ಅಪೊಸ್ತಲರ ಕೃತ್ಯಗಳು 20
20
ಮಕೆದೋನ್ಯ ಮತ್ತು ಗ್ರೀಸ್ ಮಾರ್ಗವಾಗಿ ಪೌಲನ ಪ್ರಯಾಣ
1ಗಲಭೆಯು ಶಾಂತಗೊಂಡ ನಂತರ ಪೌಲನು ಶಿಷ್ಯರನ್ನು ಕರೆಕಳುಹಿಸಿ ಅವರಿಗೆ ಧೈರ್ಯ ಹೇಳಿ, ಅವರನ್ನು ಬೀಳ್ಕೊಟ್ಟು ಮಕೆದೋನ್ಯಕ್ಕೆ ಪ್ರಯಾಣಮಾಡಿದನು. 2ಆ ಪ್ರದೇಶದಲ್ಲೆಲ್ಲಾ ಜನರಿಗೆ ಅನೇಕ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಾ ಪ್ರಯಾಣಮಾಡಿ ಗ್ರೀಸ್ ತಲುಪಿದನು. 3ಇಲ್ಲಿ ಮೂರು ತಿಂಗಳುಗಳ ಕಾಲ ಇದ್ದ ಮೇಲೆ, ಅವನು ಸಿರಿಯಕ್ಕೆ ಪ್ರಯಾಣ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವನಿಗೆ ವಿರೋಧವಾಗಿ ಯೆಹೂದ್ಯರು ಒಳಸಂಚು ಮಾಡಿದ್ದು ಅವನಿಗೆ ತಿಳಿದು ಬಂದದ್ದರಿಂದ ಮಕೆದೋನ್ಯ ಮಾರ್ಗವಾಗಿ ಹಿಂತಿರುಗಿ ಹೋಗಲು ನಿರ್ಣಯಿಸಿದನು. 4ಬೆರೋಯದ ಪುರ್ರನ ಮಗ ಸೋಪತ್ರನು, ಥೆಸಲೋನಿಕದ ಅರಿಸ್ತಾರ್ಕ ಮತ್ತು ಸೆಕುಂದ, ದೆರ್ಬೆಯ ಗಾಯ, ತಿಮೊಥೆ ಅಲ್ಲದೆ ಏಷ್ಯಾ ಪ್ರಾಂತದ ತುಖಿಕ ಹಾಗೂ ತ್ರೊಫಿಮ ಅವನೊಂದಿಗೆ ಹೋದರು. 5ಇವರೆಲ್ಲರೂ ಮುಂಚಿತವಾಗಿ ಹೋಗಿ ತ್ರೋವದಲ್ಲಿ ನಮಗಾಗಿ ಕಾದಿದ್ದರು. 6ಹುಳಿಯಿಲ್ಲದ ರೊಟ್ಟಿಯ ಹಬ್ಬದ ನಂತರ ನಾವು ಫಿಲಿಪ್ಪಿಯಿಂದ ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ, ಐದು ದಿನಗಳ ತರುವಾಯ ತ್ರೋವದಲ್ಲಿದ್ದ ಇತರರೊಂದಿಗೆ ಸೇರಿ, ಅಲ್ಲಿ ಏಳು ದಿನ ಇದ್ದೆವು.
ತ್ರೋವದಲ್ಲಿ ಯೂತಿಖನನ್ನು ಮರಣದಿಂದ ಎಬ್ಬಿಸಿದ್ದು
7ವಾರದ ಮೊದಲನೆಯ ದಿನ ನಾವು ರೊಟ್ಟಿ ಮುರಿಯಲು ಒಂದಾಗಿ ಕೂಡಿಬಂದೆವು. ಪೌಲನು ಅಲ್ಲಿ ಬೋಧನೆ ಮಾಡಿದನು. ಮರುದಿನ ಅವನು ಹೊರಡಬೇಕಾದ್ದರಿಂದ ಮಧ್ಯರಾತ್ರಿಯವರೆಗೆ ಮಾತನಾಡುತ್ತಲೇ ಇದ್ದನು. 8ನಾವು ಸಭೆ ಸೇರಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳು ಉರಿಯುತ್ತಿದ್ದವು. 