YouVersion Logo
Search Icon

ಯೆಶಾಯ 24

24
ಧರೆಗೆ ಬರಲಿದೆ ದುರ್ಗತಿ
1ಇಗೋ, ಸರ್ವೇಶ್ವರ ಬರಿದುಮಾಡುವರು ಧರೆಯನು,
ನಿರ್ಜನ ಪ್ರದೇಶವಾಗಿಸುವರು ವಿರೂಪಗೊಳಿಸಿ ಅದನು,
ಚದರಿಸುವರು ಅದರ ನಿವಾಸಿಗಳನು.
2ಪ್ರಜೆಗೆ ಹೇಗೋ ಹಾಗೆ ಯಾಜಕನಿಗೆ,
ದಾಸನಿಗೆ ಹೇಗೋ ಹಾಗೆ ದಣಿಗೆ ,
ದಾಸಿಗೆ ಹೇಗೋ ಹಾಗೆ ಯಜಮಾನಿಗೆ,
ಕೊಳ್ಳುವವನಿಗೆ ಹೇಗೋ ಹಾಗೆ ಕೊಡುವವನಿಗೆ,
ಸಾಲ ಕೊಡುವವನಿಗೆ ಹೇಗೋ ಹಾಗೆ ಸಾಲ ಪಡೆಯುವವನಿಗೆ,
ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆ ಬಡ್ಡಿ ತೆರುವವನಿಗೆ,
ಬರುವುದು ಒಂದೇ ಗತಿ ಇವರೆಲ್ಲರಿಗೆ.
3ಬೆಟ್ಟ ಬರಿದಾಗಿ ಸಂಪೂರ್ಣ ಸುಲಿಗೆಯಾಗುವುದು ಜಗವು,
ಸರ್ವೇಶ್ವರ ಸ್ವಾಮಿಯ ನುಡಿಗಳಿವು:
4ಸೊರಗಿಹೋಗುವುದು ಲೋಕ ದುಃಖಿಸುತ್ತಾ
ಕುಗ್ಗಿಹೋಗುವುದು ಬುವಿ ಗೋಳಾಡುತ್ತಾ
ಕಂಗೆಟ್ಟುಹೋಗುವನು ಪ್ರತಿಯೊಬ್ಬ ವಿಶ್ವವಿಖ್ಯಾತ.
5ಭೂನಿವಾಸಿಗಳು ಮೀರಿಹರು ದೈವಾಜ್ಞೆಗಳನು
ಉಲ್ಲಂಘಿಸಿಹರು ದೈವನಿಯಮಗಳನು,
ಭಂಗಪಡಿಸಿಹರು ಶಾಶ್ವತ ಒಡಂಬಡಿಕೆಯನ್ನು,
ಮಲಿನವಾಗಿಸಿಹರು ನಡತೆಯಿಂದ ಲೋಕವನು.
6ಇದಕಾರಣ ಕಬಳಿಸಿದೆ ಜಗವನು ಶಾಪ,
ತಟ್ಟಿದೆ ಆ ಜನರಿಗೆ ದಂಡನೆಯ ತಾಪ.
ಸುಟ್ಟಮೇಲೆ ಉಳಿದಿಹರು ಅವರಲಿ ಕೆಲವರು ಮಾತ್ರ.
7ಬಾಡಿಹೋಗಿದೆ ದ್ರಾಕ್ಷಾಲತೆ,
ದುಬಾರಿಯಾಗಿದೆ ದ್ರಾಕ್ಷಾರಸ,
ನರಳುತಿದೆ ನಲಿಯುತ್ತಿದ್ದ ಜನಸಮೂಹ.
8ನಿಂತುಹೋಗಿದೆ ದಮ್ಮಡಿಗಳ ಹರ್ಷನಾದ,
ಕೊನೆಗೊಂಡಿದೆ ಉಲ್ಲಾಸಿಗಳ ಕೋಲಾಹಲ,
ಅಡಗಿಹೋಗಿದೆ ಕಿನ್ನರಿಯ ಮಧುರಸ್ವರ.
9ಇನ್ನಿಲ್ಲ ಮದ್ಯಪಾನ ಗೀತಾಗಾನ,
ಕಹಿಪಾನವಾಯಿತು ಕುಡುಕನಿಗೆ ಸುರಾಪಾನ.
10ಪಾಳುಬಿದ್ದಿದೆ ಅಸ್ತವ್ಯಸ್ತವಾದ ನಗರ,
ಯಾರೂ ಪ್ರವೇಶಿಸದಂತೆ ಮುಚ್ಚಿದೆ ಪ್ರತಿಯೊಂದು ಗೃಹ.
11ಮದ್ಯಪಾನವಿಲ್ಲವೆಂದು ಬೀದಿಗಳಲಿ ಬೊಬ್ಬೆ ಇಡುತಿಹರೆಲ್ಲ,
ಅಸ್ತಮಿಸಿಹೋಯಿತು ಜಗದ ಉಲ್ಲಾಸವೆಲ್ಲ,
ಸೆರೆಯಾಗಿ ತೊಲಗಿತು ಅದರ ಸಡಗರವೆಲ್ಲ.
12ಪಾಳುಬಿದ್ದಿದೆ ನಗರ,
ಮುರಿದು ಬಿದ್ದಿದೆ ಪುರದ್ವಾರ.
13ಉಳಿಯುವುವು ಜನಾಂಗಗಳು ಜಗದ ಮಧ್ಯೆ,
ಎಣ್ಣೆಯ ಬೀಜವನು ಉದುರಿಸಿದ ಮೇಲೆ ಮಿಗುವ ಹೀಚಿನಂತೆ,
