YouVersion Logo
Search Icon

ಅ. ಕೃ. 7

7
ಸ್ತೆಫನನ ಬೋಧನೆ
1ಆಗ ಮಹಾಯಾಜಕನು, “ಈ ಸಂಗತಿಗಳು ಸತ್ಯವೋ?” ಎಂದು ಸ್ತೆಫನನನ್ನು ಕೇಳಿದ್ದಕ್ಕೆ ಅವನು, “ಸಹೋದರರೇ, ತಂದೆಗಳೇ, ಕೇಳಿರಿ. 2ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಮಹಿಮೆಯುಳ್ಳ ದೇವರು ಅವನಿಗೆ ಕಾಣಿಸಿಕೊಂಡು; 3‘ನೀನು, ನಿನ್ನ ಸ್ವದೇಶವನ್ನೂ, ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು’ ಎಂದು ಹೇಳಿದನು.
4“ಆಗ ಅವನು ಕಲ್ದೀಯರ ದೇಶದಿಂದ ಹೊರಟುಹೋಗಿ, ಖಾರಾನಿನಲ್ಲಿ ವಾಸವಾಗಿದ್ದನು. ಅವನ ತಂದೆ ಸತ್ತಮೇಲೆ, ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು. 5ಈ ದೇಶದಲ್ಲಿ ಅವನಿಗೆ ಕಾಲಿಡುವಷ್ಷ್ಟು ಭೂಮಿಯನ್ನು ಸ್ವತ್ತಾಗಿ ಕೊಡದೆ ಅವನಿಗೆ ಮಕ್ಕಳೇ ಇಲ್ಲದಿರುವಾಗ ನೀನಿರುವ ದೇಶವನ್ನು ನಿನಗೂ, ನಿನ್ನ ನಂತರ ಬರುವ ನಿನ್ನ ಸಂತತಿಗೂ ಸ್ವತ್ತಾಗಿ ಕೊಡುವೆನೆಂದು ಅವನಿಗೆ ವಾಗ್ದಾನಮಾಡಿದನು. 6ಇದಲ್ಲದೆ ದೇವರು ಹೇಳಿದ್ದೇನಂದರೆ, ‘ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳ ತನಕ ಕ್ರೂರವಾಗಿ ನಡಿಸುವರು.’ 7ಮತ್ತು ‘ನಿನ್ನ ಸಂತಾನದವರು ದಾಸರಾಗಿ ಸೇವೆಸಲ್ಲಿಸುವ ಅನ್ಯಜನರಿಗೆ ನಾನೇ ನ್ಯಾಯತೀರಿಸುವೆನು. ಆ ಮೇಲೆ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು’ ಎಂಬುದೇ. 8ಇದಲ್ಲದೆ ದೇವರು ಅವನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅದಕ್ಕೆ ಗುರುತಾಗಿ ಸುನ್ನತಿಯನ್ನು ಏರ್ಪಡಿಸಿದನು. ಅದಕ್ಕನುಸಾರವಾಗಿ ಅಬ್ರಹಾಮನು ಇಸಾಕನನ್ನು ಪಡೆದು ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಮಾಡಿದನು. ಮುಂದೆ ಇಸಾಕನು ಯಾಕೋಬನನ್ನು ಪಡೆದನು, ಯಾಕೋಬನು ಹನ್ನೆರಡು ಮಂದಿ ಪೂರ್ವಿಕರನ್ನು ಪಡೆದನು.
9“ಪೂರ್ವಿಕರು ಹೊಟ್ಟೆಕಿಚ್ಚಿನಿಂದ ಯೋಸೇಫನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಚರು. ಅಲ್ಲಿ ದೇವರು ಅವನ ಸಂಗಡ ಇದ್ದು, 10ಅವನಿಗೆ ಬಂದ ಎಲ್ಲಾ ಕಷ್ಟಗಳಿಂದ ಅವನನ್ನು ಬಿಡಿಸಿ ಐಗುಪ್ತದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯೆಗೆ ಪಾತ್ರನೂ, ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿಸಿದನು. ಫರೋಹನು ಅವನನ್ನು ಐಗುಪ್ತದೇಶದ ಮೇಲೆಯೂ, ತನ್ನ ಅರಮನೆಯ ಮೇಲೆಯೂ ಅಧಿಕಾರಿಯನ್ನಾಗಿ ಮಾಡಿದನು.
