ಅರಣ್ಯಕಾಂಡ 22
22
ಬಿಳಾಮನು ಮತ್ತು ಮೋವಾಬ್ಯರ ಅರಸನು
1ಬಳಿಕ ಇಸ್ರೇಲರು ಹೊರಟು ಜೆರಿಕೊ ಪಟ್ಟಣದ ಎದುರಾಗಿದ್ದ ಯೊರ್ದನ್ ನದಿಯ ಆಚೆ ಕಡೆಯಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಪಾಳೆಯ ಮಾಡಿಕೊಂಡರು.
2ಚಿಪ್ಪೋರನ ಮಗನಾದ ಬಾಲಾಕನು ಮೋವಾಬ್ಯರ ಅರಸನಾಗಿದ್ದನು. ಇಸ್ರೇಲರು ಅಮೋರಿಯರಿಗೆ ಮಾಡಿದ್ದೆಲ್ಲವನ್ನು ಅವನು ಕಂಡಿದ್ದನು. 3ಮೋವಾಬ್ಯರು ನಿಜವಾಗಿಯೂ ಬಹಳ ಭಯಗೊಂಡಿದ್ದರು. ಯಾಕೆಂದರೆ ಇಸ್ರೇಲರು ಬಹುಸಂಖ್ಯಾತರಾಗಿದ್ದರು.
4ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಈ ಜನಸಮೂಹವು ನಮ್ಮನ್ನೂ ನಮ್ಮ ಸುತ್ತಲಿರುವ ಎಲ್ಲವನ್ನೂ ಹೋರಿಯಂತೆ ನಾಶಮಾಡುವುದು” ಎಂದು ಹೇಳಿದರು.
ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು, 5ಬೆಯೋರನ ಮಗನಾದ ಬಿಳಾಮನನ್ನು ಕರೆಸುವುದಕ್ಕೆ ಕೆಲವು ಸಂದೇಶಕರನ್ನು ಕಳುಹಿಸಿದನು. ಬಿಳಾಮನು ಯೂಫ್ರೆಟೀಸ್ ನದಿಯ ಬಳಿ “ಪೆತೋರ್” ಎಂಬ ಸ್ಥಳದಲ್ಲಿದ್ದನು. ಬಿಳಾಮನ ಜನರು ಇಲ್ಲಿ ವಾಸಿಸುತ್ತಿದ್ದರು. ಬಾಲಾಕನು ತನ್ನ ಸಂದೇಶಕರನ್ನು ಕಳುಹಿಸಿ ಬಿಳಾಮನಿಗೆ,
“ಒಂದು ಜನಾಂಗವು ಈಜಿಪ್ಟಿನಿಂದ ಬಂದಿದೆ. ಅವರು ದೇಶವನ್ನೆಲ್ಲಾ ಮುಚ್ಚಿಕೊಂಡು ನನ್ನ ಪಕ್ಕದಲ್ಲಿ ನೆಲೆಸಿದ್ದಾರೆ. ಅವರು ನಮಗಿಂತ ಬಲಿಷ್ಠರು. 6ಆದ್ದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು, ಯಾಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. ನೀನು ಶಪಿಸಿದರೆ ಆಗ ನಾನು ಅವರನ್ನು ಸೋಲಿಸಿ ಈ ದೇಶದಿಂದ ಓಡಿಸಲು ನನಗೆ ಸಾಧ್ಯವಾಗುವುದು. ನೀನು ಯಾವನನ್ನು ಆಶೀರ್ವದಿಸುವಿಯೋ ಅವನು ಯಶಸ್ವಿಯಾಗುವನೆಂದೂ ನೀನು ಯಾವನನ್ನು ಶಪಿಸುವೆಯೋ ಅವನಿಗೆ ಸೋಲಾಗುವುದೆಂದೂ ನನಗೆ ಗೊತ್ತಿದೆ” ಎಂದು ಹೇಳಿದನು.
7ಮೋವಾಬ್ಯರ ಹಿರಿಯರು ಮತ್ತು ಮಿದ್ಯಾನ್ಯರ ಹಿರಿಯರು ಬಿಳಾಮನ ಸೇವೆಗೋಸ್ಕರ ಹಣ ಕೊಡಲು ಹಣವನ್ನು ತೆಗೆದುಕೊಂಡು ಹೊರಟು ಅವನ ಬಳಿಗೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು.
