Logo dell'App Bibbia
Icona Cerca

ದಾನಿಯೇಲ 3

3
ಬಂಗಾರದ ಪ್ರತಿಮೆ ಮತ್ತು ಉರಿಯುತ್ತಿರುವ ಕುಲುಮೆ
1ಅರಸನಾದ ನೆಬೂಕದ್ನೆಚ್ಚರನು ಸುಮಾರು 27 ಮೀಟರ್ ಎತ್ತರ ಮತ್ತು ಸುಮಾರು ಎರಡೂವರೆ ಮೀಟರ್ ಅಗಲ ಇರುವ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬಿಲೋನ್ ಪ್ರಾಂತದಲ್ಲಿರುವ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. 2ಆಮೇಲೆ ನೆಬೂಕದ್ನೆಚ್ಚರನು ಉಪರಾಜರನ್ನೂ ರಾಜ್ಯಪಾಲರನ್ನೂ ಅಧಿಕಾರಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಖಜಾಂಚಿದವರನ್ನೂ ಮತ್ತು ಸಲಹೆಗಾರರನ್ನೂ ಪಂಡಿತರನ್ನೂ ಎಲ್ಲಾ ಪ್ರಾಂತಗಳ ಅಧಿಕಾರಿಗಳನ್ನೂ ತಾನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ಕರೆಯಿಸಿದನು. 3ಆಗ ಉಪರಾಜರು, ರಾಜ್ಯಪಾಲರು, ಅಧಿಕಾರಸ್ಥರು, ನ್ಯಾಯಾಧಿಪತಿಗಳು, ಖಜಾಂಚಿದವರು, ಸಲಹೆಗಾರರು, ಪಂಡಿತರು, ಎಲ್ಲಾ ಪ್ರಾಂತಗಳ ಅಧಿಕಾರಿಗಳು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ಕೂಡಿಬಂದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತರು.
4ಆಗ ಘೋಷಣೆ ಮಾಡುವವರು ಗಟ್ಟಿಯಾಗಿ ಕೂಗಿ, “ಪ್ರಜೆಗಳೇ, ಜನಾಂಗಗಳೇ, ವಿವಿಧ ಭಾಷೆಯವರೇ 5ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾಗಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳಿದ ಕೂಡಲೇ, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು. 6ಯಾರು ಅಡ್ಡಬೀಳದೆ, ನಮಸ್ಕರಿಸದೆ ಇರುವರೋ ಅಂಥವರನ್ನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯಲ್ಲಿ ಹಾಕಲಾಗುವುದು. ಇದು ರಾಜಾಜ್ಞೆ,” ಎಂದನು.
7ಆದ್ದರಿಂದ ಜನರೆಲ್ಲರು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾಗಸ್ವರ ಮೊದಲಾದ ಶಬ್ದವನ್ನು ಕೇಳಿದ ಕೂಡಲೇ, ಎಲ್ಲಾ ಪ್ರಜೆಗಳು ಜನಾಂಗಗಳು ವಿವಿಧ ಭಾಷೆಯವರು ಅಡ್ಡಬಿದ್ದು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸಿದರು.
8ಆ ಸಮಯದಲ್ಲಿ ಪಂಡಿತರು ಯೆಹೂದ್ಯರ ಮೇಲೆ ದೂರು ಹೊರಿಸಲು ಅರಸನ ಸನ್ನಿಧಿಗೆ ಬಂದು 9ಅರಸನಾದ ನೆಬೂಕದ್ನೆಚ್ಚರನಿಗೆ, “ಅರಸನೇ, ನೀನು ನಿರಂತರವಾಗಿ ಬಾಳು. 10ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾಗಸ್ವರ ಮುಂತಾದ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿದಾಗ ಪ್ರತಿಯೊಬ್ಬ ಮನುಷ್ಯನು ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ ಅರಸನು ಆಜ್ಞೆಯನ್ನು ಹೊರಡಿಸಿದ್ದಾನೆ. 11ಅಡ್ಡಬೀಳದೆ ಆರಾಧಿಸದೆ ಇರುವವರನ್ನು ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಬೇಕೆಂದು ಆಜ್ಞೆಮಾಡಿದಿಯಲ್ಲಾ? 12ಆದರೆ ನೀನು ಬಾಬಿಲೋನಿನ ಪ್ರಾಂತದ ಕೆಲಸಗಳ ಮೇಲೆ ಇಟ್ಟಿರುವ ಯೆಹೂದ್ಯರಾದ ಕೆಲವರು ಎಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಅವರು ನಿನ್ನನ್ನು ಲಕ್ಷಿಸುವುದಿಲ್ಲ. ಅವರು ನಿನ್ನ ದೇವರುಗಳನ್ನಾಗಲಿ, ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನಾದರೂ ಆರಾಧಿಸುವುದಿಲ್ಲ,” ಎಂದು ಹೇಳಿದರು.
