2 ಪೂರ್ವಕಾಲ ವೃತ್ತಾಂತ 10
10
ಇಸ್ರಾಯೇಲು ರೆಹಬ್ಬಾಮನ ವಿರೋಧವಾಗಿ ಎದ್ದದ್ದು
1ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವುದಕ್ಕೆ ಸಮಸ್ತ ಇಸ್ರಾಯೇಲರು ಶೆಕೆಮಿಗೆ ಬಂದರು. 2ಅರಸನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸವಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ಇದನ್ನು ಕೇಳಿದಾಗ, ಅವನು ಈಜಿಪ್ಟಿನಿಂದ ತಿರುಗಿಬಂದನು. 3ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲರೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ, 4“ನಿನ್ನ ತಂದೆಯು ನಮ್ಮ ನೊಗವನ್ನು ಭಾರವಾಗಿ ಮಾಡಿದನು. ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ, ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ, ನಾವು ನಿನಗೆ ಸೇವೆಮಾಡುತ್ತೇವೆ,” ಎಂದರು.
5ಅದಕ್ಕೆ ರೆಹಬ್ಬಾಮನು ಅವರಿಗೆ, “ಮೂರು ದಿವಸಗಳಾದ ತರುವಾಯ ತಿರುಗಿ ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದ್ದರಿಂದ ಜನರು ಹೊರಟು ಹೋದರು.
6ಆಗ ಅರಸನಾದ ರೆಹಬ್ಬಾಮನು, ತನ್ನ ತಂದೆ ಸೊಲೊಮೋನನು ಬದುಕಿರುವಾಗ, ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ಅವರಿಗೆ, “ನಾನು ಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
7ಅವರು ಅವನಿಗೆ, “ನೀನು ಈ ಜನರಿಗೆ ದಯವುಳ್ಳವನಾಗಿ ಅವರನ್ನು ಮೆಚ್ಚಿಸಿ, ಒಳ್ಳೆಯ ಮಾತುಗಳಿಂದ ಅವರಿಗೆ ಉತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು,” ಎಂದು ಹೇಳಿದರು.
8ಆದರೆ ರೆಹಬ್ಬಾಮನು, ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು, ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಕೇಳಿ, 9ಅವನು ಅವರಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಉತ್ತರ ಕೊಡಲು ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
10ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವನಿಗೆ, “ನಿನ್ನ ತಂದೆಯು ನಮ್ಮ ನೊಗವನ್ನು ಭಾರಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರುವುದು. 11ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು. ಆದರೆ ನಾನು ನಿಮ್ಮ ನೊಗವನ್ನು ಇನ್ನೂ ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಚೇಳು ಕೊರಡೆಗಳಿಂದ ಶಿಕ್ಷಿಸುವೆನು,’ ಎಂದು ನೀನು ಅವರಿಗೆ ಹೇಳು,” ಎಂದರು.
12ಆಗ, “ಮೂರನೆಯ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ” ಎಂದು ಅರಸನು ಹೇಳಿದ ಪ್ರಕಾರ ಮೂರನೆಯ ದಿವಸದಲ್ಲಿ ಯಾರೊಬ್ಬಾಮನೂ, ಸಮಸ್ತ ಜನರೂ ಅರಸನಾದ ರೆಹಬ್ಬಾಮನ ಬಳಿಗೆ ಬಂದರು. 13ಆದರೆ ಅರಸನು ಜನರಿಗೆ ಕಠಿಣವಾದ ಉತ್ತರವನ್ನು ಕೊಟ್ಟು, ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ನಿರಾಕರಿಸಿ, 14ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ, “ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗಿ ಮಾಡಿದನು. ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಶಿಕ್ಷಿಸಿದನು; ಆದರೆ ನಾನು ಮುಳ್ಳು ಕೊರಡೆಗಳಿಂದ ಶಿಕ್ಷಿಸುವೆನು,” ಎಂದನು. 15ಅರಸನು ಜನರ ಮಾತನ್ನು ಕೇಳದೆಹೋದದ್ದು ದೇವರಿಂದಲೇ. ಹೀಗೆ ಯೆಹೋವ ದೇವರು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ಈಡೇರುವುದಕ್ಕೆ ಕಾರಣವಾಯಿತು.
16ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲರು ತಿಳಿದಾಗ, ಜನರು ಅರಸನಿಗೆ ಉತ್ತರವಾಗಿ,
“ದಾವೀದನಲ್ಲಿ ನಮಗೆ ಭಾಗವೇನು?
ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು?
ಇಸ್ರಾಯೇಲರೇ, ನಿಮ್ಮ ಡೇರೆಗಳಿಗೆ ಹೋಗಿರಿ.
ದಾವೀದನೇ, ಈಗ ನಿನ್ನ ಕುಟುಂಬವನ್ನು ನೀನೇ ನೋಡಿಕೋ,”
ಎಂದು ಹೇಳಿ ಇಸ್ರಾಯೇಲರೆಲ್ಲರು ತಮ್ಮ ತಮ್ಮ ಡೇರೆಗಳಿಗೆ ಹೋದರು. 17ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.
18ಆಗ ರೆಹಬ್ಬಾಮನು ದಾಸರ ಮೇಲ್ವಿಚಾರಕನಾದ ಅದೋನೀರಾಮನನ್ನು#10:18 ಅದೋನೀರಾಮ ಅಥವಾ ಹದೋರಾಮ ಕಳುಹಿಸಿದನು. ಆದರೆ ಇಸ್ರಾಯೇಲರು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು. ಆದ್ದರಿಂದ ಅರಸನಾದ ರೆಹಬ್ಬಾಮನು ಆತುರಪಟ್ಟು ತನ್ನ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು. 19ಹೀಗೆ ಇಂದಿನವರೆಗೂ ಇಸ್ರಾಯೇಲರು ದಾವೀದನ ಕುಟುಂಬದವರೊಡನೆ ವಿರೋಧವಾಗಿ ತಿರುಗಿಬೀಳುತ್ತಲೇ ಇದ್ದಾರೆ.
Currently Selected:
2 ಪೂರ್ವಕಾಲ ವೃತ್ತಾಂತ 10: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.