ಅಪೊಸ್ತಲರ ಕೃತ್ಯಗಳು 28
28
ಮಾಲ್ಟದ ದಡದಲ್ಲಿ
1ನಾವು ಸುರಕ್ಷಿತವಾಗಿ ದಡ ಸೇರಿದ ಮೇಲೆ, ಆ ದ್ವೀಪವು ಮಾಲ್ಟ ದ್ವೀಪವೆಂದು ಕಂಡುಕೊಂಡೆವು. 2ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು. 3ಪೌಲನು ಕಟ್ಟಿಗೆ ಕೂಡಿಸಿ ಹೊರೆಯನ್ನು ತಂದು ಬೆಂಕಿಯಲ್ಲಿ ಹಾಕಲು ಶಾಖದಿಂದ ಒಂದು ಸರ್ಪವು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು. 4ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 5ಆದರೆ ಪೌಲನು ಸರ್ಪವನ್ನು ಬೆಂಕಿಯೊಳಗೆ ಝಾಡಿಸಿ ಬಿಟ್ಟನು. ಅವನಿಗೆ ಯಾವ ಕೇಡೂ ಆಗಲಿಲ್ಲ. 6ಅವನು ಬಾತುಹೋಗುತ್ತಾನೆ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ ಎಂದು ಜನರು ಕಾದಿದ್ದರು. ಆದರೆ ಬಹಳ ಹೊತ್ತು ಕಾದು ನೋಡಿದ ಮೇಲೆ, ಅವನಿಗೆ ಕೆಟ್ಟದ್ದೇನೂ ಆಗದಿರುವುದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು, “ಇವನೊಬ್ಬ ದೇವರು” ಎಂದು ಹೇಳಿಕೊಂಡರು.
7ದ್ವೀಪದ ಮುಖ್ಯ ಅಧಿಕಾರಿ ಪೊಪ್ಲಿಯನೆಂಬುವನಿಗೆ ಸೇರಿದ ಹೊಲವು ಸಮೀಪದಲ್ಲಿಯೇ ಇತ್ತು. ಅವನು ನಮ್ಮನ್ನು ತನ್ನ ಮನೆಗೆ ಆಮಂತ್ರಿಸಿ ಮೂರು ದಿನ ನಮ್ಮನ್ನು ಉಪಚರಿಸಿದನು. 8ಪೊಪ್ಲಿಯನ ತಂದೆ ಅಸ್ವಸ್ಥತೆಯಿಂದ ಮಲಗಿದ್ದನು. ಅವನು ಜ್ವರ ಮತ್ತು ರಕ್ತ ಭೇದಿಯಿಂದ ಬಾಧೆಗೊಳಗಾಗಿದ್ದನು. ಪೌಲನು ಅವನನ್ನು ಸಂದರ್ಶಿಸಿ, ಪ್ರಾರ್ಥನೆಮಾಡಿ, ಅವನ ಮೇಲೆ ತನ್ನ ಹಸ್ತಗಳನ್ನಿಟ್ಟು ಅವನನ್ನು ಗುಣಪಡಿಸಿದನು. 9ಹೀಗಾದ ತರುವಾಯ ಆ ದ್ವೀಪದಲ್ಲಿಯೇ ಉಳಿದ ರೋಗಿಗಳು ಸಹ ಬಂದು ಗುಣಹೊಂದಿದರು. 10ಅವರು ಅನೇಕ ವಿಧವಾಗಿ ನಮ್ಮನ್ನು ಗೌರವಿಸಿದರು. ನಾವು ಪ್ರಯಾಣಕ್ಕೆ ಸಿದ್ಧರಾದಾಗ ನಮಗೆ ಅಗತ್ಯವಿದ್ದವುಗಳನ್ನೆಲ್ಲಾ ತಂದು ಒದಗಿಸಿಕೊಟ್ಟರು.