9ಒಂದು ಕಿಟಿಕಿಯಲ್ಲಿ ಯೂತಿಖ ಎಂಬ ಹೆಸರಿನ ಒಬ್ಬ ಯುವಕನು ಕುಳಿತುಕೊಂಡಿದ್ದನು. ಪೌಲನು ಬಹಳ ಹೊತ್ತು ಬೋಧಿಸುತ್ತಲೇ ಇದ್ದುದರಿಂದ ಅವನಿಗೆ ಗಾಢನಿದ್ರೆ ಹತ್ತಿತು. ನಿದ್ರಿಸುತ್ತಿದ್ದ ಅವನು ಮೂರನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದನು. ಅವನನ್ನು ಎತ್ತಿಕೊಂಡಾಗ ಅವನು ಸತ್ತೇ ಹೋಗಿದ್ದನು. 10ಆದರೆ ಪೌಲನು ಕೆಳಗೆ ಹೋಗಿ, ಆ ಯುವಕನನ್ನು ತಬ್ಬಿಕೊಂಡು, “ಗಾಬರಿಗೊಳ್ಳಬೇಡಿ, ಅವನ ಜೀವ ಅವನಲ್ಲಿದೆ,” ಎಂದನು. 11ಅನಂತರ ಪೌಲನು ಮೇಲಂತಸ್ತಿಗೆ ಹೋಗಿ ವಿಶ್ವಾಸಿಗಳೊಂದಿಗೆ ರೊಟ್ಟಿ ಮುರಿದು ಊಟಮಾಡಿ, ಬೆಳಗಾಗುವವರೆಗೆ ಅವರೊಡನೆ ಮಾತನಾಡಿ, ಅಲ್ಲಿಂದ ಹೊರಟನು. 12ಜೀವ ಹೊಂದಿದ ಆ ಯುವಕನನ್ನು ಜನರು ಮನೆಗೆ ಕರೆದುಕೊಂಡು ಹೋದರು. ಅವರಿಗೆ ಅಪಾರ ಸಾಂತ್ವನ ದೊರೆಯಿತು.
ಎಫೆಸದ ಹಿರಿಯರಿಗೆ ಪೌಲನ ಬೀಳ್ಕೊಡುವಿಕೆ
13ಮೊದಲು ನಾವು ನೌಕೆ ಇದ್ದ ಸ್ಥಳಕ್ಕೆ ಹೋಗಿ ಅಸ್ಸೊಸಿ ಎಂಬಲ್ಲಿಗೆ ಸಮುದ್ರ ಪ್ರಯಾಣಮಾಡಿದೆವು. ಅಲ್ಲಿ ಪೌಲನು ಬಂದು ನಮ್ಮೊಂದಿಗೆ ನೌಕೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಅಲ್ಲಿಗೆ ಕಾಲ್ನಡಿಗೆಯಾಗಿ ಹೋಗಬೇಕಾದ್ದರಿಂದ ಅವನು ಈ ಏರ್ಪಾಡು ಮಾಡಿದನು. 14ಅಸ್ಸೊಸಿನಲ್ಲಿ ಪೌಲನು ನಮ್ಮನ್ನು ಭೇಟಿಯಾದಾಗ, ಅವನನ್ನು ಕರೆದುಕೊಂಡು ಮಿತಿಲೇನೆಗೆ ಹೋದೆವು. 15ನಾವು ಮರುದಿನ ಅಲ್ಲಿಂದ ಪ್ರಯಾಣ ಮುಂದುವರೆಸಿ ಖೀಯೊಸ್ ದ್ವೀಪವನ್ನು ಸಮೀಪಿಸಿದೆವು. ಮರುದಿನ ಸಾಮೊಸನ್ನು ತಲುಪಿದೆವು. ಅನಂತರ ಮಾರನೆಯ ದಿನ ಮಿಲೇತನ್ನು ಸೇರಿದೆವು. 16ಸಾಧ್ಯವಾದರೆ, ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬಕ್ಕೆ#20:16 ಪಸ್ಕಹಬ್ಬ ಆಚರಿಸಿದ ಐವತ್ತು ದಿನಗಳ ನಂತರ ಬರುತ್ತಿದ್ದ ಯೆಹೂದ್ಯರ ಹಬ್ಬ ಯೆರೂಸಲೇಮನ್ನು ತಲುಪಬೇಕೆಂಬ ಅವಸರ ಪೌಲನಿಗಿದ್ದುದ್ದರಿಂದ, ಏಷ್ಯಾ ಪ್ರಾಂತದಲ್ಲಿ ಕಾಲ ಕಳೆಯುವುದನ್ನು ತಪ್ಪಿಸಿ ಎಫೆಸವನ್ನು ದಾಟಿ ಹೋಗಬೇಕೆಂದು ನಿರ್ಧರಿಸಿದ್ದನು.
