ಧರ್ಮೋಪದೇಶಕಾಂಡ 19
19
ಆಶ್ರಯನಗರಗಳು
1“ಬೇರೆ ಜನಾಂಗಗಳು ವಾಸಿಸುವ ದೇಶವನ್ನು ನಿಮ್ಮ ದೇವರು ನಿಮಗೆ ಕೊಡುತ್ತಿದ್ದಾನೆ. ಆ ಜನಾಂಗಗಳನ್ನು ಆತನು ನಾಶಮಾಡುತ್ತಾನೆ. ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀವು ವಾಸಿಸುವಿರಿ. ಅವರ ಮನೆಗಳನ್ನೂ ಪಟ್ಟಣಗಳನ್ನೂ ನೀವು ವಶಪಡಿಸಿಕೊಳ್ಳುವಿರಿ. ಅಂಥಾ ಸಮಯದಲ್ಲಿ 2-3ನಿಮ್ಮ ದೇಶವನ್ನು ನೀವು ಮೂರು ವಿಭಾಗ ಮಾಡಬೇಕು. ಪ್ರತಿಯೊಂದು ವಿಭಾಗದಲ್ಲಿ ನೀವು ಒಂದು ನಗರವನ್ನು ಆರಿಸಬೇಕು. ಅದು ಎಲ್ಲಾ ಜನರಿಗೆ ಹೋಗಲು ಅನುಕೂಲವಾಗಿರಬೇಕು. ಅದಕ್ಕಾಗಿ ನೀವು ರಸ್ತೆಗಳನ್ನು ಮಾಡಬೇಕು. ಆಗ ಯಾವನಾದರೂ ಅಪ್ಪಿತಪ್ಪಿ ಇನ್ನೊಬ್ಬನನ್ನು ಕೊಂದರೆ ಅವನು ರಕ್ಷಣೆಗಾಗಿ ಆ ನಗರಗಳಿಗೆ ಓಡಿಹೋಗಬಹುದು.
4“ಅಂಥಾ ಮನುಷ್ಯನಿಗೆ ಅನ್ವಯಿಸುವ ನಿಯಮಗಳು ಯಾವುವೆಂದರೆ: ಆ ಮನುಷ್ಯನು ಇನ್ನೊಬ್ಬನನ್ನು ಕೊಂದದ್ದು ಆಕಸ್ಮಿಕವಾಗಿರಬೇಕು; ಕೊಲ್ಲಲ್ಪಟ್ಟವನ ಮೇಲೆ ಅವನಿಗೆ ದ್ವೇಷವಿರಬಾರದು. 5ಇದೊಂದು ಉದಾಹರಣೆ: ಒಬ್ಬನು ಇನ್ನೊಬ್ಬ ವ್ಯಕ್ತಿಯೊಂದಿಗೆ ಅಡವಿಗೆ ಕಟ್ಟಿಗೆ ಕಡಿಯಲು ಹೋಗುತ್ತಾನೆ. ಒಂದು ಮರವನ್ನು ಕಡಿಯಲು ತನ್ನ ಕೊಡಲಿಯನ್ನು ಬೀಸುವಾಗ ಅವನ ಕೊಡಲಿಯು ಕಾವಿನಿಂದ ಕಳಚಿಕೊಂಡು ಪಕ್ಕದಲ್ಲಿ ನಿಂತಿದ್ದವನಿಗೆ ಬಡಿದು ಅವನ ಸಾವಿಗೆ ಕಾರಣವಾದರೆ, ಕೊಡಲಿಯನ್ನು ಬೀಸಿದವನು ಆ ಮೂರು ನಗರಗಳಲ್ಲಿ ಒಂದರಲ್ಲಿ ಆಶ್ರಯವನ್ನು ಪಡೆದುಕೊಂಡು ಸುರಕ್ಷಿತವಾಗಿರಬಹುದು. 6ಆದರೆ ಆ ನಗರವು ತುಂಬಾ ದೂರವಿದ್ದಲ್ಲಿ ಅವನು ಅಲ್ಲಿಗೆ ಸೇರುವ ಮೊದಲೇ ಸತ್ತವನ ಹತ್ತಿರದ ಸಂಬಂಧಿ ಅವನನ್ನು ಹಿಂಬಾಲಿಸಿ ಅವನ ಮೇಲೆ ಮುಯ್ಯಿತೀರಿಸಿಕೊಳ್ಳುವನು. ಅವನ ಮೇಲೆ ಕೋಪಗೊಂಡು ಅವನನ್ನು ಕೊಂದರೆ ನಿಷ್ಕಾರಣವಾಗಿ ಅವನು ಕೊಲ್ಲಲ್ಪಟ್ಟಂತಾಯಿತು. ಯಾಕೆಂದರೆ ಸತ್ತವನನ್ನು ಅವನು ದ್ವೇಷಿಸುತ್ತಿರಲಿಲ್ಲ. 7ಆದ್ದರಿಂದ ಆ ನಗರಗಳು ಎಲ್ಲರಿಗೂ ಸುಲಭವಾಗಿ ಸೇರುವಂಥವುಗಳಾಗಿರಬೇಕು; ಅಂಥವುಗಳನ್ನು ನೀವು ಆರಿಸಿಕೊಳ್ಳಬೇಕು.