ರೋಮನ್ನು ತಲುಪಿದ್ದು
11ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು. 12ಸುರಕೂಸ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ಮೂರು ದಿನ ಇದ್ದೆವು. 13ಅಲ್ಲಿಂದ ಸಮುದ್ರ ಪ್ರಯಾಣ ಮುಂದುವರಿಸಿ ರೇಗಿಯ ಪಟ್ಟಣಕ್ಕೆ ಬಂದೆವು. ಮರುದಿನ ದಕ್ಷಿಣ ಗಾಳಿ ಬೀಸುತ್ತಿದ್ದುದರಿಂದ ಎರಡನೆಯ ದಿನ ಪೊತಿಯೋಲ ರೇವನ್ನು ತಲುಪಿದೆವು. 14ಅಲ್ಲಿ ಕೆಲವು ಸಹೋದರರು ನಮ್ಮನ್ನು ಕಂಡು ಒಂದು ವಾರ ತಮ್ಮೊಂದಿಗೆ ಕಳೆಯಬೇಕೆಂದು ಆಮಂತ್ರಿಸಿದರು. ಕೊನೆಗೆ ನಾವು ರೋಮ್ ಸೇರಿದೆವು. 15ಅಲ್ಲಿದ್ದ ಸಹೋದರರು ನಾವು ಬರುತ್ತೇವೆಂಬ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ಅಪ್ಪಿಯ ಪೇಟೆಗೂ ತ್ರಿಛತ್ರದ ಬಳಿಗೂ ಬಂದರು. ಪೌಲನು ಅವರನ್ನು ನೋಡಿ ದೇವರ ಸ್ತುತಿ ಮಾಡಿ ಧೈರ್ಯ ತಂದುಕೊಂಡನು. 16ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.
ರೋಮ್ ಪಟ್ಟಣದಲ್ಲಿ ಪೌಲನ ಬೋಧನೆ
17ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ನಾಯಕರನ್ನು ಕರೆಯಿಸಿದನು. ಅವರೆಲ್ಲರೂ ಬಂದಾಗ ಅವರಿಗೆ, “ನನ್ನ ಸಹೋದರರೇ, ನಮ್ಮ ಜನರಿಗೂ ನಮ್ಮ ಪೂರ್ವಜರಿಗೂ ವಿರೋಧವಾಗಿ ನಾನು ಏನನ್ನೂ ಮಾಡಲಿಲ್ಲ. ಆದರೂ ನನ್ನನ್ನು ಯೆರೂಸಲೇಮಿನಲ್ಲಿ ಬಂಧಿಸಿ ರೋಮನ್ನರ ವಶಕ್ಕೆ ಒಪ್ಪಿಸಲಾಯಿತು. 18ಅವರು ನನ್ನನ್ನು ವಿಚಾರಣೆ ಮಾಡಿ, ನಾನು ಮರಣಶಿಕ್ಷೆ ಹೊಂದಲು ಯಾವ ಅಪರಾಧವೂ ಇಲ್ಲದಿರುವುದನ್ನು ಕಂಡು ನನ್ನನ್ನು ಬಿಡುಗಡೆ ಮಾಡಲಿದ್ದರು. 19ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ. 20ಈ ಕಾರಣದಿಂದಲೇ ನಾನು ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲರ ನಿರೀಕ್ಷೆಯ ನಿಮಿತ್ತವಾಗಿಯೇ ನಾನು ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
21ಅದಕ್ಕೆ ಅವರು, “ನಿನ್ನ ವಿಷಯದಲ್ಲಿ ಯೂದಾಯದಿಂದ ನಮಗೆ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರಲ್ಲಿ ಯಾರೂ ನಿನ್ನ ವಿಷಯದಲ್ಲಿ ಏನನ್ನೂ ವರದಿ ಮಾಡಿಲ್ಲ. ನಿನ್ನ ಬಗ್ಗೆ ಯಾವ ಕೆಟ್ಟದ್ದನ್ನೂ ಹೇಳಿಲ್ಲ. 22ಆದರೆ ನಿನ್ನ ಅಭಿಪ್ರಾಯಗಳೇನೆಂಬುದನ್ನು ಕೇಳಲು ನಮಗೆ ಮನಸ್ಸಿದೆ. ಏಕೆಂದರೆ ಈ ಪಂಥದ ವಿರುದ್ಧವಾಗಿ ಎಲ್ಲಾ ಕಡೆಗಳಲ್ಲಿ ಜನರು ಮಾತನಾಡುತ್ತಿರುವುದನ್ನು ನಾವು ಬಲ್ಲೆವು,” ಎಂದರು.