17ಮಿಲೇತದಿಂದ, ಪೌಲನು ಎಫೆಸಕ್ಕೆ ಸಂದೇಶ ಕಳುಹಿಸಿ, ಅಲ್ಲಿಯ ಸಭೆಯ ಹಿರಿಯರು ಬರಬೇಕೆಂದು ತಿಳಿಸಿದನು. 18ಅವರು ಬಂದ ಮೇಲೆ, ಪೌಲನು ಅವರಿಗೆ ಹೀಗೆಂದನು: “ನಾನು ಏಷ್ಯಾ ಪ್ರಾಂತಕ್ಕೆ ಬಂದ ಪ್ರಥಮ ದಿನದಿಂದ ನಿಮ್ಮೊಂದಿಗಿದ್ದು ಪೂರ್ತಿ ಸಮಯ ಹೇಗೆ ಕಳೆದನೆಂಬುದನ್ನು ನೀವು ಅರಿತಿದ್ದೀರಿ. 19ಯೆಹೂದ್ಯರ ಒಳಸಂಚುಗಳಿಂದ ನಾನು ಕಠಿಣ ಪರೀಕ್ಷೆಗಳಿಗೆ ಒಳಗಾಗಿದ್ದರೂ ಬಹಳ ದೀನತೆಯಿಂದಲೂ ಕಣ್ಣೀರಿನಿಂದಲೂ ಕರ್ತ ಯೇಸುವಿನ ಸೇವೆ ಮಾಡಿದೆನು. 20ನಿಮಗೆ ಹಿತಕರವಾದುದ್ದೆಲ್ಲವನ್ನೂ ಬೋಧಿಸಲು ನಾನು ಹಿಂಜರಿಯಲಿಲ್ಲ. ಬಹಿರಂಗದಲ್ಲಿಯೂ ಮನೆಮನೆಗಳಲ್ಲಿಯೂ ನಾನು ನಿಮಗೆ ಬೋಧಿಸಿದ್ದೇನೆ. 21ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ನಮ್ಮ ಕರ್ತ ಯೇಸುವಿನಲ್ಲಿ ವಿಶ್ವಾಸವಿಡಬೇಕೆಂದು ಯೆಹೂದ್ಯರಿಗೂ ಗ್ರೀಕರಿಗೂ ಖಚಿತವಾಗಿ ಸಾಕ್ಷಿ ಹೇಳಿದ್ದೇನೆ.
22“ಈಗಲಾದರೋ, ನಾನು ಪವಿತ್ರಾತ್ಮ ಪ್ರೇರಿತನಾಗಿ ಯೆರೂಸಲೇಮಿನಲ್ಲಿ ನನಗೇನಾಗುವುದೋ ಎಂಬುದನ್ನು ತಿಳಿಯದೆ, ಅಲ್ಲಿಗೆ ಹೋಗುತ್ತಿದ್ದೇನೆ. 23ಪ್ರತಿಯೊಂದು ಪಟ್ಟಣದಲ್ಲಿ ಸೆರೆಮನೆಯೂ ಬಾಧೆಯೂ ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ದೇವರು ಎಚ್ಚರಿಸಿದ್ದಾರೆ. 24ಆದರೂ ನನ್ನ ಪ್ರಾಣ ನನಗೆ ಅಮೂಲ್ಯವೆಂದು ನಾನು ಎಣಿಸುವುದಿಲ್ಲ. ಕರ್ತ ಯೇಸು ನನಗೆ ಕೊಟ್ಟ, ದೇವರ ಕೃಪೆಯ ಸುವಾರ್ತೆಗೆ ಸಾಕ್ಷಿ ಕೊಡುವ ಸೇವೆಯ ಓಟವನ್ನು ಓಡಿ ಮುಗಿಸುವುದೇ ನನ್ನ ಬಾಳಿನ ಒಂದೇ ಗುರಿಯಾಗಿದೆ.
25“ನಿಮ್ಮ ಮಧ್ಯದಲ್ಲಿ ನಾನು ದೇವರ ರಾಜ್ಯದ ಬಗ್ಗೆ ಬೋಧಿಸುತ್ತಾ ಇದ್ದೆನು. ನಿಮ್ಮಲ್ಲಿ ಯಾರೂ ನನ್ನ ಮುಖವನ್ನು ಇನ್ನೊಮ್ಮೆ ಕಾಣಲಾರಿರಿ ಎಂದು ನಾನು ಬಲ್ಲೆನು. 26ಆದಕಾರಣ ನಾನು ಎಲ್ಲಾ ಮನುಷ್ಯರ ರಕ್ತದ ಹೊಣೆಯಿಂದ ವಿಮುಕ್ತನಾಗಿದ್ದೇನೆ ಎಂದು ಈ ದಿನ ಸಾಕ್ಷಿಕೊಡುತ್ತೇನೆ. 27ಏಕೆಂದರೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ಬೋಧಿಸುವುದರಲ್ಲಿ ನಾನು ಹಿಂಜರಿಯಲಿಲ್ಲ. 28ದೇವರು ತಮ್ಮ ರಕ್ತದಿಂದ ಕೊಂಡುಕೊಂಡ ಸಭೆಗೆ ನೀವು ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮರು ನಿಮ್ಮನ್ನೇ ಮಂದೆಯಲ್ಲಿ ಮೇಲ್ವಿಚಾರಕರನ್ನಾಗಿ ಇಟ್ಟಿರುವುದರಿಂದ, ನಿಮ್ಮ ವಿಷಯದಲ್ಲಿಯೂ ಇಡೀ ಮಂದೆಯ ವಿಷಯದಲ್ಲಿಯೂ ಎಚ್ಚರವಾಗಿರಿ. 