Bible App logo
Search Icon

ಯೆಹೋಶುವನು 5

5
1ಇಸ್ರೇಲರು ಜೋರ್ಡನ್ ನದಿಯನ್ನು ದಾಟುವವರೆಗೆ ಯೆಹೋವನು ಆ ನದಿಯನ್ನು ಬತ್ತಿಸಿದನು. ಜೋರ್ಡನ್ ನದಿಯ ಪಶ್ಚಿಮ ದಿಕ್ಕಿನಲ್ಲಿರುವ ಅಮೋರಿಯರ ಅರಸರು ಮತ್ತು ಭೂಮಧ್ಯ ಸಾಗರದ ಹತ್ತಿರವಿರುವ ಕಾನಾನ್ಯರ ಅರಸರು ಈ ಸಂಗತಿಯನ್ನು ಕೇಳಿ ಭಯಗ್ರಸ್ತರಾದರು; ಇಸ್ರೇಲರ ವಿರುದ್ಧವಾಗಿ ಹೋರಾಡುವಷ್ಟು ಧೈರ್ಯವಿಲ್ಲದವರಾದರು.
ಇಸ್ರೇಲಿನ ಜನರಿಗೆ ಸುನ್ನತಿ ಮಾಡಲಾಯಿತು
2ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ, “ಕಲ್ಲುಗಳಿಂದ ಚೂರಿಗಳನ್ನು ಮಾಡಿಸಿ ಇಸ್ರೇಲಿನ ಗಂಡಸರಿಗೆ ಇನ್ನೊಮ್ಮೆ ಸುನ್ನತಿಯನ್ನು ಮಾಡಿಸು” ಎಂದು ಹೇಳಿದನು.
3ಯೆಹೋಶುವನು ಕಲ್ಲುಗಳಿಂದ ಚೂರಿಗಳನ್ನು ಮಾಡಿಸಿ ಇಸ್ರೇಲರಿಗೆ ಗಿಬೆಯತ್ ಹಾರಲೋತ್‌ನಲ್ಲಿ#5:3 ಗಿಬೆಯತ್ ಹಾರಲೋತ್ ಈ ಹೆಸರಿನ ಅರ್ಥ, “ಸುನ್ನತಿ ಗುಡ್ಡ.” ಸುನ್ನತಿಯನ್ನು ಮಾಡಿದನು.
4-7ಯೆಹೋಶುವನು ಸುನ್ನತಿ ಮಾಡಲು ಕಾರಣವೇನೆಂದರೆ: ಈಜಿಪ್ಟನ್ನು ಬಿಟ್ಟುಹೊರಟಾಗ ಸೈನ್ಯಸೇರಲು ಯೋಗ್ಯರಾದ ಇಸ್ರೇಲಿನ ಗಂಡಸರಿಗೆ ಸುನ್ನತಿಯಾಗಿತ್ತು. ಅವರು ಮರುಭೂಮಿಯಲ್ಲಿದ್ದಾಗ ಅನೇಕ ಯುದ್ಧವೀರರು ಯೆಹೋವನಿಗೆ ಕಿವಿಗೂಡಲಿಲ್ಲ. ಆದಕಾರಣ, “ಹಾಲೂ ಜೇನೂ ಹರಿಯುವ ವಾಗ್ದತ್ತ ನಾಡನ್ನು” ಆ ಜನರು ಕಾಣುವುದಿಲ್ಲ ಎಂದು ಯೆಹೋವನು ಪ್ರಮಾಣ ಮಾಡಿದನು. ನಮ್ಮ ಪೂರ್ವಿಕರಿಗೆ ಆ ಭೂಮಿಯನ್ನು ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಆ ಜನರು ಯೆಹೋವನ ಮಾತನ್ನು ಕೇಳದೆ ಅವಿಧೇಯರಾದ ಕಾರಣ ಆತನು ಅವರನ್ನು ನಲವತ್ತು ವರ್ಷಗಳ ಕಾಲ ಅಂದರೆ ಆ ಯೋಧರು ಸಾಯುವವರೆಗೆ ಮರುಭೂಮಿಯಲ್ಲಿ ಅಲೆದಾಡುವಂತೆ ಮಾಡಿದನು. ಆ ಎಲ್ಲ ಯುದ್ಧವೀರರು ಸತ್ತುಹೋದರು ಮತ್ತು ಅವರ ಸ್ಥಾನಕ್ಕೆ ಅವರ ಗಂಡುಮಕ್ಕಳು ಬಂದರು. ಆದರೆ ಈಜಿಪ್ಟಿನಿಂದ ಹೊರಟು ಮರುಭೂಮಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹುಟ್ಟಿದ ಯಾವ ಗಂಡುಮಕ್ಕಳಿಗೂ ಸುನ್ನತಿ ಆಗಿರಲಿಲ್ಲ. ಅದಕ್ಕಾಗಿ ಯೆಹೋಶುವನು ಅವರಿಗೆ ಸುನ್ನತಿ ಮಾಡಿಸಿದನು.
8ಯೆಹೋಶುವನು ಅವರೆಲ್ಲರಿಗೂ ಸುನ್ನತಿ ಮಾಡಿಸಿದನು. ಅವರೆಲ್ಲರ ಗಾಯಗಳು ವಾಸಿಯಾಗುವವರೆಗೆ ಅವರು ಅಲ್ಲಿಯೇ ತಮ್ಮತಮ್ಮ ಸ್ಥಳದ ಪಾಳೆಯದಲ್ಲಿ ಇದ್ದರು.
ಕಾನಾನಿನಲ್ಲಿ ಮೊದಲನೆಯ ಪಸ್ಕಹಬ್ಬ