ದ್ರಾಕ್ಷಿ ಹಣ್ಣನು ಕೊಯ್ದ ಮೇಲೆ ಉಳಿದ ಕೂಳೆಯಂತೆ.
14ಆರ್ಭಟಿಸುವರು ಅಳಿದುಳಿದವರು ಆನಂದದಿಂದ,
ಕೊಂಡಾಡುವರು ಸರ್ವೇಶ್ವರನ ಮಹಿಮೆಯನು ಪಡುವಣದಿಂದ,
15ಎಂದೇ ಮೂಡಣದವರೇ, ಸನ್ಮಾನಿಸಿರಿ ಸರ್ವೇಶ್ವರ ಸ್ವಾಮಿಯನು,
ಕರಾವಳಿಯವರೇ, ಘನಪಡಿಸಿರಿ ಇಸ್ರಯೇಲಿನ ದೇವರಾದ ಸ್ವಾಮಿಯ ನಾಮವನು.
16ಜಗದ ಕಟ್ಟಕಡೆಯಿಂದ ಕೇಳಿಬರುತಿದೆ,
‘ಸತ್ಯಸ್ವರೂಪನಿಗೆ ಸ್ತೋತ್ರ’ ಎಂಬ ಗೀತೆ.
ಆದರೆ ನಶಿಸಿಹೋಗುತ್ತಿರುವೆನು ನಾನು,
ಹೌದು, ನಶಿಸಿ ನಾಶವಾಗುತ್ತಿರುವೆನು,
ಏನೆಂದು ಹೇಳಲಿ ನನ್ನ ಗತಿಯನು.
ಇದೋ, ಬಾಧಿಸುತ್ತಿಹರು ದ್ರೋಹಿಗಳು,
ದ್ರೋಹದ ಮೇಲೆ ದ್ರೋಹವೆಸಗುತಿಹರು.
17ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು,
ಕಾದಿದೆ ನಿಮಗೆ ಭಯಭೀತಿ, ಕುಳಿ ಮತ್ತು ಬಲೆಯು.
18ಬೀಳುವನು ಕುಳಿಯಲ್ಲಿ, ಭಯಭೀತಿಯ ಸಪ್ಪಳಕ್ಕೆ ಓಡಿಹೋಗುವವನು,
ಸಿಕ್ಕಿಬೀಳುವನು ಬಲೆಯಲ್ಲಿ ಕುಳಿಯ ಹತ್ತಿ ಬರುವವನು.
ತೆರೆದಿವೆ ನೋಡಿ, ಆಕಾಶದ ದ್ವಾರಗಳು,
ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು.
19ಬಿರುಕು ಬಿಡುವುದು ಭೂಮಿ ಸೀಳುಪಾಳಾಗಿ
ಕತ್ತರಿಸುವುದು ಕದಲಿಹೋಗಿ.
20ಓಲಾಡುವುದು ಭೂಮಿ ಅಮಲೇರಿದವನಂತೆ,
ತೂಗಾಡುವುದು ಬಿರುಗಾಳಿಗೆ ಸಿಕ್ಕಿದ ಗುಡಿಸಲಂತೆ,
ಕುಸಿದು ಬೀಳುವುದು ದ್ರೋಹದ ಭಾರಕೆ, ಮರಳಿ ಏಳದಂತೆ.
21ಆ ದಿನ ಸರ್ವೇಶ್ವರ ದಂಡಿಸುವರು ಮೇಲಣ ಸೇನಾಶೂರರನು,
ಕೆಳಗಣ ಭೂ ರಾಜರನು.
22ತಳ್ಳುವವರನು ಖೈದಿಗಳ ಗುಂಪಿನಂತೆ ನೆಲಮಾಳಿಗೆಗೆ,
ಇರುವರವರು ಸೆರೆಯಲಿ ಬಹುದಿನಗಳವರೆಗೆ,
ತದನಂತರ ಗುರಿಯಾಗುವರು ದಂಡನೆಗೆ.
23ನಾಚುವನು ಚಂದ್ರ, ಹೇಸುವನು ಸೂರ್ಯ,
ಏಕೆನೆ ಆಳುವರು ಸೇನಾಧೀಶ್ವರ ಸರ್ವೇಶ್ವರ
ಸಿಯೋನ್ ಪರ್ವತದೊಳು, ಜೆರುಸಲೇಮ್ ನಗರದೊಳು.
ಪ್ರತ್ಯಕ್ಷವಾಗುವುದಾತನ ಮಹಿಮಾಪ್ರಭಾವವು,
ಅಲ್ಲಿನ ಜನನಾಯಕರ ಸಮ್ಮುಖದೊಳು.

Currently Selected:

ಯೆಶಾಯ 24: KANCLBSI

Highlight

Copy

Compare

Share

None

Want to have your highlights saved across all your devices? Sign up or sign in