Bible App logo
Search Icon

1 ಸಮುಯೇಲ 23

23
ದಾವೀದನು ಕೆಯೀಲಾ ನಗರನ್ನು ಉಳಿಸಿದ್ದು
1“ಫಿಲಿಷ್ಟಿಯರು ಕೆಯೀಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆ,” ಎಂದು ದಾವೀದನಿಗೆ ತಿಳಿಸಿದರು. 2ಆದ್ದರಿಂದ ದಾವೀದನು, “ನಾನು ಈ ಫಿಲಿಷ್ಟಿಯರನ್ನು ಹೊಡೆಯಲು ಹೋಗಲೋ?” ಎಂದು ಯೆಹೋವ ದೇವರನ್ನು ಕೇಳಿದನು.
ಅದಕ್ಕೆ ಯೆಹೋವ ದೇವರು, “ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯೀಲಾ ನಗರವನ್ನು ರಕ್ಷಿಸು,” ಎಂದರು.
3ಆಗ ದಾವೀದನ ಜನರು ಅವನಿಗೆ, “ಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ. ಆದರೆ ನಾವು ಫಿಲಿಷ್ಟಿಯರ ಸೈನ್ಯಗಳಿಗೆ ವಿರೋಧವಾಗಿ ಕೆಯೀಲಾ ನಗರಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವುದು,” ಎಂದರು.
4ದಾವೀದನು ತಿರುಗಿ ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು ಉತ್ತರವಾಗಿ, “ನೀನೆದ್ದು ಕೆಯೀಲಾ ನಗರಕ್ಕೆ ಹೋಗು; ಏಕೆಂದರೆ ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು. 5ಹಾಗೆಯೇ ದಾವೀದನೂ, ಅವನ ಜನರೂ ಎದ್ದು ಕೆಯೀಲಾ ನಗರಕ್ಕೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ, ಅವರ ಪಶುಗಳನ್ನು ಹಿಡಿದುಕೊಂಡು ಬಂದು, ಅವರನ್ನು ಪೂರ್ಣವಾಗಿ ಸೋಲಿಸಿದರು. ಈ ಪ್ರಕಾರ ದಾವೀದನು ಕೆಯೀಲಾ ನಗರದ ನಿವಾಸಿಗಳನ್ನು ರಕ್ಷಿಸಿದನು. 6ಅಹೀಮೆಲೆಕನ ಮಗ ಅಬಿಯಾತರನು ಕೆಯೀಲಾ ನಗರದಲ್ಲಿ ಇರುವ ದಾವೀದನ ಬಳಿಗೆ ಓಡಿ ಬಂದಾಗ, ಅವನ ಕೈಯಲ್ಲಿ ಏಫೋದು ಇತ್ತು.
ಸೌಲನು ದಾವೀದನನ್ನು ಹಿಂದಟ್ಟಿದ್ದು
7ದಾವೀದನು ಕೆಯೀಲಾ ನಗರಕ್ಕೆ ಬಂದಿದ್ದಾನೆ ಎಂಬ ವಿಷಯ ಸೌಲನಿಗೆ ಮುಟ್ಟಿತು. ಆಗ ಅವನು, “ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಏಕೆಂದರೆ ಅವನು ಬಾಗಿಲುಗಳೂ, ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಈಗ ತಪ್ಪಿಸಿಕೊಳ್ಳಲಾರನು,” ಎಂದುಕೊಂಡನು. 8ಆಗ ಸೌಲನು ದಾವೀದನನ್ನೂ, ಅವನ ಜನರನ್ನೂ ಮುತ್ತಿಕೊಳ್ಳಲು ತನ್ನ ಸೈನಿಕರನ್ನು ಯುದ್ಧಕ್ಕೆ ಹೋಗಲು ಕೆಯೀಲಾ ನಗರಕ್ಕೆ ಕರೆದನು.
9ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿದ್ದರಿಂದ ಯಾಜಕನಾದ ಅಬಿಯಾತರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದನು. 10ಆಗ ದಾವೀದನು, “ಇಸ್ರಾಯೇಲ್ ದೇವರಾದ ಯೆಹೋವ ದೇವರೇ, ಸೌಲನು ಕೆಯೀಲಾ ನಗರಕ್ಕೆ ಬಂದು, ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿಮ್ಮ ಸೇವಕನು ಖಂಡಿತವಾಗಿ ಕೇಳಿದನು. 11ಕೆಯೀಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿಮ್ಮ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ದಯಮಾಡಿ ಇದನ್ನು ನಿಮ್ಮ ಸೇವಕನಿಗೆ ತಿಳಿಸಿರಿ,” ಎಂದನು.
ಅದಕ್ಕೆ ಯೆಹೋವ ದೇವರು, “ಅವನು ಬರುವನು,” ಎಂದರು.
12ಅನಂತರ ದಾವೀದನು, “ಕೆಯೀಲಾ ಪಟ್ಟಣದವರು ನನ್ನನ್ನೂ, ನನ್ನ ಜನರನ್ನೂ ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ?” ಎಂದು ಕೇಳಿದನು.
ಯೆಹೋವ ದೇವರು, “ಅವರು ಒಪ್ಪಿಸಿಕೊಡುವರು,” ಎಂದರು.
13ಆದ್ದರಿಂದ ದಾವೀದನೂ, ಹೆಚ್ಚು ಕಡಿಮೆ ಆರುನೂರು ಮಂದಿಯಿದ್ದ ತನ್ನ ಜನರೂ ಎದ್ದು ಕೆಯೀಲಾವನ್ನು ಬಿಟ್ಟು ವಿವಿಧ ಕಡೆಗಳಲ್ಲಿ ಅಲೆದಾಡಿದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ಗೊತ್ತಾಗಲು ಅವನು ಪ್ರಯಾಣವನ್ನು ನಿಲ್ಲಿಸಿಬಿಟ್ಟನು.
14ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ, ಜೀಫ್ ಎಂಬ ಮರುಭೂಮಿಯ ಬೆಟ್ಟದಲ್ಲಿಯೂ ವಾಸವಾಗಿದ್ದನು. ಸೌಲನು ದಿನವೂ ಅವನನ್ನು ಹುಡುಕುತ್ತಿದ್ದನು. ಆದರೆ ದೇವರು ದಾವೀದನನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.