11“ಆಗ ಐಗುಪ್ತ ಮತ್ತು ಕಾನಾನ್ ದೇಶಗಳಲ್ಲಿ ಎಲ್ಲೆಲ್ಲಿಯೂ ಬರಗಾಲ ಬಂದು ಜನರಿಗೆ ಬಹಳ ಸಂಕಟವಾಯಿತು; ಅಲ್ಲಿ ನಮ್ಮ ಪೂರ್ವಿಕರಿಗೆ ಆಹಾರ ಸಿಕ್ಕಲಿಲ್ಲ. 12ಆದರೆ ಐಗುಪ್ತದೇಶದಲ್ಲಿ ದವಸಧಾನ್ಯ ಉಂಟೆಂಬುದನ್ನು ಯಾಕೋಬನು ಕೇಳಿ, ನಮ್ಮ ಪೂರ್ವಿಕರನ್ನು ಮೊದಲ ಸಾರಿ ಅಲ್ಲಿಗೆ ಕಳುಹಿಸಿದನು. 13ಅವರು ಎರಡನೆಯ ಸಾರಿ ಬಂದಾಗ ಯೋಸೇಫನು ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡಿದನು. ಮತ್ತು ಯೋಸೇಫನ ವಂಶವು ಫರೋಹನಿಗೆ ತಿಳಿದು ಬಂದಿತು. 14ಆ ಮೇಲೆ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ಮತ್ತು ತನ್ನ ಎಲ್ಲಾ ಬಂಧುಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು ಐಗುಪ್ತದೇಶಕ್ಕೆ ಕರೆಸಿಕೊಂಡನು. 15ಯಾಕೋಬನು ಐಗುಪ್ತದೇಶಕ್ಕೆ ಬಂದು. ಅಲ್ಲಿ ಅವನೂ ಮತ್ತು ನಮ್ಮ ಪೂರ್ವಿಕರೂ ತೀರಿಹೋದರು. 16ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಬೆಳ್ಳಿಯನ್ನು ಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
17“ಆದರೆ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಕಾಲವು ಸಮೀಪಿಸುವಷ್ಟರಲ್ಲಿ ನಮ್ಮ ಜನರು ಐಗುಪ್ತ ದೇಶದಲ್ಲಿ ಹೆಚ್ಚಿ ಬಹಳವಾದರು. 18ಕಡೆಗೆ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳ್ವಿಕೆಗೆ ಬಂದನು. 19ಈ ಅರಸನು ನಮ್ಮ ಪೂರ್ವಿಕರ ವಿರುದ್ಧವಾಗಿ ಕುಯುಕ್ತಿಯನ್ನು ಯೋಚಿಸಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ, ನಮ್ಮ ಪೂರ್ವಿಕರನ್ನು ಕ್ರೂರವಾಗಿ ಹಿಂಸಿಸಿಸನು. 20ಆ ಸಮಯದಲ್ಲೇ ಮೋಶೆಯು ಹುಟ್ಟಿದನು. ಅವನು ದಿವ್ಯಸುಂದರನಾಗಿದ್ದನು ಮತ್ತು ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು. 21ಆ ಮೇಲೆ ಅವನನ್ನು ಹೊರಗೆ ಹಾಕಿದಾಗ, ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು. 22ಮೋಶೆಯು ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ತಿಳಿವಳಿಕೆಯುಳ್ಳವನಾಗಿ ಮಾತುಗಳಲ್ಲಿಯೂ, ಕಾರ್ಯಗಳಲ್ಲಿಯೂ ಸಮರ್ಥನಾದನು.
23“ಅವನಿಗೆ ನಲವತ್ತು ವರ್ಷ ವಯಸ್ಸು ತುಂಬುತ್ತಾ ಇರಲು, ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿ ನೋಡಬೇಕೆಂಬ ಆಸೆಯು ಅವನ ಹೃದಯದಲ್ಲಿ ಹುಟ್ಟಿತು. 24ಅವರಲ್ಲಿ ಒಬ್ಬನಿಗೆ ಅನ್ಯಾಯವಾಗುವುದನ್ನು ಅವನು ನೋಡಿ, ಅವನಿಗೆ ಆಶ್ರಯಕೊಟ್ಟು ಪೀಡಿಸುವ ಐಗುಪ್ತ್ಯನನ್ನು ಹೊಡೆದುಹಾಕಿ ಮುಯ್ಯಿಗೆ ಮುಯ್ಯಿ ತೀರಿಸಿದನು. 25ಹೀಗೆ ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬುದು ತನ್ನ ಸಹೋದರರಿಗೆ ತಿಳಿದುಬರುವುದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳಿದುಕೊಳ್ಳಲಿಲ್ಲ. 26ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಅವರಿಗೆ ಎದುರಾಗಿ ಬಂದು, ‘ಜನರೇ, ನೀವು ಸಹೋದರರಲ್ಲವೇ, ನೀವೇಕೆ ಒಬ್ಬರಿಗೊಬ್ಬರು ಅನ್ಯಾಯ ಮಾಡುತ್ತೀರಿ?’ ಎಂದು ಹೇಳಿ ಅವರನ್ನು ಸಮಾಧಾನ ಪಡಿಸಲು ಬಂದನು.