8“ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ನಿಮ್ಮ ದೇಶವನ್ನು ವಿಸ್ತಾರ ಮಾಡುವುದಾಗಿ ವಾಗ್ದಾನ ಮಾಡಿದನು. ಅವರಿಗೆ ಕೊಡುವುದಾಗಿ ವಾಗ್ದಾನಮಾಡಿದ ದೇಶವನ್ನೆಲ್ಲಾ ನಿಮಗೆ ಕೊಡುವನು. 9ಈ ಹೊತ್ತು ನಾನು ನಿಮಗೆ ಕೊಡುವ ಆಜ್ಞೆಗಳಿಗೆ ನೀವು ವಿಧೇಯರಾದರೆ ಮಾತ್ರ ನಿಮ್ಮ ದೇಶವನ್ನು ಆತನು ವಿಸ್ತರಿಸುವನು. ನೀವು ನಿಮ್ಮ ದೇವರಾದ ಯೆಹೋವನನ್ನು ಯಾವಾಗಲೂ ಪ್ರೀತಿಸಬೇಕು. ದೇವರು ನಿಮ್ಮ ದೇಶದ ಮೇರೆಯನ್ನು ವಿಸ್ತರಿಸಿದಾಗ ನೀವು ಇನ್ನೂ ಮೂರು ಆಶ್ರಯ ನಗರಗಳನ್ನು ಆರಿಸಿಕೊಳ್ಳಬೇಕು. 10ಆಗ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಅಂಥ ನಿರಪರಾಧಿಗಳು ಕೊಲ್ಲಲ್ಪಡುವುದಿಲ್ಲ; ನೀವು ಯಾವ ಮರಣದ ವಿಷಯದಲ್ಲಿಯೂ ದೋಷಿಗಳಾಗಿರುವುದಿಲ್ಲ.
11“ಆದರೆ ಒಬ್ಬನು ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸಿದರೆ, ಅವನನ್ನು ಉದ್ದೇಶಪೂರ್ವಕವಾಗಿ ಕೊಂದು ಆಶ್ರಯ ನಗರದೊಳಗೆ ಸುರಕ್ಷಿತನಾಗಿದ್ದಲ್ಲಿ 12ಅವನ ಊರಿನ ಹಿರಿಯರು ಅವನನ್ನು ಆ ಆಶ್ರಯನಗರದೊಳಗಿಂದ ಹಿಡಿದುತಂದು ಕೊಲೆ ಮಾಡಲ್ಪಟ್ಟವನ ಸಮೀಪ ಬಂಧುವಿಗೆ ಒಪ್ಪಿಸಬೇಕು, ಕೊಲೆಗಾರನು ಸಾಯಲೇಬೇಕು. 13ನೀವು ಅವನ ವಿಷಯದಲ್ಲಿ ದುಃಖಪಡಬಾರದು. ಯಾಕೆಂದರೆ ಅವನು ನಿರಪರಾಧಿಯನ್ನು ಕೊಂದ ಅಪರಾಧಿಯಾಗಿದ್ದಾನೆ. ಅವನು ಮಾಡಿದ ಪಾಪವನ್ನು ಇಸ್ರೇಲಿನಿಂದ ತೆಗೆದುಹಾಕಬೇಕು. ಆಗ ನಿಮಗೆ ಶುಭವಾಗುವುದು.
ಆಸ್ತಿಯ ಮೇರೆಗಳು
14“ನಿಮ್ಮ ನೆರೆಯವನ ಭೂಮಿಯ ಗಡಿಕಲ್ಲುಗಳ ಸ್ಥಳವನ್ನು ನೀವು ಬದಲಾಯಿಸಬಾರದು. ಹಿಂದಿನ ಕಾಲದಲ್ಲಿ ಜನರು ತಮ್ಮ ಭೂಮಿಯ ಮೇರೆಯನ್ನು ಗುರುತಿಸಲು ನೆಟ್ಟಿರುತ್ತಾರೆ. ಆ ಗಡಿಕಲ್ಲುಗಳು ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಆ ಭೂಮಿಗೆ ಗುರುತಾಗಿದೆ.