8ಬಿಳಾಮನು, “ಈ ರಾತ್ರಿ ನೀವು ಇಲ್ಲೇ ಇಳಿದುಕೊಳ್ಳಿರಿ. ಯೆಹೋವನು ನನಗೆ ಹೇಳುವ ಮಾತನ್ನು ಬೆಳಿಗ್ಗೆ ನಿಮಗೆ ತಿಳಿಸುವೆನು” ಎಂದು ಹೇಳಿದನು. ಆದ್ದರಿಂದ ಮೋವಾಬ್ಯರ ಹಿರಿಯರು ಆ ರಾತ್ರಿ ಬಿಳಾಮನ ಮನೆಯಲ್ಲಿ ಇಳಿದುಕೊಂಡರು.
9ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಬಳಿಯಲ್ಲಿರುವ ಈ ಮನುಷ್ಯರು ಯಾರು?” ಎಂದು ಕೇಳಿದನು.
10ಬಿಳಾಮನು ದೇವರಿಗೆ, “ಮೋವಾಬ್ಯರ ಅರಸನು ಅಂದರೆ ಚಿಪ್ಪೋರನ ಮಗನಾದ ಬಾಲಾಕನು ನನ್ನ ಬಳಿಗೆ ದೂತರನ್ನು ಕಳುಹಿಸಿ, 11ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ ಮತ್ತು ಅವರು ದೇಶವನ್ನೆಲ್ಲಾ ಮುಚ್ಚಿಕೊಂಡಿದ್ದಾರೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ನೀನು ಶಪಿಸಿದರೆ, ನಾನು ಅವರನ್ನು ಸೋಲಿಸಲು ಮತ್ತು ಓಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಹೇಳಿ ಕಳುಹಿಸಿದ್ದಾನೆ” ಎಂದು ಉತ್ತರಕೊಟ್ಟನು.
12ಅದಕ್ಕೆ ದೇವರು ಬಿಳಾಮನಿಗೆ, “ನೀನು ಅವರ ಜೊತೆಯಲ್ಲಿ ಹೋಗಬಾರದು, ಆ ಜನರಿಗೆ ಶಾಪಕೊಡಬಾರದು. ನಾನು ಅವರನ್ನು ಆಶೀರ್ವದಿಸಿದ್ದೇನೆ” ಎಂದು ಹೇಳಿದನು.
13ಮರುದಿನ ಬೆಳಿಗ್ಗೆ ಬಿಳಾಮನು ಎದ್ದು ಬಾಲಾಕನ ಹಿರಿಯರಿಗೆ, “ನಿಮ್ಮ ಸ್ವಂತ ದೇಶಕ್ಕೆ ಹಿಂದಕ್ಕೆ ಹೋಗಿರಿ. ನಿಮ್ಮ ಸಂಗಡ ಬರಲು ಯೆಹೋವನು ನನಗೆ ಅಪ್ಪಣೆ ಕೊಡುತ್ತಿಲ್ಲ” ಎಂದು ಹೇಳಿದನು.
14ಮೋವಾಬ್ಯರ ನಾಯಕರು ಬಾಲಾಕನ ಬಳಿಗೆ ಹಿಂತಿರುಗಿ, “ಬಿಳಾಮನು ನಮ್ಮೊಡನೆ ಬರಲು ಒಪ್ಪುತ್ತಿಲ್ಲ” ಎಂದು ತಿಳಿಸಿದರು.
15ಆದ್ದರಿಂದ ಬಾಲಾಕನು ಅವರಿಗಿಂತಲೂ ಶ್ರೇಷ್ಠರಾದ ಅನೇಕ ನಾಯಕರನ್ನು ಕಳುಹಿಸಿದನು. 16ಇವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗನಾದ ಬಾಲಾಕನು ಹೀಗೆನ್ನುತ್ತಾನೆ: ನೀನು ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬೇಡ. 17ನಾನು ಹೇಳುವುದನ್ನು ನೀನು ಮಾಡಿದರೆ, ನಾನು ನಿನಗೆ ಹಣವನ್ನು ಮತ್ತು ಗೌರವವನ್ನು ಬಹಳವಾಗಿ ಕೊಡುವೆನು ಮತ್ತು ನೀನು ಹೇಳಿದ್ದೆಲ್ಲವನ್ನು ಮಾಡುವೆನು. ಬಂದು, ನನಗಾಗಿ ಈ ಜನರನ್ನು ಶಪಿಸು” ಎಂದು ಹೇಳಿಸಿದನು.
