ಮಲಾಕಿಯ 3
3
1ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.”
2“ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು? 3ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನುಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. 4ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”
5“ಮಾಟಗಾರರಿಗೆ, ಸೂಳೆಗಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ - ಅಂತೂ ನನಗಂಜದ ಎಲ್ಲರಿಗೆ, ಬೇಗನೆ ನ್ಯಾಯತೀರಿಸಿ, ದಂಡನೆ ವಿಧಿಸಲು ನಾನು ಬರುವೆನು,” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
ದಶಮಾಂಶ ಸಲ್ಲಿಸುವುದರಲ್ಲಿ ಮೋಸ
6“ಯಕೋಬನ ಕುಲಪುತ್ರರೇ, ನಾನು ಅದಲುಬದಲಾಗದ ಸರ್ವೇಶ್ವರ, ಈ ಕಾರಣದಿಂದ ನೀವು ಅಳಿಯದೆ ಉಳಿದಿದ್ದೀರಿ. 7ನಿಮ್ಮ ಪೂರ್ವಜರ ಕಾಲದಿಂದಲೂ ನನ್ನ ವಿಧಿಗಳನ್ನು ಅನುಸರಿಸದೆ, ಅಡ್ಡದಾರಿ ಹಿಡಿದಿದ್ದೀರಿ. ಈಗ ಮರಳಿ ನನಗೆ ಅಭಿಮುಖರಾಗಿರಿ. ನಾನು ನಿಮಗೆ ಅಭಿಮುಖನಾಗುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ‘ನಾವು ನಿಮಗೆ ಅಭಿಮುಖರಾಗಲು ಏನು ಮಾಡಬೇಕು?’ ಎಂದು ಕೇಳುತ್ತೀರೋ? 8ನರಮಾನವನು ದೇವರಿಗೆ ಮೋಸಮಾಡಬಹುದೋ? ಆದರೂ ನೀವು ನನಗೆ ಮೋಸಮಾಡುತ್ತಿದ್ದೀರಿ. ‘ನಿಮಗೆ ಹೇಗೆ ಮೋಸಮಾಡುತ್ತಿದ್ದೇವೆ?’ ಎಂದು ಕೇಳುತ್ತೀರೋ? ನೀವು ತೆರೆಬೇಕಾದ ದಶಮಾಂಶದಲ್ಲೂ, ಕೊಡಬೇಕಾದ ಕಾಣಿಕೆಯಲ್ಲೂ ಮೋಸಮಾಡುತ್ತಿದ್ದೀರಿ. 9ನೀವೂ ನಿಮ್ಮ ಜನಾಂಗವೆಲ್ಲವೂ ನನಗೆ ಮೋಸಮಾಡುವುದರಿಂದ ನೀವೆಲ್ಲರೂ ಶಾಪಗ್ರಸ್ತರು. 10ನನ್ನ ಆಲಯದಲ್ಲಿ ಆಹಾರಕ್ಕೆ ಕೊರತೆಯಿಲ್ಲದಿರುವಂತೆ ದಶಮಾಂಶವನ್ನು ಪೂರ್ತಿಯಾಗಿ ನನ್ನ ಭಂಡಾರಕ್ಕೆ ತೆಗೆದುಕೊಂಡು ಬನ್ನಿ. ಆ ಬಳಿಕ ಪರಲೋಕದ ದ್ವಾರಗಳನ್ನು ತೆರೆದು, ತುಂಬಿತುಳುಕುವಷ್ಟು ವರದಾನಗಳನ್ನು ನಿಮ್ಮ ಮೇಲೆ ಸುರಿಸುವೆನೋ ಇಲ್ಲವೋ ಎಂಬುದನ್ನು ಪರೀಕ್ಷಿಸಿನೋಡಿ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. 11“ನಿಮ್ಮ ಭೂಮಿಯ ಬೆಳೆ ಹುಳುಹುಪ್ಪಟೆಗಳಿಂದ ನಾಶವಾಗದಂತೆ ನೋಡಿಕೊಳ್ಳುವೆನು. ನಿಮ್ಮ ತೋಟದಲ್ಲಿ ದ್ರಾಕ್ಷಿಹಣ್ಣು ಉದುರಿಹೋಗದಂತೆ ಮಾಡುವೆನು. 12ಆಗ ಎಲ್ಲ ರಾಷ್ಟ್ರಗಳು ನಿಮ್ಮನ್ನು ಧನ್ಯರೆಂದು ಹೊಗಳುವರು. ನಿಮ್ಮ ನಾಡು ಚೆಲುವಿನ ನಾಡಾಗಿರುವುದು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
ಅಭಯದಾನ
13“ನೀವು ನನಗೆ ಕಠಿಣವಾದ ಮಾತುಗಳನ್ನಾಡಿದ್ದೀರಿ,” ಎನ್ನುತ್ತಾರೆ ಸರ್ವೇಶ್ವರ. “ನೀವು, ‘ನಿನಗೆ ವಿರುದ್ಧವಾಗಿ ನಾವು ಮಾತನಾಡಿದ್ದೇನು?’ ಎಂದು ಕೇಳುತ್ತೀರೋ? 14ದೇವರಿಗೆ ಸೇವೆಮಾಡುವುದು ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು? 15ಅಹಂಕಾರಿಗಳೇ ಭಾಗ್ಯವಂತರು; ದುಷ್ಕರ್ಮಿಗಳು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದಾರೆ, ಅಷ್ಟೇ ಅಲ್ಲ, ದೇವರನ್ನೇ ಪರೀಕ್ಷೆಗೆ ಗುರಿಪಡಿಸಿ ಸುರಕ್ಷಿತವಾಗಿದ್ದಾರೆ,” ಎಂದು ನೀವು ಹೇಳಿದ್ದೀರಿ. 16ಇಂಥ ಮಾತುಗಳನ್ನು ಕೇಳಿ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಸರ್ವೇಶ್ವರ ಅವರಿಗೆ ಕಿವಿಗೊಟ್ಟು ಆಲಿಸಿದರು. ಭಯಭಕ್ತಿಯಿಂದ ತಮ್ಮ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತಮ್ಮ ಮುಂದಿದ್ದ ದಾಖಲೆ ಪುಸ್ತಕದಲ್ಲಿ ಬರೆಸಿದರು. 17ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇವರು ನನ್ನ ಜನರು; ನಾನು ಕಾರ್ಯತತ್ಪರನಾಗುವ ದಿನದಂದು ಅವರು ನನಗೆ ಸ್ವಕೀಯಜನರಾಗಿರುವರು. ತಂದೆಯೊಬ್ಬನು ತನಗೆ ಸೇವೆಮಾಡುವ ಮಗನನ್ನು ಕಾಪಾಡುವಂತೆ ನಾನು ಅವರನ್ನು ಕಾಪಾಡುವೆನು. 18ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ.
Currently Selected:
ಮಲಾಕಿಯ 3: KANCLBSI
Highlight
Copy
Compare
Share
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.