23ಅವರು ಒಂದು ದಿನ ಪೌಲನೊಂದಿಗಿರಲು ಏರ್ಪಡಿಸಿ, ಅವನಿದ್ದ ಸ್ಥಳಕ್ಕೆ ಬಹುಮಂದಿ ಕೂಡಿಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನು ದೇವರ ರಾಜ್ಯದ ಬಗ್ಗೆ ಖಚಿತವಾಗಿ ಸಾಕ್ಷಿ ಕೊಡುತ್ತಾ, ಮೋಶೆಯ ನಿಯಮ ಮತ್ತು ಪ್ರವಾದಿಗಳ ಗ್ರಂಥಗಳಿಂದ ಯೇಸುವಿನ ಬಗ್ಗೆ ವಿವರಿಸಿ ಅವರ ಮನವೊಲಿಸಲು ಪ್ರಯತ್ನಿಸಿದನು. 24ಕೆಲವರಿಗೆ ಅವನು ಹೇಳಿದ್ದರ ಬಗ್ಗೆ ಮನದಟ್ಟಾಯಿತು. 25ಆದರೆ ಬೇರೆಯವರು ನಂಬಲಿಲ್ಲ. ಅವರು ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಉಳ್ಳವರಾಗಿರಲು ಪೌಲನು ಅವರಿಗೆ, “ಪವಿತ್ರಾತ್ಮ ದೇವರು ನಿಮ್ಮ ಪಿತೃಗಳಿಗೆ ಪ್ರವಾದಿ ಯೆಶಾಯನ ಮುಖಾಂತರ ಈ ಮಾತುಗಳನ್ನು ಸರಿಯಾಗಿಯೇ ಹೇಳಿದ್ದಾರೆ:
26“ ‘ಈ ಜನರ ಬಳಿಗೆ ಹೋಗಿ ಹೇಳು,
“ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ;
ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.”
27ಈ ಜನರ ಹೃದಯವು ಕಠೋರವಾಗಿದೆ;
ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ,
ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ.
ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ನೋಡಿ,
ಕಿವಿಗಳಿಂದ ಕೇಳಿಸಿಕೊಂಡು,
ತಮ್ಮ ಹೃದಯದಿಂದ ತಿಳಿದು,
ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’#28:27 ಯೆಶಾಯ 6:9,10
ಎಂಬುದೇ.
28“ಆದ್ದರಿಂದ ದೇವರ ರಕ್ಷಣೆಯು ಯೆಹೂದ್ಯರಲ್ಲದವರಿಗೆ ಒದಗಿ ಬಂದಿದೆ ಎಂಬುದು ನಿಮಗೆ ತಿಳಿದಿರಲಿ. ಅವರು ಅದಕ್ಕೆ ಕಿವಿಗೊಡುವರು,” ಎಂದನು. 29ಪೌಲನು ಇದನ್ನು ಹೇಳಿದ ತರುವಾಯ ಯೆಹೂದ್ಯರು ತಮ್ಮತಮ್ಮಲ್ಲಿಯೇ ಕಟುವಾಗಿ ಚರ್ಚಿಸಿಕೊಳ್ಳುತ್ತಾ ಹೊರಟು ಹೋದರು.#28:29 ಕೆಲವು ಮೂಲ ಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
30ಪೌಲನು ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಎರಡು ವರ್ಷಗಳ ಕಾಲವಿದ್ದು ತನ್ನ ಬಳಿಗೆ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದನು. 31ಅವನು ಧೈರ್ಯದಿಂದ ಯಾವ ಅಡ್ಡಿ ಆತಂಕಗಳಿಲ್ಲದೇ ದೇವರ ರಾಜ್ಯವನ್ನು ಪ್ರಕಟಿಸುತ್ತಾ, ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.
S'ha seleccionat:
ಅಪೊಸ್ತಲರ ಕೃತ್ಯಗಳು 28: KSB
Subratllat
Copia
Compara
Comparteix
Vols que els teus subratllats es desin a tots els teus dispositius? Registra't o inicia sessió
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.