ಸಾಕ್ಷಿಗಳು
15“ಒಬ್ಬನು ಕಟ್ಟಳೆಗಳಿಗೆ ವಿರುದ್ಧವಾಗಿ ನಡೆದುಕೊಂಡು ಅಪಾದಿಸಲ್ಪಟ್ಟದ್ದಲ್ಲಿ ಒಬ್ಬನ ಸಾಕ್ಷಿಯಿಂದ ಅವನು ತಪ್ಪಿತಸ್ಥನೆಂದು ತೀರ್ಮಾನಿಸಬಾರದು. ಅವನು ತಪ್ಪಿತಸ್ಥನೆಂದು ತೋರಿಸಲು ಎರಡು ಅಥವಾ ಮೂರು ಸಾಕ್ಷಿಗಳಿರಬೇಕು.
16“ಒಬ್ಬ ಸಾಕ್ಷಿದಾರನು ಇನ್ನೊಬ್ಬನು ತನಗೆ ಹಾನಿ ಮಾಡಿದ್ದಾನೆಂದು ಸುಳ್ಳುಹೇಳಿ ಅವನನ್ನು ಶಿಕ್ಷೆಗೆ ಒಳಪಡಿಸಲು ಪ್ರಯತ್ನಿಸಿದಾಗ, 17ಆ ಪ್ರಕರಣಕ್ಕೆ ಸೇರಿದವರಿಬ್ಬರೂ ಯೆಹೋವನು ಆರಿಸಿದ ಸ್ಥಳಕ್ಕೆ ಹೋಗಿ ಅಲ್ಲಿ ಕಾರ್ಯತತ್ಪರರಾಗಿರುವ ಯಾಜಕರನ್ನು ಮತ್ತು ನ್ಯಾಯಾಧೀಶರನ್ನು ಕಾಣಬೇಕು. 18ನ್ಯಾಯಾಧೀಶರು ಅವರನ್ನು ಪ್ರಶ್ನಿಸಿ ಸರಿಯಾಗಿ ವಿಚಾರಿಸಬೇಕು. ಸಾಕ್ಷಿಯವನು ಸುಳ್ಳು ಹೇಳಿದ್ದಾನೆಂಬುದನ್ನು ಅವರು ಕಂಡುಹಿಡಿದರೆ 19ಆ ಸಾಕ್ಷಿಯವನಿಗೆ ಶಿಕ್ಷೆ ವಿಧಿಸಬೇಕು. ತನ್ನ ವಿರೋಧಿಗೆ ಯಾವ ಶಿಕ್ಷೆ ಬರಬೇಕೆಂಬುದಾಗಿ ಅವನು ಸುಳ್ಳಾಡಿದ್ದನೋ, ಅದೇ ಶಿಕ್ಷೆಯನ್ನು ಅವನಿಗೆ ವಿಧಿಸಬೇಕು. ಈ ರೀತಿಯಾಗಿ ಆ ದುಷ್ಟತನವನ್ನು ನಿಮ್ಮ ಕುಲಗಳಿಂದ ತೆಗೆದುಹಾಕಬೇಕು. 20ಇದನ್ನು ಬೇರೆಯವರು ಕೇಳಿ ಭಯಪಟ್ಟು ಅಂಥಾ ದುಷ್ಕೃತ್ಯವನ್ನು ಅವರು ಮಾಡುವುದಿಲ್ಲ.
21“ಅಪರಾಧ ಎಷ್ಟು ಭಯಂಕರವಾಗಿರುವುದೋ ಅಷ್ಟೇ ಭಯಂಕರ ಶಿಕ್ಷೆಯೂ ಇರಬೇಕು. ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇಸರಪಟ್ಟುಕೊಳ್ಳಬಾರದು. ಒಬ್ಬನು ಪ್ರಾಣಹತ್ಯೆ ಮಾಡಿದರೆ ಅವನ ಪ್ರಾಣವೂ ತೆಗೆಯಲ್ಪಡಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಎಂಬ ನೀತಿಯನ್ನು ಅನುಸರಿಸಬೇಕು.
Currently Selected:
ಧರ್ಮೋಪದೇಶಕಾಂಡ 19: KERV
Highlight
Copy
Compare
Share
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International