Bible App logo
Search Icon

1 ಸಮುವೇಲನು 19

19
ಯೋನಾತಾನನಿಂದ ದಾವೀದನಿಗೆ ಸಹಾಯ
1ಸೌಲನು ತನ್ನ ಮಗನಾದ ಯೋನಾತಾನನಿಗೂ ತನ್ನ ಅಧಿಕಾರಿಗಳಿಗೂ ದಾವೀದನನ್ನು ಕೊಂದು ಹಾಕಲು ತಿಳಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳ ಇಷ್ಟಪಡುತ್ತಿದ್ದನು. 2ಯೋನಾತಾನನು ದಾವೀದನಿಗೆ, “ಎಚ್ಚರಿಕೆಯಿಂದಿರು! ಸೌಲನು ನಿನ್ನನ್ನು ಕೊಲ್ಲಲು ಅವಕಾಶವನ್ನು ಕಾಯುತ್ತಿದ್ದಾನೆ. ಬೆಳಿಗ್ಗೆ, ಹೊಲದೊಳಗೆ ಹೋಗಿ ಅಡಗಿಕೊ. 3ನಾನು ನನ್ನ ತಂದೆಯೊಡನೆ ಹೊಲಕ್ಕೆ ಬರುತ್ತೇನೆ. ನೀನು ಅಡಗಿರುವ ಸ್ಥಳದ ಹತ್ತಿರ ನಾವು ನಿಲ್ಲುತ್ತೇವೆ. ನಾನು ನನ್ನ ತಂದೆಯೊಡನೆ ನಿನ್ನ ಬಗ್ಗೆ ಮಾತನಾಡುತ್ತೇನೆ. ನಂತರ ನಾನು ತಿಳಿದುಕೊಂಡದ್ದನ್ನು ನಿನಗೆ ಹೇಳುತ್ತೇನೆ” ಎಂದನು.
4ಯೋನಾತಾನನು ತನ್ನ ತಂದೆಯಾದ ಸೌಲನೊಂದಿಗೆ ಮಾತನಾಡಿದನು. ಯೋನಾತಾನನು ದಾವೀದನ ಬಗ್ಗೆ ಒಳ್ಳೆಯ ಸಂಗತಿಗಳನ್ನು ತಿಳಿಸಿದನು. ಯೋನಾತಾನನು, “ನೀನು ರಾಜ. ದಾವೀದನು ನಿನ್ನ ಸೇವಕ. ದಾವೀದನು ನಿನಗೆ ಯಾವ ಕೇಡನ್ನೂ ಮಾಡಿಲ್ಲ. ಆದ್ದರಿಂದ ಅವನಿಗೆ ಯಾವ ಕೇಡನ್ನೂ ಮಾಡಬೇಡ. ದಾವೀದನು ನಿನಗೆ ಯಾವಾಗಲೂ ಒಳ್ಳೆಯವನಾಗಿಯೇ ಇದ್ದಾನೆ. 5ದಾವೀದನು ಫಿಲಿಷ್ಟಿಯನಾದ ಗೊಲ್ಯಾತನನ್ನು ಕೊಂದಾಗ ತನ್ನ ಜೀವವನ್ನೇ ಪಣವಾಗಿಟ್ಟಿದ್ದನು. ಯೆಹೋವನು ಇಸ್ರೇಲರೆಲ್ಲರಿಗೂ ಬಹು ದೊಡ್ಡ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿದೆ ಮತ್ತು ಸಂತೋಷಗೊಂಡೆ. ದಾವೀದನಿಗೆ ಕೇಡುಮಾಡಲು ನೀನು ಏಕೆ ಬಯಸಿರುವೆ? ಅವನು ನಿರಪರಾಧಿ. ಅವನನ್ನು ಕೊಲ್ಲಲು ಯಾವ ಕಾರಣವೂ ಇಲ್ಲ!” ಎಂದು ಹೇಳಿದನು.
