YouVersion Logo
Search Icon

ಯಾಜಕಕಾಂಡ 2

2
ಧಾನ್ಯ ನೈವೇದ್ಯ
1“ಯಾರಾದರು ಸರ್ವೇಶ್ವರ ಸ್ವಾಮಿಗೆ ಧಾನ್ಯವನ್ನು ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿ ಹಿಟ್ಟಾಗಿರಬೇಕು. ಅದರ ಮೇಲೆ ಎಣ್ಣೆಹೊಯ್ದು, ಸಾಂಬ್ರಾಣಿಯನ್ನಿಟ್ಟು, ಅದನ್ನು ಆರೋನನ ವಂಶಜರಾದ ಯಾಜಕರ ಬಳಿಗೆ ತರಬೇಕು. 2ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಯಾಜಕನು ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಹಾಗು ಇಡೀ ಸಾಂಬ್ರಾಣಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ. 3ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಯುವ ಹೋಮಶೇಷವು ಮಹಾಪರಿಶುದ್ಧವಾದುದು.
4“ನೀವು ಒಲೆಯಲ್ಲಿ ಅಡಿಗೆ ಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿ ಹಿಟ್ಟಿನ ಹೋಳಿಗೆಗಳಾಗಿರಲಿ ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳಾಗಿರಲಿ. 5ನೀವು ಅರ್ಪಿಸುವುದು ಕಬ್ಬಿಣದ ಹೆಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿ ಹಿಟ್ಟಿನದಾಗಿರಬೇಕು. 6ಅದನ್ನು ಚೂರುಚೂರಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ದು ಕಾಣಿಕೆಯಾಗಿ ಕೊಡಬೇಕು. 7ನೀವು ಅರ್ಪಿಸುವುದು ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿ ಹಿಟ್ಟಿನದಾಗಿರಬೇಕು. 8ನೀವು ಈ ಮೂರು ವಿಧವಾದ ನೈವೇದ್ಯವನ್ನು ಸಮರ್ಪಿಸುವುದಾದರೆ ಅವುಗಳನ್ನು ಯಾಜಕನಿಗೆ ಒಪ್ಪಿಸಬೇಕು. ಅವನೇ ಅದನ್ನು ಬಲಿಪೀಠದ ಬಳಿಗೆ ತರಲಿ. 9ಯಾಜಕನು ಅದು ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪ ಭಾಗವನ್ನು ಪ್ರತ್ಯೇಕಿಸಿ ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ. 10ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶಜರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಕೆಯಾದದ್ದು ಮಹಾಪರಿಶುದ್ಧವಾದುದು.
11“ನೀವು ಸರ್ವೇಶ್ವರನಿಗೆ ಕಾಣಿಕೆಯಾಗಿ ಸಮರ್ಪಿಸುವ ಯಾವ ಧಾನ್ಯದ ಪದಾರ್ಥವನ್ನಾಗಲಿ ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಸಿಹಿಪದಾರ್ಥವನ್ನಾಗಲಿ ಸರ್ವೇಶ್ವರನಿಗೆ ಹೋಮಮಾಡಕೂಡದು. 12ಅವುಗಳನ್ನು ಪ್ರಥಮ ಫಲವಾಗಿ ಸರ್ವೇಶ್ವರನಿಗೆ ಸಮರ್ಪಿಸಬಹುದೇ ಹೊರತು ಬಲಿಪೀಠದ ಮೇಲೆ ಸುವಾಸನೆಯನ್ನುಂಟುಮಾಡುವುದಕ್ಕಾಗಿ ಹೋಮ ಮಾಡಕೂಡದು. 13ನೈವೇದ್ಯವಾಗಿ ಸಮರ್ಪಿಸುವ ಎಲ್ಲ ಆಹಾರ ಪದಾರ್ಥಗಳಿಗೂ ಉಪ್ಪು ಹಾಕಿಯೆ ಸಮರ್ಪಿಸಬೇಕು. ಉಪ್ಪು ಸರ್ವೇಶ್ವರನ ಸಂಗಡ ನಿಮಗಿರುವ ಒಡಂಬಡಿಕೆಯ ಸೂಚನೆ. ಆದ್ದರಿಂದ ಅದು ಯಾವ ನೈವೇದ್ಯ ದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲ ಪದಾರ್ಥಗಳಲ್ಲಿಯೂ ಉಪ್ಪು ಸೇರಿಸಿಯೇ ಇರಬೇಕು.
14“ನೀವು ಸರ್ವೇಶ್ವರನಿಗೆ ಪ್ರಥಮ ಧಾನ್ಯ ನೈವೇದ್ಯವನ್ನು ಮಾಡಬೇಕಾದರೆ ಅದು ಬೆಂಕಿಯಲ್ಲಿ ಸುಟ್ಟ ಗೋದಿಯ ಹಸಿ ತೆನೆಗಳಾಗಿರಬೇಕು. 15ಅದು ನೈವೇದ್ಯ ವಸ್ತುವಾದುದರಿಂದ ಅದರ ಮೇಲೆ ಎಣ್ಣೆ ಹೊಯ್ಯಬೇಕು; ಸಾಂಬ್ರಾಣಿ ಇಡಬೇಕು. 16ಯಾಜಕನು ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಆ ಗೋದಿ ತೆನೆಯಿಂದಲೂ, ಎಣ್ಣೆಯಿಂದಲೂ ಸ್ವಲ್ಪ ಭಾಗವನ್ನು ತೆಗೆದುಕೊಂಡು ಸಾಂಬ್ರಾಣಿಯನ್ನೆಲ್ಲ ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಸರ್ವೇಶ್ವರನಿಗೆ ಹೋಮಮಾಡಲಿ.

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy