ರೆಬೆಕ್ಕಳೆಡೆಗೆ ದೈನ್ಯ ದೃಷ್ಟಿಯಿರಲಿಮಾದರಿ

ರೆಬೆಕ್ಕಳೆಡೆಗೆ ದೈನ್ಯ ದೃಷ್ಟಿಯಿರಲಿ

3 ನ 2 ದಿನ

ತಪ್ಪಾದ ಆಯ್ಕೆ: ಭೀಕರ ಪರಿಣಾಮಗಳು

ಏಸಾವನು ನಾಲ್ವತ್ತು ವರುಷದವನಾದಾಗ ಒಂದಲ್ಲ ಇಬ್ಬರು ಹಿತ್ತೀಯ ಸ್ತ್ರೀಯರನ್ನು ಮದುವೆಯಾದನು, ನಂತರದಲ್ಲಿ ಇನ್ನೊಂದು ಮದುವೆ ಮಾಡಿಕೊಂಡನು, ಈ ಸ್ತ್ರೀಯರು ಆ ಪ್ರದೇಶದ ದೇವತೆಗಳನ್ನು ಪೂಜಿಸುವವರಾಗಿದ್ದರು, ಮತ್ತು ಆ ಸ್ತ್ರೀಯರ ಜೀವನ ಶೈಲಿ 'ಇಸಾಕ ರೆಬೆಕ್ಕಳ ಮನಸ್ಸಿಗೆ ಎಷ್ಟೋ ಕರಕರೆಯನ್ನುಂಟು ಮಾಡಿತು’. ರೆಬೆಕ್ಕಳು ಉದ್ದೇಶ ಪೂರ್ವಕವಾಗಿ ಏನೂ ಇಸಾಕ ಏಸಾವರ ಸಂಭಾಷಣೆಯನ್ನು ಕೇಳಿಸಿಕೊಂಡಿರಲಿಕ್ಕಿಲ್ಲ (ಆದಿಕಾಂಡ 27:1-5), ಅವರು ವಾಸಿಸುತ್ತಿದ್ದ ಗುಡಾರದೊಳಗೆ ಖಾಸಗಿತನಕ್ಕೆ ಅವಕಾಶ ಕಡಿಮೆ ಇತ್ತು, ಇಸಾಕನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಆ ಗುಡಾರದೊಳಗೆ ರೆಬೆಕ್ಕಳ ಇದಿರು ಆ ನಿಕಟ ಸಂಭಾಷಣೆ ನಡೆದಿರಲಿಕ್ಕೂ ಸಾಕು. ಆಕೆಯು ಏನನ್ನು ಆಲಿಸಿದಳೋ ಅದ ಕುರಿತು ತನ್ನೊಳಗೆ ಅಸಮ್ಮತಿ ಏರ್ಪಟ್ಟಿತು. ಏನು? ಸಾಯುವದರೊಳಗೆ ಏಸಾವನಿಗೆ ಆಶೀರ್ವಾದವೇ? ಅವನಿಗೆ ಐಶ್ವರ್ಯ ಘನತೆಯೇ, ಹೊಲ ಪಶುಮಂದೆಯೇ, ಮತ್ತು ಜನಾಂಗಗಳು ಅವನಿಗೆ ಅಧೀನವೇ, ಹಾಗೂ ತನ್ನ ಸಹೋದರರ ಮೇಲೆ ದೊರೆಯೇ? ಪಟಿಂಗನೂ ಮನೋವಿಕಾರಿಯೂ ಆಗಿದ್ದು ಆತ್ಮಿಕವಾಗಿ ವಿವೇಚನೆ ಇಲ್ಲದ ಏಸಾವನಿಗೆ ಇವೆಲ್ಲವೇ? ಇದು ಹಂದಿಯ ಮುಂದೆ ಮುತ್ತನ್ನು ಚೆಲ್ಲಿದ್ದಕ್ಕೆ ಸಮವಾಗಿದೆ. (ಎಂದುಕೊಳ್ಳುತ್ತಾ) ತಾನೀಗ ಎಸಗಲಿರುವ ತಂತ್ರಗಾರಿಕೆಯ ನಿಮಿತ್ತ ತನ್ನ ಮೇಲೆ ಶಾಪವು ಎರಗಿದರೂ ಸರಿಯೇ ಎಂದು ಯಾಕೋಬನ ಮೌನಸಮ್ಮತಿ ಗಳಿಸಿ ಪ್ರತಿಯೋಜನೆಯೊಂದನ್ನು ಹೆಣೆಯುತ್ತಾಳೆ. ಯಾಕೋಬನ ಕೊರಳಿನ ಸುತ್ತ ಮತ್ತು ಕೈಗಳ ಮೇಲೆ ಆಡಿನ ಚರ್ಮವನ್ನು ಸುತ್ತಿ, ಏಸಾವನ ವಸ್ತ್ರವನ್ನು ಅವನಿಗೆ ಹೊದ್ದಿಸಿ, ಮುಪ್ಪಿನ ನಿಮಿತ್ತ ಕಣ್ಣು ಕಾಣದ ತನ್ನ ತಂದೆಯ ಬಳಿಗೆ ಅವನನ್ನು ಕಳುಹಿಸಿದಳು. ಇಸಾಕನಿಗೆ, ಇಲ್ಲೇನೋ ಕಪಟವದೇ ಎಂಬುದು ಅವನ ಗ್ರಹಿಕೆಗೆ ಬಂತು. ಯಾಕೋಬನೊಂದಿಗೆ ಸಂಭಾಷಿಸಿದನು, ಯಾಕೋಬನ ಸ್ವರದಲ್ಲಿ ಏಸಾವನ ತೋರಿಕೆಯಲ್ಲಿ ಇರುವ ಇವನು ಯಾರೆಂಬದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದನು. ಮುದ್ದಿಡಲು ಮಗನನ್ನು ಹತ್ತಿರ ಕರೆದನು, ವಸ್ತ್ರಗಳಲ್ಲಿ ಏಸಾವನ ವಾಸನೆಯನ್ನು ಗುರುತಿಸಿದನು, ಅವನ ವಸ್ತ್ರಗಳ ವಾಸನೆ ಅಹಿತವಾಗಿ ತೋರಲಿಲ್ಲ, ಅವು ಹೊಲದ ಸುವಾಸನೆಯಂತೆಯೂ, ಸೊಂಪಾದ ದವಸಧಾನ್ಯ ಫಲಭರಿತ ಹಣ್ಣಿನಂತೆಯೂ, ಪ್ರಯಾಸದಿಂದ ಹೆಗಲ ಮೇಲೆ ತನ್ನ ತಂದೆಗೆಂದು ಹೊತ್ತು ತಂದ ಚಿಗರೆಯ ತುಪ್ಪಟದ ಪರಿಮಳದಂತೆಯೂ ಇಸಾಕನಿಗೆ ಭಾಸವಾಯಿತು. (ಕೂಡಲೇ) ಹಿಂದೆಗೆಯಲಾಗದಂತ ಅಸಾಧಾರಣ ಆಶೀರ್ವಾದವನ್ನು ಯಾಕೋಬನ ಮೇಲೆ ಅವನು ಉಚ್ಚರಿಸಿದನು. ಆಡಿನ ಚರ್ಮದ ಕಾರ್ಯಾಚರಣೆ ಸಫಲವಾಯಿತು!