6ಯೋನಾತಾನನು ಹೇಳಿದ್ದನ್ನೆಲ್ಲ ಸೌಲನು ಕೇಳಿ, “ಯೆಹೋವನಾಣೆ, ದಾವೀದನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣ ಮಾಡಿ ಹೇಳಿದನು.
7ಆದ್ದರಿಂದ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿದನು. ಬಳಿಕ ಯೋನಾತಾನನು ದಾವೀದನನ್ನು ಸೌಲನ ಹತ್ತಿರಕ್ಕೆ ಕರೆದುಕೊಂಡು ಬಂದನು. ದಾವೀದನು ಮೊದಲಿನಂತೆ ಸೌಲನ ಜೊತೆಗಿದ್ದನು.
ದಾವೀದನನ್ನು ಕೊಲ್ಲಲು ಸೌಲನ ಮರುಪ್ರಯತ್ನ
8ಯುದ್ಧವು ಮತ್ತೆ ಬಂದಿತು. ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಿ ಅವರನ್ನು ಸೋಲಿಸಿ ಓಡಿಸಿಬಿಟ್ಟನು. 9ಆದರೆ ಯೆಹೋವನಿಂದ ಬಂದ ದುರಾತ್ಮವು ಸೌಲನ ಮೈಮೇಲೆ ಬಂದಿತು. ಸೌಲನು ತನ್ನ ಮನೆಯಲ್ಲಿ ಕುಳಿತಿದ್ದನು. ಸೌಲನ ಈಟಿಯು ಅವನ ಕೈಯಲ್ಲಿಯೇ ಇದ್ದಿತು. 10ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ಸೌಲನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಸರಿದುಕೊಂಡಿದ್ದರಿಂದ ಈಟಿಯು ಗೋಡೆಗೆ ನಾಟಿಕೊಂಡಿತು. ದಾವೀದನು ಆ ದಿನ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
11ಸೌಲನು ದಾವೀದನ ಮನೆಗೆ ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನ ಮನೆಯನ್ನು ಕಾಯ್ದರು. ಅವರು ರಾತ್ರಿಯೆಲ್ಲಾ ಅಲ್ಲಿಯೇ ಇದ್ದರು. ಅವರು ದಾವೀದನನ್ನು ಬೆಳಿಗ್ಗೆ ಕೊಲ್ಲಲು ಕಾಯುತ್ತಿದ್ದರು. ಆದರೆ ದಾವೀದನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯೇ ಓಡಿಹೋಗಿ, ನಿನ್ನ ಜೀವವನ್ನು ಕಾಪಾಡಿಕೋ. ಇಲ್ಲವಾದರೆ, ನಿನ್ನನ್ನು ಅವರು ಕೊಂದುಬಿಡುತ್ತಾರೆ” ಎಂದು ಎಚ್ಚರಿಸಿದಳು. 12ನಂತರ ಮೀಕಲಳು ಕಿಟಿಕಿಯಿಂದ ದಾವೀದನನ್ನು ಹೊರಗೆ ಇಳಿಸಿದಳು. ದಾವೀದನು ತಪ್ಪಿಸಿಕೊಂಡು ಓಡಿಹೋದನು. 13ಮೀಕಲಳು ಮನೆಯಲ್ಲಿದ್ದ ವಿಗ್ರಹವನ್ನು ಹಾಸಿಗೆಯ ಮೇಲೆ ಇಟ್ಟು ಅದಕ್ಕೆ ಬಟ್ಟೆಗಳನ್ನು ತೊಡಿಸಿ ಅದರ ತಲೆಗೆ ಹೋತದ ಕೂದಲನ್ನೂ ಅಂಟಿಸಿದಳು.