18ಬಿಳಾಮನು ಬಾಲಾಕನ ಅಧಿಕಾರಿಗಳಿಗೆ, “ಬಾಲಾಕನು ನನಗೆ ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನನ್ನ ದೇವರಾದ ಯೆಹೋವನ ಆಜ್ಞೆಗೆ ವಿರೋಧವಾಗಿ ನಾನೇನೂ ಮಾಡಲು ಸಾಧ್ಯವಿಲ್ಲ. ಯೆಹೋವನು ಅಪ್ಪಣೆ ಕೊಡದ ಹೊರತು ನಾನು ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ಮಾಡಲಾರೆ. 19ಆದ್ದರಿಂದ ನೀವೂ ಸಹ ಇತರ ಹಿರಿಯರಂತೆ ಈ ರಾತ್ರಿ ಇಲ್ಲೇ ಇರಬೇಕು. ಯೆಹೋವನು ನನಗೆ ಇನ್ನೂ ಹೇಳಬೇಕಾದದ್ದನ್ನು ಈ ರಾತ್ರಿ ತಿಳಿದುಕೊಳ್ಳುವೆನು” ಎಂದು ಹೇಳಿದನು.
20ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಈ ಜನರು ನಿನ್ನನ್ನು ತಮ್ಮೊಡನೆ ಬರಬೇಕೆಂದು ಆಹ್ವಾನಿಸಲು ಬಂದಿದ್ದಾರೆ. ಆದ್ದರಿಂದ ನೀನು ಅವರೊಂದಿಗೆ ಹೋಗಬಹುದು. ಆದರೆ ನಾನು ಹೇಳುವುದನ್ನು ಮಾತ್ರ ಮಾಡು” ಎಂದು ಹೇಳಿದನು.
ಬಿಳಾಮನು ಮತ್ತು ಅವನ ಕತ್ತೆ
21ಮರುದಿನ ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು. 22ಬಿಳಾಮನು ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದನು. ಅವನ ಜೊತೆ ಇಬ್ಬರು ಆಳುಗಳಿದ್ದರು. ಬಿಳಾಮನು ಪ್ರಯಾಣ ಮಾಡತೊಡಗಿದ್ದರಿಂದ ದೇವರು ಕೋಪಗೊಂಡನು. ಆದ್ದರಿಂದ ಯೆಹೋವನ ದೂತನು ಬಿಳಾಮನನ್ನು ತಡೆಯಲು ದಾರಿಯಲ್ಲಿ ನಿಂತುಕೊಂಡನು.
23ಯೆಹೋವನ ದೂತನು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲೇ ನಿಂತಿರುವುದನ್ನು ಆ ಕತ್ತೆ ನೋಡಿ ದಾರಿಯನ್ನು ಬಿಟ್ಟು ಬಯಲಿನ ಕಡೆ ಹೋಯಿತು. ಕತ್ತೆಯನ್ನು ದಾರಿಗೆ ತಿರುಗಿಸುವದಕ್ಕೆ ಬಿಳಾಮನು ಅದನ್ನು ಹೊಡೆದನು. ಅವನಿಗೆ ದೂತನು ಕಾಣಿಸಲಿಲ್ಲ.
24ಆಮೇಲೆ ಯೆಹೋವನ ದೂತನು ಎರಡು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ದಾರಿಯಲ್ಲಿ ನಿಂತುಕೊಂಡನು. ಎರಡು ಕಡೆಯಲ್ಲಿಯೂ ಗೋಡೆಗಳಿದ್ದವು. 25ತಿರುಗಿ ಕತ್ತೆಯು ಯೆಹೋವನ ದೂತನನ್ನು ನೋಡಿ ಗೋಡೆಗೆ ತನ್ನನ್ನು ಒತ್ತರಿಸಿಕೊಂಡಿತು. ಆಗ ಬಿಳಾಮನ ಪಾದವು ಗೋಡೆಗೆ ಒತ್ತರಿಸಿತು. ಆದ್ದರಿಂದ ಬಿಳಾಮನು ತಿರುಗಿ ಕತ್ತೆಯನ್ನು ಹೊಡೆದನು.