ರೆಬೆಕ್ಕಳು (ಈ ವಿಧದಲ್ಲಿ) ಕಾರ್ಯಪ್ರವೃತ್ತಳಾಗದೆ ಇದ್ದಿದ್ದರೆ, ಬೈಬಲಿನ ಚರಿತ್ರೆಯು ಯಾವ ಅನುಮಾನವಿಲ್ಲದೆ ಬೇರೊಂದು ದಿಶೆಯಲ್ಲಿರುತ್ತಿತ್ತು. ತನ್ನ ಈ ವಂಚನೆಯ ನಿಮಿತ್ತ ಆಕೆಯು ಬೆಲೆ ತೆರಬೇಕಾಯಿತು. ಈ ಘಟನೆಯ ನಂತರ ಮಕ್ಪೇಲದ ಗವಿಯೊಳಗೆ ಆಕೆಯನ್ನು ಸಮಾಧಿಮಾಡಿದ್ದು ಹೊರತುಪಡಿಸಿ ಆಕೆಯ ಕುರಿತು ತಿರಿಗಿ ಎಲ್ಲೂ ಪ್ರಸ್ತಾಪವಾಗಲಿಲ್ಲ. ನಮ್ಮ ಸಮಸ್ಯೆಗಳಿಗೆಲ್ಲಾ ದೇವರು ಮಾತ್ರ ಸೂಕ್ತ ಪರಿಹಾರ ಒದಗಿಸಬಲ್ಲ, ಅಂದರೆ ರೆಬೆಕ್ಕಳು ತಾನು ಸಾಧಿಸಬೇಕಾದುದನ್ನು ಸಾಧಿಸಲು ಎಸಗಿದ ಪ್ರಯತ್ನ ಸರಿಯೆಂದು ಅನ್ನಿಸುವದಿಲ್ಲ. ಕಾಲಾಂತರದಲ್ಲಿ ಆಕೆಯು ತನ್ನ ಮಗನನ್ನು, ಸಮಾಧಾನವನ್ನು, ಜೊತೆಗೆ ಆರೋಗ್ಯವನ್ನು ಕಳಕೊಂಡಿದ್ದಾಳೆ. ಈ ಕಾರ್ಯಗಳಿಗಾಗಿ ವೇದನೆ ಕಣ್ಣೀರಿನಿಂದ ಕರ್ತನಲ್ಲಿ ಕ್ಷಮೆ ಬೇಡಿದಳೋ? ಪಶ್ಚಾತ್ತಾಪ ಪಟ್ಟಿದ್ದಾಳೆ ಎನ್ನುವುದರಲ್ಲಿ ನನಗೆ ಯಾವ ಅನುಮಾನವಿಲ್ಲ, ಕ್ಷಮಿಸಲ್ಪಟ್ಟಿದ್ದಾಳೆಂದು ಅರಿತು ಸಮಾಧಾನದಿಂದಲೇ ಮೃತಿಹೊಂದಿದ್ದಾಳೆ. ಪಾಪವನ್ನು ಸಹಿಸಲಾಗದಿದ್ದರೂ, ಅಪರಾಧಿಯನ್ನು ಕ್ಷಮಿಸಬಹುದಲ್ಲವೇ?