14ಸೌಲನು ದಾವೀದನನ್ನು ಬಂಧಿಸಿ ಕರೆತರಲು ಸಂದೇಶಕರನ್ನು ಕಳುಹಿಸಿದನು. ಆದರೆ ಮೀಕಲಳು, “ದಾವೀದನಿಗೆ ಹುಷಾರಿಲ್ಲ” ಎಂದು ಹೇಳಿದಳು.
15ಸಂದೇಶಕರು ಹೋಗಿ ಸೌಲನಿಗೆ ವಿಷಯ ತಿಳಿಸಿದಾಗ ಅವನು ದಾವೀದನನ್ನು ನೋಡಲು ಮತ್ತೆ ಸಂದೇಶಕರನ್ನು ಕಳುಹಿಸಿದನು. ಸೌಲನು ಅವರಿಗೆ, “ದಾವೀದನನ್ನು ನನ್ನ ಬಳಿಗೆ ಕರೆತನ್ನಿ! ಹಾಸಿಗೆಯ ಮೇಲೆ ಮಲಗಿರುವ ಅವನನ್ನು ಹಾಸಿಗೆಯ ಸಮೇತವಾಗಿ ತೆಗೆದುಕೊಂಡು ಬನ್ನಿ! ನಾನು ಅವನನ್ನು ಕೊಲ್ಲುತ್ತೇನೆ” ಎಂದು ಹೇಳಿದನು.
16ಸಂದೇಶಕರು ದಾವೀದನ ಮನೆಗೆ ಹೋದರು. ಅವರು ದಾವೀದನನ್ನು ಕರೆದೊಯ್ಯಲು ಒಳಗಡೆ ಹೋದಾಗ ಹಾಸಿಗೆಯ ಮೇಲಿರುವುದು ಕೇವಲ ವಿಗ್ರಹವೆಂಬುದೂ ಅದರ ಕೂದಲು ಕೇವಲ ಹೋತದ ಕೂದಲೆಂಬುದೂ ಅವರಿಗೆ ಗೊತ್ತಾಯಿತು.
17ಸೌಲನು ಮೀಕಲಳಿಗೆ, “ನೀನು ಈ ರೀತಿ ನನಗೆ ಮೋಸ ಮಾಡಿದ್ದೇಕೆ? ನನ್ನ ಶತ್ರುವು ತಪ್ಪಿಸಿಕೊಳ್ಳಲು ನೀನು ಅವಕಾಶ ಮಾಡಿಕೊಟ್ಟೆ! ದಾವೀದನು ಓಡಿಹೋದನಲ್ಲಾ!” ಎಂದು ಹೇಳಿದನು.
ಮೀಕಲಳು ಸೌಲನಿಗೆ, “ತಪ್ಪಿಸಿಕೊಳ್ಳಲು ತನಗೆ ಸಹಾಯ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ ದಾವೀದನು ತಿಳಿಸಿದ!” ಎಂದು ಹೇಳಿದಳು.
ರಾಮದ ಪಾಳೆಯದಲ್ಲಿ ದಾವೀದ
18ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಹತ್ತಿರಕ್ಕೆ ಓಡಿಹೋದನು. ಸೌಲನು ತನಗೆ ಮಾಡಿದ್ದನ್ನೆಲ್ಲ ದಾವೀದನು ಸಮುವೇಲನಿಗೆ ಹೇಳಿದನು. ನಂತರ ದಾವೀದನು ಮತ್ತು ಸಮುವೇಲನು ಪ್ರವಾದಿಗಳಿದ್ದ ಪಾಳೆಯಕ್ಕೆ ಹೋದರು. ದಾವೀದನು ಅಲ್ಲಿ ನೆಲೆಸಿದನು.
