YouVersion Logo
Search Icon

ಯಾಜಕಕಾಂಡ 5

5
ತಿಳಿಯದೆ ಮಾಡುವ ಪಾಪಗಳು
1“ನ್ಯಾಯಾಧಿಕಾರಿಯು ತಿಳಿಸಬೇಕೆಂದು ಕೇಳಿದರೂ ಒಬ್ಬನು ತಾನು ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ತಿಳಿಸದೆ ಹೋದರೆ ಅವನು ಪಾಪಕ್ಕೆ ಗುರಿಯಾಗಿದ್ದಾನೆ.
2“ಯಾವನಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವನ್ನಾಗಲಿ ಅಥವಾ ಬೇರೆ ಯಾವ ಅಶುದ್ಧ ವಸ್ತುವನ್ನಾಗಲಿ ಮುಟ್ಟಿದರೆ ತಾನು ಮುಟ್ಟಿದ್ದು ತಿಳಿಯದಿದ್ದರೂ ಅವನು ಅಶುದ್ಧನೂ ದೋಷಿಯೂ ಆಗಿರುವನು.
3“ಒಬ್ಬನು ಮತ್ತೊಬ್ಬನ ದೇಹದೊಳಗಿಂದ ಬರುವ ಯಾವುದಾದರೂ ಅಶುದ್ಧ ವಸ್ತುವನ್ನು ತಿಳಿಯದೆ ಮುಟ್ಟಿದರೂ, ತಿಳಿದುಬಂದಾಗ ಅವನು ದೋಷಿಯಾಗುವನು.
4“ಒಬ್ಬನು ಆಲೋಚಿಸದೆ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಮಾತುಕೊಟ್ಟು ಮರೆತುಬಿಟ್ಟರೆ, ಅದು ಅವನ ನೆನಪಿಗೆ ಬಂದಾಗ ಅವನು ದೋಷಿಯಾಗುವನು. 5ಈ ವಿಷಯಗಳಲ್ಲಿ ಯಾವುದಾದರೊಂದರಲ್ಲಿ ದೋಷಿಯಾದರೆ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಅರಿಕೆ ಮಾಡಬೇಕು. 6ಅವನು ದೋಷಪರಿಹಾರಕ್ಕಾಗಿ ಹೆಣ್ಣು ಕುರಿಮರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ ಯಜ್ಞವಾಗಿ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.
7“ಅವನು ಕುರಿಮರಿಯನ್ನು ಕೊಡುವುದಕ್ಕೆ ಶಕ್ತನಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಅವುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವನ್ನಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಸಮರ್ಪಿಸಬೇಕು. 8ಅವನು ಅವುಗಳನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಮೊದಲು ಒಂದು ಪಕ್ಷಿಯನ್ನು ದೋಷಪರಿಹಾರಕ ಯಜ್ಞವನ್ನಾಗಿ ಅರ್ಪಿಸುವನು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿಯುವನು. ಆದರೆ ಯಾಜಕನು ಪಕ್ಷಿಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದಿಲ್ಲ. 9ಯಾಜಕನು ದೋಷಪರಿಹಾರಕ ಯಜ್ಞದಿಂದ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬದಿಯಲ್ಲಿ ಚಿಮಿಕಿಸಬೇಕು. ಬಳಿಕ ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 10ತರುವಾಯ ಯಾಜಕನು ಎರಡನೆಯ ಪಕ್ಷಿಯನ್ನು ಸರ್ವಾಂಗಹೋಮದ ವಿಧಿಗಳಿಗನುಸಾರವಾಗಿ ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಅವನನ್ನು ಕ್ಷಮಿಸುವನು.
