Logo YouVersion
Ikona vyhledávání

ಮಾರ್ಕ 11

11
ವಿಜಯದ ಪ್ರವೇಶ
1ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆ ಮತ್ತು ಬೇಥಾನ್ಯಕ್ಕೂ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ, 2“ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ನೀವು ಅದರೊಳಗೆ ಪ್ರವೇಶಿಸಿದ ಕೂಡಲೇ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ. 3ಯಾವನಾದರೂ ನಿಮಗೆ, ‘ಏಕೆ ಹೀಗೆ ಮಾಡುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತದೇವರಿಗೆ ಅವಶ್ಯವಾಗಿದೆ, ಆತನು ಕೂಡಲೇ ಇದನ್ನು ಹಿಂದಕ್ಕೆ ಕಳುಹಿಸುವನು,’ ” ಎಂದು ಹೇಳಿರಿ ಎಂದರು.
4ಆಗ ಅವರು ಹೊರಟುಹೋಗಿ ಬೀದಿಯಲ್ಲಿದ್ದ ಒಂದು ಮನೆಯ ಬಾಗಿಲಿನ ಹತ್ತಿರ ಕಟ್ಟಿದ್ದ ಕತ್ತೆಮರಿಯನ್ನು ಕಂಡರು. ಅವರು ಅದನ್ನು ಬಿಚ್ಚುತ್ತಿರುವಾಗ, 5ಅಲ್ಲಿ ನಿಂತಿದ್ದ ಕೆಲವರು ಅವರಿಗೆ, “ಆ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಕೇಳಿದರು. 6ಅದಕ್ಕೆ ಅವರು ಯೇಸು ತಮಗೆ ಹೇಳಿದ ಪ್ರಕಾರ ಉತ್ತರ ಕೊಡಲು, ಅವರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟರು. 7ಶಿಷ್ಯರು ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದಾಗ ಯೇಸು ಅದರ ಮೇಲೆ ಕುಳಿತುಕೊಂಡರು. 8ಅನೇಕರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ತೋಟಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು. 9ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗುತ್ತಾ,
“ಹೊಸನ್ನ!”#11:9 ಕೀರ್ತನೆ 118:25,26
“ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”
10“ಬರಲಿರುವ ನಮ್ಮ ತಂದೆಯಾದ ದಾವೀದನ ರಾಜ್ಯವು ಆಶೀರ್ವಾದ ಹೊಂದಲಿ!”
“ಉನ್ನತದಲ್ಲಿ ಹೊಸನ್ನ!”
ಎಂದು ಹೇಳಿದರು.
11ಯೇಸು ಯೆರೂಸಲೇಮಿಗೆ ಹೋಗಿ ದೇವಾಲಯವನ್ನು ಪ್ರವೇಶಿಸಿದಾಗ ಸುತ್ತಲಿದ್ದ ಎಲ್ಲವುಗಳನ್ನು ನೋಡಿದರು. ಆಗ ಸಂಜೆಯಾಗಿದ್ದುದರಿಂದ ಯೇಸು ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದರು.
ದೇವಾಲಯವನ್ನು ಶುದ್ಧೀಕರಿಸಿದ್ದು
12ಮರುದಿನ ಅವರು ಬೇಥಾನ್ಯದಿಂದ ಬರುತ್ತಿರುವಾಗ ಯೇಸುವಿಗೆ ಹಸಿವಾಯಿತು. 13ಯೇಸು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ಕಂಡು ಒಂದು ವೇಳೆ ಅದರಲ್ಲಿ ಹಣ್ಣು ಏನಾದರೂ ಸಿಕ್ಕೀತೆಂದುಕೊಂಡರು. ಆದರೆ ಯೇಸು ಅದರ ಹತ್ತಿರ ಬಂದಾಗ ಎಲೆಗಳನ್ನು ಹೊರತು ಮತ್ತೇನೂ ಕಾಣಲಿಲ್ಲ. ಅದು ಅಂಜೂರ ಫಲದ ಕಾಲವಾಗಿರಲಿಲ್ಲ. 14ಯೇಸು ಅದಕ್ಕೆ, “ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,” ಎಂದರು. ಅದನ್ನು ಅವರ ಶಿಷ್ಯರು ಕೇಳಿಸಿಕೊಂಡರು.
15ತರುವಾಯ ಅವರು ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ, ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು. 16ಯಾರೂ ದೇವಾಲಯದ ಮಾರ್ಗವಾಗಿ ಯಾವುದನ್ನೂ ತೆಗೆದುಕೊಂಡು ಹೋಗದಂತೆ ತಡೆದರು. 17ಯೇಸು ಅವರಿಗೆ ಬೋಧಿಸುತ್ತಾ, “ನನ್ನ ಮನೆಯು ಎಲ್ಲಾ ಜನಾಂಗಗಳಿಗೂ ‘ಪ್ರಾರ್ಥನೆಯ ಮನೆ’#11:17 ಯೆಶಾಯ 56:7 ಎಂದು ಕರೆಯಿಸಿಕೊಳ್ಳುವುದೆಂದು ಬರೆದಿದೆಯಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ,”#11:17 ಯೆರೆ 7:11 ಎಂದು ಹೇಳಿದರು.