26ಬಳಿಕ ಯೆಹೋವನ ದೂತನು ಮತ್ತೆ ಮುಂದೆ ಹೋಗಿ ಕತ್ತೆಯು ಎಡಕ್ಕಾಗಲಿ ಬಲಕ್ಕಾಗಲಿ ಹೊರಳಲು ಸಾಧ್ಯವಿಲ್ಲದಷ್ಟು ಇನ್ನೂ ಕಿರಿದಾದ ಸ್ಥಳದಲ್ಲಿ ನಿಂತುಕೊಂಡನು. 27ಕತ್ತೆಯು ಯೆಹೋವನ ದೂತನನ್ನು ನೋಡಿ ಬಿಳಾಮನ ಕೆಳಗೆ ಅಡಗಿ ಮಲಗಿಕೊಂಡಿತು. ಆಗ ಬಿಳಾಮನು ಸಿಟ್ಟುಗೊಂಡು ತನ್ನ ಕೋಲಿನಿಂದ ಕತ್ತೆಯನ್ನು ಹೊಡೆದನು.
28ಆಗ ಯೆಹೋವನು ಆ ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟನು. ಅದು ಬಿಳಾಮನಿಗೆ, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದ್ದೇನೆ?” ಎಂದು ಕೇಳಿತು.
29ಬಿಳಾಮನು, “ನೀನು ನನ್ನನ್ನು ಮೂರ್ಖನನ್ನಾಗಿ ಮಾಡಿರುವೆ. ನನ್ನ ಕೈಯಲ್ಲಿ ಕತ್ತಿಯಿದ್ದರೆ ನಿನ್ನನ್ನು ಈಗಲೇ ಕೊಂದುಹಾಕಿಬಿಡುತ್ತಿದ್ದೆ” ಅಂದನು.
30ಅದಕ್ಕೆ ಕತ್ತೆಯು ಬಿಳಾಮನಿಗೆ, “ನೋಡು, ನಾನು ನಿನ್ನ ಸ್ವಂತ ಕತ್ತೆ. ಅನೇಕಾನೇಕ ವರ್ಷಗಳಿಂದ ನೀನು ನನ್ನ ಮೇಲೆ ಸವಾರಿ ಮಾಡುತ್ತಿರುವೆ. ನಾನು ಹಿಂದೆಂದೂ ಹೀಗೆ ಮಾಡಲಿಲ್ಲವೆಂದು ನಿನಗೆ ತಿಳಿದದೆ” ಎಂದು ಹೇಳಿತು.
ಅದಕ್ಕೆ ಬಿಳಾಮನು, “ಅದು ನಿಜ” ಅಂದನು.
31ಆಗ ಯೆಹೋವನು ಬಿಳಾಮನ ಕಣ್ಣುಗಳನ್ನು ತೆರೆದು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲಿ ನಿಂತಿರುವ ಯೆಹೋವನ ದೂತನನ್ನು ನೋಡುವಂತೆ ಮಾಡಿದನು. ಅವನನ್ನು ಕಂಡಾಗ ಬಿಳಾಮನು ಮೊಣಕಾಲೂರಿ ತನ್ನ ಮುಖವನ್ನು ನೆಲದವರೆಗೂ ಬಾಗಿಸಿದನು.
32ಯೆಹೋವನ ದೂತನು ಬಿಳಾಮನಿಗೆ, “ನೀನು ಮೂರು ಸಲವೂ ಕತ್ತೆಯನ್ನು ಹೊಡೆದದ್ದೇಕೆ? ನಿನ್ನ ಪ್ರಯಾಣವು ನನ್ನ ಚಿತ್ತಕ್ಕೆ ವಿರುದ್ಧವಾದದ್ದರಿಂದ ನಿನ್ನನ್ನು ತಡೆಯುವುದಕ್ಕೆ ನಾನೇ ಬಂದಿದ್ದೇನೆ. 33ಆ ಕತ್ತೆ ನನ್ನನ್ನು ನೋಡಿ ಮೂರು ಸಲ ನನ್ನೆದುರಿನಿಂದ ಇನ್ನೊಂದು ಕಡೆಗೆ ತಿರುಗಿಕೊಂಡಿತು. ಹಾಗೆ ತಿರುಗಿಕೊಳ್ಳದಿದ್ದಲ್ಲಿ ನಾನು ಕತ್ತೆಯನ್ನು ಉಳಿಸಿ ನಿನ್ನನ್ನು ಆಗಲೇ ಕೊಂದುಹಾಕಿಬಿಡುತ್ತಿದ್ದೆನು” ಎಂದು ಹೇಳಿದನು.