13ನೆಬೂಕದ್ನೆಚ್ಚರನು ಉಗ್ರಕೋಪವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್‌ನೆಗೋ ಅವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆತಂದರು. 14ಆಗ ನೆಬೂಕದ್ನೆಚ್ಚರನು ಮಾತನಾಡಿ ಅವರಿಗೆ, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರೇ, ನೀವು ಬೇಕೆಂದು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇದ್ದೀರಿ ಎಂಬ ಮಾತು ನಿಜವೋ? 15ಈಗ ನೀವು ಸಿದ್ಧವಾಗಿದ್ದು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಆರಾಧಿಸದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಲಾಗುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು?” ಎಂದು ಹೇಳಿದನು.
16ಆಗ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರು ಅರಸನಿಗೆ ಉತ್ತರವಾಗಿ, “ನೆಬೂಕದ್ನೆಚ್ಚರನೇ, ಈ ವಿಷಯದ ಬಗ್ಗೆ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ. 17ಒಂದು ವೇಳೆ ಹಾಗೆ ಇದ್ದರೆ, ನಿಶ್ಚಯವಾಗಿ ನಾವು ಆರಾಧಿಸುವ ನಮ್ಮ ದೇವರು ಉರಿಯುವ ಬೆಂಕಿಯ ಕುಲುಮೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥರಾಗಿದ್ದಾರೆ. ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವರು. 18ಆದರೆ ಒಂದು ವೇಳೆ ಅವರು ತಪ್ಪಿಸದಿದ್ದರೂ, ಅರಸನೇ ನಾವು ನಿನ್ನ ದೇವರುಗಳನ್ನು ಸೇವಿಸುವುದಿಲ್ಲವೆಂದೂ, ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲವೆಂದೂ ನಿನಗೆ ತಿಳಿದಿರಲಿ,” ಎಂದರು.
19ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ, ಅವನ ಮುಖಭಾವವು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಆ ಕುಲುಮೆಯನ್ನು ಸಾಧಾರಣವಾದ ಉರಿಗಿಂತ ಏಳರಷ್ಟು ಹೆಚ್ಚಾಗಿ ಉರಿ ಹಾಕಬೇಕೆಂದು ಆಜ್ಞಾಪಿಸಿದನು. 20ಇದಲ್ಲದೆ ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾದವರಿಗೆ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಕುಲುಮೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು. 21ಆಗ ಆ ಮನುಷ್ಯರು ತಮ್ಮ ಶಲ್ಯ, ಇಜಾರು, ಮುಂಡಾಸ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡವರಾಗಿರುವಾಗ, ಧಗಧಗನೆ ಉರಿಯುವ ಬೆಂಕಿಯ ಕುಲುಮೆಯಲ್ಲಿ ಅವರನ್ನು ಹಾಕಿದರು. 22ಅರಸನ ಆಜ್ಞೆಯು ಅವಸರವಾಗಿಯೂ, ಕುಲುಮೆಯು ಬಹು ಉರಿಯಾಗಿಯೂ ಇದ್ದುದರಿಂದ, ಬೆಂಕಿಯ ಜ್ವಾಲೆಯು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಬೆಂಕಿಗೆ ಹಾಕಲು ಎತ್ತಿದ ಆ ಸೈನಿಕರನ್ನೇ ಸಂಹರಿಸಿತು. 23ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಿನೊಂದಿಗೆ ಧಗಧಗನೆ ಉರಿಯುವ ಬೆಂಕಿಯ ಕುಲುಮೆಯ ನಡುವೆ ಬಿದ್ದರು.