18ಮುಖ್ಯಯಾಜಕರೂ ನಿಯಮ ಬೋಧಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಯೇಸುವಿನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಯೇಸುವಿಗೆ ಭಯಪಟ್ಟರು.
19ಸಂಜೆಯಾದಾಗ ಯೇಸು ಮತ್ತು ಅವರ ಶಿಷ್ಯರು ಪಟ್ಟಣದ ಹೊರಗೆ ಹೋದರು.
20ಬೆಳಿಗ್ಗೆ ಅವರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರ ಮರವು ಬೇರುಸಹಿತವಾಗಿ ಒಣಗಿರುವುದನ್ನು ಕಂಡರು. 21ಆಗ ಪೇತ್ರನು ಜ್ಞಾಪಕಮಾಡಿಕೊಂಡು ಯೇಸುವಿಗೆ, “ಗುರುವೇ, ಇಗೋ! ನೀನು ಶಪಿಸಿದ ಅಂಜೂರದ ಮರವು ಒಣಗಿಹೋಗಿದೆ!” ಎಂದು ಹೇಳಿದನು.
22ಯೇಸು ಉತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ, “ದೇವರ ನಂಬಿಕೆ ನಿಮಗಿರಲಿ.#11:22 ಅಥವಾ ದೇವರಲ್ಲಿ ನಂಬಿಕೆ ನಿಮಗಿರಲಿ. 23ಏಕೆಂದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ಹೇಳಿ ತಮ್ಮ ಹೃದಯದಲ್ಲಿ ಸಂಶಯಪಡದೆ ತಾವು ಹೇಳಿದಂತೆಯೇ ಆಗುವುದೆಂದು ನಂಬಿದರೆ ಅವರು ಹೇಳಿದಂತೆಯೇ ಅವರಿಗೆ ಆಗುವುದು. 24ಆದಕಾರಣ, ನೀವು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಎಲ್ಲವೂ ನಿಮಗೆ ಸಿಕ್ಕಿವೆಯೆಂದು ನಂಬಿರಿ. ಅವು ನಿಮಗೆ ಲಭಿಸುವವು. 25ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರಿಗಾದರೂ ವಿರೋಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು. 26ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.#11:26 ಕೆಲವು ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
ಯೇಸುವಿನ ಅಧಿಕಾರವನ್ನು ಪ್ರಶ್ನಿಸಿದ್ದು
27ಯೇಸು ಮತ್ತು ಶಿಷ್ಯರು ಪುನಃ ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿರುವಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವಿನ ಬಳಿಗೆ ಬಂದು 28ಯೇಸುವಿಗೆ, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರ ಕೊಟ್ಟವರು ಯಾರು?” ಎಂದು ಕೇಳಿದರು.
29ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. 30ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ? ನನಗೆ ಉತ್ತರಕೊಡಿರಿ,” ಎಂದರು.
31ಆಗ ಅವರು, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು. 32ಆದರೆ ನಾವು, ‘ಮನುಷ್ಯರಿಂದ ಬಂತು’ ಎಂದು ಹೇಳುವುದಾದರೆ, ನಮಗೆ ಜನರ ಭಯವಿದೆ. ಏಕೆಂದರೆ ಯೋಹಾನನು ನಿಜವಾಗಿಯೂ ಪ್ರವಾದಿ ಎಂದು ಎಲ್ಲರೂ ಎಣಿಸಿಕೊಂಡಿರುವರು,” ಎಂದು ತಮ್ಮಲ್ಲಿ ಚರ್ಚಿಸಿಕೊಂಡರು.
33ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು.
ಅದಕ್ಕೆ ಯೇಸು, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದು ಅವರಿಗೆ ಉತ್ತರಕೊಟ್ಟರು.

Právě zvoleno:

ಮಾರ್ಕ 11: KSB

Zvýraznění

Kopírovat

Porovnat

Sdílet

None

Chceš mít své zvýrazněné verše uložené na všech zařízeních? Zaregistruj se nebo se přihlas