಗಳ ಅಶೇರ ಸ್ತಂಭಗಳನ್ನು ಕಡಿದುಹಾಕಿದನು. 4ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಹುಡುಕಲೂ, ನಿಯಮವನ್ನೂ, ಆಜ್ಞೆಯನ್ನೂ ಕೈಗೊಳ್ಳಲು ಯೆಹೂದ್ಯರಿಗೆ ಆಜ್ಞಾಪಿಸಿದನು. 5ಇದಲ್ಲದೆ ಅವನು ಉನ್ನತ ಪೂಜಾಸ್ಥಳಗಳನ್ನೂ, ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಶಾಂತವಾಗಿತ್ತು. 6ಇದಲ್ಲದೆ ಅವನು ಯೆಹೂದದಲ್ಲಿ ಕೋಟೆಗಳುಳ್ಳ ಪಟ್ಟಣಗಳನ್ನು ಕಟ್ಟಿದನು. ಏಕೆಂದರೆ ದೇಶವು ಶಾಂತವಾಗಿತ್ತು. ಯೆಹೋವ ದೇವರು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರ್ಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.
7ಅವನು ಯೆಹೂದದವರಿಗೆ, “ದೇಶವು ನಮ್ಮ ಮುಂದೆ ಇರುವಾಗ ಈ ಪಟ್ಟಣಗಳನ್ನು ಕಟ್ಟಿ, ಅವುಗಳ ಸುತ್ತಲೂ ಗೋಡೆಗಳನ್ನೂ, ಗೋಪುರಗಳನ್ನೂ, ಬಾಗಿಲುಗಳನ್ನೂ, ಅಗುಳಿಗಳನ್ನೂ ಮಾಡೋಣ. ಏಕೆಂದರೆ ನಾವು ನಮ್ಮ ದೇವರಾದ ಯೆಹೋವ ದೇವರನ್ನು ಹುಡುಕಿದೆವು. ನಾವು ಅವರನ್ನು ಹುಡುಕಿದ್ದರಿಂದ ಅವರು ಎಲ್ಲಾ ಕಡೆಯಲ್ಲಿಯೂ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದನು. ಹಾಗೆಯೇ ಅವರು ಸೈನ್ಯವನ್ನು ಕಟ್ಟಿ ವೃದ್ಧಿಹೊಂದಿದರು.
8ಇದಲ್ಲದೆ ಆಸನಿಗೆ ದೊಡ್ಡ ಗುರಾಣಿಗಳನ್ನೂ, ಈಟಿಗಳನ್ನೂ ಹಿಡಿಯುವ ಸೈನ್ಯವಿತ್ತು. ಯೆಹೂದದವರು ಮೂರು ಲಕ್ಷ ಮಂದಿಯೂ, ಬೆನ್ಯಾಮೀನವರಲ್ಲಿ ಚಿಕ್ಕ ಗುರಾಣಿಗಳನ್ನು ಹಿಡಿಯುವ, ಬಿಲ್ಲುಗಳನ್ನು ಎಸೆಯುವ ಎರಡು ಲಕ್ಷದ ಎಂಬತ್ತು ಸಾವಿರ ಮಂದಿಯೂ ಇದ್ದರು. ಇವರೆಲ್ಲರು ಪರಾಕ್ರಮಶಾಲಿ ಯುದ್ಧವೀರರಾಗಿದ್ದರು.
9ಆದರೆ ಕೂಷ್ಯನಾದ ಜೆರಹನು ಅವರಿಗೆ ವಿರೋಧವಾಗಿ ಹೊರಟು, ಮಾರೇಷಾದ ಮಟ್ಟಿಗೂ ಬಂದನು. ಅವನ ಸಂಗಡ ಹತ್ತು ಲಕ್ಷ ಜನ ಯುದ್ಧವೀರರೂ, ಮುನ್ನೂರು ರಥಗಳೂ ಇದ್ದವು. 10ಆಸನು ಅವನಿಗೆದುರಾಗಿ ಹೊರಟುಹೋದನು. ಮಾರೇಷಾದ ಬಳಿಯಲ್ಲಿ ಚೆಫಾತಾದ ತಗ್ಗಿನಲ್ಲಿ ವ್ಯೂಹ ಕಟ್ಟಿದರು.
11ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.
12ಆಗ ಯೆಹೋವ ದೇವರು ಕೂಷ್ಯರನ್ನು ಆಸನ ಮುಂದೆಯೂ, ಯೆಹೂದದವರ ಮುಂದೆಯೂ ಸೋಲುವಂತೆ ಮಾಡಿದರು. ಆದ್ದರಿಂದ ಕೂಷ್ಯರು ಓಡಿಹೋದರು. 13ಆಗ ಆಸನೂ, ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನವರೆಗೂ ಹಿಂದಟ್ಟಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೂಷ್ಯರು ಸೋತುಹೋದರು. ಅವರು ಯೆಹೋವ ದೇವರ ಮುಂದೆಯೂ, ಅವರ ಸೈನ್ಯದ ಮುಂದೆಯೂ ನಾಶವಾದರು. ಯೆಹೂದ್ಯರು ಬಹು ಕೊಳ್ಳೆಯನ್ನು ಒಯ್ದರು. 14ಇದಲ್ಲದೆ ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ವಶಪಡಿಸಿಕೊಂಡರು. ಯೆಹೋವ ದೇವರ ಭಯವು ಅವರ ಮೇಲೆ ಇತ್ತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದುದರಿಂದ, ಅವುಗಳನ್ನೆಲ್ಲಾ ವಶಪಡಿಸಿಕೊಂಡರು. 15ಪಶುಗಳಿದ್ದ ಡೇರೆಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂಸಲೇಮಿಗೆ ತಿರುಗಿ ಬಂದರು.
Currently Selected:
2 ಪೂರ್ವಕಾಲ ವೃತ್ತಾಂತ 14: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.