24ಆಗ ಅರಸನಾದ ನೆಬೂಕದ್ನೆಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು, ತನ್ನ ಆಲೋಚನಾಗಾರರ ಸಂಗಡ ಮಾತನಾಡಿ, “ನಾವು ಮೂವರು ಮನುಷ್ಯರನ್ನು ಕಟ್ಟಿ, ಬೆಂಕಿಯಲ್ಲಿ ಹಾಕಿದೆವಲ್ಲವೇ?” ಎಂದನು.
ಆಗ ಅವರು ಅರಸನಿಗೆ, “ಅರಸನೇ, ಹೌದು ಸತ್ಯ,” ಎಂದು ಉತ್ತರಿಸಿದರು.
25ಅರಸನು ಅವರಿಗೆ ಉತ್ತರವಾಗಿ, “ಇಗೋ, ಕಟ್ಟಿಲ್ಲದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿರುವುದನ್ನು ನೋಡುತ್ತೇನೆ. ಅವರಿಗೆ ಯಾವ ಹಾನಿಯೂ ಇಲ್ಲ. ಅಲ್ಲದೆ ನಾಲ್ಕನೆಯವರ ರೂಪವು ದೇವಪುತ್ರನ ಹಾಗಿದೆ,” ಎಂದು ಹೇಳಿದನು.
26ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಕುಲುಮೆಯ ಬಾಯಿಯ ಸಮೀಪಕ್ಕೆ ಬಂದು, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ,” ಎಂದನು.
ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು. 27ಆಗ ಉಪರಾಜರು, ರಾಜ್ಯಪಾಲರು, ಅಧಿಪತಿಗಳು, ಅರಸನ ಆಲೋಚನಾಗಾರರು, ಎಲ್ಲರೂ ಒಟ್ಟುಗೂಡಿ ಅವರನ್ನು ಸುತ್ತುವರಿದು, ಅವರ ಶರೀರದ ಮೇಲೆ ಬೆಂಕಿಯಿಂದ ಯಾವ ಅಪಾಯವಾಗಿರದೇ ಇರುವುದನ್ನೂ, ಅವರ ತಲೆಗೂದಲುಗಳಲ್ಲಿ ಒಂದಾದರೂ ಸುಡದಿರುವುದನ್ನೂ, ಅವರ ಅಂಗಿಗಳು ನಾಶವಾಗದಿರುವುದನ್ನೂ, ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದಿರುವುದನ್ನೂ ಕಂಡರು.
28ನೆಬೂಕದ್ನೆಚ್ಚರನು ಮಾತನಾಡಿ, “ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ದೂತನನ್ನು ಕಳುಹಿಸಿ, ತಮ್ಮ ಸೇವಕರನ್ನು ರಕ್ಷಿಸಿದ್ದಾರೆ. ಅವರು ದೇವರಲ್ಲಿ ನಂಬಿಕೆ ಇಟ್ಟರು. ಅರಸನ ಆಜ್ಞೆಯನ್ನು ಮೀರಿದರು. ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ, ಆರಾಧಿಸದೆ ಇರುವ ಹಾಗೆ ತಮ್ಮ ಪ್ರಾಣಗಳನ್ನು ಕೊಡಲೂ ಸಿದ್ಧರಾದರು. 29ಆದ್ದರಿಂದ ಸಕಲ ಪ್ರಜೆ, ಜನಾಂಗ, ಭಾಷೆಗಳಲ್ಲಿ ಯಾರು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರ ದೇವರಿಗೆ ವಿರೋಧವಾಗಿ ದೂಷಣೆ ಮಾಡುವರೋ, ಅವರನ್ನು ತುಂಡುತುಂಡಾಗಿ ಮಾಡಿರಿ, ಅವರ ಮನೆಗಳು ತಿಪ್ಪೆ ಗುಂಡಿಗಳಾಗಿ ಮಾಡಿರಿ, ಎಂದು ನಾನು ರಾಜಾಜ್ಞೆಯನ್ನು ವಿಧಿಸುತ್ತೇನೆ. ಏಕೆಂದರೆ ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರೂ ಇರುವುದಿಲ್ಲ,” ಎಂದನು.
30ಆಗ ಅರಸನು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವರನ್ನು ಬಾಬಿಲೋನ್ ಪ್ರಾಂತದಲ್ಲಿ ಉನ್ನತ ಪದವಿಗೆ ತಂದನು.

Attualmente Selezionati:

ದಾನಿಯೇಲ 3: KSB

Evidenzia

Copia

Confronta

Condividi

None

Vuoi avere le tue evidenziazioni salvate su tutti i tuoi dispositivi?Iscriviti o accedi