27“ಆದರೆ ತನ್ನ ಸ್ವಕುಲದವನಿಗೆ ಅನ್ಯಾಯಮಾಡುತ್ತಿದ್ದವನು, ‘ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು? 28ನಿನ್ನೆ ಆ ಐಗುಪ್ತ್ಯನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿದ್ದೀಯೋ?’ ಎಂದು ಅವನನ್ನು ನೂಕಿಬಿಟ್ಟನು. 29ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ಮಿದ್ಯಾನ್‍ ದೇಶದಲ್ಲಿ ಪ್ರವಾಸಿಯಾಗಿದ್ದನು. ಅಲ್ಲಿ ಅವನು ಇಬ್ಬರು ಗಂಡು ಮಕ್ಕಳನ್ನು ಪಡೆದನು.
30“ನಲವತ್ತು ವರ್ಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. 31ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ಇದೇನೆಂದು, ಅದನ್ನು ಸ್ಪಷ್ಟವಾಗಿ ನೋಡಬೇಕೆಂದು ಹತ್ತಿರ ಬರಲು, 32‘ನಾನು ನಿನ್ನ ಪೂರ್ವಿಕರಾದ, ಅಬ್ರಹಾಮ ಇಸಾಕ ಯಾಕೋಬರ ದೇವರು’ ಎಂಬ ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರನಾಗಿ ನೋಡುವುದಕ್ಕೆ ಧೈರ್ಯವಿಲ್ಲದವನಾದನು. 33ಮತ್ತು ಕರ್ತನು ಅವನಿಗೆ, ‘ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು. 34ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವುದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ’ ಎಂದು ಹೇಳಿದನು.
35“ಅವರು ಯಾವ ಮೋಶೆಯನ್ನು ಬೇಡವೆಂದು ನಿರಾಕರಿಸಿ ‘ನಿನ್ನನ್ನು ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು?’ ಎಂದು ಕೇಳಿದರೋ, ಅವನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿಯೂ, ಬಿಡುಗಡೆಮಾಡುವವನನ್ನಾಗಿಯೂ ನೇಮಿಸಿದನು. 36ಅವನೇ ಐಗುಪ್ತ ದೇಶದಲ್ಲಿಯೂ, ಕೆಂಪು ಸಮುದ್ರದಲ್ಲಿಯೂ, ನಲವತ್ತು ವರ್ಷ ಮರುಭೂಮಿಯಲ್ಲಿಯೂ, ಅದ್ಭುತಕಾರ್ಯಗಳನ್ನೂ ಸೂಚಕ ಕಾರ್ಯಗಳನ್ನೂ ಮಾಡುತ್ತಾ ಅವರನ್ನು ನಡೆಸಿಕೊಂಡು ಬಂದನು.
37“ಆ ಮೋಶೆಯೇ, ‘ದೇವರು ನನ್ನನ್ನು ಎಬ್ಬಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮ್ಮೊಳಗೆ ಎಬ್ಬಿಸುವನು’ ಎಂದು ಇಸ್ರಾಯೇಲ್ ಜನರಿಗೆ ಹೇಳಿದನು. 38ಅವನೇ ಸೀನಾಯಿಬೆಟ್ಟದಲ್ಲಿ, ತನ್ನೊಡನೆ ಮಾತನಾಡಿದ ದೇವದೂತನಿಗೂ ನಮ್ಮ ಪೂರ್ವಿಕರಿಗೂ ಅಡವಿಯಲ್ಲಿದ್ದ ಸಭೆಯೊಳಗೆ ಇದ್ದು ಜೀವಕರವಾದ ದೈವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು ಆಗಿದ್ದಾನೆ.