29ನಾನು ಹೋದ ನಂತರ ಕ್ರೂರ ತೋಳಗಳು ನಿಮ್ಮ ಮಧ್ಯದಲ್ಲಿ ಪ್ರವೇಶಿಸಿ ಮಂದೆಯನ್ನು ಹಾಳುಮಾಡದೆ ಬಿಡುವುದಿಲ್ಲ ಎಂದು ಬಲ್ಲೆನು. 30ನಿಮ್ಮೊಳಗಿಂದಲೂ ಜನರು ಎದ್ದು ವಕ್ರಮಾತುಗಳನ್ನಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು. 31ಆದ್ದರಿಂದ ನಾನು ಮೂರು ವರ್ಷಗಳ ಕಾಲ ಹಗಲುರಾತ್ರಿ ಕಣ್ಣೀರಿಡುತ್ತಾ ಎಡಬಿಡದೆ ನಿಮ್ಮನ್ನು ಎಚ್ಚರಿಸುತ್ತಾ ಇದ್ದೇನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು ಎಚ್ಚರವಾಗಿರಿ.
32“ಆದಕಾರಣ ನಾನು ದೇವರಿಗೂ ಅವರ ಕೃಪಾವಾಕ್ಯಕ್ಕೂ ಈಗ ನಿಮ್ಮನ್ನು ಒಪ್ಪಿಸಿಕೊಡುತ್ತೇನೆ. ಆ ವಾಕ್ಯವು ನಿಮ್ಮಲ್ಲಿ ಭಕ್ತಿವೃದ್ಧಿ ಮಾಡಿ, ಪವಿತ್ರರಾದವರೆಲ್ಲರಲ್ಲಿ ನಿಮಗೆ ಬಾಧ್ಯತೆಯನ್ನು ಕೊಡಲು ಸಾಮರ್ಥ್ಯವುಳ್ಳದ್ದು. 33ನಾನು ಯಾರ ಬೆಳ್ಳಿ ಬಂಗಾರಕ್ಕಾಗಲಿ, ಬಟ್ಟೆಗಾಗಲಿ ಆಶೆಪಡಲಿಲ್ಲ. 34ನನ್ನ ಹಸ್ತಗಳೇ ನನ್ನ ಅಗತ್ಯಗಳನ್ನೂ ನನ್ನೊಂದಿಗಿದ್ದವರ ಅಗತ್ಯಗಳನ್ನೂ ಪೂರೈಸಿದವೆಂಬುದನ್ನು ನೀವು ಬಲ್ಲವರಾಗಿದ್ದೀರಿ. 35ಈ ರೀತಿಯ ಪರಿಶ್ರಮದ ದುಡಿಮೆಯಿಂದ ನಾವು ಬಲಹೀನರಿಗೆ ಸಹಾಯ ಮಾಡಬೇಕೆಂಬುದನ್ನು ನನ್ನ ಮಾದರಿಯಿಂದ ನಿಮಗೆ ತೋರಿಸಿಕೊಟ್ಟೆನು. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಆಶೀರ್ವಾದ,’ ಎಂದು ಕರ್ತ ಆಗಿರುವ ಯೇಸುವೇ ಹೇಳಿದ ಮಾತುಗಳನ್ನು ನಿಮಗೆ ಜ್ಞಾಪಕಪಡಿಸುತ್ತೇನೆ,” ಎಂದನು.
36ಇದನ್ನು ಹೇಳಿದ ತರುವಾಯ ಅವನು ಎಲ್ಲರೊಂದಿಗೆ ಮೊಣಕಾಲೂರಿ ಪ್ರಾರ್ಥನೆಮಾಡಿದನು. 37ಅವರೆಲ್ಲರೂ ಪೌಲನ ಕೊರಳನ್ನು ಅಪ್ಪಿಕೊಂಡು ಕಣ್ಣೀರಿಡುತ್ತಾ ಅವನಿಗೆ ಮುದ್ದಿಟ್ಟರು. 38“ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ,” ಎಂದು ಅವನು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ದುಃಖಗೊಂಡು, ಅವನೊಂದಿಗೆ ನೌಕೆಯವರೆಗೆ ಹೋದರು.
S'ha seleccionat:
ಅಪೊಸ್ತಲರ ಕೃತ್ಯಗಳು 20: KSB
Subratllat
Copia
Compara
Comparteix
Vols que els teus subratllats es desin a tots els teus dispositius? Registra't o inicia sessió
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.