34ಆಗ ಬಿಳಾಮನು ಯೆಹೋವನ ದೂತನಿಗೆ, “ನಾನು ಪಾಪ ಮಾಡಿದ್ದೇನೆ. ನೀನು ದಾರಿಯಲ್ಲಿ ನಿಂತುಕೊಂಡಿರುವುದು ನನಗೆ ಗೊತ್ತಾಗಲಿಲ್ಲ. ನನ್ನ ಪ್ರಯಾಣವು ನಿನಗೆ ಮೆಚ್ಚಿಕೆಯಾಗಿಲ್ಲದಿದ್ದರೆ, ನಾನು ಮನೆಗೆ ಹಿಂತಿರುಗುವೆನು” ಎಂದು ಹೇಳಿದನು.
35ಆಗ ಯೆಹೋವನ ದೂತನು ಬಿಳಾಮನಿಗೆ, “ಆ ಮನುಷ್ಯರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಹೇಳುವ ಮಾತನ್ನೇ ಹೊರತು ಬೇರೆ ಯಾವುದನ್ನೂ ಹೇಳಬಾರದು” ಎಂದು ಹೇಳಿದನು. ಆದ್ದರಿಂದ ಬಿಳಾಮನು ಬಾಲಾಕನ ನಾಯಕರೊಡನೆ ಹೋದನು.
36ಬಿಳಾಮನು ಬರುತ್ತಿರುವ ಸುದ್ದಿಯನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಸರಹದ್ದಿನಲ್ಲಿ ಅರ್ನೋನ್ ನದಿಯ ಬಳಿಯಲ್ಲಿರುವ ಮೋವ್ಯಾಬರ ಊರಿನಲ್ಲಿ ಅವನನ್ನು ಭೇಟಿಯಾಗಲು ಹೋದನು. 37ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಸುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ. ನೀನು ಆಗಲೇ ಯಾಕೆ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ನೀನು ಭಾವಿಸಿಕೊಂಡಿರುವಿಯಾ?” ಎಂದು ಕೇಳಿದನು.
38ಬಿಳಾಮನು, “ನಾನು ಈಗ ಬಂದಿದ್ದೇನೆ. ಆದರೆ, ನಿನಗೆ ಇಷ್ಟವಾಗುವಂಥದ್ದನ್ನು ಹೇಳಲು ನನಗೆ ಸಾಧ್ಯವಿಲ್ಲ. ದೇವರು ನನಗೆ ತಿಳಿಸುವುದನ್ನೇ ನಾನು ಹೇಳಬೇಕು” ಅಂದನು.
39ಆಗ ಬಿಳಾಮನು ಬಾಲಾಕನೊಡನೆ ಕಿರ್ಯತ್ಹುಚೋತಿಗೆ ಹೋದನು. 40ಬಾಲಾಕನು ಹೋರಿಗಳನ್ನು ಮತ್ತು ಕುರಿಗಳನ್ನು ವಧಿಸಿ ಯಜ್ಞಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಬಿಳಾಮನಿಗೂ ಅವನ ಸಂಗಡವಿದ್ದ ಪ್ರಧಾನರಿಗೂ ಕೊಟ್ಟನು.
41ಮರದಿನ ಬೆಳಿಗ್ಗೆ ಬಾಲಾಕನು ಬಿಳಾಮನನ್ನು ಬಾಮೋತ್ಬಾಳ್ ಎಂಬ ಸ್ಥಳದವರೆಗೂ ಕರೆದುಕೊಂಡು ಹೋದನು. ಅಲ್ಲಿಂದ ಇಸ್ರೇಲರ ಪಾಳೆಯ ಸ್ವಲ್ಪಸ್ವಲ್ಪ ಕಾಣುತ್ತಿತ್ತು.
Currently Selected:
ಅರಣ್ಯಕಾಂಡ 22: KERV
Highlight
Copy
Compare
Share
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International