39“ಆದರೆ ನಮ್ಮ ಪೂರ್ವಿಕರು ಅವನ ಮಾತುಗಳನ್ನು ಕೇಳುವುದಕ್ಕೆ ಮನಸ್ಸಿಲ್ಲದೆ ಅವನನ್ನು ತಳ್ಳಿಬಿಟ್ಟು, ಪುನಃ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು.
40“ಅವರು ಆರೋನನಿಗೆ, ‘ಐಗುಪ್ತ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ, ಆದುದರಿಂದ ನಮಗೆ ಮುಂದಾಗಿ ಹೋಗುವುದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು’ ಎಂದು ಕೇಳಿಕೊಂಡರು. 41ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನು ಅರ್ಪಿಸಿ ತಮ್ಮ ಕೈಗಳಿಂದ ನಿರ್ಮಿಸಿದ ವಸ್ತುವಿನಲ್ಲಿ ಉಲ್ಲಾಸ ಪಟ್ಟರು. 42ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ನಕ್ಷತ್ರಗಣಗಳನ್ನು ಪೂಜಿಸುವುದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವುದೇನಂದರೆ,
“‘ಇಸ್ರಾಯೇಲ್ ವಂಶದವರೇ, ನೀವು
ಅರಣ್ಯದಲ್ಲಿದ್ದ ನಲವತ್ತು ವರ್ಷ
ನನಗೆ ಯಜ್ಞಗಳನ್ನೂ, ಬಲಿಗಳನ್ನೂ
ಅರ್ಪಿಸುತ್ತಿದ್ದಿರೋ? ಇಲ್ಲವಲ್ಲಾ;
43ಅದಕ್ಕೆ ಬದಲಾಗಿ ನೀವು ಆರಾಧಿಸಬೇಕೆಂದು
ಮಾಡಿಕೊಂಡ ಮೂರ್ತಿಗಳನ್ನು
ಅಂದರೆ ಮೊಲೋಖನ ಗುಡಾರವನ್ನೂ
ರೆಫಾನ್ ದೇವತೆಯ ನಕ್ಷತ್ರರೂಪವನ್ನೂ
ಹೊತ್ತುಕೊಂಡು ಹೋಗುತ್ತಿದ್ದಿರಲ್ಲಾ.
ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ
ಗಡಿಪಾರು ಮಾಡುವೆನು’ ಎಂಬುದೇ ಆಗಿದೆ.
44“ದೇವದರ್ಶನ ಗುಡಾರವು ಮರುಭೂಮಿಯಲ್ಲಿ ನಮ್ಮ ಪೂರ್ವಿಕರ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತನಾಡಿದವನು, ನೀನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸಬೇಕೆಂದು ಆಜ್ಞಾಪಿಸಿದ್ದನು. 45ನಮ್ಮ ಹಿರಿಯರು ಅದನ್ನು ತಮ್ಮ ಪೂರ್ವಿಕರಿಂದ ಹೊಂದಿದ್ದರು. ಅವರು ಯೆಹೋಶುವನನ್ನು ಅನುಸರಿಸಿ ಬಂದು ದೇವರು ತಳ್ಳಿಬಿಟ್ಟ ಅನ್ಯಜನಗಳ ದೇಶವನ್ನು ಸ್ವಾಧೀನಮಾಡಿಕೊಂಡಾಗ ಆ ಗುಡಾರವನ್ನು ಕೂಡ ತಂದರು. ಅದು ದಾವೀದನ ಕಾಲದವರೆಗೂ ಅಲ್ಲೇ ಇತ್ತು. 46ದಾವೀದನು ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ವಂಶದವರಿಗೋಸ್ಕರ ದೇವಾಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. 47ಆದರೆ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. 48ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ನಿವಾಸಗಳಲ್ಲಿ ವಾಸಮಾಡುವವನಲ್ಲ.
49“‘ಆಕಾಶವು ನನಗೆ ಸಿಂಹಾಸನ,
ಭೂಮಿಯು ನನ್ನ ಪಾದಗಳಿಗೆ ಪೀಠ;
ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ?
ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವುದು?
50ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ
ಎಂಬುದಾಗಿ ಕರ್ತನು ಹೇಳುತ್ತಾನೆ’ ಎಂದು ಪ್ರವಾದಿಯು ನುಡಿದಿದ್ದಾನೆ.
51“ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪೂರ್ವಿಕರು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ ಎದುರಾಗಿ ನಡೆಯುವವರಾಗಿದ್ದೀರಿ. 52ಪ್ರವಾದಿಗಳಲ್ಲಿ ನಿಮ್ಮ ಪೂರ್ವಿಕರು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿಸ್ವರೂಪನಾದ ಕರ್ತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡಿದುಕೊಟ್ಟು ಕೊಲ್ಲಿಸಿದ್ದೀರಿ. 53ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ” ಎಂದು ಹೇಳಿದನು.
ಸ್ತೆಫನನ ಮೇಲೆ ಕಲ್ಲೆಸೆದದ್ದು
54ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. 55ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ, ದೇವರ ಮಹಿಮೆಯನ್ನೂ, ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು; 56“ಅಗೋ, ಆಕಾಶವು ತೆರೆದಿರುವುದನ್ನೂ, ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ” ಎಂದು ಹೇಳಿದನು.
57ಆದರೆ ಅವರು ಮಹಾಶಬ್ದದಿಂದ ಕೂಗಿ, ಕಿವಿಗಳನ್ನು ಮುಚ್ಚಿಕೊಂಡು, ಒಟ್ಟಾಗಿ ಅವನ ಮೇಲೆ ಬಿದ್ದು, 58ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವುದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು.
59ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು, ಅವನು ಕರ್ತನ ಹೆಸರನ್ನು ಹೇಳಿ, “ಕರ್ತನಾದ, ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಪ್ರಾರ್ಥಿಸಿ, 60ಮೊಣಕಾಲೂರಿ, “ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು” ಮಹಾಶಬ್ದದಿಂದ ಕೂಗಿದನು.
ಇದನ್ನು ಹೇಳಿ ನಿದ್ರೆಹೋದನು.

Currently Selected:

ಅ. ಕೃ. 7: IRVKan

Highlight

Share

Copy

None

Want to have your highlights saved across all your devices? Sign up or sign in

YouVersion uses cookies to personalize your experience. By using our website, you accept our use of cookies as described in our Privacy Policy