ಯೋಹಾನ 2
2
ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು
1ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು. 2ಯೇಸು ಮತ್ತು ಅವರ ಶಿಷ್ಯರು ಮದುವೆಗೆ ಆಮಂತ್ರಿತರಾಗಿದ್ದರು. 3ಅಲ್ಲಿ ದ್ರಾಕ್ಷಾರಸವು ಮುಗಿದು ಹೋದಾಗ, ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ತಿಳಿಸಿದಳು.
4ಯೇಸು ಆಕೆಗೆ, “ಅಮ್ಮಾ,#2:4 ಗ್ರೀಕ್ ಭಾಷೆಯಲ್ಲಿ ಸ್ತ್ರೀ ನಾನು ನಿಮಗೆ ಏನು ಮಾಡಲು ಬಯಸುತ್ತೀರಿ? ನನ್ನ ಸಮಯವು ಇನ್ನೂ ಬಂದಿಲ್ಲ,” ಎಂದು ಹೇಳಿದರು.
5ಯೇಸುವಿನ ತಾಯಿಯು ಸೇವಕರಿಗೆ, “ಆತನು ನಿಮಗೆ ಹೇಳಿದಂತೆ ಮಾಡಿರಿ,” ಎಂದು ಹೇಳಿದಳು.
6ಯೆಹೂದ್ಯರ ಶುದ್ಧಾಚಾರದ ಪ್ರಕಾರ ಅಲ್ಲಿ ಕಲ್ಲಿನ ಆರು ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಡದ ಅಳತೆಯುಳ್ಳದ್ದಾಗಿತ್ತು.#2:6 ಸುಮಾರು 75 ಲೀಟರಿಂದ 115 ಲೀಟರ್
7ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದರು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.
8ಅನಂತರ ಯೇಸು ಅವರಿಗೆ, “ಈಗ ಇದನ್ನು ತೆಗೆದುಕೊಂಡು ಔತಣದ ಮೇಲ್ವಿಚಾರಕನಿಗೆ ಕೊಡಿರಿ,” ಎಂದರು.
ಸೇವಕರು ತೆಗೆದುಕೊಂಡು ಹೋದರು. 9ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ. ಆದರೆ ನೀರನ್ನು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು, 10“ಪ್ರತಿಯೊಬ್ಬನು ಉತ್ತಮ ದ್ರಾಕ್ಷಾರಸವನ್ನು ಮೊದಲು ತಂದಿಟ್ಟು ಜನರು ತುಂಬಾ ಕುಡಿದ ಮೇಲೆ ಸಾಧಾರಣವಾದದ್ದನ್ನು ಕೊಡುತ್ತಾರೆ, ನೀನಾದರೋ ಉತ್ತಮ ದ್ರಾಕ್ಷಾರಸವನ್ನು ಇನ್ನೂ ಇಟ್ಟುಕೊಂಡಿರುವೆ,” ಎಂದನು.
11ಯೇಸು ಗಲಿಲಾಯದ ಕಾನಾದಲ್ಲಿ ಮಾಡಿದ ಸೂಚಕಕಾರ್ಯಗಳಲ್ಲಿ ಇದು ಮೊದಲನೆಯದಾಗಿತ್ತು. ಹೀಗೆ ಯೇಸು ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಯೇಸುವಿನ ಶಿಷ್ಯರು ಅವರಲ್ಲಿ ನಂಬಿಕೆಯಿಟ್ಟರು.
12ಇದಾದ ಮೇಲೆ ಯೇಸು ತಮ್ಮ ತಾಯಿ, ಸಹೋದರರು ಮತ್ತು ಶಿಷ್ಯರೊಡನೆ ಕಪೆರ್ನೌಮಿಗೆ ಹೋದರು. ಅಲ್ಲಿ ಅವರು ಕೆಲವು ದಿವಸ ಇದ್ದರು.