19ದಾವೀದನು ರಾಮದ ಪಾಳೆಯದಲ್ಲಿರುವ ಸಂಗತಿಯು ಸೌಲನಿಗೆ ತಿಳಿದುಬಂದಿತು. 20ದಾವೀದನನ್ನು ಬಂಧಿಸಿ ತರಲು ಸೌಲನು ಜನರನ್ನು ಕಳುಹಿಸಿದನು. ಆದರೆ ಆ ಜನರು ಪಾಳೆಯಕ್ಕೆ ಬರುವಷ್ಟರಲ್ಲಿ ಪ್ರವಾದಿಗಳು ಅಲ್ಲಿ ಪ್ರವಾದಿಸುತ್ತಿದ್ದರು. ಸಮುವೇಲನು ಅವರ ನಾಯಕನಾಗಿ ನಿಂತಿದ್ದನು. ದೇವರಾತ್ಮವು ಸಂದೇಶಕರ ಮೇಲೆ ಬಂದದ್ದರಿಂದ ಅವರೂ ಪ್ರವಾದಿಸಲಾರಂಭಿಸಿದರು.
21ಸೌಲನು ಈ ಸುದ್ದಿಯನ್ನು ಕೇಳಿ ಇತರ ಸಂದೇಶಕರನ್ನು ಕಳುಹಿಸಿದನು. ಆದರೆ ಅವರೂ ಪ್ರವಾದಿಸಲಾರಂಭಿಸಿದರು. ಆದ್ದರಿಂದ ಸೌಲನು ಮೂರನೆಯ ಬಾರಿ ಸಂದೇಶಕರನ್ನು ಕಳುಹಿಸಿದನು, ಅವರೂ ಪ್ರವಾದಿಸಲಾರಂಭಿಸಿದರು. 22ಕಡೆಯದಾಗಿ ಸೌಲನೇ ರಾಮಕ್ಕೆ ಹೋದನು. ಸೇಕೂವಿನಲ್ಲಿ ಕಣದ ಬಳಿ ಇರುವ ದೊಡ್ಡ ಬಾವಿಯ ಸಮೀಪಕ್ಕೆ ಅವನು ಬಂದು, “ಸಮುವೇಲ ಮತ್ತು ದಾವೀದ ಎಲ್ಲಿದ್ದಾರೆ?” ಎಂದು ಕೇಳಿದನು.
ಜನರು, “ರಾಮದ ಹತ್ತಿರವಿರುವ ಪಾಳೆಯದಲ್ಲಿದ್ದಾರೆ” ಎಂದು ಉತ್ತರಕೊಟ್ಟರು.
23ನಂತರ ಸೌಲನು ರಾಮದ ಹತ್ತಿರವಿರುವ ಪಾಳೆಯಕ್ಕೆ ಹೋದನು. ದೇವರಾತ್ಮವು ಸೌಲನ ಮೈಮೇಲೂ ಬಂದಿತು. ಅವನೂ ಪ್ರವಾದಿಸಲಾರಂಭಿಸಿದನು. ಸೌಲನು ರಾಮದ ಪಾಳೆಯದವರೆಗೂ ಪ್ರವಾದಿಸುತ್ತಾ ಹೋದನು. 24ನಂತರ ಸೌಲನು ತಾನು ಧರಿಸಿದ್ದ ಬಟ್ಟೆಗಳನ್ನು ತೆಗೆದುಹಾಕಿದನು. ಸಮುವೇಲನ ಎದುರಿನಲ್ಲಿ ಸೌಲನೂ ಸಹ ಪ್ರವಾದಿಸುತ್ತಿದ್ದನು. ಅಂದು ಹಗಲು ರಾತ್ರಿಯೆಲ್ಲ ಸೌಲನು ಬೆತ್ತಲೆಯಾಗಿ ಅಲ್ಲಿಯೇ ಮಲಗಿದ್ದನು.
ಆದ್ದರಿಂದಲೇ ಜನರು, “ಸೌಲನೂ ಪ್ರವಾದಿಗಳಲ್ಲಿ ಒಬ್ಬನೇ?” ಎಂದು ಹೇಳುತ್ತಾರೆ.

Highlight

Copy

Compare

Share

None

Want to have your highlights saved across all your devices? Sign up or sign in