9ಆಗ ಯೆಹೋವನು ಯೆಹೋಶುವನಿಗೆ, “ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಅವಮಾನಕ್ಕೆ ಗುರಿಯಾಗಿದ್ದಿರಿ. ಆದರೆ ಇಂದು ಆ ನಾಚಿಕೆಯನ್ನು ತೆಗೆದು ಹಾಕಿದ್ದೇನೆ” ಎಂದನು. ಆದ್ದರಿಂದ ಯೆಹೋಶುವನು ಆ ಸ್ಥಳಕ್ಕೆ “ಗಿಲ್ಗಾಲ್” ಎಂದು ಹೆಸರಿಟ್ಟನು. ಈಗಲೂ ಆ ಸ್ಥಳಕ್ಕೆ “ಗಿಲ್ಗಾಲ್” ಎಂಬ ಹೆಸರಿದೆ.
10ಇಸ್ರೇಲರು ಇನ್ನೂ ಗಿಲ್ಗಾಲಿನಲ್ಲಿಯೇ ಇಳಿದುಕೊಂಡಿದ್ದಾಗ ಜೆರಿಕೊವಿನ ಮೈದಾನಗಳಲ್ಲಿ ಅವರು ಆ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಪಸ್ಕಹಬ್ಬವನ್ನು ಆಚರಿಸಿದರು. 11ಪಸ್ಕಹಬ್ಬದ ಮರುದಿನ ಮುಂಜಾನೆಯಲ್ಲಿ ಅವರು ಆ ಭೂಮಿಯಲ್ಲಿ ಬೆಳೆದ ಆಹಾರವನ್ನು ಊಟಮಾಡಿದರು; ಅವರು ಹುಳಿ ರಹಿತವಾದ ರೊಟ್ಟಿಯನ್ನು ಮತ್ತು ಹುರಿದ ಕಾಳುಗಳನ್ನು ಊಟ ಮಾಡಿದರು. 12ಮೂರನೆಯ ದಿನ ಮುಂಜಾನೆ ಪರಲೋಕದಿಂದ ಬರುತ್ತಿದ್ದ ವಿಶಿಷ್ಟ ಆಹಾರವಾದ ಮನ್ನವು ನಿಂತುಹೋಯಿತು. ಜನರು ಕಾನಾನ್ ಪ್ರದೇಶದಲ್ಲಿ ಬೆಳೆದ ಆಹಾರವನ್ನು ತಿಂದ ದಿನದಿಂದ ಹೀಗಾಯಿತು. ಅಂದಿನಿಂದ ಇಸ್ರೇಲರು ಪರಲೋಕದ ವಿಶಿಷ್ಟವಾದ ಆಹಾರವನ್ನು ಪಡೆಯಲಿಲ್ಲ.
ಯೆಹೋವನ ಸೇನಾಧಿಪತಿ
13ಯೆಹೋಶುವನು ಜೆರಿಕೊವಿನ ಸಮೀಪದಲ್ಲಿದ್ದಾಗ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಅವನ ಎದುರಿಗೆ ನಿಂತಿರುವುದನ್ನು ಕಂಡನು. ಆ ಮನುಷ್ಯನ ಕೈಯಲ್ಲಿ ಒಂದು ಖಡ್ಗವಿತ್ತು. ಯೆಹೋಶುವನು ಆ ಮನುಷ್ಯನ ಹತ್ತಿರಹೋಗಿ, “ನೀನು ನಮ್ಮ ಜನರ ಸ್ನೇಹಿತನೋ ಅಥವಾ ನೀನು ನಮ್ಮ ಶತ್ರುಗಳಲ್ಲಿ ಒಬ್ಬನೋ?” ಎಂದು ಕೇಳಿದನು.
14ಆ ಮನುಷ್ಯನು, “ನಾನು ಶತ್ರುವಲ್ಲ, ನಾನು ಯೆಹೋವನ ಸೇನಾಧಿಪತಿ. ನಾನು ಈಗಲೇ ನಿನ್ನಲ್ಲಿಗೆ ಬಂದಿದ್ದೇನೆ” ಎಂದು ಉತ್ತರಿಸಿದನು.
ಆಗ ಯೆಹೋಶುವನು ನೆಲದವರೆಗೂ ತಲೆಬಾಗಿ ನಮಸ್ಕರಿಸಿ ಅವನಿಗೆ, “ನಾನು ನಿನ್ನ ಸೇವಕ. ನನ್ನ ಒಡೆಯನು ನನಗೆ ಯಾವುದಾದರೂ ಆಜ್ಞೆಯನ್ನು ವಿಧಿಸಬೇಕಾಗಿದೆಯೇ?” ಎಂದು ಕೇಳಿದನು.
15ಯೆಹೋವನ ಸೇನಾಧಿಪತಿಯು, “ನಿನ್ನ ಪಾದರಕ್ಷೆಗಳನ್ನು ಬಿಚ್ಚಿಬಿಡು. ಈಗ ನೀನು ನಿಂತುಕೊಂಡಿರುವ ಸ್ಥಳವು ಪವಿತ್ರವಾದದ್ದು” ಎಂದು ಹೇಳಿದನು. ಯೆಹೋಶುವನು ಅವನು ಹೇಳಿದಂತೆಯೇ ಮಾಡಿದನು.

Highlight

Copy

Compare

Share

None

Want to have your highlights saved across all your devices? Sign up or sign in