1 ಪೂರ್ವಕಾಲ ವೃತ್ತಾಂತ 20
20
ರಬ್ಬ ನಗರವನ್ನು ಸೆರೆಹಿಡಿದದ್ದು
1ಮರು ವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ, ಯೋವಾಬನು ಬಲವಾದ ಸೈನ್ಯವನ್ನು ಕರೆದುಕೊಂಡು ಹೋಗಿ, ಅಮ್ಮೋನಿಯರ ಪ್ರಾಂತಗಳನ್ನು ಹಾಳು ಮಾಡಿ, ರಬ್ಬ ನಗರಕ್ಕೆ ಮುತ್ತಿಗೆಹಾಕಿದನು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣದ ಮೇಲೆ ದಾಳಿಮಾಡಿ, ಅದನ್ನು ನಾಶಮಾಡಿದನು. 2ಇದಲ್ಲದೆ ದಾವೀದನು ರಬ್ಬಾ ನಗರಕ್ಕೆ ಬಂದಾಗ, ಮಲ್ಕಾಮ್ ಮೂರ್ತಿಯ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು. ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು. 3ಇದಲ್ಲದೆ ಅವನು ಅದರಲ್ಲಿದ್ದ ಜನರನ್ನು ಹೊರಗೆ ತಂದು, ಅವರನ್ನು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟನು. ಅದೇ ಪ್ರಕಾರ ದಾವೀದನು ಅಮ್ಮೋನಿಯರ ಸಮಸ್ತ ಪಟ್ಟಣಗಳಿಗೂ ಮಾಡಿದನು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ತಿರುಗಿಬಂದನು.
ಫಿಲಿಷ್ಟಿಯರ ಸಂಗಡ ಯುದ್ಧ
4ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದದ್ದರಿಂದ ಫಿಲಿಷ್ಟಿಯರು ಸೋತುಹೋದರು.
5ಅನಂತರ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾದಾಗ, ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
6ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು. 7ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮ್ಮನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
8ಇವರು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.
Currently Selected:
1 ಪೂರ್ವಕಾಲ ವೃತ್ತಾಂತ 20: KSB
Highlight
Copy
Compare
Share
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.