15ತನ್ನ ಪ್ರಾಣವನ್ನು ತೆಗೆಯುವುದಕ್ಕೆ ಸೌಲನು ಹೊರಟಿದ್ದಾನೆಂದು ದಾವೀದನು ತಿಳಿದಾಗ, ಅವನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು. 16ಆಗ ಸೌಲನ ಮಗ ಯೋನಾತಾನನು ಎದ್ದು ಮರುಭೂಮಿಯಲ್ಲಿರುವ ದಾವೀದನ ಬಳಿಗೆ ಹೋಗಿ, ಅವನನ್ನು ದೇವರಲ್ಲಿ ಬಲಪಡಿಸಿ ಸಹಾಯಮಾಡಿದನು. 17ಯೋನಾತಾನನು ಅವನಿಗೆ, “ಭಯಪಡಬೇಡ, ಏಕೆಂದರೆ ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವುದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ. ನಾನು ನಿನಗೆ ಎರಡನೆಯವನಾಗಿರುವೆನು ಮತ್ತು ಹೀಗೆ ಆಗುವುದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ,” ಎಂದನು. 18ಅವರಿಬ್ಬರೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಹೋರೆಷದಲ್ಲಿಯೇ ಉಳಿದನು. ಆದರೆ ಯೋನಾತಾನನು ತನ್ನ ಮನೆಗೆ ಹೋದನು.
19ಆಗ ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪಕ್ಷವಾಗಿಯೇ ಹೋರೆಷದ ಗಿರಿಗಳಲ್ಲಿ ಅಂದರೆ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದನಲ್ಲವೇ? 20ಈಗ ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ. ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು,” ಎಂದರು.
21ಆಗ ಸೌಲನು, “ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ. 22ನೀವು ದಯಮಾಡಿ ಹೋಗಿ ಅವನು ಹೆಜ್ಜೆ ಇಡುವ ಸ್ಥಳವನ್ನೂ, ಅಲ್ಲಿ ಅವನನ್ನು ನೋಡಿದವರು ಯಾರು ಎಂಬುದನ್ನೂ ಇನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ನೋಡಿರಿ. ಏಕೆಂದರೆ ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾನೆಂದು ನನಗೆ ಹೇಳುತ್ತಾರೆ. 23ಅವನು ಅಡಗಿಕೊಂಡಿರುವ ಸಮಸ್ತ ರಹಸ್ಯ ಸ್ಥಳಗಳನ್ನೂ ನೋಡಿ ತಿಳಿದುಕೊಂಡು, ನಿಶ್ಚಯವಾದ ವರ್ತಮಾನವನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ, ಯೆಹೂದದ ಸಹಸ್ರ ಕುಲದಲ್ಲಿಯೂ ಅವನನ್ನು ಹುಡುಕಿ ಅವನನ್ನು ಹಿಡಿಯುವೆನು,” ಎಂದನು.
24ಆದ್ದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ, ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನಲ್ಲಿ ಇರುವ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಮಾವೋನಿನ ಮರುಭೂಮಿಯಲ್ಲಿದ್ದರು. 25ಸೌಲನೂ, ಅವನ ಜನರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿದಾಗ, ಅವನು ಬಂಡೆಗಳಲ್ಲಿ ಇಳಿದು ಮಾವೋನಿನ ಮರುಭೂಮಿಯಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಮರುಭೂಮಿಯಲ್ಲಿ ದಾವೀದನನ್ನು ಹಿಂದಟ್ಟಿದನು.
26ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು. ದಾವೀದನೂ, ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು. ಸೌಲನಿಗೆ ಭಯಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆಪಡುತ್ತಿದ್ದರು. ಆಗ ಸೌಲನೂ, ಅವನ ಜನರೂ ಅವರನ್ನು ಹಿಡಿಯುವಂತೆ ಸುತ್ತಿಕೊಂಡರು. 27ಆದರೆ ಒಬ್ಬ ಸೇವಕನು ಸೌಲನ ಬಳಿಗೆ ಬಂದು, “ನೀನು ತ್ವರೆಯಾಗಿ ಬಾ. ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ,” ಎಂದನು. 28ಆದ್ದರಿಂದ ಸೌಲನು ದಾವೀದನನ್ನು ಹಿಂದಟ್ಟುವುದನ್ನು ಬಿಟ್ಟು, ಫಿಲಿಷ್ಟಿಯರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಸೇಲಾ ಅಮ್ಮಾಲೆಕೋತ್ ಎಂದರೆ, ಅಡ್ಡ ಬೆಟ್ಟ ಎಂದು ಹೆಸರಿಟ್ಟರು. 29ದಾವೀದನು ಆ ಸ್ಥಳವನ್ನು ಬಿಟ್ಟು ಹೋಗಿ ಏನ್ಗೆದಿಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.

Currently Selected:

1 ಸಮುಯೇಲ 23: KSB

Highlight

Copy

Compare

Share

None

Want to have your highlights saved across all your devices? Sign up or sign in