11“ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅವನು ಶಕ್ತನಾಗಿಲ್ಲದಿದ್ದರೆ, ಆಗ ಅವನು ಎಂಟು ಬಟ್ಟಲು#5:11 ಎಂಟು ಬಟ್ಟಲು ಅಕ್ಷರಶಃ, “1/10 ಏಫಾ.” ಶ್ರೇಷ್ಠ ಗೋಧಿಹಿಟ್ಟನ್ನು ತರಬೇಕು. ಇದು ಅವನ ಪಾಪಪರಿಹಾರಕ ಯಜ್ಞವಾಗಿರುವುದು. ಅವನು ಹಿಟ್ಟಿಗೆ ಎಣ್ಣೆಯನ್ನು ಹಾಕಬಾರದು. ಅವನು ಅದರ ಮೇಲೆ ಸುಗಂಧ ಧೂಪವನ್ನು ಇಡಬಾರದು, ಯಾಕೆಂದರೆ ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 12ಅವನು ಹಿಟ್ಟನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಒಂದು ಹಿಡಿಹಿಟ್ಟನ್ನು ಅದರಿಂದ ತೆಗೆದು ದೇವಾರ್ಪಿತವಾಯಿತೆಂದು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿರುವುದು. ಅದು ಪಾಪಪರಿಹಾರಕ ಸಮರ್ಪಣೆಯಾಗಿದೆ. 13ಹೀಗೆ ಆ ವ್ಯಕ್ತಿಯನ್ನು ಅವನ ದೋಷಗಳಿಂದ ಶುದ್ಧೀಕರಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು. ಧಾನ್ಯನೈವೇದ್ಯದಲ್ಲಿರುವಂತೆಯೇ ಯಜ್ಞದಲ್ಲಿ ಉಳಿದ ಭಾಗವು ಯಾಜಕನಿಗೆ ಸೇರಿದೆ. ಧಾನ್ಯಸಮರ್ಪಣೆಯಲ್ಲಿಯೂ ಉಳಿದ ಭಾಗವು ಯಾಜಕನಿಗೆ ಸೇರಿದೆ.”
14ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 15“ಒಬ್ಬನು ಯೆಹೋವನ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮೀರಿ ನಡೆದು ತಿಳಿಯದೆ ತಪ್ಪು ಮಾಡಿದರೆ ಅವನು ಅಂಗದೋಷವಿಲ್ಲದ ಟಗರನ್ನು ತರಬೇಕು. ಇದು ಅವನಿಗಾಗಿ ಯೆಹೋವನಿಗೆ ಸಮರ್ಪಣೆಯಾಗುವ ದೋಷಪರಿಹಾರಕ ಯಜ್ಞ. ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಟಗರಿನ ಬೆಲೆಯನ್ನು ಗೊತ್ತುಮಾಡಬೇಕು.” 16ಆ ವ್ಯಕ್ತಿಯೂ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮಾಡಿದ ಪಾಪಕ್ಕಾಗಿ ಈ ಬೆಲೆಯನ್ನು ತೆರಬೇಕು. ಇದಲ್ಲದೆ ಆ ಬೆಲೆಯ ಐದನೆಯ ಒಂದು ಭಾಗವನ್ನು ಸೇರಿಸಿ ಆ ಹಣವನ್ನು ಯಾಜಕನಿಗೆ ಕೊಡಬೇಕು. ಈ ರೀತಿಯಾಗಿ ಯಾಜಕನು ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವುದರ ಮೂಲಕ ಅವನನ್ನು ಶುದ್ಧಿಮಾಡುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
17“ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದಾದರೊಂದನ್ನು ಮಾಡಿ ದೋಷಕ್ಕೆ ಗುರಿಯಾಗಿದ್ದರೆ, ಅದು ಅವನಿಗೆ ತಿಳಿದಿಲ್ಲದಿದ್ದರೂ ಅವನು ಆ ಪಾಪಫಲವನ್ನು ಅನುಭವಿಸಬೇಕು. 18ಅವನು ಅಂಗದೋಷವಿಲ್ಲದ ಮತ್ತು ಸರಿಯಾದ ಬೆಲೆಬಾಳುವ ಟಗರನ್ನು ಯಾಜಕನ ಬಳಿಗೆ ತರಬೇಕು. ಟಗರು ದೋಷಪರಿಹಾರಕ ಯಜ್ಞವಾಗಿರುವುದು. ಹೀಗೆ ಯಾಜಕನು ತಿಳಿಯದೆ ಮಾಡಿದ ಪಾಪದಿಂದ ಅವನನ್ನು ಶುದ್ಧಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು. 19ಅವನು ದೋಷಿಯಾದ್ದರಿಂದ ಯೆಹೋವನಿಗೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಬೇಕು.”

Highlight

Copy

Compare

Share

None

Want to have your highlights saved across all your devices? Sign up or sign in