ಯಾಕೋಬನೂ ಸಹ ತನ್ನ ತಪ್ಪಿಗೆ ಪ್ರತಿಯಾಗಿ ತಕ್ಕದ್ದನ್ನು ಅನುಭವಿಸಬೇಕಾಯಿತು. ಇಲ್ಲಿಂದ ಮುಂದಿನ ಇಪ್ಪತ್ತು ವರುಷ ಆತನು ದೂರದ ಪ್ರದೇಶದಲ್ಲಿರಬೇಕಾಗಿತ್ತು, ನಂತರದಲ್ಲಿ ದೇವರು ಆತನನ್ನು ಬೇತೇಲಿಗೆ ಹಿಂದಿರುಗುವಂತೆ ಆಜ್ಞಾಪಿಸಿದ, ಇಲ್ಲಿಯೇ ಆತನು ಕರ್ತನಿಗೆ ಮಹಾನ್ ಹರಕೆಗಳನ್ನು ಮಾಡಿಕೊಂಡಿದ್ದ, ಅವುಗಳನ್ನು (ಆ ಹಂತಕ್ಕೆ) ಇನ್ನೂ ಪೂರೈಸಿರಲಿಲ್ಲ, ಕೊನೆಗೆ ಆತನು ದೇವರೊಂದಿಗೆ ಹೋರಾಡುವಾಗ, ದೇವರು ನಿಖರವಾಗಿ ಆತನ ಹೆಸರೇನೆಂದು ಕೇಳುವಾಗ, ಆತನು ಲಜ್ಜೆಯಿಂದ ತಲೆ ಬೊಗ್ಗಿಸಿ ಮೋಸಗಾರನೆಂದು ಒಪ್ಪಿಕೊಂಡ, ಅಂದರೆ ಹಿಮ್ಮಡಿಯನ್ನು ಹಿಡಿದವನು ಎಂದು. ಅವನಿಗೆ ತಕ್ಕ ಶಿಕ್ಷೆಯನ್ನು ನೀಡುವದಕ್ಕೆ ಬದಲಾಗಿ ಕರ್ತನು ಅವನನ್ನು ಘನವಾಗಿ ಆಶೀರ್ವದಿಸಿ, ಅವನ ಚಾರಿತ್ರ್ಯವನ್ನೆಲ್ಲಾ ಅಳಿಸಿ, ಭವಿಷ್ಯತ್ತಿನ ಶ್ರೇಷ್ಠ ಗುರಿಯೆಡೆಗೆ ಸಾಗಕಳುಹಿಸಿದನು.

ಶಕ್ತನೂ ಕರುಣಾಮಯಿಯೂ ಆದ ದೇವರ ಕೈಗಳಲ್ಲಿ ಅರ್ಪಿಸಿಕೊಳ್ಳುವಂತದ್ದು, ಎಂತಹ ಸೌಭಾಗ್ಯ.

ಈ ಯೋಜನೆಯ ಬಗ್ಗೆ

ರೆಬೆಕ್ಕಳೆಡೆಗೆ ದೈನ್ಯ ದೃಷ್ಟಿಯಿರಲಿ

ಬಿದ್ದುಹೋದ ದೇವಜನರು ಸಹಾಯಹಸ್ತವನ್ನು ನಿರೀಕ್ಷಿಸುವಾಗ, ನಮ್ಮ ರಕ್ಷಕನು ಕೂಡಲೆ ಸ್ಪಂದಿಸಿ, ಅವರನ್ನು ತಿರಿಗಿ ಎಬ್ಬಿಸಿ ನಿಲ್ಲಿಸುವನು. ಉತ್ತೇಜನದ ಒಂದು ನುಡಿ, ಸ್ಪಂದನೆಯ ಕ್ಷಣ, ಪ್ರೀತಿ ಕನಿಕರ ತೋರುವ ಹೃದಯ ಇವು ಗುಣಪಡಿಸುವ ಮುಲಾಮಿನೊಳಗಿನ ಪ್ರಮುಖ ಅಂಶಗಳಾಗಿವೆ. ನಂಬಿಗಸ್ತರಾಗಿರಲು ನಾವು ಕರೆಯಲ್ಪಟ್ಟಿದ್ದೇವೆಯೇ ಹೊರತು ತೀರ್ಪು ಮಾಡಲು ಅಲ್ಲ. ನಾವು ಕರುಣೆಯನ್ನು ಹೊಂದಿದವರಾದ ಕಾರಣ, ನಾವೂ ಕರುಣೆಯುಳ್ಳವರಾಗಿರೋಣ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Rani Jonathan ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: http://ourupsdowns.blogspot.com/