ಯೇಸು ದೇವಾಲಯವನ್ನು ಶುದ್ಧಗೊಳಿಸಿದ್ದು
13ಯೆಹೂದ್ಯರ ಪಸ್ಕಹಬ್ಬವು#2:13 ಈಜಿಪ್ಟ್ನಲ್ಲಿದ್ದ ಇಸ್ರಾಯೇಲರ ಬಿಡುಗಡೆಯನ್ನು ಸ್ಮರಿಸುವ ಹಬ್ಬ ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋದರು. 14ಅವರು ದೇವಾಲಯದ ಅಂಗಳದಲ್ಲಿ ದನ, ಕುರಿ ಹಾಗೂ ಪಾರಿವಾಳಗಳನ್ನು ಮಾರುವವರೂ ಹಣ ಬದಲಾಯಿಸುವವರೂ ಕುಳಿತಿರುವುದನ್ನು ಕಂಡರು. 15ಯೇಸು ಹಗ್ಗಗಳಿಂದ ಕೊರಡೆ ಮಾಡಿ ಕುರಿ, ದನ ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ, ಹಣ ಬದಲಾಯಿಸುವವರ ನಾಣ್ಯಗಳನ್ನು ಮತ್ತು ಮೇಜುಗಳನ್ನು ಕೆಡವಿದರು. 16ಯೇಸು ಪಾರಿವಾಳ ಮಾರುವವರಿಗೆ, “ಇವುಗಳನ್ನು ತೆಗೆದುಕೊಂಡು ಹೋಗಿರಿ, ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯನ್ನಾಗಿ ಮಾಡಬೇಡಿರಿ,” ಎಂದರು. 17ಯೇಸುವಿನ ಶಿಷ್ಯರು, “ನಿನ್ನ ಆಲಯದ ಮೇಲಿನ ಆಸಕ್ತಿಯು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,”#2:17 ಕೀರ್ತನೆ 69:9 ಎಂದು ಪವಿತ್ರ ವೇದದಲ್ಲಿ ಬರೆದಿರುವುದನ್ನು ಜ್ಞಾಪಕಮಾಡಿಕೊಂಡರು.
18ಆಗ ಯೆಹೂದ್ಯರು ಯೇಸುವಿಗೆ, “ಇವುಗಳನ್ನು ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.
19ಅದಕ್ಕೆ ಯೇಸು ಅವರಿಗೆ, “ಈ ದೇವಾಲಯವನ್ನು ಕೆಡವಿರಿ. ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.
20ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು. 21ಆದರೆ ಯೇಸು ತಮ್ಮ ದೇಹವೆಂಬ ಆಲಯವನ್ನು ಕುರಿತು ಹೇಳಿದ್ದರು. 22ಆದ್ದರಿಂದ ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದಾಗ, ಅವರ ಶಿಷ್ಯರು ಅವರು ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಪವಿತ್ರ ವೇದವನ್ನೂ ಯೇಸು ತಮಗೆ ಹೇಳಿದ ಮಾತನ್ನೂ ನಂಬಿದರು.
23ಯೇಸು ಪಸ್ಕಹಬ್ಬದಂದು ಯೆರೂಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ಅನೇಕರು ಕಂಡು ಅವರ ಹೆಸರಿನಲ್ಲಿ ನಂಬಿಕೆ ಇಟ್ಟರು.#2:23 ಕೆಲವು ಪ್ರತಿಗಳಲ್ಲಿ ಆತನಲ್ಲಿ ಎಂದಿದೆ. 24ಆದರೆ ಯೇಸು ಎಲ್ಲರನ್ನೂ ಅರಿತವರಾದ್ದರಿಂದ ತಮ್ಮನ್ನು ಒಪ್ಪಿಸಿಕೊಡಲಿಲ್ಲ. 25ಯೇಸು ಮನುಷ್ಯರ ಅಂತರಂಗವನ್ನು ತಿಳಿದವರಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಅವರಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.
دیاریکراوەکانی ئێستا:
ಯೋಹಾನ 2: KSB
بەرچاوکردن
لەبەرگرتنەوە
بەراوردکردن
هاوبەشی بکە
دەتەوێت هایلایتەکانت بپارێزرێت لەناو ئامێرەکانتدا> ? داخڵ ببە
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.