ಯೆಶಾಯ 26
26
ಜಯಗೀತೆ
1ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು :
ನಮಗಿದೆ ಸುಭದ್ರ ನಗರ,
ದೇವರೇ ಅದರ ದುರ್ಗ, ಪ್ರಾಕಾರ.
2ತೆರೆಯಿರಿ ನಗರ ದ್ವಾರಗಳನು,
ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.
3ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ,
ಚಿರಶಾಂತಿಯ ನೀ ನೀಡುವೆ.
4ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ,
ಸತತ ಭರವಸೆಯಿಡಿರಿ ಆತನಲ್ಲೇ.
5ತಗ್ಗಿಸುವನಾತ ಎತ್ತರದಲಿ ವಾಸಿಸುವವರನು,
ಕೆಡವಿ, ನೆಲಸಮಮಾಡಿ, ಧೂಳಾಗಿಸುವನು
ಅವರು ವಾಸಮಾಡುವಾ ಉನ್ನತ ನಗರವನು.
6ಈಡಾಗುವುದದು ಕಾಲತುಳಿತಕೆ
ದೀನದಲಿತರ ಪಾದತುಳಿತಕೆ.
7ನೇರವಾಗಿದೆ ಸಜ್ಜನನ ದಾರಿ
ಸುಗಮವಾಗಿದೆ ನಿನ್ನಿಂದ ಆತನ ಹಾದಿ.
8ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು
ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು
ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು.
9ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು
ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು.
ನೀನೀಯುವಾಗ ಜಗಕೆ ನ್ಯಾಯತೀರ್ಪನು
ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು.
10ದಯೆತೋರಿದರೂ ಕಲಿಯನು ದುಷ್ಟನು ಆ ನ್ಯಾಯನೀತಿಯನು
ಧರ್ಮಕ್ಷೇತ್ರದೊಳು ಸಹ ಗೈವನು ಅಕ್ರಮವನು
ಗೌರವಿಸನು ಸರ್ವೇಶ್ವರನ ಮಹಿಮೆಯನು.
11ಅವರ ಮೇಲೆ ನೀ ಕೈಯೆತ್ತಿದರೂ,
ಸರ್ವೇಶ್ವರಾ, ಲಕ್ಷಿಸರವರು ನಿನ್ನನ್ನು.
ನಾಚಲಿ ಅವರು ನೋಡಿ ನಿನ್ನ ಸ್ವಜನಾಭಿಮಾನವನು
ದಹಿಸಿಬಿಡಲಿ ಅಗ್ನಿಜ್ವಾಲೆಯು ಆ ನಿನ್ನ ವಿರೋಧಿಗಳನು.
12ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ
ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ.
13ನಮ್ಮ ದೇವರಾದ ಸರ್ವೇಶ್ವರಾ, ಇಗೋ, ನೋಡು
ನಮ್ಮನಾಳಿಹರು ಭೂರಾಜರು ನಿನ್ನ ಬಿಟ್ಟು,
ಆದರೇನು, ಹೊಗಳುವೆವು ನಿನ್ನ ನಾಮವನೆ ಮುನ್ನಿಟ್ಟು.
14ಮಡಿದುಹೋದರು ಆ ಒಡೆಯರೆಲ್ಲ
ಮರಳಿ ಅವರ ಪ್ರೇತಗಳು ಎದ್ದುಬರುವಂತಿಲ್ಲ.
ನೀನವರನು ಬಡಿದು ನಸುಕಿಹಾಕಿರುವೆ
ಅವರ ನೆನಪನೆ ಅಳಿಸಿಹಾಕಿರುವೆ.
15ಹೆಚ್ಚಿಸಿರುವೆ ಸರ್ವೇಶ್ವರಾ, ನಿನ್ನ ಜನರನು
ಹೌದು, ವೃದ್ಧಿಗೊಳಿಸಿರುವೆ ನಿನ್ನ ಪ್ರಜೆಯನು.
ವಿಸ್ತರಿಸಿರುವೆ ನಾಡಿನ ಮೇರೆಗಳನು
ಈಪರಿ ಪಡೆದಿರುವೆ ಮಹಿಮೆಯನು.
16ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ
ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ.
17ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ
ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ
ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ.
18ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ
ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ
ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.
19ಬದುಕುವರು ನಿಧನರಾದ ನಮ್ಮ ಜನರು
ಜೀವದಿಂದೇಳುವುವು ನಮ್ಮವರ ಶವಗಳು.
ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು.
ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ
ಸತ್ತವರು ಪುನರುತ್ಥಾನಹೊಂದುವರು ನೆಲದಿಂದ.
ದೈವದಂಡನೆ
20ನನ್ನ ಜನರೇ, ಹೋಗಿ; ನಿಮ್ಮ ನಿಮ್ಮ ಮನೆಗಳನ್ನು ಸೇರಿ ಬಾಗಿಲು ಮುಚ್ಚಿಕೊಳ್ಳಿ. ದೇವರ ಕೋಪ ತೀರುವತನಕ ಕೊಂಚಕಾಲ ಅವಿತುಕೊಳ್ಳಿ. 21ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.
Currently Selected:
ಯೆಶಾಯ 26: KANCLBSI
Highlight
Copy
Compare
Share
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.